Advertisement

ಇದ್ದೂ ಇಲ್ಲದಾಗಿವೆ ಶುದ್ಧ ನೀರಿನ ಘಟಕ

10:38 AM Jul 08, 2019 | Naveen |

ರವೀಂದ್ರ ಮುಕ್ತೇದಾರ
ಔರಾದ:
ಗ್ರಾಮೀಣ ಭಾಗದ ನಿವಾಸಿಗಳಿಗೆ ಶುದ್ಧ ಕುಡಿಯುವ ನೀರು ಪೂರೈಸಬೇಕೆಂಬ ಉದ್ದೇಶದಿಂದ ಸರ್ಕಾರ ಗಡಿ ತಾಲೂಕಿನಲ್ಲಿ ರೈಟ್ ಸಂಸ್ಥೆಯಿಂದ 39 ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಿದೆ.ಅಧಿಕಾರಿಗಳ ನಿಲಕ್ಷ್ಯ ಹಾಗೂ ಸಂಬಂಧ ಪಟ್ಟ ಕಂಪನಿಯ ಸಿಬ್ಬಂದಿಯ ನಿಷ್ಕಾಳಜಿಯಿಂದ ಅವು ಕಾರ್ಯ ನಿರ್ವಹಿಸದೇ ಮಳೆಗಾಲದಲ್ಲಿ ಸಾರ್ವಜನಿಕರು ಅಶುದ್ಧ ನೀರು ಕುಡಿದು ಆಸ್ಪತ್ರೆಗೆ ಸೇರುವ ಸ್ಥಿತಿ ಬಂದಿದೆ.

Advertisement

ಪ್ರತಿವರ್ಷ ಮಳೆಗಾಲ ಆರಂಭವಾಗುವ ಮುನ್ನ ಶುದ್ಧ ನೀರು ಕುಡಿದು ರೋಗ ಮುಕ್ತ ಜೀವನ ಸಾಗಿಸುವಂತೆ ಗ್ರಾಪಂ ಅಧಿಕಾರಿಗಳು ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು ಗ್ರಾಮೀಣ ಭಾಗದಲ್ಲಿ ಡಂಗುರ ಸಾರಿ ಜನ ಜಾಗೃತಿ ಮೂಡಿಸುತ್ತಾರೆ. ಆದರೆ ಸರ್ಕಾರ ಗ್ರಾಮೀಣ ಭಾಗದ ಜನರಿಗೆ ಶುದ್ಧ ನೀರಿನ ಘಟಕ ನಿರ್ಮಾಣ ಮಾಡಿ ಕೊಟ್ಟರೂ ಅದರ ನಿರ್ವಹಣೆ ಮಾಡಲು ಸಾಧ್ಯವಾಗದಿರುವ ರೈಟ್ ಖಾಸಗಿ ಕಂಪನಿ ವಿರುದ್ಧ ತಾಲೂಕಿನ ಶಾಸಕರು ಸಮರ ಸಾರಲು ಮುಂದಾಗಿದ್ದಾರೆ.

ರೋಗ ಭೀತಿಯಲ್ಲಿ ಜನರು: ಮಳೆಗಾಲ ಆರಂಭವಾದಾಗ ತೆರೆದ ಬಾವಿ ಹಾಗೂ ಕೊಳವೆ ಬಾವಿಯಲ್ಲಿ ಮಳೆ ನೀರು ಬರುತ್ತದೆ. ಕಲುಷಿತ ನೀರು ಸೇವನೆ ಮಾಡುವುದರಿಂದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು ಗ್ರಾಮೀಣ ಭಾಗದ ಜನರು ಸಬಂಧ ಪಟ್ಟ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳಿಗೆ ತಿಳಿಸಿದರೂ ಪ್ರಯೋಜನವಾಗಿಲ್ಲ. ಹೀಗಾಗಿ ನೀರು ಶುದ್ಧೀಕರಣ ಘಟಕ ದುರಸ್ಥಿತಿಗಾಗಿ ಸಾರ್ವಜನಿಕರು ಶಾಸಕ ಪ್ರಭು ಚವ್ಹಾಣ ಅವರಿಗೆ ತಿಳಿಸಿ, ಪತ್ರ ಬರೆದಿದ್ದಾರೆ.

ಅಧಿಕಾರಿಗಳ ನಿರ್ಲಕ್ಷ್ಯ: ಖಾಸಗಿ ಕಂಪನಿ ನಿರ್ಮಿಸಿದ ತಾಲೂಕಿನ ಪ್ರತಿಯೊಂದು ಗ್ರಾಪಂ ಕೇಂದ್ರ ಹಾಗೂ ಜನ ಸಂಖ್ಯೆ ಹೆಚ್ಚಿರುವ ಗ್ರಾಮದಲ್ಲಿ ನೀರು ಶುದ್ಧೀಕರಣ ಘಟನ ನಿರ್ಮಾಣ ಮಾಡಲಾಗಿದೆ. ಆದರೆ ಆರಂಭವಾದ ಎರಡು ತಿಂಗಳು ಕಾಲ ಮಾತ್ರ ಗ್ರಾಮಸ್ಥರಿಗೆ ಶುದ್ಧ ನೀರು ಪೂರೈಕೆ ಮಾಡಿದ ಯಂತ್ರಗಳು ಒಂದಡೆ ಇದ್ದರೆ, ಇನ್ನೂಂದೆಡೆ ಸ್ಥಾಪನೆ ಮಾಡಿದ ದಿನದಿಂದ ಇಂದಿನ ತನಕವೂ ಶುದ್ಧೀಕರಣ ಘಟಕದಿಂದ ಜನರು ಹನಿ ನೀರನ್ನೂ ತೆಗೆದುಕೊಂಡು ಹೋಗಿಲ್ಲ. ಆದರೂ ಕೂಡ ಸಬಂಧಪಟ್ಟ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಮತ್ತು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿಗಳು ಯಂತ್ರಗಳ ಬಗ್ಗೆ ಗಮನ ಹರಿಸಿಲ್ಲ. ಸರ್ಕಾರದಿಂದ ಜನರಿಗೆ ಶುದ್ಧ ನೀರು ಕೋಡಿಸುತ್ತೇವೆ ಮತ್ತು ಐದು ವರ್ಷಗಳ ಕಾಲ ಉತ್ತಮ ನಿರ್ವಹಣೆ ಮಾಡುತ್ತೇವೆ ಎಂದು ಗುತ್ತಿಗೆ ಪಡೆದ ರೈಟ್ ಕಂಪನಿಯ ಸಿಬ್ಬಂದಿ ಸ್ಥಳಕ್ಕೆ ಬಾರದಿರುವುದರಿಂದ ಸರ್ಕಾರದ ಕೋಟ್ಯಂತರ ರೂ. ಮೌಲ್ಯದ ಯಂತ್ರಗಳು ತಾಲೂಕಿನಲ್ಲಿ ಹಾಳಾಗುತ್ತಿವೆ.

ಶುದ್ಧೀಕರಣಕ್ಕೆ ಘಟಕಕ್ಕೆ ಬೀಗ: ತಾಲೂಕಿನ ಠಾಣಾಕುಶನೂರ, ಸಂತಪೂರ ಸೇರಿದಂತೆ ತಾಲೂಕಿನ ವಿವಿಧ ಗ್ರಾಮದಲ್ಲಿ ನೀರು ಶುದ್ಧೀಕರಣ ಘಟಕಕ್ಕೆ ಬೀಗ ಹಾಕಲಾಗಿದೆ. ಸರ್ಕಾರ ಗ್ರಾಮಸ್ಥರಿಗೆ ನೀರು ಶುದ್ಧೀಕರಣ ಘಟಕ ಸೌಲಭ್ಯ ನೀಡಿದರೂ ಅದು ಕಾರ್ಯರೂಪಕ್ಕೆ ಬಾರದಿರುವ ಹಿನ್ನೆಲೆಯಲ್ಲಿ ಗ್ರಾಮೀಣ ಭಾಗದ ಜನರು ಅಶುದ್ಧ ಕುಡಿಯುವ ಸ್ಥಿತಿ ಬಂದಿದೆ.

Advertisement

ಔರಾದ ತಾಲೂಕು ಕೇಂದ್ರ ಸ್ಥಾನ ಹಾಗೂ ಮಮದಾಪೂರ ಗ್ರಾಮದ ಸುತ್ತಮುತ್ತಲಿನ ಗ್ರಾಮದ ಶ್ರಿಮಂತರು 20 ಲೀಟರ್‌ನ ನೀರಿನ ಟ್ಯಾಂಕ್‌ಗೆ 20 ರೂ. ಕೊಟ್ಟು ಖರೀದಿಸಿ ಕುಡಿಯುತ್ತಿದ್ದಾರೆ. ಆದರೆ ಬಡ ಹಾಗೂ ಮಧ್ಯಮ ವರ್ಗದ ಜನರು ಹಣ ಇಲ್ಲದಿರುವುದರಿಂದ ತೆರೆದ ಬಾವಿ ಹಾಗೂ ಪಂಚಾಯತನಿಂದ ಸರಬರಾಜು ಮಾಡುವ ನಲ್ಲಿಗಳ ನೀರನ್ನು ಅನಿವಾರ್ಯವಾಗಿ ಕುಡಿಯುತ್ತಿದ್ದಾರೆ.

ಅಪೂರ್ಣ ಕಾಮಗಾರಿ: ರೈಟ್ ಸಂಸ್ಥೆಯಿಂದ ತಾಲೂಕಿನಲ್ಲಿ 2016-17ನೇ ಸಾಲಿನಲ್ಲಿ ನಿರ್ಮಿಸಲಾಗಿದ್ದ 39 ಶುದ್ಧ ಕುಡಿಯುವ ನೀರಿನ ಘಟಕಗಳಲ್ಲಿ ಭಾಗಶಃ ಕಾಮಗಾರಿ ಮಾತ್ರ ಮುಕ್ತಾಯವಾಗಿದೆ. ಇನ್ನುಳಿದ ಘಟಕಗಳಲ್ಲಿ ನೀರು ಸರಬರಾಜು ಮಾಡುವ ಪೈಪ್‌ ಅಳವಡಿಕೆ ಮಾಡಿಲ್ಲ. ಇನ್ನೂ ಕೆಲವು ಕಡೆ ಕಳಪೆ ಕಾಮಗಾರಿ ಸಹ ಮಾಡಲಾಗಿದೆ ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಜಿಲ್ಲಾ ಕೇಂದ್ರದ ಅಧಿಕಾರಿಗಳಿಗೆ ಶಾಸಕ ಪ್ರಭು ಚವ್ಹಾಣ ಪತ್ರ ಬರೆದು ಗಮನ ಸೆಳೆದಿದ್ದಾರೆ.

ಶಾಸಕ ಪ್ರಭು ಚವ್ಹಾಣ ಅವರು ಗ್ರಾಮ ಸಂಚಾರ ಮಾಡುವಾಗ ಗ್ರಾಮೀಣ ಭಾಗದ ಜನರು ನೀರು ಶುದ್ಧೀಕರಣ ಘಟಕದ ಬಗ್ಗೆ ತಿಳಿಸಿದ್ದರು. ಹಾಗಾಗಿ ಅವರು ಖುದ್ದು ನೀರು ಶುದ್ಧೀಕರಣ ಘಟಕಗಳಿಗೆ ಭೇಟಿ ನೀಡಿ ಅಲ್ಲಿನ ದುಸ್ಥಿತಿ ನೋಡಿ, ಇಲಾಖೆಯ ಸಬಂಧಪಟ್ಟ ಅಧಿಕಾರಿಗಳಿಗೆ ಮಾತನಾಡಿದ್ದರು. ಯಂತ್ರಗಳನ್ನು ದುರಸ್ತಿ ಮಾಡುವಂತೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಹೀಗಾಗಿ ಈ ಕುರಿತು ಲಿಖೀತ ಪತ್ರ ಬರೆಯಲಾಗಿದೆ. ಪತ್ರಕ್ಕೂ ಅಧಿಕಾರಿಗಳು ಸ್ಪಂದಿಸದಿದ್ದಲ್ಲಿ ಜನರ ಆರೋಗ್ಯ ಹಿತದೃಷ್ಟಿಯಿಂದ ರಸ್ತೆಗಿಳಿದು ಹೋರಾಟ ಮಾಡಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ತಾಲೂಕಿನ ಪ್ರತಿ ಗ್ರಾಮಕ್ಕೆ ಗ್ರಾಮ ಸಂಚಾರಕ್ಕೆ ಹೋದಾಗ ನೀರು ಶುದ್ಧೀಕರಣ ಘಟಕದ ದುಸ್ಥಿತಿ ಬಗ್ಗೆ ಗ್ರಾಮಸ್ಥರು ತಿಳಿಸಿದ್ದರು. ಸರ್ಕಾರದಿಂದ ಸಂಪೂರ್ಣ ಹಣ ತೆಗೆದುಕೊಂಡು ಐದು ವರ್ಷ ನಿರ್ವಹಣೆ ಮಾಡುವ ಜವಾಬ್ದಾರಿ ತಮ್ಮದಾಗಿಸಿಕೊಂಡ ಸಂಸ್ಥೆ ಹಾಗೂ ಅಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. ನಮ್ಮ ತಾಲೂಕಿನಲ್ಲಿ ನಿರ್ಮಿಸಿದ ಶುದ್ಧೀಕರಣ ಘಟಕಗಳು ವಾರದಲ್ಲಿ ಆರರಂಭವಾಗಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ಮಾಡಲಾಗುತ್ತದೆ.
ಪ್ರಭು ಚವ್ಹಾಣ, ಶಾಸಕರು

Advertisement

Udayavani is now on Telegram. Click here to join our channel and stay updated with the latest news.

Next