Advertisement

ನನ್ನ ಕಾಲೇಜಿನ ಕುರಿತು…

06:00 AM May 18, 2018 | |

ಅದು ಸರಿಸುಮಾರು ವರ್ಷಗಳ ಹಿಂದಿನ ಸವಿನೆನಪುಗಳ ಕಹಾನಿ. ಆಗತಾನೆ ದ್ವಿತೀಯ ಪಿಯುಸಿಯ ಅಂತಿಮ ವರ್ಷದ ಫ‌ಲಿತಾಂಶ ಹೊರಬಿದ್ದ ಸಮಯ. ಮುಂದಿನ ಶಿಕ್ಷಣಕ್ಕಾಗಿ ಬಂದು ಸೇರಿದ್ದು ಕಡಲ ತೀರದ ಭಾರ್ಗವನ ಜನ್ಮಭೂಮಿಯಾದ ಕೋಟದ ಕಡಲ ತೀರದ ಆ ವಿದ್ಯಾ ದೇಗುಲಕ್ಕೆ. ಅಲ್ಲಿಂದ ಸರಿಸುಮಾರು ಮೂರು ವರ್ಷಗಳ ಕಾಲ ನನ್ನ ಮತ್ತು ನನ್ನ ಪ್ರೀತಿಯ ಸ್ನೇಹಿತರ ತರೆಲ, ತಮಾಷೆ, ಶೈಕ್ಷಣಿಕ ಚಟುವಟಿಕೆಗಳಿಗೆ ಆಸರೆಯಾಗಿದ್ದು ಅದೇ ಕಡಲ ತೀರದ ಲಕ್ಷ್ಮೀ ಸೋಮ ಬಂಗೇರ ಸರಕಾರಿ ಪ್ರಥಮ ದರ್ಜೆ ಕಾಲೇಜು ಕೋಟ, ಪಡುಕೆರೆ.

Advertisement

ಬದಲಾವಣೆ ಪ್ರಕೃತಿ ನಿಯಮ ಎಂಬಂತೆ ನಮ್ಮ ಹೆಮ್ಮೆಯ ವಿದ್ಯಾದೇಗುಲ ಈಗ ಸಾಕಷ್ಟು ಬದಲಾವಣೆ ಮತ್ತು ಪ್ರಗತಿಯನ್ನು ಕಂಡುಕೊಂಡಿದೆ. ಅಷ್ಟೇ ಅಲ್ಲ, ಸರಕಾರಿ ವಿದ್ಯಾ ಸಂಸ್ಥೆಯೊಂದು ಹೀಗೂ ಬೆಳೆಯಬಲ್ಲದು ಎನ್ನುವುದಕ್ಕೆ ಒಂದು ಉತ್ತಮ ಉದಾಹರಣೆ ಈ ಸಂಸ್ಥೆ ಎಂದರೆ ತಪ್ಪಿಲ್ಲ. ಒಂದು ಸಂಸ್ಥೆ  ತಳಮಟ್ಟದಿಂದ ಪ್ರಗತಿಯ ಹಾದಿಯತ್ತ ದಾಪುಗಾಲು ಹಾಕುತ್ತ ಅಭಿವೃದ್ಧಿ ಆಗುತ್ತಿರುವುದು ಅದು ಸುಲಭದ ಮಾತಲ್ಲ ಅಥವಾ ದಿನ ಬೆಳಗಾಗುವುದರೊಳಗೆ ಸಂಭವಿಸುವ ಪವಾಡವಂತೂ ಅಲ್ಲ. ಅದು ಸತತ ಪರಿಶ್ರಮ, ಸಂಸ್ಥೆಯಲ್ಲಿನ ಗುರುವೃಂದ, ಸಿಬಂದಿಗಳು, ಊರ ಮಹನೀಯರ ತುಂಬು ಮನಸಿನ ಸಹಕಾರದ ಫ‌ಲಿತಾಂಶವೇ ಈ ವಿದ್ಯಾಸಂಸ್ಥೆ ಇಂದು ಇತರ ಸಂಸ್ಥೆಗಳಿಗೆ ಮಾದರಿಯಾಗಿ ನಿಂತಿದ್ದು. 

ಶಿಕ್ಷಣ ಎಂದರೆ ವಿದ್ಯಾರ್ಥಿಗಳನ್ನು ನಾಲ್ಕು ಗೋಡೆಗಳ ಮಧ್ಯೆ ಕೂಡಿಹಾಕಿ ಗಂಟೆಗಳ ಕಾಲ ಪುಸ್ತಕದ ವಿಚಾರಗಳನ್ನು ತಲೆಗೆ ತುಂಬಿಸಿ ವಿದ್ಯಾರ್ಥಿಗಳನ್ನು ಅಂಕದ ಹಿಂದೆ ಕುರುಡರಂತೆ ಹಿಂಬಾಲಿಸಲು ಪ್ರೋತ್ಸಾಹಿಸುವ ಪ್ರಕ್ರಿಯೆಯಲ್ಲ. ಪ್ರತಿಯೊಬ್ಬ ವಿದ್ಯಾರ್ಥಿ ಕೂಡ ಕೇವಲ ಪುಸ್ತಕದ ಹುಳುವಾಗಿರದೆ ಅದರ ಹೊರತಾಗಿ ಚಿಂತಿಸುವ ಮತ್ತು ಮಾನವೀಯ ನಡತೆಗಳನ್ನ ಕಟ್ಟಿಕೊಳ್ಳುವ ಕಲೆಯನ್ನು ವಿದ್ಯಾರ್ಥಿಗಳಲ್ಲಿ ತುಂಬ ಬೇಕು. ಈ ಕೆಲಸವನ್ನು ನಮ್ಮ ಕಾಲೇಜು ಮಾಡಿದರೆ ಎನ್ನುವುದು ಹೆಮ್ಮೆಯ ವಿಚಾರ.

ಅಲ್ಲದೆ ನಾವು ಕೇವಲ ಪುಸ್ತಕಕ್ಕೆ ಅಂಟಿಕೊಳ್ಳದೆ ಅದರ ಹೊರತಾಗಿ ಹಲವು ಸಮಾಜಮುಖೀ ಮತ್ತು ಮನರಂಜನಾತ್ಮಕ ಕಾರ್ಯಕ್ರಮಗಳ ಮೂಲಕ ಶಿಕ್ಷಣ ಕೇವಲ ಅಂಕಗಳಿಕೆ ಮಾತ್ರ ಅಲ್ಲ ಅಂತಲೂ ಸಾರಿ ಹೇಳಿದೆ. ಇದಕ್ಕೆ ಉತ್ತಮ ಉದಾಹರಣೆಯೆಂದರೆ, ಕಾಲೇಜಿನಲ್ಲಿ ಆರೋಹದಂಥ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಮನರಂಜನೆಯ ಸವಿಪಾಕ ಉಣಬಡಿಸಿದ್ದು, ಮಹಿಳಾ ಶೋಷಣೆ ವಿರುದ್ಧ ಸಮಾಜಮುಖೀ ಕಾರ್ಯಕ್ರಮವಾದ “ಸ್ಪಂದನ’, ಕಲಿಸಿದ ಗುರುಗಳನ್ನು ಮತ್ತೆ ಹಳೆಯ ಸವಿನೆನಪುಗಳನ್ನ ಮೆಲುಕು ಹಾಕಿದ ಪುನರ್‌ಮಿಲನ ವಿದ್ಯಾರ್ಥಿಗಳ ಸುಪ್ತಪ್ರತಿಭೆಗಳಿಗೆ ಹೊನ್ನಿನ ಕೈಗನ್ನಡಿಯಾದ ವಾರ್ಷಿಕ ಸಂಚಿಕೆ “ಕಡಲು’. 

ನಮ್ಮ ಸಂಸ್ಥೆಗೆ ದೊರೆತ “ನ್ಯಾಕ್‌ ಶ್ರೇಣಿ ಬಿ’ ನನ್ನ ಕಾಲೇಜಿಗೆ ಕಳಶಪ್ರಾಯ. ಹಲವು ಕಷ್ಟಗಳ ಸರಮಾಲೆಗಳನ್ನು ಮೀರಿನಿಂತು ಒಂದು ದಶಕ ಕಳೆದು ಇದೀಗ ಸಂಭ್ರಮದ ಕ್ಷಣಗಳಿಗೆ ಕಾತರಿಸುತ್ತಿದೆ.                 

Advertisement

ಶರತ್‌ ಕುಮಾರ್‌ ಶೆಟ್ಟಿ, ಅಸೋಡು ಮಂಗಳೂರು ವಿ. ವಿ., ಮಂಗಲಗಂಗೋತ್ರಿ

Advertisement

Udayavani is now on Telegram. Click here to join our channel and stay updated with the latest news.

Next