Advertisement

ಯೂರಿಯಾ ಕೃತಕ ಅಭಾವ ಸೃಷ್ಟಿಸಿದರೆ ಕ್ರಮ

03:15 PM Aug 30, 2020 | Suhan S |

ಬಾಗಲಕೋಟೆ: ಯೂರಿಯಾ ರಸಗೊಬ್ಬರ ಕೃತಕ ಅಭಾವ ಸೃಷ್ಟಿಯಾದರೆ ಸಂಬಂಧಪಟ್ಟ ರಸಗೊಬ್ಬರ ಮಾರಾಟಗಾರರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಕ್ಯಾಪ್ಟನ್‌ ಡಾ|ಕೆ.ರಾಜೇಂದ್ರ ಹೇಳಿದರು.

Advertisement

ಜಿಲ್ಲಾ ಪಂಚಾಯತ ಸಭಾಭವನದಲ್ಲಿ ಶನಿವಾರ ಜಿಲ್ಲೆಯ ರಸಗೊಬ್ಬರ ಮಾರಾಟಗಾರರ ಹಾಗೂ ರಸಗೊಬ್ಬರ ನಿರ್ವಹಣೆ ಕುರಿತು ಜರುಗಿದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲೆಯಲ್ಲಿ ಈಗಾಗಲೇ 40,133 ಮೆಟ್ರಿಕ್‌ ಟನ್‌ ಯೂರಿಯಾ ರಸಗೊಬ್ಬರ ಹಂಚಿಕೆ ಮಾಡಲಾಗಿದ್ದು, ಅನಗತ್ಯವಾಗಿ ಸ್ಟಾಕ್‌ ಮಾಡಿಕೊಂಡು ಕೃತಕ ಅಭಾವ ಸೃಷ್ಟಿಸಿದರೆ ಅಂತಹ ಮಾರಾಟಗಾರರ ಲೈಸನ್ಸ್‌ ರದ್ದುಪಡಿಸುವುದರ ಜತೆಗೆ ಕಾನೂನಿನ ಅಡಿಯಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಈಗಾಗಲೇ ಕೆಲವೊಂದು ಕಡೆಗಳಲ್ಲಿ ಅಭಾವ ಸೃಷ್ಟಿಯಾಗಿರುವ ಬಗ್ಗೆ ತಿಳಿದುಬಂದಿದ್ದು, ಅದನ್ನು ಸರಿಪಡಿಸಿಕೊಳ್ಳಬೇಕು. ರೈತರಲ್ಲಿ ರಸಗೊಬ್ಬರದ ಬಗ್ಗೆ ಗೊಂದಲ ಸೃಷ್ಟಿಯಾಗಬಾರದು. ಈ ಬಾರಿ ಅಗತ್ಯಕ್ಕಿಂತ ಹೆಚ್ಚಿನ ರಸಗೊಬ್ಬರ ಹಂಚಿಕೆ ಮಾಡಲಾಗಿದೆ. ಇನ್ನು ಬೇಕಾದಲ್ಲಿತರಿಸಿಕೊಳ್ಳಲಾಗುತ್ತಿದೆ. ಯಾವುದೇ ರೈತರು ಗೊಬ್ಬರ ಸಿಕ್ಕಿಲ್ಲವೆಂದು ಬರಿಗೈಯಲ್ಲಿ ಹೋಗುವ ಸ್ಥಿತಿ ಉಂಟಾಗಬಾರದು. ರಸಗೊಬ್ಬರಗಳ ಸಮರ್ಪಕವಾಗಿ ವಿತರಣೆಯಾಗಬೇಕು. ಅಲ್ಲದೇ ಜಿಲ್ಲೆಯ ರೈತರಿಗೆ ಹೊರತುಪಡಿಸಿ ಬೇರೆ ಜಿಲ್ಲೆಯ ರೈತರಿಗೆ ಮಾರಾಟ ಮಾಡುವಂತಿಲ್ಲವೆಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ ಮಾತನಾಡಿ, ಜಿಲ್ಲೆಯ ರಸಗೊಬ್ಬರ ಮಾರಾಟಗಾರರು ಹೆಚ್ಚಿನ ಬೆಲೆಗೆ ಬ್ಲಾಕ್‌ ಮಾರಾಟ ಮಾಡಿ ಅಭಾವ ಸೃಷ್ಟಿ ಮಾಡಿದಲ್ಲಿ, ಸಂಬಂದಪಟ್ಟ ಅಧಿಕಾರಿಗಳು ರಸಗೊಬ್ಬರ ಹಂಚಿಕೆ ಮಾಡಿದ ಮೇಲೆ ತಮ್ಮ ಜವಾಬ್ದಾರಿ ಮುಗಿಯಿತೆಂದು ತಿಳಿಯದೇ ಹಂಚಿಕೆಯಾದ ರಸಗೊಬ್ಬರ ರೈತರಿಗೆ ವಿತರಣೆಯಾಗುತ್ತಿರುವ ಬಗ್ಗೆ ನಿಗಾ ವಹಿಸಬೇಕು. ಸೂಕ್ತ ತರಬೇತಿ ನೀಡಿದ ಮೇಲೆಯೇ ಲೈಸನ್ಸ್‌ ನೀಡಲಾಗಿರುತ್ತದೆ. ಆದ್ದರಿಂದ ಸರಿಯಾಗಿ ನಿರ್ವಹಣೆಯಾಗಬೇಕು ಎಂದು ಸೂಚಿಸಿದರು.

ರಸಗೊಬ್ಬರ ಅಭಾವ ಸೃಷ್ಟಿಗೆ ಅವಕಾಶ ಕೊಡದೇ ಆಗಿರುವ ತಪ್ಪುಗಳನ್ನು ತಿದ್ದಿಕೊಂಡು ಗೊಬ್ಬರ ರೈತರಿಗೆ ವಿತರಣೆಯಾಗಬೇಕು. ಮಾರಾಟಗಾರರು ಅನಗತ್ಯವಾಗಿ ಸ್ಟಾಕ್‌ ಇಟ್ಟುಕೊಂಡಿದ್ದರೆ ಕೂಡಲೇ ಅದನ್ನು ಜಪ್ತಿ ಆಗಬೇಕು. ಈ ಕುರಿತು ರಸಗೊಬ್ಬರ ಮಾರಾಟಗಾರರು ಸಭೆ ನಡೆಸಿ ಅಭಾವ ಸೃಷ್ಟಿ, ಗಲಾಟೆ, ಪ್ರತಿಭಟನೆಗಳು ನಡೆಯಲು ಅವಕಾಶ ನೀಡಬಾರದು. ಇಂತಹ ಘಟನೆಗಳು ನಡೆದಲ್ಲಿ ಇದಕ್ಕೆ ಕಾರಣರಾದವರ ಮೇಲೆ ಸೂಕ್ತ ಕಾನೂನಿನ ಕ್ರಮ ಕೈಗೊಳ್ಳಲಾಗುವುದು ಎಂದರು.

Advertisement

ಪ್ರೊಬೆಷನರಿ ಐಎಎಸ್‌ ಅಧಿಕಾರಿ ಯಶವಂತ ಗುರುಕಾರ, ಕೃಷಿ ಇಲಾಖೆಯ ಉಪ ನಿರ್ದೇಶಕ ಕೊಂಗವಾಡ ಸೇರಿದಂತೆ ತಾಲೂಕು ಕೃಷಿ ಸಹಾಯಕ ನಿರ್ದೇಶಕರು, ಜಿಲ್ಲೆಯ ಎಲ್ಲ ರಸಗೊಬ್ಬರ ಮಾರಾಟ ಮತ್ತು ಸಗಟು ಮಾರಾಟಗಾರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next