ಕುಮಟಾ: ಇಲ್ಲಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ಕೊಂಕಣ ಎಜ್ಯುಕೇಶನ್ ಟ್ರಸ್ಟಿನ ಸಿವಿಎಸ್ಕೆ ಪ್ರೌಢಶಾಲೆಯ ಎಸ್ಸೆಸ್ಸೆಲ್ಸಿ ಹಾಗೂ ಸರಸ್ವತಿ ಪಿ.ಯು. ಕಾಲೇಜಿನ ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಶಿಕ್ಷಕರ ಅಭಿನಂದನಾ ಕಾರ್ಯಕ್ರಮ ರಾಮಕ್ಷೇತ್ರ ಮಹಾಸಂಸ್ಥಾನದ ಸದ್ಗುರು ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಸಾನ್ನಿಧ್ಯದಲ್ಲಿ ನಡೆಯಿತು.
ಎಸ್ಸೆಸ್ಸೆಲ್ಸಿಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿನಿ ನಾಗಾಂಜಲಿ ನಾಯ್ಕ ಜೊತೆ ರಾಜ್ಯಕ್ಕೆ ಎಂಟು ರ್ಯಾಂಕ್ಗಳನ್ನು ಪಡೆದ ವಿದ್ಯಾರ್ಥಿಗಳನ್ನು ಹಾಗೂ ಪರೀಕ್ಷೆಯಲ್ಲಿ ಗಮನಾರ್ಹ ಸಾಧನೆಗೈದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಪರೀಕ್ಷೆಯಲ್ಲಿ ಪೂರ್ಣಾಂಕಗಳಿಸಿ ಅದ್ಭುತ ಸಾಧನೆಗೈದುದಕ್ಕಾಗಿ ಕೊಂಕಣ ಎಜ್ಯುಕೇಶನ್ ಟ್ರಸ್ಟ್ ವತಿಯಿಂದ 25,000 ರೂ., ಟ್ರಸ್ಟಿಗಳಾದ ಭರತ ಭಂಡಾರಕರ್ ವೈಯಕ್ತಿಕ 25,000 ರೂ. ಮತ್ತು ಎಂ.ಡಿ. ನಾಯ್ಕ ಮೆಮೋರಿಯಲ್ ಟ್ರಸ್ಟ್ ವತಿಯಿಂದ 5,000 ರೂ. ನಗದನ್ನು ನಾಗಾಂಜಲಿಗೆ ಪುರಸ್ಕಾರ ನೀಡಲಾಯಿತು. ಅದೇ ರೀತಿ, ಜಿಲ್ಲೆಯಲ್ಲಿ ರ್ಯಾಂಕ್ಗಳಿಸಿದ ಕೊಂಕಣದ ಸರಸ್ವತಿ ಪಿ.ಯು. ಕಾಲೇಜಿನ ಮಾನಸಾ ಪಂಡಿತ, ಅಂಕಿತಾ ನಾಡಕರ್ಣಿ ಹಾಗೂ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಇತರೆ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.
ನಾಗಾಂಜಲಿ ನಾಯ್ಕ ಅನಿಸಿಕೆ ವ್ಯಕ್ತಪಡಿಸಿ, ಶಾಲೆ ಆಡಳಿತ ಮಂಡಳಿ, ಶಿಸ್ತುಬದ್ಧ ಶಿಕ್ಷಕ ವರ್ಗ ಹಾಗೂ ತಂದೆ-ತಾಯಿಗಳ ಪ್ರೋತ್ಸಾಹ ನನ್ನ ಈ ಸಾಧನೆಗೆ ಪ್ರಮುಖ ಕಾರಣ. ಮುಂದೆಯೂ ಕಠಿಣ ಅಭ್ಯಾಸ ಹಾಗೂ ಪರಿಶ್ರಮದಿಂದ ಇದೇ ರೀತಿ ಸಾಧನೆಗೆ ಪ್ರಯತ್ನಿಸುವೆನೆಂದು ಹೇಳಿದಳು. ಅದೇರೀತಿ, ಸಾಧನೆ ಮಾಡಲು ಮಾರ್ಗದರ್ಶನ ಮಾಡಿದ ಅಂಗಸಂಸ್ಥೆಗಳ ಮುಖ್ಯಾಧ್ಯಾಪಕರಿಗೆ ಹಾಗೂ ಶಿಕ್ಷಕರಿಗೆ ಪುರಸ್ಕರಿಸಲಾಯಿತು.
ಉದ್ಘಾಟಿಸಿದ ಸದ್ಗುರು ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಆಶೀರ್ವಚನ ನೀಡಿ, ಜೀವನದಲ್ಲಿ ಸುಖ ಅನ್ನುವುದು ಕರ್ಮದಲ್ಲಿದೆ. ಇಂದ್ರಿಯಾತೀತ ಸುಖ ನಿಜವಾದ ಸುಖವಾಗಿದ್ದು ಶಿಕ್ಷಕರು ತಮ್ಮನ್ನು ತಮ್ಮ ಕಾರ್ಯಕ್ಕೆ ಸಮರ್ಪಿಸಿಕೊಂಡಾಗ ಅದ್ಭುತ ಸಾಧನೆ ಮಾಡಲು ಸಾಧ್ಯ. ಅಂತಹ ಸಾಧ್ಯತೆಯನ್ನು ಕೊಂಕಣ ಶಿಕ್ಷಕ ವರ್ಗ ಮಾಡಿ ರಾಜ್ಯದಲ್ಲಿ ಇಂದು ಪ್ರಥಮ ಸ್ಥಾನಗಳಿಸಿದೆ. ಇದು ನಿಜಕ್ಕೂ ಶ್ಲಾಘನೀಯ ಹಾಗೂ ಗಣನೀಯ ಸಾಧನೆ ಎಂದರು.
ಶಿಕ್ಷಕರ ಪರವಾಗಿ ಚಿದಾನಂದ ಭಂಡಾರಿ ಮಾತನಾಡಿದರು. ಗೌರವ ಕಾರ್ಯದರ್ಶಿ ಮುರಲೀಧರ ಪ್ರಭು ಪ್ರಾಸ್ತಾವಿಕ ಮಾತನಾಡಿದರು. ಟ್ರಸ್ಟಿಗಳಾದ ರಮೇಶ ಪ್ರಭು ಸ್ವಾಗತಿಸಿದರು. ಅಧ್ಯಕ್ಷ ವಿಠuಲ ನಾಯಕ, ಸಹಕಾರ್ಯದರ್ಶಿ ಶೇಷಗಿರಿ ಶಾನಭಾಗ, ಅಶೋಕ ಪ್ರಭು ಇದ್ದರು. ಟ್ರಸ್ಟಿಗಳಾದ ಡಿ.ಡಿ.ಕಾಮತ್ ವಂದಿಸಿದರು. ಶಿಕ್ಷಕರುಗಳಾದ ಗಣೇಶ ಜೋಶಿ ಹಾಗೂ ಪ್ರಕಾಶ ಗಾವಡಿ ನಿರೂಪಿಸಿದರು.