Advertisement

ಮಜೂರು ಗ್ರಾಪಂ ವ್ಯಾಪ್ತಿಯ ಐಎಸ್‌ಆರ್‌ಎಲ್‌ನಿಂದ ತೆರಿಗೆ ವಸೂಲಿಗೆ ಕ್ರಮ

08:39 PM Dec 20, 2022 | Team Udayavani |

ಸುವರ್ಣ ವಿಧಾನಸೌಧ: ಉಡುಪಿ ಜಿಲ್ಲೆ ಕಾಪು ತಾಲೂಕಿನ ಮಜೂರು ಗ್ರಾಪಂ ವ್ಯಾಪ್ತಿಯ ಪಾದೂರು ಗ್ರಾಮದಲ್ಲಿನ ಐಎಸ್‌ಆರ್‌ಎಲ್‌ ಸಂಸ್ಥೆಯಿಂದ ಗ್ರಾಪಂಗೆ ತೆರಿಗೆ ಪಾವತಿಗೆ ಸಂಬಂಧಿಸಿದಂತೆ ಸಂಸ್ಥೆಯವರೊಂದಿಗೆ ಚರ್ಚಿಸಿ ತೆರಿಗೆ ಮೊತ್ತ ವಸೂಲಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಪರವಾಗಿ ಸಚಿವ ಮುರುಗೇಶ ನಿರಾಣಿ ಹೇಳಿದರು.

Advertisement

ವಿಧಾನಪರಿಷತ್‌ನಲ್ಲಿ ಬಿಜೆಪಿಯ ಕೆ. ಪ್ರತಾಪಸಿಂಹ ನಾಯಕ್‌ ವಿಷಯ ಪ್ರಸ್ತಾಪಿಸಿ, ಐಎಸ್‌ಪಿಆರ್‌ಎಲ್‌ ಸಂಸ್ಥೆ ಪಾದೂರು ಗ್ರಾಮದಲ್ಲಿ ಮೊದಲ ಹಂತದಲ್ಲಿ 180 ಎಕರೆಯಲ್ಲಿ ಕೈಗಾರಿಕೆ ಈಗಾಗಲೆ ಸ್ಥಾಪಿಸಲಾಗಿದೆ. ಎರಡನೇ ಹಂತದಲ್ಲಿ 210 ಎಕರೆ ಜಾಗದಲ್ಲಿ ಕೈಗಾರಿಕಾ ಘಟಕ ಸ್ಥಾಪಿಸಲಾಗುತ್ತಿದೆ.

ಇದರಿಂದಾಗಿ ಗ್ರಾಮಗಳಲ್ಲಿ ಮನೆಗಳ ನಿರ್ಮಾಣ ಕಡಿಮೆಯಾಗಿದೆ ಹಾಗೂ ಹಳೇ ನಿವಾಸಿಗಳು ವಲಸೆ ಹೋಗುತ್ತಿದ್ದಾರೆ. ಹೀಗಾಗಿ ಗ್ರಾಪಂಗೆ ಆದಾಯ ಕೊರತೆಯುಂಟಾಗುತ್ತಿದೆ. ಅದನ್ನು ನಿವಾರಿಸುವ ಐಎಸ್‌ಪಿಆರ್‌ಎಲ್‌ ಸಂಸ್ಥೆಯಿಂದ ತೆರಿಗೆ ಪಾವತಿಗೆ ಸೂಚಿಸಲಾಗಿತ್ತು. ಆದರೀಗ ಸಂಸ್ಥೆಯು ತೆರಿಗೆ ಪಾವತಿಸದೆ, ಗ್ರಾಪಂ ನೀಡಿದ ನೋಟಿಸ್‌ಗೆ ವಿರುದ್ಧವಾಗಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದೆ ಎಂದರು.

ಅದಕ್ಕುತ್ತರಿಸಿದ ಸಚಿವ ಮುರುಗೇಶ ನಿರಾಣಿ, ಐಎಸ್‌ಪಿಆರ್‌ಎಲ್‌ ಸಂಸ್ಥೆಯು 2016-17ರಿಂದ 2021-22ರವರೆಗೆ 37,42,17,898 ರೂ. ತೆರಿಗೆ ನೀಡುವಂತೆ ಮಜೂರು ಗ್ರಾಪಂ ಕಳೆದ ಜೂನ್‌ 24ರಂದು ತಗಾದೆ ನೋಟಿಸ್‌ ನೀಡಿತ್ತು. ಆದರೆ, ಆ ನೋಟಿಸ್‌ಗೆ ಸಂಸ್ಥೆಯ ಮುಖ್ಯಸ್ಥರು ಸಂಸ್ಥೆಯು ತೆರಿಗೆ ವ್ಯಾಪ್ತಿಗೆ ಒಳಪಡುವುದಿಲ್ಲ. ಜತೆಗೆ ಸಂಸ್ಥೆಯು ತೆರಿಗೆ ವಿನಾಯಿತಿಯೂ ಹೊಂದಿದೆ ಹಾಗೂ ತೆರಿಗೆ ಲೆಕ್ಕಾಚಾರದ ಬಗ್ಗೆಯೂ ಸ್ಪಷ್ಟತೆಯಿಲ್ಲ ಎಂದು ತಿಳಿಸಿದ್ದರು. ಆದರೆ ಕರ್ನಾಟಕ ಗ್ರಾಮ ಸ್ವರಾಜ್‌ ಮತ್ತು ಪಂಚಾಯತ್‌ ರಾಜ್‌ ಕಾಯ್ದೆ 1993 ಹಾಗೂ ತತ್ಸಂಬಂಧ ನಿಯಮಗಳನ್ವಯ ಐಎಸ್‌ಪಿಆರ್‌ಎಲ್‌ ಸಂಸ್ಥೆಯು ತೆರಿಗೆ ವ್ಯಾಪ್ತಿಗೆ ಒಳಪಟ್ಟಿದೆ. ಒಂದು ವೇಳೆ ತೆರಿಗೆ ಮೊತ್ತದಲ್ಲಿ ವ್ಯತ್ಯಾಸವಿರುವ ಬಗ್ಗೆ ಆಕ್ಷೇಪಣೆಗಳಿದ್ದರೆ ಅದನ್ನು ಬಗೆಹರಿಸಿಕೊಳ್ಳಬೇಕಿದೆ.

ಈ ಎಲ್ಲದರ ನಡುವೆ ಐಎಸ್‌ಪಿಆರ್‌ಎಲ್‌ ಸಂಸ್ಥೆಯು ಆಸ್ತಿ ತೆರಿಗೆಗೆ ಸಂಬಂಧಿಸಿದಂತೆ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದರೆ. ಸದರಿ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲಾತಿಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಅದರ ಜತೆಗೆ ಐಎಸ್‌ಪಿಆರ್‌ಎಲ್‌ ಸಂಸ್ಥೆಯ ಸಿಎಸ್‌ಆರ್‌ ಅನುದಾನವನ್ನು ಮಜೂರು ಗ್ರಾಪಂ ವ್ಯಾಪ್ತಿಯಲ್ಲಿ ಬಳಸುವುದು ಹಾಗೂ ಬಾಕಿ ತೆರಿಗೆ ವಸೂಲಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next