Advertisement

ಮಲೆನಾಡಿನಲ್ಲಿ ಸಂಭ್ರಮದ ಆಟಿ ಅಮಾವಾಸ್ಯೆ ಆಚರಣೆ

08:50 AM Jul 17, 2023 | Team Udayavani |

ಕೊಟ್ಟಿಗೆಹಾರ: ಆಟಿ ಅಮವಾಸ್ಯೆಯಂದು ಹಾಲೆ (ಪಾಲೆ) ಕಷಾಯ ಕುಡಿಯುವ ಪದ್ದತಿ ಹಿಂದಿನಿಂದಲೂ ಬೆಳೆದು ಬಂದಿದೆ. ಮಲೆನಾಡಿನಲ್ಲಿ ಆಷಾಢ ಮುಗಿದ ನಂತರ ದಕ್ಷಿಣ ಕನ್ನಡದಲ್ಲಿ ಆಷಾಢ ಪ್ರಾರಂಭವಾದ ದಿನ ಈ ಕಷಾಯ ಕುಡಿಯುವ ಪದ್ಧತಿ ಬೆಳೆದು ಬಂದಿದೆ.

Advertisement

ಮಲೆನಾಡು ಹಾಗೂ ಕರಾವಳಿ ಹೊಂದಿಕೊಂಡಿರುವ ಜಿಲ್ಲೆಯಾದ್ದರಿಂದ ಈ ಹಬ್ಬವನ್ನು ಎರಡು ಜಿಲ್ಲೆಗಳಲ್ಲಿ ಆಚರಣೆ ಮಾಡಲಾಗುತ್ತದೆ. ಮಲೆನಾಡಿಗರಿಗೆ ಆಷಾಢ ಒಂದು ತಿಂಗಳ ಮೊದಲೇ ಆಚರಣೆ ಮಾಡಲಾಗುತ್ತದೆ. ಕರಾವಳಿಯಲ್ಲಿ ಒಂದು ತಿಂಗಳ ನಂತರ ಪ್ರಾರಂಭವಾಗುತ್ತದೆ. ಈ ದಿನ ಹಾಲೆ ಮರ ದಿವ್ಯ ಔಷದಿಯಿಂದ ಕೂಡಿರುತ್ತದೆ ಎಂಬುದು ಹಿಂದಿನವರ ನಂಬಿಕೆ. ಏನೇ ಇರಲಿ ಈ ಕಷಾಯವಂತು ದೇಹದ ಆರೋಗ್ಯಕ್ಕೆ ಅತ್ಯುತ್ತಮ ಎನ್ನುವುದರಲ್ಲಿ ಯಾವುದೇ ಸಂದೇಹವಿಲ್ಲ.

ಒಂದು ವಿಷಯ ಇಲ್ಲಿ ಗಮನಿಸುವುದಾದರೆ, ಈ ಮರವನ್ನು ಗುರುತಿಸುವಲ್ಲಿ ನಾವು ಬಹಳ ಜಾಗರೂಕರಾಗಿರಬೇಕು. ಹಾಲೆ ಮರವನ್ನು ತಪ್ಪಾಗಿ ಗುರುತಿಸಿ ಮೇಲ್ನೋಟಕ್ಕೆ ಇದೆ ರೀತಿ ಕಾಣುವ ಕಾಸರಕ ಮರದ ಕಷಾಯ ಕುಡಿದು ಅನಾಹುತ ಸಂಭವಿಸಿದ ಹಲವಾರು ನಿದರ್ಶನಗಳಿವೆ.

ಚಿಕ್ಕಮಗಳೂರು, ಉಡುಪಿ, ದಕ್ಷಿಣ ಕನ್ನಡದಲ್ಲಿ ಒಂದು ವಿಶೇಷ ಸಂಪ್ರದಾಯವಿದೆ.  ಸೂರ್ಯೋದಯಕ್ಕೆ ಮೊದಲೇ ಪಾಲೆ ಮರ (ಹಾಲೆ ಮರ) ದ ಬಳಿ ಹೋಗಿ ಬಿಳಿ ಕಲ್ಲಿನಿಂದ ಜಜ್ಜಿ ಮರದ ತೊಗಟೆಯನ್ನು ತೆಗೆದು ಬರಬೇಕು ಎಂಬುದು.  ತೊಗಟೆಯನ್ನು ತೆಗೆಯುವಾಗ ಕಬ್ಬಿಣದ ಕತ್ತಿಯನ್ನು ತಾಗಿಸಬಾರದು ಎಂಬ ಪ್ರತೀತಿಯೂ ಇದೆ. ಅಂದು ಮನೆಮಂದಿಯೆಲ್ಲರೂ ಆರೋಗ್ಯವರ್ಧಕವಾದ ಪಾಲೆಯ ಅತಿ ಕಹಿಯಾದ ರಸ ಕುಡಿದು ನಂತರ ತೆಂಗಿನ ಕಾಯಿ ತುರಿ ಹಾಕಿ ತಯಾರಿಸಿದ ಗಂಜಿ ಉಣ್ಣುತ್ತಾರೆ.

ವೈಜ್ಞಾನಿಕವಾಗಿ ಈ ಆಚರಣೆಯನ್ನು ಗಮನಿಸಿದರೆ, ಪಾಲೆ ತೊಗಟೆಯ ರಸ ಒಂದು ವರ್ಷದ ಕಾಲ ರೋಗ ರುಜಿನಗಳು ದೂರವಾಗುತ್ತದೆ ಎಂಬ ನಂಬಿಕೆ ಇದೆ.  ಅನ್ಯ ಆಹಾರ ಸೇವನೆಗೆ ಮೂದಲು ಖಾಲಿ ಹೊಟ್ಟೆಗೆ ಕಷಾಯ ಸೇವಿಸುವುದು ಅತೀ ಉತ್ತಮವೆಂದು ಹೇಳಲಾಗುತ್ತದೆ. ಈ ರೀತಿ ಸೇವಿಸುವುದರಿಂದ ಅನೇಕ ಬಗೆಯ ಔಷಧಿಗಳು ನಮ್ಮ ಶರೀರಕ್ಕೆ ಸೇರುತ್ತದೆ ಎಂಬ ಬಲವಾದ ನಂಬಿಕೆ.

Advertisement

ಹಿಂದಿನ ಕಾಲದಲ್ಲಿ ಆಟಿ ತಿಂಗಳಿನಲ್ಲಿ ವಿಪರೀತ ಮಳೆ. ಮಳೆಗಾಲದ ಈ ತಿಂಗಳು ಒಂದು ಹೊತ್ತಿನ ಊಟಕ್ಕೂ ಕಷ್ಟವಿತ್ತಂತೆ. ಮಳೆಯಿಂದಾಗಿ ಶರೀರದಲ್ಲಿ ಕಫ ವೃದ್ಧಿಯಾಗಿ ಅಗ್ನಿ ಕುಂಠಿತವಾಗಿರುತ್ತದೆ. ಅಪೌಷ್ಟಿಕತೆಯಿಂದ ರೋಗಗಳೂ ಹೆಚ್ಚಾಗಿ ಬರುತ್ತಿತ್ತು ಎನ್ನಲಾಗುತ್ತದೆ.

ಆದ್ದರಿಂದ ಈ ಮಾಸದಲ್ಲಿ ಆಟಿ ಕಳಂಜ ದೈವವು ಅಮಾವಾಸ್ಯೆಯಂದು ಅನೇಕ ಬಗೆಯ ಔಷಧೀಯ ಗುಣಗಳನ್ನು ತಂದು ಮರದಲ್ಲಿರಿಸುತ್ತದೆ. ಯಾರು ತೊಗಟೆಯ ರಸವನ್ನು ನಂಬಿಕೆಯಿಂದ ಸೇವಿಸುತ್ತಾರೆಯೋ ಅವರು ವರ್ಷಪೂರ್ತಿ ಆರೋಗ್ಯವಾಗಿರುತ್ತಾರೆ ಎಂಬ ನಂಬಿಕೆಯೂ ಇದೆ.

ಆಟಿ ಅಮಾವಾಸ್ಯೆ ಹಾಲೆ ಕೆತ್ತೆ ಸಂಗ್ರಹಿಸುವಾಗ ಎಚ್ಚರ

ಪ್ರಾಯಶಃ ಕರಾವಳಿಯಲ್ಲಿ ಮಳೆ ಹೆಚ್ಚಾಗಿ ಬರುವ ಕಾರಣ ಈ ಸಂಪ್ರದಾಯ ಕರಾವಳಿಯಲ್ಲಿ ಮಾತ್ರ ಚಾಲ್ತಿಯಲ್ಲಿದೆ.

ಅದೇ ದಿನ ಮುಂಜಾನೆ ತೊಗಟೆ ತೆಗೆಯಲು ಹೋಗುತ್ತಾರೆ. ನಸುಕಿನಲ್ಲಿ ಸರಿಯಾಗಿ ಕಾಣದೇ ಇರುವ ಕಾರಣ ಹಾಲೆ ಮರದ ಬದಲು ಬೇರೊಂದು ಮರದ ಕೆತ್ತೆ ತಂದು ಜೀವಕ್ಕೆ ಅಪಾಯ ತಂದುಕೊಳ್ಳುವ ಸಾಧ್ಯತೆ ಇರುವುದರಿಂದ ಜಾಗರೂಕತೆ ವಹಿಸಬೇಕು.

ಹಾಲೆ ಮರದ ರೀತಿ ಕಾಣುವ ಕಾಸರ್ಕ (ಕಾಸಾನು) ಮರದ ತೊಗಟೆ ತಂದು ಜೀವಕ್ಕೆ ಅಪಾಯ ಮಾಡಿಕೊಂಡಿರುವ ಉದಾಹರಣೆಗಳು ಇವೆ. ಹಿಂದಿನ ದಿನವೇ ಗುರುತಿಸಿ ಮರುದಿನ ಸಂಗ್ರಹಿಸುವುದು ಉತ್ತಮ. ಇಲ್ಲವಾದರೆ ಹಾಲೆ ಮರದ ಎಲೆಯನ್ನು ಸ್ಪಷ್ಟವಾಗಿ ಗುರುತಿಸಿ ಅದರ ತೊಗಟೆಯನ್ನು ತೆಗೆಯಬೇಕು.

ಹಾಲೆ ಮರವನ್ನು ಆಯುರ್ವೇದದಲ್ಲಿ ಸಪ್ತಪರ್ಣ ಎನ್ನುತ್ತಾರೆ. ಈ ಮರದ ಎಲೆಗಳಲ್ಲಿ ಏಳು ಎಲೆಗಳಿರುವ ಕಾರಣ ಸಪ್ತಪರ್ಣ ಎಂದು ಹೆಸರು ಬಂದಿರಬೇಕು. ಹೀಗಾಗಿ ಸಪ್ತಪರ್ಣಿ ಎಂದೂ ಕರೆಯುತ್ತಾರೆ.

ಹಾಲೆ ಮರದಲ್ಲಿ ಜ್ವರ, ಕ್ಯಾನ್ಸರ್‌ನಂತಹ ಕಾಯಿಲೆಗಳನ್ನು ಗುಣಪಡಿಸುವ ಹಲವು ಬಗೆಯ ಔಷಧೀಯ ಗುಣವಿದೆ. ಆಯುರ್ವೇದ ಔಷಧಿಗಳಲ್ಲಿ ಇದು ಧಾರಾಳವಾಗಿ ಬಳಕೆಯಾಗುತ್ತಿದೆ.

ಎಷ್ಟೋ ಔಷಧಿಗಳನ್ನು ಸೇವಿಸುವವರಿಗೆ ಆ ಔಷಧಿಯಲ್ಲಿ ಹಾಲೆ ಮರದ ಅಂಶಗಳಿವೆ ಎನ್ನುವುದೂ ಗೊತ್ತಿರುವುದಿಲ್ಲ. ಬ್ರಾಹ್ಮಿà ಮುಹೂರ್ತದಲ್ಲಿ ಮರಗಳಲ್ಲಿ ಉದ್ದೇಶಿತ ಗುಣಗಳು ಹೆಚ್ಚಿಗೆ ಇರುವುದರಿಂದ ಮುಂಜಾವವೇ ತೊಗಟೆ ಸಂಗ್ರಹಿಸುವ ಕ್ರಮ ಚಾಲ್ತಿಗೆ ಬಂದಿರಬಹುದು.

ವಿಶೇಷವೆಂದರೆ ಆಯುರ್ವೇದ ಶಾಸ್ತ್ರದಲ್ಲಿ ಹೇಳಿರುವ ಈ ವಿಚಾರವನ್ನು ಆಯುರ್ವೇದ ತಿಳಿವಳಿಕೆ ಇಲ್ಲದ ಸಾಮಾನ್ಯ ವ್ಯಕ್ತಿಗಳೂ ಪಾಲಿಸುವ ಸಂಸ್ಕೃತಿ ಕಾಣಬಹುದಾಗಿದೆ.

ಗರಿಷ್ಠ ಎಷ್ಟು ಸ್ವೀಕರಿಸಬಹುದು?

ತೊಗಟೆಯನ್ನು ನೀರು ಮಿಶ್ರ ಮಾಡಿ ಜಜ್ಜಿ ರಸವನ್ನು ತೆಗೆಯುತ್ತಾರೆ. ಇದನ್ನು ವ್ಯಕ್ತಿಯೊಬ್ಬ ಗರಿಷ್ಠ 24 ಮಿ.ಲೀ. ಸೇವಿಸಬಹುದು. ಕುದಿಸಿ ಕಷಾಯ ಮಾಡುವುದಾದರೆ ಗರಿಷ್ಠ 50 ಮಿ.ಲೀ. ಸೇವಿಸಬಹುದು. ಕೆಲವರು ಜೀರಿಗೆ, ಬೆಳ್ಳುಳ್ಳಿ, ಅರಶಿನವನ್ನು ಮಿಶ್ರ ಮಾಡುವುದೂ ಇದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಚಾಲ್ತಿಯಲ್ಲಿರುವ ಈ ವಿಶಿಷ್ಟ ರೀತಿಯ ಆಚರಣೆ ಇತ್ತೀಚಿನ ದಿನಗಳಲ್ಲಿ ಮೂಡಿಗೆರೆ ಭಾಗದಲ್ಲಿ ಪ್ರಸಿದ್ದಿ ಪಡೆದಿದೆ.

ಎಲ್ಲರೂ ಹಾಲೆ ಮರದ ತೊಗಟೆಯ ಕಷಾಯ ಕುಡಿದು  ಸಂಭ್ರಮಿಸಿ.

Advertisement

Udayavani is now on Telegram. Click here to join our channel and stay updated with the latest news.

Next