Advertisement

ಆರು ಗ್ರಾಂ ಚಿನ್ನಕ್ಕಾಗಿ ಮಹಿಳೆಯ ಹತ್ಯೆ: ದೃಶ್ಯಂ ಸಿನಿಮಾ ರೀತಿ ಕತೆ ಕಟ್ಟಿದ್ದ ಆರೋಪಿಗಳು!

10:07 AM Jul 13, 2021 | Team Udayavani |

ಬೆಂಗಳೂರು: ಇತ್ತೀಚೆಗೆ ಒಂಟಿ ಮಹಿಳೆಯನ್ನು ಕೊಲೆಗೈದು ಪರಾರಿಯಾಗಿದ್ದ ಮಹಿಳೆ ಸೇರಿ ಇಬ್ಬರು ಆರೋಪಿಗಳನ್ನು ಜ್ಞಾನಭಾರತಿ ಠಾಣೆ ಪೊಲೀಸರು ಬಂಧಿಸಿದ್ದು, ಚಿನ್ನದ ಸರಕ್ಕಾಗಿ ಕೊಲೆಯಾಗಿದೆ. ಅಲ್ಲದೆ, ಪೊಲೀಸರಿಂದ ತಪ್ಪಿಸಿಕೊಳ್ಳಲು ಆರೋಪಿಗಳು ಮಕ್ಕಳಿಗೆ ಕನ್ನಡದ “ದೃಶ್ಯಂ’ ಸಿನಿಮಾ ರೀತಿಯ ಕಥೆ ಹೇಳಿಕೊಟ್ಟಿದ್ದರು ಎಂಬುದು ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

Advertisement

ಜ್ಞಾನಜ್ಯೋತಿ ನಗರದ ರಾಜಶೇಖರ್‌ (41 ವ) ಮತ್ತು ಆಕೆಯ ಸ್ನೇಹಿತೆ ಇಂದಿರಾ (37 ವ) ಬಂಧಿತರು. ಆರೋಪಿಗಳಿಂದ ಅಡಮಾನ ಇಟ್ಟಿದ್ದ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ. ಆರೋಪಿಗಳು ಜು.10ರಂದು ಸಂಜೆ ಆರು ಗಂಟೆ ಸುಮಾರಿಗೆ ಓಂಕಾರ್‌ ಎಂಬುವರ ಪತ್ನಿ ರಂಜಿತಾ (26) ಎಂಬಾಕೆಯ ಕತ್ತು ಕೊಯ್ದು ಕೊಲೆಗೈದು, ಮೃತಳ ಕೈಯಲ್ಲಿ ಚಾಕು ಇಟ್ಟು ಪರಾರಿಯಾಗಿದ್ದರು ಎಂದು ಪೊಲೀಸರು ಹೇಳಿದರು.

ಆರೋಪಿಗಳಿಬ್ಬರು ಸಿನಿಮಾ, ಧಾರವಾಹಿಗಳ ಶೂಟಿಂಗ್‌ನಲ್ಲಿ ಸಣ್ಣ-ಪುಟ್ಟ ಕೆಲಸ ಮಾಡಿಕೊಂಡಿದ್ದರು. ಈ ಪೈಕಿ ಇಂದಿರಾ ಪತಿಯಿಂದ, ರಾಜಶೇಖರ್‌ ಕೂಡ ಪತ್ನಿಯಿಂದ ದೂರವಾಗಿದ್ದು, ಅಕ್ರಮ ಸಂಬಂಧ ಹೊಂದಿದ್ದಾರೆ. ಮೃತ ರಂಜಿತಾ ವಾಸವಿದ್ದ ಕಟ್ಟಡದ ಮೊದಲ ಮಹಡಿಯ ಬಾಡಿಗೆ ಮನೆಯಲ್ಲಿ ರಾಜಶೇಖರ್‌ ಮತ್ತು ಇಂದಿರಾಳ ಹಾಗೂ ಆಕೆಯ ಇಬ್ಬರು ಮಕ್ಕಳ ಜತೆ ವಾಸವಾಗಿದ್ದರು.

ಇದನ್ನೂ ಓದಿ:ಭದ್ರತಾ ಸಿಬ್ಬಂದಿಗೆ ಮೆಣಸಿನ ಹುಡಿ ಎರಚಿ ಜೈಲಿನಿಂದ ಪರಾರಿಯಾದ ಏಳು ಖದೀಮರು!

ಈ ಮಧ್ಯೆ ಆರೋಪಿಗಳು ನಾಲ್ಕು ತಿಂಗಳಿಂದ ಬಾಡಿಗೆ ಕೊಟ್ಟಿಲ್ಲ. ಜತೆಗೆ ರಾಜಶೇಖರ್‌ ಎರಡು ಲಕ್ಷ ರೂ. ಸಾಲ ಮಾಡಿಕೊಂಡಿದ್ದ. ಸಾಲಗಾರರ ಒತ್ತಡ ಹೆಚ್ಚಾಗಿತ್ತು. ಈ ಮಧ್ಯೆ ರಂಜಿತಾ ಕಾರ್ಯಕ್ರಮವೊಂದಕ್ಕೆ ಹೋಗಲು ನೆಕ್ಲೆಸ್‌, ಚಿನ್ನದ ಸರ ಹಾಕಿಕೊಂಡು ಹೋಗಿದ್ದು, ಸೆಲ್ಫಿ ಫೋಟೋವೊಂದನ್ನು ಕ್ಲಿಕ್ಕಿಸಿಕೊಂಡಿದ್ದರು. ಆ ಫೋಟೋ ನೋಡಿದ ಇಂದಿರಾ, ನಕ್ಲೆಸ್‌ ಬಗ್ಗೆ ವಿಚಾರಿಸಿ, ಅದನ್ನು ಕೊಟ್ಟರೆ, ಅದೇ ಮಾದರಿಯಲ್ಲಿ ಹೊಸ ನಕ್ಲೆಸ್‌ ಮಾಡಿಸಿಕೊಳ್ಳುತ್ತೇನೆ ಎಂದು ಕೇಳಿದ್ದಳು. ಆದರೆ, ರಂಜಿತಾ ಕೊಡಲು ನಿರಾಕರಿಸಿದ್ದರು ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

Advertisement

ಕಿವಿ, ಕತ್ತು ಕೊಯ್ದು ಕೊಲೆ: ಅದರಿಂದ ಆಕ್ರೋಶಗೊಂಡಿದ್ದ ಆರೋಪಿಗಳು ರಂಜಿತಾ ಕೊಲೆಗೆ ಸಂಚು ರೂಪಿಸಿದ್ದರು. ಜು.10ರ ಶನಿವಾರ ಬೆಳಗ್ಗೆ ಇಂದಿರಾ ರಂಜಿತಾ ಮನೆಗೆ ಬಂದಿದ್ದಾಳೆ. ಬಳಿಕ ರಂಜಿತಾ ಸ್ನಾನಕ್ಕೆ ಹೋಗುತ್ತಿದ್ದಂತೆ ರಾಜಶೇಖರ್‌ನನ್ನು ಸ್ಥಳಕ್ಕೆ ಕರೆಸಿ ಕೊಂಡಿದ್ದಾಳೆ. ಸ್ನಾನದ ಕೋಣೆಯಿಂದ ರಂಜಿತಾ ಹೊರಗಡೆ ಬರುತ್ತಿದ್ದಂತೆ ಇಂದಿರಾ ಕೇಬಲ್‌ನಿಂದ ಆಕೆಯ ಕುತ್ತಿಗೆ ಬಿಗಿದು ರಾಜಶೇಖರ್‌ ಕುತ್ತಿಗೆ ಕೊಯ್ದು ಕೊಲೆಗೈದಿದ್ದಾನೆ. ಬಳಿಕ ನಕ್ಲೆಸ್‌ಗಾಗಿ ಎಲ್ಲೆಡೆ ಹುಡುಕಾಡಿದ್ದಾರೆ. ಸಿಗದಿದ್ದಾಗ, ಓಲೆಗಾಗಿ 2 ಕಿವಿ ಕೊಯ್ದು, ಕಿವಿಗಳನ್ನು ಸ್ನಾನದ ಕೊಠಡಿಯಲ್ಲಿ ಬಿಸಾಡಿ ಹೋಗಿದ್ದರು. ಆದರೆ, ಆ ಓಲೆಗಳು ರೋಲ್ಡ್‌ಗೋಲ್ಡ್‌ ಎಂದು ತಿಳಿಯುತ್ತಿದ್ದಂತೆ ತಾಳಿ ಸರದಲ್ಲಿದ್ದ ಆರು ಗ್ರಾಂ ತೂದ ಎರಡು ಗುಂಡುಗಳನ್ನು ಕಳವು ಮಾಡಿ ಪರಾರಿಯಾಗಿದ್ದರು ಎಂದು ಪೊಲೀಸರು ಹೇಳಿದರು.

ಅಡಮಾನ ಇಟ್ಟು ಸಿಕ್ಕಿಬಿದ್ದರು!: ‌ ಕೊಲೆಯಾದ ಸ್ಥಳ ಪರಿಶೀಲನೆಯಲ್ಲಿ ಚಿನ್ನಾಭರಣ ಕಳವುವಾಗಿರುವ ಮಾಹಿತಿ ಇರಲಿಲ್ಲ. ಆದರೆ, ಮೃತದೇಹ ಕೊಂಡೊಯ್ದಾಗ ಪತಿ ಗುಂಡು ಕಳವುವಾಗಿರುವ ಬಗ್ಗೆ ಮಾಹಿತಿ ನೀಡಿದ್ದರು. ಅನಂತರ ಸಮೀಪದ ಚಿನ್ನಾಭರಣ ಮಳಿಗೆಯಲ್ಲಿ ವಿಚಾರಣೆ ನಡೆಸಿದಾಗ ಆರೋಪಿಗಳು ಗುಂಡುಗಳನ್ನು ಅಡಮಾನ ಇಟ್ಟಿರುವ ಮಾಹಿತಿ ಸಿಕ್ಕಿತ್ತು. ಸಿಸಿ ಕ್ಯಾಮೆರಾ ಮಾಹಿತಿ ಸಂಗ್ರಹಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು

ನೆಕ್ಲೆಸ್‌ ರಂಜಿತಾಳದಲ್ಲ: ಅಸಲಿಗೆ ಫೋಟೋದಲ್ಲಿದ್ದ40 ಗ್ರಾಂ ತೂಕದ ನೆಕ್ಲೆಸ್‌ ಮೃತ ರಂಜಿತಾಳದಲ್ಲ.ಕಾರ್ಯಕ್ರಮಕ್ಕೆ ಹೋಗುವ ಸಲುವಾಗಿ ಪರಿಚಯಸ್ಥರ ಬಳಿ ಪಡೆದು ಫೋಟೋ ಕ್ಲಿಕ್ಕಿಸಿಕೊಂಡಿದ್ದರು. ಆ ಫೋಟೋ ನೋಡಿ ಇಂದಿರಾ ನೆಕ್ಲೆಸ್‌ ಕೇಳಿದ್ದಳು. ಆದರೆ, ನೆಕ್ಲೆಸ್‌ ಅಸಲಿ ಕಥೆಯನ್ನು ರಂಜಿತಾ ಮರೆ ಮಾಚಿದ್ದರು. ಹತ್ಯೆ ಬಳಿಕ ಚಿನ್ನದ ನೆಕ್ಲೆಸ್‌ ಸಿಗಲಿಲ್ಲ. ಆಕೆಯ ಕೊರಳಿನಲ್ಲಿದ್ದ ಆರು ಗ್ರಾಂ ತಾಳಿ ಗುಂಡುಗಳು ಮಾತ್ರ ಸಿಕ್ಕಿತ್ತು ಎಂದು ಮೂಲಗಳು ತಿಳಿಸಿವೆ.

ಮಕ್ಕಳಿಗೆ ದೃಶ್ಯಂ ಪಾಠ!: ಮತ್ತೂಂದೆಡೆ ಆರೋಪಿಗಳ ವಿಚಾರಣೆ ನಡೆಸಿದಾಗ ಗೊಂದಲದ ಹೇಳಿಕೆ ನೀಡಿದರು. ವಿಚಾರಣೆ ಸಂದರ್ಭದಲ್ಲಿ ಇಂದಿರಾಳ ಇಬ್ಬರು ಮಕ್ಕಳು, ಘಟನೆ ದಿನ ಅಮ್ಮ ಶೂಟಿಂಗ್‌ ಕೆಲಸಕ್ಕೆ ಹೋಗಿದ್ದರು. ನಾವು ಕೂಡ ಮನೆಯಲ್ಲಿ ಇರಲಿಲ್ಲ. ರಾತ್ರಿ ಎಲ್ಲರೂ ಒಟ್ಟಿಗೆ ಬಂದಿದ್ದೇವೆ ಎಂದು ತಾಯಿ ಇಂದಿರಾ ಹೇಳಿಕೊಟ್ಟಿದ್ದ ಕಥೆಯನ್ನು ಇಂಚಿಂಚೂ ಬಾಯಿಬಿಟ್ಟಿದ್ದರು. ಅಷ್ಟರಲ್ಲಿ ಪೊಲೀಸರು ಆರೋಪಿಗಳ ವಿರುದ್ಧ ಸಂಪೂರ್ಣ ಸಾಕ್ಷ್ಯ ಸಂಗ್ರಹಿಸಿದ್ದರು. ಅದನ್ನುಕಂಡ ಆರೋಪಿಗಳು ತಬ್ಬಿಬ್ಟಾಗಿದ್ದರು ಎಂದು ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next