Advertisement

Tragic: ರೀಲ್ಸ್ ಮಾಡಲು ಕೆರೆಗೆ ಇಳಿದ ಯುವಕ ಸಾವು

11:50 AM Sep 23, 2024 | Team Udayavani |

ಬೆಂಗಳೂರು: ಮದ್ಯದ ಅಮಲಿನಲ್ಲಿ ರೀಲ್ಸ್‌ ಮಾಡಲು ಕೆರೆಗೆ ಇಳಿದ ಯುವಕನೊಬ್ಬ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಪಣತ್ತೂರು ಕೆರೆಯಲ್ಲಿ ಭಾನುವಾರ ಸಂಜೆ ನಡೆದಿದೆ.

Advertisement

ನೇಪಾಳ ಮೂಲದ ಅನಿಲ್‌ (22) ಮೃತ ಯುವಕ. ಆತನ ಜತೆ ಕೆರೆಗೆ ಇಳಿದಿದ್ದ ದಿನೇಶ್‌ ಎಂಬಾತ ಈಜಿ ಸುರಕ್ಷಿತವಾಗಿ ದಡ ಸೇರಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದರು.

ನೇಪಾಳ ಮೂಲದ ಅನಿಲ್‌ ಮತ್ತು ದಿನೇಶ್‌ ಹಾಗೂ ಉಪೇಂದ್ರ ಎಂಬುವರು ಭಾನುವಾರ ಸಂಜೆ ಮದ್ಯಪಾನ ಮಾಡಿ ಪಣತ್ತೂರು ಕೆರೆ ಬಳಿ ಹೋಗಿದ್ದರು. ಈ ಪೈಕಿ ಅನಿಲ್‌ ಮತ್ತು ದಿನೇಶ್‌, ಮದ್ಯದ ನಶೆಯಲ್ಲಿ ರೀಲ್ಸ್‌ ಮಾಡಲು ಕೆರೆಗೆ ಇಳಿದಿದ್ದಾರೆ. ಉಪೇಂದ್ರ, ದಡದಲ್ಲಿ ಕುಳಿತು ಮೊಬೈಲ್‌ ನಿಂದ ಆ ಇಬ್ಬರ ರೀಲ್ಸ್‌ನ ದೃಶ್ಯ ಚಿತ್ರೀಕರಿಸುತ್ತಿದ್ದ. ಆಗ ಅನಿಲ್‌, ನೀರಿನಲ್ಲಿ ಮುಳುಗಿದ್ದಾನೆ. ಅದರಿಂದ ಗಾಬರಿಯಾದ ದಿನೇಶ್‌, ಈಜಿ ದಡಕ್ಕೆ ಬಂದಿದ್ದಾನೆ. ನಂತರ ದಿನೇಶ್‌ ಮತ್ತು ಉಪೇಂದ್ರ, ತುರ್ತು ಸಹಾಯವಾಣಿ 112ಗೆ ಕರೆ ಮಾಡಿದ್ದಾನೆ. ತುರ್ತು ಕರೆ ಆಧರಿಸಿ ಕೆಲ ನಿಮಿಷಗಳಲ್ಲೇ ಪೊಲೀಸರು ಸ್ಥಳಕ್ಕೆ ತೆರಳಿದ್ದಾರೆ. ಆದರೆ, ಅಷ್ಟರಲ್ಲಿ ಅನಿಲ್‌ ಮೃತಪಟ್ಟಿದ್ದಾನೆ. ಅನಿಲ್‌, ದಿನೇಶ್‌ ಮತ್ತು ಉಪೇಂದ್ರ, ಪಣತ್ತೂರಿನ ಬಾಡಿಗೆ ಮನೆಯಲ್ಲಿ ಒಟ್ಟಿಗೆ ವಾಸವಿದ್ದು, ಈ ಪೈಕಿ ಅನಿಲ್‌ ಮತ್ತು ದಿನೇಶ್‌, ಪಣತ್ತೂರಿನ ಅಪಾರ್ಟ್ ಮೆಂಟ್‌ನಲ್ಲಿ ಹೌಸ್‌ ಕೀಪಿಂಗ್‌ ಕೆಲಸ ಮಾಡುತ್ತಿದ್ದರು. ಉಪೇಂದ್ರ, ಅದೇ ಅಪಾರ್ಟ್‌ಮೆಂಟ್‌ನಲ್ಲಿ ಸೆಕ್ಯೂರಿಟಿ ಗಾರ್ಡ್‌ ಆಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next