Advertisement

1 ಲಕ್ಷ ಸರ್ಕಾರಿ ನೌಕರರ ನೇಮಕಕ್ಕೆ ಕ್ರಮ; ಶಿಕ್ಷಣ ಇಲಾಖೆಗೆ ಹೆಚ್ಚಿನ ಆದ್ಯತೆ

03:48 PM Dec 30, 2022 | Team Udayavani |

ಸುವರ್ಣವಿಧಾನಸೌಧ: ರಾಜ್ಯದಲ್ಲಿ ಸುಮಾರು 1 ಲಕ್ಷ ಸರ್ಕಾರಿ ನೌಕರರ ನೇಮಕಕ್ಕೆ ತೀರ್ಮಾನಿಸಲಾಗಿದ್ದು, ಶಿಕ್ಷಣ ಇಲಾಖೆಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

Advertisement

ಪರಿಷತ್‌ನಲ್ಲಿ ಗುರುವಾರ ಕರ್ನಾಟಕ ಧನ ವಿನಿಯೋಗ ವಿಧೇಯಕ (ಪೂರಕ ಅಂದಾಜು) ಮಂಡನೆ ಮಾಡಿ ಮಾತನಾಡಿದ ಅವರು, ವೇತನಕ್ಕೆ ತಕ್ಕ ರೀತಿಯ ಕೆಲಸ ನಿಗದಿ ಹಾಗೂ ಮೌಲ್ಯಾಂಕನಕ್ಕೆ ಒತ್ತು ನೀಡಲಾಗುವುದು. ಐದು ವರ್ಷದ ಯೋಜನೆ ಇದಾಗಿದ್ದು, ಈ ಬಗ್ಗೆ ಬಜೆಟ್‌ನಲ್ಲಿ ಘೋಷಣೆ ಮಾಡುವುದಾಗಿ ತಿಳಿಸಿದರು.

ಕೆಲಸದ ಅವಧಿಯನ್ನೂ ಹೆಚ್ಚಿಸುವ ಚಿಂತನೆ ಇದೆ. ಶಿಕ್ಷಕರು, ಉಪನ್ಯಾಸಕರು ಪಡೆಯುವ ವೇತನಕ್ಕೆ ತಕ್ಕ ರೀತಿಯಲ್ಲಿ ಕರ್ತವ್ಯ ನಿರ್ವಹಣೆ ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ಮೌಲ್ಯಾಂಕನ ಮಾಡಲು ಕ್ರಮ ಕೈಗೊಳ್ಳಲಾಗುವುದು. ವಿದ್ಯಾರ್ಥಿಗಳ ಸಂಖ್ಯೆಗನುಗುಣವಾಗಿ ಶಿಕ್ಷಕರ ನಿಯೋಜನೆ ಮಾಡಲಾಗುವುದು ಎಂದರು.ಶಿಕ್ಷಕರ ಕೊರತೆ ನೀಗಿಸುವ ನಿಟ್ಟಿನಲ್ಲಿ ಈಗಾಗಲೇ 15 ಸಾವಿರ ಶಿಕ್ಷಕರ ನೇಮಕ ಕೈಗೊಳ್ಳಲಾಗಿತ್ತು.

ಕೆಲವರು ಕೋರ್ಟ್‌ಗೆ ಹೋಗಿದ್ದರಿಂದ ತಡೆಯಾಗಿದೆ. ಇದಲ್ಲದೆ ಇನ್ನೂ 15 ಸಾವಿರ ಶಿಕ್ಷಕರ ನೇಮಕಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ. ವಿಶ್ವವಿದ್ಯಾಲಯ ಉಪನ್ಯಾಸರ ನೇಮಕಕ್ಕೆ ಅನುಮತಿ ನೀಡಿದ್ದೇನೆ. ಅತಿಥಿ ಉಪನ್ಯಾಸಕರ ಗೌರವಧನ ಹೆಚ್ಚಳ ಮಾಡಲಾಗಿದೆ ಎಂದರು.

ಧನ ವಿನಿಯೋಗ ವಿಧೇಯಕ ಅಂಗೀಕಾರ: ಕರ್ನಾಟಕ ಧನ ವಿನಿಯೋಗ ವಿಧೇಯಕಕ್ಕೆ ವಿಧಾನಪರಿಷತ್‌ನಲ್ಲಿ ಅಂಗೀಕಾರ ನೀಡಲಾಯಿತು. ಸಿಎಂ ಬೊಮ್ಮಾಯಿ ಅವರು ವಿಧೇಯಕ ಮಂಡಿಸಿದರು. ಅಂದಾಜು 2,71,542 ಕೋಟಿ ರೂ.ಗಳ ಬಜೆಟ್‌ ಗಾತ್ರ ಇದ್ದು, ಮೊದಲ ಬಾರಿಗೆ 14,762 ಕೋಟಿ ರೂ. ಗಳ ಪೂರಕ ಅಂದಾಜು ಮಂಡನೆ ಮಾಡಲಾಗಿತ್ತು.

Advertisement

ಇದೀಗ 8001.13 ಕೋಟಿ ರೂ.ಗಳ ಪೂರಕ ಅಂದಾಜು ಮಂಡನೆ ಮಾಡುತ್ತಿದ್ದು, ವಿವಿಧ ಆಭಿವೃದ್ಧಿ ಹಾಗೂ ಕಲ್ಯಾಣ ಯೋಜನೆಗಳ ಉದ್ದೇಶದೊಂದಿಗೆ ಇದನ್ನು ಕೈಗೊಳ್ಳುತ್ತಿದ್ದೇನೆ. ಒಟ್ಟು ಬಜೆಟ್‌ ಗಾತ್ರಕ್ಕೆ ಹೋಲಿಸಿದರೆ ಎರಡು ಪೂರಕ ಅಂದಾಜುಗಳ ಪ್ರಮಾಣ ಶೇ.8.38ರಷ್ಟು ಮಾತ್ರ ಆಗಿದೆ ಎಂದು ಹೇಳಿದರು.

ಶೀಘ್ರ ಶಾಸಕರ ಸಭೆ
ಅಂಬೇಡ್ಕರ್‌, ಪರಿಶಿಷ್ಟ ಪಂಗಡ ಸೇರಿ ಬಹುತೇಕ ಎಲ್ಲಾ ನಿಗಮಗಳಲ್ಲಿ ಅನುದಾನದ ಕೊರತೆ ಇಲ್ಲ. ಬಜೆಟ್‌ನಲ್ಲಿ ಮೀಸಲಿಟ್ಟ ಹಣದ ಜತೆಗೆ 800 ಕೋಟಿ ರೂ. ನೀಡಿದ್ದೇನೆ. ಶೀಘ್ರವೇ ಶಾಸಕರ ಸಭೆ ಕರೆದು ನಿಗಮದಲ್ಲಿ ಉಳಿದಿರುವ ಕಡತಗಳನ್ನು ವಿಲೇ ಮಾಡಲು ಸೂಚಿಸಲಾಗುವುದು. ಹೆಚ್ಚಿನ ಅನುದಾನ ಕಲ್ಪಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಪೂರಕ ಅಂದಾಜಿನ ಮೇಲಿನ ಚರ್ಚೆಗೆ ಉತ್ತರಿಸಿದ ಅವರು, ಲೋಕೋಪಯೋಗಿ, ಸಣ್ಣ ನೀರಾವರಿ, ಕಂದಾಯ ಇಲಾಖೆ, ವಸತಿ ಇಲಾಖೆಗೆ ಹೆಚ್ಚಿನ ಅನುದಾನವನ್ನು ವಿಪಕ್ಷಗಳ ಶಾಸಕರು ಕೇಳಿದ್ದು, 3ನೇ ಕಂತಿನ ಪೂರಕ ಅಂದಾಜಿನಲ್ಲಿ ಒದಗಿಸಲಾಗುವುದು ಎಂದು ಭರವಸೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next