Advertisement

ಕೂಲಿ ಪಾವತಿಸುವ ಕಾರ್ಯ ತ್ವರಿತಗೊಳಿಸಿ : ಶೆಟ್ಟರ

06:37 AM May 28, 2020 | mahesh |

ಧಾರವಾಡ : ಜಿಲ್ಲೆಯಲ್ಲಿ ಈವರೆಗೆ ಶೇ.68 ಕೈಗಾರಿಕಾ ಚಟುವಟಿಕೆಗಳು ಆರಂಭವಾಗಿವೆ. ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಕೂಲಿ ಪಾವತಿ ಕಾರ್ಯ ಸಾಧ್ಯವಾದಷ್ಟು ತ್ವರಿತಗೊಳಿಸಿದರೆ, ಗ್ರಾಮೀಣ ಜನರು ನಗರಗಳಿಗೆ ಉದ್ಯೋಗ ಅರಸಿ ಬೇರೆಡೆ ವಲಸೆ ಹೋಗುವುದು ತಪ್ಪುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ ಹೇಳಿದರು.

Advertisement

ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಕೋವಿಡ್ ನಿಯಂತ್ರಣ ಹಾಗೂ ಇತರೆ ವಿಷಯಗಳ ಕುರಿತ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಎಪಿಎಂಸಿಗಳು ಮಧ್ಯವರ್ತಿಗಳಿಲ್ಲದೇ ನೇರವಾಗಿ ರೈತರೇ ತಮ್ಮ ಉತ್ಪನ್ನಗಳನ್ನು ಮಾರಲು ಅವಕಾಶ ಕಲ್ಪಿಸುವ ರೈತ ಸಂತೆಗಳಿಗೆ ಉತ್ತೇಜನ ನೀಡಬೇಕು. ಅವಳಿ ನಗರದಲ್ಲಿ ತರಕಾರಿ ಮಾರುಕಟ್ಟೆಗಳು ಕೇಂದ್ರೀಕರಣವಾಗದಂತೆ ಕ್ರಮ ಕೈಗೊಂಡು ನಗರದ ವಿವಿಧ ಮೈದಾನಗಳಿಗೆ
ವಿಕೇಂದ್ರೀಕರಣ ಮಾಡಿ, ಜನದಟ್ಟಣೆ ನಿಯಂತ್ರಿಸಬೇಕೆಂದು ಸೂಚನೆ ನೀಡಿದರು.

ಜಿಲ್ಲೆಯಲ್ಲಿ 2,09,445 ಕ್ವಿಂಟಲ್‌ ಕಡಲೆಯನ್ನು ಕನಿಷ್ಟ ಬೆಂಬಲ
ಯೋಜನೆಯಡಿ ಖರೀದಿಸಲಾಗಿದ್ದು, ರೈತರಿಗೆ ಸುಮಾರು 102 ಕೋಟಿ ರೂ. ಪಾವತಿಸಲು ಕ್ರಮ ವಹಿಸಲಾಗುವುದು. ಹುಬ್ಬಳ್ಳಿ ಧಾರವಾಡ ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿಗಳಿಗೆ ಅನುಮತಿ ನೀಡುವ ಕಾರ್ಯ ಚುರುಕುಗೊಳಿಸಬೇಕು, ಸಾಫ್ಟ್‌ವೇರ್‌ನಲ್ಲಿ ತೊಡಕುಗಳಿದ್ದರೆ ತಕ್ಷಣ ಸರಿಪಡಿಸಬೇಕು ಎಂದರು.

ಜಿಲ್ಲಾ ಸರ್ವೇಕ್ಷಣಾ ಧಿಕಾರಿ ಡಾ|ಸುಜಾತಾ ಹಸವಿಮಠ ಮಾತನಾಡಿ, ಜಿಲ್ಲೆಯಲ್ಲಿ ಇದುವರೆಗೆ 13,764ರನ್ನು ಗಮನಿಸಲಾಗಿದೆ. ಅವರಲ್ಲಿ 5,534 ಜನ 14 ದಿನಗಳ ಹೋಂ ಕ್ವಾರಂಟೈನ್‌ ಪೂರ್ಣಗೊಳಿಸಿದ್ದಾರೆ. ಸದ್ಯ 33ಜನ ಕಿಮ್ಸ್‌ ಕೋವಿಡ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 10 ಜನ ಬಿಡುಗಡೆ ಹೊಂದಿದ್ದಾರೆ. 13,033 ಜನರನ್ನು ಕೋವಿಡ್‌ ತಪಾಸಣೆಗೊಳಪಡಿಸಲಾಗಿದೆ. ಈ ಪೈಕಿ 12,432 ಜನರ ವರದಿ ನೆಗೆಟಿವ್‌ ಬಂದಿದ್ದು, ಇನ್ನೂ 568 ಜನರ ವರದಿ ನಿರೀಕ್ಷಿಸಲಾಗುತ್ತಿದೆ ಎಂದರು.

ವಿಧಾನ ಪರಿಷತ್‌ ಸದಸ್ಯ ಶ್ರೀನಿವಾಸ ಮಾನೆ, ಡಿಸಿ ದೀಪಾ ಚೋಳನ್‌, ಮಹಾನಗರ ಪೊಲೀಸ್‌ ಆಯುಕ್ತ ಆರ್‌. ದಿಲೀಪ್‌, ಎಸ್‌ಪಿ ವರ್ತಿಕ ಕಟಿಯಾರ್‌, ಜಿಪಂ ಸಿಇಒ ಡಾ|ಬಿ.ಸಿ. ಸತೀಶ್‌, ಪಾಲಿಕೆ ಆಯುಕ್ತ ಡಾ| ಸುರೇಶ ಇಟ್ನಾಳ, ಕಿಮ್ಸ್‌ ನಿರ್ದೇಶಕ ಡಾ|ರಾಮಲಿಂಗಪ್ಪ ಅಂಟರಠಾಣಿ, ಅಪರ ಜಿಲ್ಲಾ ಧಿಕಾರಿ ಶಿವಾನಂದ ಕರಾಳೆ, ಎಸಿ ಮಹ್ಮದ್‌ ಜುಬೇರ, ಜಿಲ್ಲಾ ಆರೋಗ್ಯಾಧಿಕಾರಿ ಡಾ|ಯಶವಂತ್‌ ಮದೀನಕರ ಇದ್ದರು.

Advertisement

ಕಡ್ಡಾಯ ಮಾಸ್ಕ್ ಬಳಸಿ
ರೈತರಿಗೆ ಬೀಜ, ಗೊಬ್ಬರ ಕೊರತೆಯಾಗದಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಸದ್ಯ ಜಿಲ್ಲೆಯಲ್ಲಿ ಪರಿಸ್ಥಿತಿ ದಿನದಿಂದ ದಿನಕ್ಕೆ ಸುಧಾರಣೆಯಾಗುತ್ತಿದ್ದು, ಸಾರ್ವಜನಿಕರು ಮಾಸ್ಕ್ಗಳನ್ನು ಕಡ್ಡಾಯವಾಗಿ ಹಾಕಿಕೊಂಡು ಸುತ್ತಾಡಬೇಕು. ಕೊರೊನಾ ಸದ್ಯಕ್ಕೆ ಮುಗಿದು ಹೋಗುವಂತಹದ್ದಲ್ಲ. 2-3 ವರ್ಷ ಇದೇ ಪರಿಸ್ಥಿತಿ ಇರಬಹುದು. ಆದ್ದರಿಂದ ಸಾರ್ವಜನಿಕರು ಸರ್ಕಾರದ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕೆಂದು ಸಚಿವರು ಮನವಿ ಮಾಡಿದರು.

ಇತರೆ ಜಿಲ್ಲೆಗಳಿಗೆ ಧಾರವಾಡ ಮಾದರಿ
ಹೊರ ರಾಜ್ಯಗಳಿಂದ ಜಿಲ್ಲೆಗೆ ಬಂದಿರುವ 1,664 ಜನರನ್ನು ಸಾಂಸ್ಥಿಕ ಕ್ವಾರಂಟೈನ್‌ಗೆ ಒಳಪಡಿಸಿರುವ ಕುರಿತು ಚರ್ಚಿಸಿದ ಸಚಿವರು, ಹುಬ್ಬಳ್ಳಿ ಧಾರವಾಡ ಅವಳಿ ನಗರದಲ್ಲಿ ಸೀಲ್‌ಡೌನ್‌ ತೆರವುಗೊಳಿಸಿರುವ ಪ್ರದೇಶಗಳ ಮಾಹಿತಿ ಪಡೆದರು. ಸದ್ಯ ಚಿಕಿತ್ಸೆ ಪಡೆಯುತ್ತಿರುವ 33 ಜನರ ಆರೋಗ್ಯ ಸ್ಥಿತಿ, ಕೋವಿಡ್‌ ಆಸ್ಪತ್ರೆಯ ಸೌಕರ್ಯಗಳು, ಕಟ್ಟಡ, ರಸ್ತೆ ನಿರ್ಮಾಣ ಕಾಮಗಾರಿ, ವಾಣಿಜ್ಯ ವಹಿವಾಟು ಪುನರಾರಂಭದ ಹಂತಗಳ ಕುರಿತು ಪರಿಶೀಲಿಸಿದರು. ಕೋವಿಡ್‌ ನಿಯಂತ್ರಣಕ್ಕೆ ಜಿಲ್ಲಾಡಳಿತ ಕೈಗೊಂಡಿರುವ ಕ್ರಮಗಳು ತೃಪ್ತಿಕರವಾಗಿವೆ. ಜಿಲ್ಲೆ ರಾಜ್ಯದ ಇತರೆ ಜಿಲ್ಲೆಗಳಿಗೆ ಮಾದರಿಯಾಗಿದೆ ಎಂದು ಸಚಿವ ಜಗದೀಶ್‌ ಶೆಟ್ಟರ ಹೇಳಿದರು.

ಪಡಿತರ ವಿತರಣೆಯಲ್ಲಿ ಅಕ್ಕಿ ಬದಲಿಗೆ ಬೇರೆ ಧಾನ್ಯ ನೀಡುವ ಕುರಿತು ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಲಾಗುವುದು. ಈ ಕುರಿತು ಜಿಲ್ಲಾಮಟ್ಟದ ಅಧಿಕಾರಿಗಳೂ ಕೂಡ ಜನರ ಬೇಡಿಕೆಗಳ ಕುರಿತು ಸರ್ಕಾರಕ್ಕೆ ಮಾಹಿತಿ ನೀಡಬೇಕು. 
ಜಗದೀಶ ಶೆಟ್ಟರ್‌, ಜಿಲ್ಲಾ ಉಸ್ತುವಾರಿ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next