Advertisement
ಸುಮಾರು 20-25 ವರ್ಷಗಳ ಹಿಂದೆ ಸಂಸತ್ತಿನಲ್ಲಿ, ಮಹಾನಗರಗಳ ಬಸ್ ನಿಲ್ದಾಣಗಳಲ್ಲಿ ಅಚಾನಕ್ಕಾಗಿ ಕಂಡುಬಂದ ಸಂಸ್ಕೃತ ಸಂಭಾಷಣೆಯ ದೃಶ್ಯ ಮಾಧ್ಯಮಗಳಲ್ಲಿ ರಾರಾಜಿಸುತ್ತಿತ್ತು. ಇದರ ಹಿಂದಿದ್ದ ಶಕ್ತಿ ಸಂಸ್ಕೃತವನ್ನು ಜನಪ್ರಿಯ ಗೊಳಿಸಲು ಕಂಕಣಬದ್ಧರಾದ ಕಾರ್ಯಕರ್ತರು.
Related Articles
Advertisement
ಭಾಷೆ, ತಂತ್ರಜ್ಞಾನ, ವಿಜ್ಞಾನ, ವೈದ್ಯಕೀಯ, ಖಗೋಳ ಇತ್ಯಾದಿ ನಾನಾ ಕ್ಷೇತ್ರಗಳಲ್ಲಿ ಹರಿದುಬಂದ ಜ್ಞಾನಪರಂಪರೆಯನ್ನು ಈಗಿನ ಜನಾಂಗಕ್ಕೆ ತೋರಿಸುವ ಅದ್ಭುತವಾದ “ಪರಂಪರಾ’ ಪ್ರದರ್ಶಿನಿಯನ್ನು ಸಾವಿರಾರು ಜನರು ನೋಡಿ ಆನಂದಿಸಿದ್ದಾರೆ. ಇದರಲ್ಲಿ ಪ್ರತಿಷ್ಠಿತ ಇಸ್ರೋ ಸಂಸ್ಥೆಯವರು ಭಾಸ್ಕರಾಚಾರ್ಯರಿಂದ ಹಿಡಿದು ಈಗಿನ ಮಂಗಳಯಾನದವರೆಗಿನ ಖಗೋಳವಿಜ್ಞಾನದ ಸ್ಟಾಲ್ ಕೂಡ ಒಂದಾಗಿದೆ.
ಜಮ್ಮು ಕಾಶ್ಮೀರ, ಮಹಾರಾಷ್ಟ್ರ, ಉತ್ತರ ಪ್ರದೇಶ, ಗುಜರಾತ್, ಮಣಿಪುರ, ತ್ರಿಪುರ, ತಮಿಳುನಾಡು ಮೊದಲಾದ ರಾಜ್ಯಗಳಿಂದ ಸುಮಾರು 2,000 ಪ್ರಮುಖ ಕಾರ್ಯಕರ್ತರು ಅಧಿವೇಶನದಲ್ಲಿ ಪಾಲ್ಗೊಂಡು ಚಿಂತನ ಮಂಥನ ನಡೆಸಿದ್ದಾರೆ. ಮುಂದಿನ ಹತ್ತು ವರ್ಷಗಳಲ್ಲಿ ಸಂಘಟನೆಯ ಮುನ್ನೋಟ ಹೇಗಿರಬೇಕು? ಶಾಲಾ ಕಾಲೇಜುಗಳ ಶಿಕ್ಷಣ, ಸಂಸ್ಕೃತೇತರ ಜನರಲ್ಲಿ ಸಂಸ್ಕೃತವನ್ನು ಜನಪ್ರಿಯಗೊಳಿಸುವ ದಾರಿ, ಸಂಸ್ಕೃತ ಭಾರತೀ ತೆಲುಗು, ಕನ್ನಡ, ತಮಿಳು, ಗುಜರಾತಿ, ಮರಾಠಿ, ಹಿಂದಿ, ಅಸ್ಸಾಮಿ, ಒಡಿಯ, ಬಂಗಾಲಿ, ಮಲಯಾಳ, ಇಂಗ್ಲಿಷ್ ಈ 11 ಭಾಷೆಗಳಲ್ಲಿ ಕಲಿಸುತ್ತಿರುವ ಅಂಚೆ ಮೂಲಕ ಸಂಸ್ಕೃತ ಶಿಕ್ಷಣದ ವಿಸ್ತಾರ, ಮಾಸ ಪತ್ರಿಕೆ “ಸಂಭಾಷಣಾ ಸಂದೇಶ’ಕ್ಕೆ 14 ದೇಶಗಳಲ್ಲಿರುವ ಲಕ್ಷ ಚಂದಾದಾರರ ವಿಸ್ತರಣೆ, ಮಹಿಳೆಯರ ಸಹಭಾಗಿತ್ವ ಇತ್ಯಾದಿ ವಿಷಯಗಳ ಬಗೆಗೆ ಮುಂದಿನ ಮೂರು ವರ್ಷಗಳಲ್ಲಿ ಕೈಗೊಳ್ಳಬೇಕಾದ ಕ್ರಿಯಾಯೋಜನೆಗೆ ಚರ್ಚೆಗಳು ನಡೆದಿದ್ದು ಇಂದು ನಿರ್ಣಯಗಳ ಮೂಲಕ ಕಾರ್ಯರೂಪಕ್ಕೆ ನಾಂದಿಹಾಡಲಿದೆ. ಪರಿಶಿಷ್ಟ ಪಂಗಡದ ಗುಂಪಿನಲ್ಲಿ ಬರುವ ಕೊರಗ ಸಮುದಾಯ ಸಮಾಜದಲ್ಲಿ ಅತ್ಯಂತ ಹಿಂದುಳಿದ ವರ್ಗ. ಸಂಸ್ಕೃತ ಭಾರತೀ ರಾಷ್ಟ್ರೀಯ ಅಧಿವೇಶನಕ್ಕೆ ಪೂರ್ವಭಾವಿಯಾಗಿ ನಿರೀಕ್ಷೆಗೆ ಮಿಗಿಲಾಗಿ 174 ಶಿಬಿರಗಳು ನಡೆದವು. ಇವುಗಳಲ್ಲಿ ಹಿರಿಯಡಕ ಗುಡ್ಡೆಯಂಗಡಿ ಮತ್ತು ಕುಂಭಾಶಿಯ ಎರಡು ಶಿಬಿರಗಳು ಕೊರಗರ ಕಾಲನಿಗಳಲ್ಲಿ ನಡೆದದ್ದು. ಹಿರಿಯಡಕ ಕಾಲನಿಯಲ್ಲಿ ನಡೆದ ಶಿಬಿರದಲ್ಲಿ ಶಾಲೆಯ ಮೆಟ್ಟಿಲನ್ನೇ ಹತ್ತದ 102 ವರ್ಷದ ಶತಾಯುಷಿ ಗೊರವ ಅವರು ಪಾಲ್ಗೊಂಡಿದ್ದಾರೆ. ಶಿಬಿರದ ಸಮಾರೋಪದಲ್ಲಿ ಪೇಜಾವರ ಶ್ರೀವಿಶ್ವೇಶ ತೀರ್ಥ ಶ್ರೀಪಾದರ ಬಳಿ ಸಂಸ್ಕೃತದಲ್ಲಿ ಸಂಭಾಷಣೆ ನಡೆಸಿ ಪುರಸ್ಕೃತರಾದರು. ಇದಕ್ಕೆ ಸಾಕ್ಷಿಯಾದ ಬೈಲೂರು ರಾಮಕೃಷ್ಣಾಶ್ರಮದ ಶ್ರೀ ವಿನಾಯಕಾನಂದ ಸ್ವಾಮೀಜಿ ಅವರ ಜೊತೆಯಲ್ಲಿಯೇ ಗೊರವರು ಕುಳಿತು ಭೋಜನ ಸ್ವೀಕರಿಸಿದರು. ಗೊರವ ಅವರ ಸಾಧನೆ ನೋಡಿ ಉತ್ತೇಜಿತರಾದವರು ತಮ್ಮ ಕಾಲನಿಯಲ್ಲಿ ಇನ್ನೊಂದು ಶಿಬಿರ ಆಯೋಜಿಸಲು ಸಂಘಟಕರಿಗೆ ಮನವಿ ಮಾಡಿದರು. ಕಾಕತಾಳೀಯವೆಂಬಂತೆ ಈ ಶಿಬಿರದ ಅವಧಿಯಲ್ಲಿಯೇ ರಾಜ್ಯದ ಸಮಾಜ ಕಲ್ಯಾಣ ಸಚಿವ ಎಚ್. ಆಂಜನೇಯರು ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಮೂರೂರು ಗ್ರಾಮದ ಕೊರಗರ ಕಾಲನಿಯಲ್ಲಿ ರಾತ್ರಿ ವಾಸ್ತವ್ಯ ಹೂಡಿ ಊಟ ಮಾಡಿದರೆ, ಮರುದಿನ ಶ್ರೀಕೃಷ್ಣಮಠದಲ್ಲಿ ಊಟ ಮಾಡುವಾಗ ಶ್ರೀಪೇಜಾವರ ಶ್ರೀಪಾದರು ಸಿಹಿ ಬಡಿಸಿದರು ಮತ್ತು ಇದಕ್ಕೆ ಒಂದು ವಾರದ ಹಿಂದೆ ಶ್ರೀಕೃಷ್ಣಮಠದಲ್ಲಿ ಕೊರಗರು, ಸಿದ್ದಿಗಳು, ಜೇನುಕುರುಬರೇ ಮೊದಲಾದ 50 ಬುಡಕಟ್ಟು ಜನಾಂಗಗಳ ವನವಾಸಿಗಳ ರಾಜ್ಯ ಸಮ್ಮೇಳನ ನಡೆದಿರುವುದು ಉಲ್ಲೇಖಾರ್ಹ. ಮಟಪಾಡಿ ಕುಮಾರಸ್ವಾಮಿ