Advertisement

ಹುಬ್ಬಳ್ಳಿಯಲ್ಲೊಬ್ಬ ಆಜ್‌ ಕಾ ಅರ್ಜುನ್‌!

06:00 AM Oct 07, 2017 | |

ಎರಡೂ ಕಣ್ಣಿನ ಮೇಲೆ ನಿಂಬೆ ಹಣ್ಣುಗಳನ್ನು ಇಟ್ಟುಕೊಂಡ ವ್ಯಕ್ತಿಯನ್ನು ನಿಲ್ಲಿಸಿ, ಒಂದೇ ಬಿಲ್ಲಿನಿಂದ ಎರಡು ಬಾಣಗಳನ್ನು ಹೂಡಿ ಕಣ್ಣಿಗೆ ಹಾನಿಯಾಗದಂತೆ ನಿಂಬೆ ಹಣ್ಣಿಗೆ ಮಾತ್ರ ಬಾಣ ಚುಚ್ಚುವಂತೆ ಮಾಡುವ ಕೌಶಲ್ಯ ಎಂಥವರಿಗಾದರೂ ಎದೆ ಝಲ್‌ ಎನಿಸುತ್ತದೆ. ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಶಬ್ದವನ್ನಾಧರಿಸಿ ಬಾಣವನ್ನು ಗುರಿ ತಲುಪಿಸುವ “ಶಬ್ದವೇದಿ’ ಸಾಧ್ಯ ಎಂಬುದನ್ನು ನಿರೂಪಿಸುವುದೂ ಸೇರಿದಂತೆ ಬಿಲ್ವಿದ್ಯೆಯಲ್ಲಿ ಹತ್ತು ಹಲವು ರೋಚಕ ಪ್ರದರ್ಶನಗಳನ್ನು ನೀಡುತ್ತ ಪ್ರೇಕ್ಷಕರ ಮನ ಸೆಳೆಯುತ್ತಿರುವವರು ಬಿಲ್ಲುಗಾರ ಸುಬ್ಟಾರಾವ್‌ ವೆಂಕಟೇಶ್ವರರಾವ್‌ ಅರವಪಲ್ಲಿ.

Advertisement

ಶಾಸ್ತ್ರಗಳಲ್ಲಿ 64 ವಿದ್ಯೆಗಳನ್ನು ಪ್ರಸ್ತಾಪಿಸಲಾಗಿದ್ದು, ಅವುಗಳಲ್ಲಿ ಧನುರ್ವಿದ್ಯೆ ಕೂಡ ಒಂದು. ಧನುರ್ವಿದ್ಯೆ ಮಹತ್ವ ನಮಗೆ ಕೇವಲ ಪುರಾಣ, ಪುಣ್ಯಕತೆ, ರಾಮಾಯಣ ಹಾಗೂ ಮಹಾಭಾರತದಲ್ಲಿ ಮಾತ್ರ ಗೊತ್ತಾಗುತ್ತದೆ. ಆದರೆ ಧನುರ್ವಿದ್ಯೆಯನ್ನು ಪ್ರಸ್ತುತವಿಲ್ಲ ಎಂದೇ ಹೆಚ್ಚಿನ ಜನ ಭಾವಿಸಿದ್ದಾರೆ. ಇಂಥ ಸಂದರ್ಭದಲ್ಲಿ ತಂತ್ರಜ್ಞಾನದ ಯುಗದಲ್ಲೂ ಧನುರ್ವಿದ್ಯೆ ಪ್ರದರ್ಶನ ಮಾಡುವುದರೊಂದಿಗೆ ಕಲೆಯನ್ನು ಉಳಿಸಿ ಬೆಳೆಸಲು ನಿರಂತರ ಪ್ರಯತ್ನಿಸುತ್ತಿದ್ದಾರೆ ಸುಬ್ಬರಾವ್‌.

ಅರ್ಚಕರೂ ಹೌದು: ಗುಂಟೂರು ಜಿಲ್ಲೆಯ ನರಸರಾವಪೇಟ ತಾಲೂಕಿನ ಅವರ ಪಲ್ಲಿಯವರಾದ ಸುಬ್ಬರಾವ್‌ ಉಪಜೀವನಕ್ಕಾಗಿ ಮಾರುತಿ ದೇವಸ್ಥಾನದ ಅರ್ಚಕರಾಗಿದ್ದಾರೆ. ಆದರೆ ಅವರು ಪ್ರವೃತ್ತಿಯಿಂದ ಅಂಬುಗಾರ (ಬಿಲ್ವಿದ್ಯೆ ಪ್ರವೀಣ). ಬಿ.ಕಾಂ ಪದವೀಧರರಾಗಿರುವ ಸುಬ್ಬರಾವ್‌ಗೆ ತಂದೆಯೇ ಬಿಲ್ವಿದ್ಯಾ ಗುರು. 2-3 ವರ್ಷ ನಿರಂತರ ಬಿಲ್ವಿದ್ಯೆ ಅಭ್ಯಾಸ ಮಾಡಿದ ಸುಬ್ಬರಾವ್‌ ನಂತರ ಪ್ರದರ್ಶನಗಳನ್ನು ನೀಡಲಾರಂಭಿಸಿದರು.

ಬಿಲ್ವಿದ್ಯೆಯಲ್ಲಿ ನಿಪುಣ: ಬಿಲ್ವಿದ್ಯೆಯಲ್ಲಿ ಹಲವು ಪ್ರಕಾರಗಳಿವೆ. ಸ್ಥಿರವಾಗಿರುವ ವಸ್ತುವಿಗೆ ಗುರಿ ಇಡುವುದು, ಸ್ಥಿರ ಲಕ್ಷ್ಯಭೇದನ, ಒಂದೇ ಬಾಣದಿಂದ ಇಂಗ್ಲಿಷ್‌ನ ಎಸ್‌ ಆಕಾರದಲ್ಲಿ 7 ವಸ್ತುಗಳನ್ನು ಗುರಿಯಾಗಿಸಿ ಬಾಣ ಹೊಡೆಯುವುದು, ಸಪ್ತತಾಳ ಭೇದನ. ಕೈಯನ್ನು ಬಳಕೆ ಮಾಡದೇ ಕೇವಲ ಕಾಲಿನಿಂದ ಬಾಣ ಹೂಡುವುದು ಪಾದ ಲಕ್ಷ್ಯ ಭೇದನ. ಅರ್ಧ ಚಕ್ರಾಸನ ಮಾಡಿ ಬಾಣ ಬಿಡುವುದು, ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಶಬ್ದ ಬಂದ ಕಡೆ ಸರಿಯಾಗಿ ಗುರಿ ನೆಟ್ಟು ಬಾಣ ಹೊಡೆಯುವುದು, ಕನ್ನಡಿಯಲ್ಲಿ ಪ್ರತಿಬಿಂಬ ನೋಡಿಕೊಂಡು ವಸ್ತುವಿಗೆ ಗುರಿ ಇಡುವುದು ಸೇರಿದಂತೆ ಹಲವಾರು ಪ್ರದರ್ಶನಗಳನ್ನು ಸುಬ್ಬರಾವ್‌ ಮಾಡುತ್ತಾರೆ. ಈವರೆಗೆ ಸುಮಾರು 800 ಪ್ರದರ್ಶನಗಳನ್ನು ನೀಡಿರುವ ಇವರು, ಅಮೆರಿಕಾ ಹಾಗೂ ಮಸ್ಕತ್‌ನಲ್ಲೂ ಪ್ರದರ್ಶನ ನೀಡಿ ಭೇಷ್‌ ಎನಿಸಿಕೊಂಡಿದ್ದಾರೆ.

ಮಕ್ಕಳಿಗೆ ತರಬೇತಿ: ಧನುರ್ವಿದ್ಯೆ ಕಲಿತರೆ ಸಾಕಷ್ಟು ಪ್ರಯೋಜನಗಳಿವೆ. ಬಿಲ್ವಿದ್ಯೆಯಿಂದ ಮನಸ್ಸಿನ ಏಕಾಗ್ರತೆ ಹೆಚ್ಚಾಗುತ್ತದೆ. ಧನುರ್ವಿದ್ಯೆ ಕಲಿಯಲು ಯೋಗಾಸನ ಅವಶ್ಯಕ. ಮನಸಿನ ಏಕಾಗ್ರತೆಗಾಗಿ ಮಕ್ಕಳಿಗೆ ಬಿಲ್ವಿದ್ಯೆ ಕಲಿಸುವುದು ಅವಶ್ಯಕವಾಗಿದೆ. ಆಸಕ್ತರಿದ್ದರೆ ನಾನು ಮನೆಯಲ್ಲಿ ಇಟ್ಟುಕೊಂಡು ಉಚಿತ ತರಬೇತಿ ನೀಡುವುದಾಗಿ ಹೇಳುವ ಸುಬ್ಬರಾವ್‌, ತಮ್ಮ ದ್ವಿತೀಯ ಪುತ್ರಿ ಎಂಬಿಎ ಕಲಿಯುತ್ತಿರುವ ಮಲ್ಲಿಕಾಗೆ ಬಿಲ್ವಿದ್ಯೆ ತರಬೇತಿ ನೀಡುತ್ತಿದ್ದಾರೆ.

Advertisement

ಸುಬ್ಬರಾವ್‌ ಅವರ ಕಲಾಕೌಶಲ ಗುರುತಿಸಿದ ಸಂಘ-ಸಂಸ್ಥೆಗಳು ಅವರಿಗೆ “ಆಜ್‌ ಕಾ ಅರ್ಜುನ್‌’, “ಅಭಿನವ ಅಶ್ವತ್ಥಾಮ’ ಬಿರುದು ನೀಡಿ ಗೌರವಿಸಿವೆ. ಸುಬ್ಬರಾವ್‌ರ ತಂದೆ ವೆಂಕಟೇಶ್ವರರಾವ್‌ ತಮ್ಮ 80ನೇ ವಯಸ್ಸಿನಲ್ಲಿ ನೀಡಿದ ಪ್ರದರ್ಶನದಲ್ಲಿ ವ್ಯಕ್ತಿಯೊಬ್ಬರ ಕಣ್ಣುಗಳ ಮೇಲೆ 2 ನಾಣ್ಯಗಳನ್ನಿಟ್ಟು, ಒಂದೇ ಬಿಲ್ಲಿಗೆ ಎರಡು ಬಾಣಗಳನ್ನು ಹೂಡಿ ಕಣ್ಣಿಗೆ ತಾಕದೇ ನಾಣ್ಯಗಳಿಗೆ ಮಾತ್ರ ಬಾಣ ನಾಟುವಂತೆ ಮಾಡಿ ಭೇಷ್‌ ಎನಿಸಿಕೊಂಡಿದ್ದಾರೆ.

ಬಾಣದ ಮೂಲಕ ಧ್ವಜಾರೋಹಣ ನೆರವೇರಿಸಬೇಕೆಂಬುದು ಸುಬ್ಬರಾವ್‌ ಅವರ ಬಯಕೆ. ಅದರೊಂದಿಗೆ ಬಾಣಕ್ಕೆ ಹಾರವನ್ನು ಕಟ್ಟಿ, ಅದನ್ನು ಹೂಡಿ ವ್ಯಕ್ತಿಗೆ ಬಾಣದ ಮೂಲಕವೇ ಹಾರ ಹಾಕಬೇಕೆಂಬುದು ಇಚ್ಛೆ. ಈ ದಿಸೆಯಲ್ಲಿ  ಪ್ರಯತ್ನಶೀಲರಾಗಿದ್ದಾರೆ. ಒಲಿಂಪಿಕ್ಸ್‌ನಲ್ಲಿ ಬಿಲ್ವಿದ್ಯೆಗೆ ಅವಕಾಶ ನೀಡಲಾಗಿದೆ. ಆದರೆ ದೂರದಿಂದ ಗುರಿ ಇಡುವುದಷ್ಟೇ ಬಿಲ್ವಿದ್ಯೆಯಲ್ಲ. ಅದರಲ್ಲಿ ಹಲವು ಬಗೆಗಳಿವೆ. ಸಂಸ್ಕೃತಿಯ ಭಾಗವಾಗಿರುವ ಧನುರ್ವಿದ್ಯೆಯನ್ನು ಉಳಿಸಲೆತ್ನಿಸುವವರಿಗೆ ಸರ್ಕಾರ ಹಾಗೂ ಸಂಘ ಸಂಸ್ಥೆಗಳು ಉತ್ತೇಜನ ನೀಡಬೇಕಿದೆ.

ಉಚಿತ ತರಬೇತಿ ನೀಡಲು ಸಿದ್ಧತೆ:  ಬಿಲ್ವಿದ್ಯೆಯನ್ನು ಉಳಿಸಿ ಬೆಳೆಸಿಕೊಂಡು ಹೋಗಬೇಕೆಂಬುದು ನನ್ನ ಹೆಬ್ಬಯಕೆ. ಧನುರ್ವಿದ್ಯೆ ಕಲಿಯಲು ಆಸಕ್ತ ಮಕ್ಕಳಿಗೆ ಉಚಿತವಾಗಿ ತರಬೇತಿ ನೀಡುತ್ತೇನೆ. ನಾನು ಬಿಲ್ವಿದ್ಯೆಯಲ್ಲಿ ಪ್ರಾವೀಣ್ಯನಲ್ಲ. ಇನ್ನೂ ಸಾಧನೆ ಮಾಡಬೇಕಿದೆ. ನನ್ನ ತಂದೆ ತಮ್ಮ 80ನೇ ವಯಸ್ಸಿನಲ್ಲಿ ಬಿಲ್ವಿದ್ಯೆ ಪ್ರದರ್ಶನ ನೀಡಿದ್ದಾರೆ. ಅವರಂತೆ ನಾನು ಕೂಡ ಸಾಧನೆ ಮಾಡಬೇಕೆಂಬ ಬಯಕೆಯಿದೆ. ಮಹಾಭಾರತ ಯುದ್ಧದಲ್ಲಿ ಬಳಕೆಯಾದ ಅಗ್ನಿ ಹೊರಸೂಸುತ್ತ ಸಾಗುವ ಹಾಗೂ ಜಲ ಹೊರಸೂಸುವ ಬಾಣಗಳನ್ನು ತಯಾರಿಸುವ ಕುರಿತು ಸಂಶೋಧನೆ ಮಾಡುತ್ತಿದ್ದೇನೆ ಎನ್ನುತ್ತಾರೆ ಸುಬ್ಬರಾವ್‌.

ಬಾಣದ ಬಗೆಗಳು
ಸ್ತ್ರೀ ಬಾಣ:
ದೂರದ ಲಕ್ಷ್ಯ ಭೇದಿಸಲು ಇದನ್ನು ಬಳಕೆ ಮಾಡಲಾಗುತ್ತದೆ. ಈ ಬಾಣದ ಮುಂಭಾಗದ ತೂಕ ಹೆಚ್ಚಾಗಿರುತ್ತದೆ. ಪುರುಷ ಬಾಣಕ್ಕೆ ಹಿಂಭಾಗದ ತೂಕ ಹೆಚ್ಚಾಗಿರುತ್ತದೆ. ಇದನ್ನು ಕಠಿಣ ವಸ್ತು ಭೇದಿಸಲು ಬಳಸಲಾಗುತ್ತದೆ. ನಿರಂತರ ಅಭ್ಯಾಸಕ್ಕಾಗಿ ಹಿಂದೆ ಹಾಗೂ ಮುಂದೆ ಸಮಭಾರ ಹೊಂದಿರುವ ನಪುಂಸಕ ಬಾಣವನ್ನು ಬಳಸಲಾಗುತ್ತದೆ. ಬಾಣಗಳ ಆಕೃತಿಯಲ್ಲಿ ಸೂಜಿ, ಈಟಿ, ಅರ್ಧ ಚಂದ್ರ, ನಾಗ ಮೊದಲಾದ ಬಗೆಗಳಿವೆ ಸಂದರ್ಭಕ್ಕನುಗುಣವಾಗಿ ವಿವಿಧ ಬಾಣಗಳನ್ನು ಬಳಸಲಾಗುತ್ತದೆ ಎಂದು ಸುಬ್ಬರಾವ್‌ ಹೇಳುತ್ತಾರೆ.

* ವಿಶ್ವನಾಥ ಕೋಟಿ

Advertisement

Udayavani is now on Telegram. Click here to join our channel and stay updated with the latest news.

Next