Advertisement

ಸ್ಮಾರ್ಟ್‌ ಸಿಟಿ ಯೋಜನೆ ಅಧಿಕಾರಿ ಎಸಿಬಿ ಬಲೆಗೆ

09:37 PM Mar 19, 2021 | Team Udayavani |

ಬೆಳಗಾವಿ: ಸ್ಮಾರ್ಟ್‌ಸಿಟಿ ಯೋಜನೆ ಕಾಮಗಾರಿಯ ಬಿಲ್‌ ಮಂಜೂರು ಮಾಡಲು ಲಂಚ ಪಡೆಯುತ್ತಿದ್ದ ಇಲ್ಲಿನ ಸ್ಮಾರ್ಟ್‌ಸಿಟಿ ಲಿಮಿಟೆಡ್‌ ಕಚೇರಿಯ ಮುಖ್ಯ ಇಂಜನಿಯರ್‌ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಬಲೆಗೆ ಬಿದ್ದಿದ್ದಾರೆ.

Advertisement

ಕಚೇರಿಯಲ್ಲಿ ತಾಂತ್ರಿಕ ವಿಭಾಗದ ಪ್ರಧಾನ ವ್ಯವಸ್ಥಾಪಕರಾಗಿ ಕಾರ್ಯನಿರ್ವ ಹಿಸುತ್ತಿರುವ ಸಿದ್ದನಾಯ್ಕ ದೊಡ್ಡಬಸಪ್ಪ ನಾಯ್ಕರ್‌ ಎಸಿಬಿ ಬಲೆಗೆ ಬಿದ್ದ ಅಧಿಕಾರಿ. ತಾಲೂಕಿನ ಗಣೇಶನಗರದ ನಿವಾಸಿ ಹಾಗೂ ಅನ್ನಪೂರ್ಣ ಕನ್ಸ್‌ಟ್ರಕ್ಷನ್‌ ಯೋಜನಾ ವ್ಯವಸ್ಥಾಪಕ ಸಂಜೀವಕುಮಾರ ನವಲಗುಂದ ಅವರು ದೂರು ನೀಡಿದ್ದರು. ಸ್ಮಾರ್ಟ್‌ಸಿಟಿ ಯೋಜನೆಯಡಿ ನಿರ್ವಹಿಸಿದ ನಗರ ಕೇಂದ್ರ ಬಸ್‌ ನಿಲ್ದಾಣದ ಕಾಮಗಾರಿಯ ಬಿಲ್‌ ಮಂಜೂರು ಮಾಡಲು ಸಿದ್ದನಾಯ್ಕ ಅವರು ಹಿಂದಿನ ಬಿಲ್‌ನಲ್ಲಿ ಶೇ 0.5 ರಷ್ಟು ಅಂದರೆ 60 ಸಾವಿರೂ ರೂ. ಗಳಿಗೆ ಬೇಡಿಕೆ ಇಟ್ಟಿದ್ದರು ಎಂದು ಸಂಜೀವಕುಮಾರ ದೂರಿನಲ್ಲಿ ತಿಳಿಸಿದ್ದಾರೆ.

ದೂರಿನನ್ವಯ ಎಸಿಬಿ ಅಧಿಕಾರಿಗಳು ಆರೋಪಿಯು ಮನೆಯಲ್ಲಿ 60 ಸಾವಿರ ರೂ. ಲಂಚ ಪಡೆಯುವಾಗ ದಾಳಿ ಮಾಡಿದ್ದಾರೆ. ಈ ಸಮಯದಲ್ಲಿ ಕಂತೆ ಕಂತೆ ನೋಟುಗಳು ಪತ್ತೆಯಾಗಿವೆ. ಆರೋಪಿ ಮನೆಯಲ್ಲಿ ಒಟ್ಟು 23.56 ಲಕ್ಷ ಅಕ್ರಮ ನಗದು ಪತ್ತೆಯಾಗಿದೆ. ಅರೋಪಿಯಾಗಿರುವ ಸಿದ್ದನಾಯ್ಕ ಅವರು ಮುಖ್ಯ ಇಂಜನಿಯರ್‌ ಹುದ್ದೆಯ ಅಧಿಕಾರಿಯಾಗಿದ್ದು ಅವರನ್ನು ವಶಕ್ಕೆ ಪಡೆದು ಮುಂದಿನ ತನಿಖೆ ಕೈಗೊಳ್ಳಲಾಗಿದೆ ಎಂದು ಎಸಿಬಿ ಉತ್ತರವಲಯ ಎಸ್‌ಪಿ ಬಿ.ಎಸ್‌ ನೇಮಗೌಡ ತಿಳಿಸಿದ್ದಾರೆ.

ಡಿಎಸ್‌ಪಿ ಜೆ.ಎಂ ಕರುಣಾಕರ ಶೆಟ್ಟಿ ಪ್ರಕರಣ ದಾಖಲು ಮಾಡಿದ್ದಾರೆ. ಎಸ್‌ಪಿ ಅವರ ಮಾರ್ಗದರ್ಶನದಲ್ಲಿ ಇನಸ್ಪೆಕ್ಟರ್‌ಗಳಾದ ಎ.ಎಸ್‌ ಗುದಿಗೊಪ್ಪ, ಸುನೀಲಕುಮಾರ ಹಾಗೂ ಸಿಬ್ಬಂದಿ ಈ ದಾಳಿಯಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next