Advertisement

ಸೇನಾ ನೇಮಕಾತಿ ಪ್ರಕ್ರಿಯೆ ಯಶಸ್ಸಿಗೆ ಕ್ರಮ

02:57 PM May 16, 2019 | Team Udayavani |

ಗದಗ: ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಮೇ 28ರಿಂದ 10 ದಿನಗಳ ಕಾಲ ನಡೆಯಲಿರುವ ಸೇನಾ ನೇಮಕಾತಿ ಪ್ರಕ್ರಿಯೆ ಸುವ್ಯವಸ್ಥಿತ ಹಾಗೂ ಶಾಂತಿಯುತವಾಗಿ ಯಶಸ್ವಿಗೊಳಿಸಲು ಜಿಲ್ಲಾಡಳಿತ ಅಗತ್ಯ ಕ್ರಮ ಕೈಗೊಳ್ಳುತ್ತಿದೆ ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ತಿಳಿಸಿದರು.

Advertisement

ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಭೂಸೇನಾ ನೇಮಕಾತಿ ಕುರಿತ ಪೂರ್ವಭಾವಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಪ್ರತಿ ದಿನ ಜಿಲ್ಲಾವಾರು ಸರಾಸರಿ 2500 ಅಭ್ಯರ್ಥಿಗಳು ನೇಮಕಾತಿ ಪ್ರಕ್ರಿಯೆಯಲ್ಲಿ ಭಾಗವಹಿಸುತ್ತಿದ್ದು, ಅವರಿಗೆ ವಸತಿ, ಊಟೋಪಹಾರ, ಸಾರಿಗೆ, ಕುಡಿಯುವ ನೀರು, ಅವರ ದಾಖಲಾತಿ ಪರಿಶೀಲನೆ ತಂಡಗಳು, ತಾತ್ಕಾಲಿಕ ಆರೋಗ್ಯ ಕೇಂದ್ರ ಸ್ಥಾಪನೆ, ಪೊಲೀಸ್‌ ಬಂದೋಬಸ್ತ್, ಅಗ್ನಿಶಾಮಕ ವ್ಯವಸ್ಥೆ ಇತ್ಯಾದಿ ಕುರಿತಂತೆ ವಿವಿಧ ಇಲಾಖೆ ಹಾಗೂ ಸ್ಥಳೀಯ ಸಂಸ್ಥೆಗಳಿಗೆ ಜವಾಬ್ದಾರಿ ವಹಿಸಲಾಗಿದೆ ಎಂದು ತಿಳಿಸಿದರು.

ಗದುಗಿನಲ್ಲಿ ನಡೆಯುವ ಭೂ ಸೇನಾ ನೇಮಕಾತಿ ಸಂಪೂರ್ಣ ಯಶಸ್ವಿಗೊಳಿಸಲು ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ರವೀಂದ್ರ ಕರಿಲಿಂಗಣ್ಣವರ ಅವರನ್ನು ನೋಡಲ್ ಅಧಿಕಾರಿಯಾಗಿ ನೇಮಿಸಲಾಗಿದೆ ಎಂದು ತಿಳಿಸಿದರು.

ಭೂಸೇನಾ ನೇಮಕಾತಿ ಮಂಗಳೂರು ಕೇಂದ್ರದ ನಿರ್ದೇಶಕ ಕರ್ನಲ್ ಎಂ.ಎ. ರಾಜಮನ್ನಾರ ಮಾತನಾಡಿ, ಬಾಗಲಕೋಟೆ, ವಿಜಯಪುರ, ಧಾರವಾಡ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ದಾವಣಗೆರೆ ಹಾಗೂ ಗದಗ ಜಿಲ್ಲೆಗಳಿಂದ ಗದಗದಲ್ಲಿ ನಡೆಯುವ ಭೂ ಸೇನಾ ನೇಮಕಾತಿಗೆ 23 ಸಾವಿರ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ.

Advertisement

ನೇಮಕಾತಿ ಪ್ರಕ್ರಿಯೆಯಲ್ಲಿ ಅವರ ದಾಖಲೆ ಪರಿಶೀಲನೆ, ದೈಹಿಕ ಅರ್ಹತೆ , ಓಟದ ಸ್ಪರ್ಧೆ, ದೈಹಿಕ ದಾಡ್ಯರ್ ಪರೀಕ್ಷೆ, ಆರೋಗ್ಯ ಪರೀಕ್ಷೆ ಇವುಗಳಲ್ಲಿ ಪಾಸಾಗುವ ಅಭ್ಯರ್ಥಿಗಳಿಗೆ ಅಂತಿಮವಾಗಿ 10ನೇ ತರಗತಿ ಮಟ್ಟದ 1 ಗಂಟೆ ಅವಧಿಗೆ ಪರೀಕ್ಷೆ ನಡೆಸಲಾಗುತ್ತದೆ. ಗಣಿತ, ಇಂಗ್ಲಿಷ್‌ ಹಾಗೂ ಸಾಮಾನ್ಯ ಜ್ಞಾನ ವಿಷಯಗಳ 100 ಅಂಕ ಒಳಗೊಂಡಿದ್ದು, ಇಂಗ್ಲಿಷ್‌, ಹಿಂದಿ ಭಾಷೆಗಳಲ್ಲಿ ಪರೀಕ್ಷೆ ಜರುಗಿಸಲಾಗುವುದು. ಪ್ರತಿ ಜಿಲ್ಲೆ ಅಭ್ಯರ್ಥಿಗಳಿಗೆ ದಿನಾಂಕ ನಿಗದಿಗೊಳಿಸಲಾಗುವುದು ಎಂದು ತಿಳಿಸಿದರು. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಶ್ರೀನಾಥ ಜೋಶಿ, ಜಿಪಂ ಉಪಕಾರ್ಯದರ್ಶಿ ಡಿ.ಪ್ರಾಣೇಶರಾವ್‌, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ರವೀಂದ್ರ ಕರಿಲಿಂಗಣ್ಣವರ, ಧಾರವಾಡ ಸೈನಿಕ ಕಲ್ಯಾಣ ಪುನರ್ವಸತಿ ಕೇಂದ್ರದ ಉಪನಿರ್ದೇಶಕ ನಿವೃತ್ತ ವಿಂಗ್‌ ಕಮಾಂಡರ್‌ ಈಶ್ವರ ಕಡೊಳ್ಳಿ, ಗದಗ-ಬೆಟಗೇರಿ ನಗರಸಭೆ ಪೌರಾಯುಕ್ತ ದೀಪಕ ಹರಡಿ, ತಹಶೀಲ್ದಾರ್‌ ಶ್ರೀನಿವಾಸ್‌ ಮೂರ್ತಿ ಕುಲಕರ್ಣಿ ಹಾಗೂ ವಿವಿಧ ಇಲಾಖೆ ಹಾಗೂ ಸಂಸ್ಥೆಗಳ ಹಿರಿಯ ಅಧಿಕಾರಿಗಳು ಇದ್ದರು.

ನಗರದಲ್ಲಿ ಮೇ 28ರಿಂದ ನಡೆಯುವ ಸೇನಾ ನೇಮಕಾತಿ ಪ್ರಕ್ರಿಯೆ ಕುರಿತು ಇಲಾಖೆ ಅಧಿಕಾರಿಗಳಿಗೆ ವಹಿಸಿದ ಕಾರ್ಯ ಅಚ್ಚುಕಟ್ಟಾಗಿ ನಿರ್ವಹಿಸಬೇಕು. ಲೋಪಗಳಾದರೆ, ಆಯಾ ಇಲಾಖೆ ಅಧಿಕಾರಿಗಳನ್ನೇ ಬಾಧ್ಯಸ್ಥರನ್ನಾಗಿಸಲಾಗುವುದು. •ಎಂ.ಜಿ. ಹಿರೇಮಠ, ಜಿಲ್ಲಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next