Advertisement

Udupi: ಮೋಜು-ಮಸ್ತಿಯೇ ಜೀವಕ್ಕೆ ಮುಳುವಾಯಿತು! 

07:55 AM Aug 27, 2024 | Team Udayavani |

ಉಡುಪಿ: ಕರಂಬಳ್ಳಿ ದೇವಸ್ಥಾನದ ಕೆರೆಗೆ ಬಿದ್ದು ವಿದ್ಯಾರ್ಥಿ ಲಕ್ಷ್ಮೀಂದ್ರನಗರದ ನಿವಾಸಿ ಸಿದ್ಧಾರ್ಥ್ ಶೆಟ್ಟಿ(19) ಮೃತಪಟ್ಟಿದ್ದು, ಮೋಜುಮಸ್ತಿಯೇ ಮುಳುವಾಯಿತು ಎನ್ನಲಾಗುತ್ತಿದೆ.

Advertisement

ಈತ ತನ್ನ ಕಾರ್ಕಳದ ವಿದ್ಯಾಸಂಸ್ಥೆಯ ಇಬ್ಬರು ವಿದ್ಯಾರ್ಥಿಗಳೊಂದಿಗೆ ಸೇರಿಕೊಂಡು ರವಿವಾರ ಸಂಜೆ ವೇಳೆ ಕರಂಬಳ್ಳಿಯ ಕೆರೆಗೆ ಹೋಗಿದ್ದರು. ನೀರು ನೋಡಿದ ತತ್‌ಕ್ಷಣ ಈತ ಶರ್ಟ್‌ ಬಿಚ್ಚಿ ಹಾರಿದ್ದಾರೆ. ಉಳಿದ ಇಬ್ಬರು ಮೇಲೆಯೇ ನಿಂತುಕೊಂಡು ನೋಡುತ್ತಿದ್ದರು. 15ಕ್ಕೂ ಅಧಿಕ ಅಡಿ ಆಳವಾದ ಕೆರೆ ಇದಾಗಿದ್ದು, ಈಜಾಡಲೂ ಬಾರದ ಕಾರಣ ಆತ ಮೇಲೆ ಬಂದಿರಲಿಲ್ಲ. ಕೂಡಲೇ ಇವರು ಸ್ಥಳೀಯರಿಗೆ ಮಾಹಿತಿ ನೀಡಿದ ಮೇರೆಗೆ ಅಗ್ನಿಶಾಮಕದಳದ ಸಿಬಂದಿ ಹಾಗೂ ಸ್ಥಳೀಯರು ಸೇರಿಕೊಂಡು ರಕ್ಷಣಾ ಕಾರ್ಯಾಚರಣೆ ನಡೆಸಿದರು.

ಸಾವಿನಿಂದ ಪಾರಾಗಿ ಬಂದಿದ್ದ!: 

ಉಡುಪಿಯಲ್ಲಿ ಕೆಲಸಮಯದ ಹಿಂದೆ ನಡೆದ ಬೈಕ್‌ ಢಿಕ್ಕಿಯಾಗಿ ಮೂರು ಗಾಯಗೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಈತ ಆ ಬೈಕ್‌ ಚಾಲನೆ ಮಾಡಿಕೊಂಡಿದ್ದ. ಬೈಕ್‌ನಲ್ಲಿದ್ದ ಇಬ್ಬರು ಕೂಡ ಇಂದಿಗೂ ಕೋಮಾವಸ್ಥೆಯಲ್ಲಿದ್ದಾರೆ. ಅಲ್ಲದೆ ರವಿವಾರ ಈತನೊಂದಿಗಿದ್ದ ವಿದ್ಯಾರ್ಥಿಗಳ ಪೈಕೆ ಓರ್ವ ನಿಟ್ಟೆಯಲ್ಲಿ ನಡೆದ ಬೈಕ್‌ ಅಪಘಾತದ ವೇಳೆ ಹಿಂಬದಿ ಸವಾರನಾಗಿದ್ದ. ವಿಪರೀತ ಮೋಜು ಮಸ್ತಿಯೇ ಈತನ ಸಾವಿಗೆ ಮುಳುವಾಯಿತು ಎನ್ನಲಾಗುತ್ತಿದೆ. ಈತನ ತಂದೆ ಶಿವಪ್ರಸಾದ್‌ ಶಂಭು ನೀಡಿದ ದೂರಿನಂತೆ ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇಬ್ಬರ ಸ್ಥಿತಿ ಗಂಭೀರ
ಅಲೆವೂರಿನ ನೈಲಪಾದೆಯಲ್ಲಿ ನದಿಯಲ್ಲಿ ಈಜಾಡಲು ತೆರಳಿದ್ದ ನಾಲ್ವರು ವಿದ್ಯಾರ್ಥಿಗಳ ಪೈಕಿ ತ್ರಿವೆಂಡಮ್‌ನ ಆರೊನ್‌ ರೋಜರ್‌ ಲೀನ್‌(17) ಹಾಗೂ ಕಲ್ಕತ್ತಾದ ಮಾಧವ್‌(18) ಅವರ ಸ್ಥಿತಿ ಗಂಭೀರವಾಗಿದ್ದು, ಮಣಿಪಾಲದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆರೋನ್‌ ರೋಜರ್‌ ಲೀನ್‌ ಅನ್ನು ಡಯಾಲಿಸಿಸ್‌ಗೆ ಒಳಪಡಿಸಲಾಗಿದೆ. ಮಾಧವ್‌ ಅವರಿಗೆ ಲಘುಹೃದಯಾಘಾತ ಉಂಟಾಗಿದ್ದು, ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next