Advertisement

ಸಿನಿಮೀಯ ರೀತಿ ಆರೋಪಿ ಸೆರೆ 

04:36 PM Sep 13, 2018 | Team Udayavani |

ಕಾರವಾರ: ಗೋವಾದಿಂದ ಕಾರವಾರಕ್ಕೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಕ್ರಮವಾಗಿ ಕಾರ್‌ ಮೂಲಕ ಮದ್ಯ ಸಾಗಾಟ ಮಾಡುತ್ತಿದ್ದ ವಾಹನವನ್ನು ಅಬಕಾರಿ ಅಧಿಕಾರಿಗಳು 15 ಕಿ.ಮೀ. ದೂರದ ವರೆಗೆ ಸಿನಿಮೀಯ ರೀತಿಯಲ್ಲಿ ಬೆನ್ನಟ್ಟಿ ಆರೋಪಿ ಸೆರೆ ಹಿಡಿದ ಘಟನೆ ಬುಧವಾರ ಬೆಳಗಿನ ಜಾವ 3.45ಕ್ಕೆ ನಡೆದಿದೆ.

Advertisement

ಗೋವಾದಿಂದ ಆಸೆಂಟ್‌ ಕಾರ್‌ನಲ್ಲಿ ಮದ್ಯ ಸಾಗಾಟ ಮಾಡುತ್ತಿದ್ದ ಖಚಿತ ಮಾಹಿತಿ ಅಬಕಾರಿ ಅಧಿಕಾರಿಗಳಿಗೆ ಬಂದಿತ್ತು. ವಾಹನ ಗೋವಾ ದಾಟುತ್ತಿದ್ದಂತೆ ಅದನ್ನು ಅಬಕಾರಿ ಅಧಿಕಾರಿಗಳು ಚೇಜ್‌ ಮಾಡಿದರು. ಮಾಜಾಳಿಯಿಂದ ಕಾರವಾರದ ವರೆಗೆ ಕಾರ್‌ನಲ್ಲಿದ್ದ ಆರೋಪಿ ವೇಗವಾಗಿ ಕಾರ್‌ ಚಲಾಯಿಸಿದ. ಅಬಕಾರಿ ಅಧಿಕಾರಿಗಳ ವಾಹನವೂ ಕಾರ್‌ ಬೆನ್ನು ಹತ್ತಿತು. ಕಾರವಾರ ತಲುಪುತ್ತಿದ್ದಂತೆ ಆರೋಪಿ ಐಸ್‌ ಫ್ಯಾಕ್ಟರಿ ಬಳಿ ಅರಣ್ಯ ಇಲಾಖೆಯ ವಸತಿ ಗೃಹಗಳ ಬಳಿ ಕಾರವಾರದ ಒಳ ರಸ್ತೆಗೆ ವಾಹನ ತಿರುಗಿಸಿದ.

ಅಲ್ಲದೇ ವೇಗ ಅತೀಯಾಗಿದ್ದ ಪರಿಣಾಮ ಎಸ್ಪಿ ಕಚೇರಿಯ ಬಳಿ ಕಾರ್‌ ರಸ್ತೆಯಿಂದ ಪಕ್ಕದ ಹೊಂಡಕ್ಕೆ ಇಳಿಯಿತು. ಅಬಕಾರಿ ಅಧಿಕಾರಿಗಳು ತಕ್ಷಣ ತಮ್ಮ ವಾಹನದಿಂದ ಕೆಳಗಿಳಿದು ಕಾರ್‌ ನಲ್ಲಿದ್ದ ಆರೋಪಿ ಮಾಜಾಳಿಯ ಯೋಗೇಶ್‌ ತಂದೆ ನಾಗೇಶ್‌ ಎಂಬಾತನನ್ನು ಬಂಧಿಸಿದರು. ಕಾರ್‌ನಲ್ಲಿದ್ದ ಅಕ್ರಮ ಸಾಗಾಟ 432 ಲೀಟರ್‌ ಫೆನ್ನಿ ಹಾಗೂ 115 ಲೀಟರ್‌ ಬೀಯರ್‌ ವಶಕ್ಕೆ ಪಡೆದರು. 1.5 ಲಕ್ಷ ರೂ. ಬೆಲೆಯ ಮದ್ಯ ಹಾಗೂ 3.5 ಲಕ್ಷ ರೂ. ಬೆಲೆಯೆ ಆಸೆಂಟ್‌ ಕಾರ್‌ ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ. ಅಬಕಾರಿ ಜಿಲ್ಲಾಧಿಕಾರಿ ಸತ್ಯನಾರಾಯಣ ತ್ರಿವೇದಿ ನೇತೃತ್ವದ ತಂಡ ಅಬಕಾರಿ ಅಕ್ರಮ ಸಾಗಾಟದ ಮೇಲೆ ದಾಳಿ ನಡೆಸಿತು.

Advertisement

Udayavani is now on Telegram. Click here to join our channel and stay updated with the latest news.

Next