Advertisement

ದೂರದೃಷ್ಟಿಯುಳ್ಳ ಸ್ಪಷ್ಟ ಆರೋಗ್ಯ ನೀತಿ ಇಂದಿನ ಅಗತ್ಯ

12:14 AM Dec 26, 2022 | Team Udayavani |

ಕೊರೊನಾ ಕಾಯಿಲೆಯ ತವರು ಚೀನದಲ್ಲಿ ಮತ್ತೆ ಕೊರೊನಾ ವೈರಸ್‌ ತನ್ನ ರುದ್ರ ಪ್ರತಾಪವನ್ನು ತೋರಲಾರಂಭಿಸಿದೆ. ಸರಿಸುಮಾರು ಕಳೆದ ಮೂರು ವರ್ಷಗಳಿಂದೀಚೆಗೆ ಇಡೀ ವಿಶ್ವ ಕೊರೊನಾ ಸಾಂಕ್ರಾಮಿಕದ ವಿವಿಧ ಅಲೆಗಳಿಗೆ ತುತ್ತಾಗಿ ನಲುಗಿ ಹೋಗಿದೆ.

Advertisement

ಕಳೆದ ಕೆಲವು ತಿಂಗಳುಗಳಿಂದೀಚೆಗೆ ಕೊರೊನಾದ ಕರಿನೆರಳು ದೂರವಾಯಿತು ಎಂದು ಜನರು ನಿಟ್ಟುಸಿರು ಬಿಡುತ್ತಿರುವಾಗಲೇ ಚೀನದಲ್ಲಿ ಕೊರೊನಾ ವೈರಸ್‌ನ ಹೊಸ ರೂಪಾಂತರಿ ದಾಂಗುಡಿ ಇಡಲಾರಂಭಿಸಿದೆ. ಕಳೆದ ಎರಡು ವಾರಗಳಿಂದೀಚೆಗೆ ಚೀನ ಕೊರೊನಾ ಸೋಂಕಿನಿಂದ ತತ್ತರಿಸಿ ಹೋಗಿದೆ. ಈಗಾಗಲೇ ದೇಶದ ಬಹುತೇಕ ಎಲ್ಲೆಡೆ ವಿವಿಧ ನಿರ್ಬಂಧಗಳನ್ನು ಹೇರಲಾಗಿದ್ದು, ಜನರು ಮತ್ತೆ ದಿಗ್ಬಂಧನಕ್ಕೊಳಗಾಗಿದ್ದಾರೆ. ತಿಂಗಳುಗಳ ಹಿಂದೆಯಷ್ಟೇ ಈ ನಿರ್ಬಂಧಗಳಿಂದ ಮುಕ್ತರಾಗಿದ್ದ ಚೀನೀಯರನ್ನು ಕೊರೊನಾ ಸಾಂಕ್ರಾಮಿಕ ಇನ್ನಿಲ್ಲದಂತೆ ಕಾಡುತ್ತಿದೆ. ತತ್ಪರಿಣಾಮವಾಗಿ ವಿದೇಶಗಳು ಕೂಡ ಚೀನಾದ ಮೇಲೆ ಕೆಂಗಣ್ಣು ಬೀರತೊಡಗಿದ್ದು ಆ ದೇಶದೊಂದಿಗಿನ ಸಂಪರ್ಕವನ್ನು ಕಡಿದುಕೊಳ್ಳಲು ಮುಂದಾಗಿವೆ.

ಇನ್ನು, ಭಾರತ ಸಹಿತ ವಿಶ್ವದ ಇತರ ರಾಷ್ಟ್ರಗಳಲ್ಲೂ ನಿಧಾನವಾಗಿ ಕೊರೊನಾ ವೈರಸ್‌ನ ಹೊಸ ರೂಪಾಂತರಿ ಬಿಎಫ್.7 ಸದ್ದಿಲ್ಲದೆ ಹರಡಲಾರಂಭಿಸಿದೆ. ಭಾರತದಲ್ಲಿ ಈಗಾಗಲೇ ಕೊರೊನಾದ ಪ್ರಕರಣಗಳು ದಿನನಿತ್ಯ ಹೆಚ್ಚಾಗತೊಡಗಿದ್ದು, ಇವುಗಳಲ್ಲಿ ಹೊಸ ರೂಪಾಂತರಿ ವೈರಸ್‌ನ ಪ್ರಕರಣಗಳೂ ಸೇರಿವೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಸಂಭಾವ್ಯ ಆರೋಗ್ಯ ಪರಿಸ್ಥಿತಿ ಎದುರಿಸಲು ಸಜ್ಜಾಗುವಂತೆ ಎಲ್ಲ ರಾಜ್ಯಗಳಿಗೂ ನಿರ್ದೇಶನ ನೀಡಿದೆ. ದೇಶದಲ್ಲಿ ಕೊರೊನಾದ ಎರಡನೇ ಅಲೆ ವೇಳೆ ಸೃಷ್ಟಿಯಾಗಿದ್ದ ಅವಾಂತರಗಳು, ಮೂಲಸೌಕರ್ಯಗಳು, ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿಯ ಕೊರತೆ ಈ ಬಾರಿ ಎದುರಾಗದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಿದೆ.

ದೇಶದಲ್ಲಿ ಕೊರೊನಾದ ಮೂರನೇ ಅಲೆ ಅಷ್ಟೇನೂ ಪರಿಣಾಮ ಬೀರದಿದ್ದುದರಿಂದ ಜನರು ಇದೀಗ ಈ ಬಗ್ಗೆ ಹೆಚ್ಚೇನೂ ತಲೆಕೆಡಿಸಿಕೊಳ್ಳುತ್ತಿಲ್ಲ. ಮೂರು ವರ್ಷಗಳ ಹಿಂದಿನ ತಮ್ಮ ಜೀವನಶೈಲಿಗೆ ಈಗಾಗಲೇ ಬಹುತೇಕ ಮಂದಿ ಮರಳಿದ್ದು ಮಾಸ್ಕ್ ಧಾರಣೆ, ಸ್ವತ್ಛತೆ, ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ ಮೊದಲಾದ ಮುನ್ನೆಚ್ಚರಿಕೆ ಕ್ರಮಗಳೆಲ್ಲವನ್ನೂ ಮರೆತು ಓಡಾಡುತ್ತಿದ್ದಾರೆ. ನಗರಗಳ ಮಾರುಕಟ್ಟೆ, ಸಾರ್ವಜನಿಕ ಸಾರಿಗೆ ವ್ಯವಸ್ಥೆ, ಮಾಲ್‌ ಮತ್ತಿತರೆಡೆಗಳಲ್ಲಿ ಜನಜಂಗುಳಿ ಸಾಮಾನ್ಯವಾಗಿದ್ದು, ಹೊಸವರ್ಷವನ್ನು ಬರಮಾಡಿಕೊಳ್ಳುವ ಸಂಭ್ರಮದಲ್ಲಿದ್ದಾರೆ.

ಚೀನಾದಲ್ಲಿನ ಬೆಳವಣಿಗೆಗಳನ್ನು ಗಮನಿಸಿ ಸರ್ಕಾರ ಮತ್ತೆ ಈ ಹಿಂದಿನ ನಿರ್ಬಂಧ, ಜನರು ತಮ್ಮ ಆರೋಗ್ಯ ಸುರಕ್ಷೆಗಾಗಿ ಪಾಲಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳು ಮತ್ತು ಆರೋಗ್ಯ ವ್ಯವಸ್ಥೆ ಜಾಗ್ರತವಾಗಿರಬೇಕು ಎಂಬ ಮಂತ್ರವನ್ನು ಪುನರಪಿ ಜಪಿಸಲಾರಂಭಿಸಿದೆ.

Advertisement

ಆರೋಗ್ಯ ರಕ್ಷಣೆ ಎನ್ನುವುದು ಕೇವಲ ಜನರಿಗೆ ಮಾತ್ರವಲ್ಲದೆ ನಮ್ಮನ್ನಾಳುವವರಿಗೂ ಸದಾ ಆದ್ಯತೆಯ ವಿಷಯವಾಗಿರಬೇಕು. ಸದ್ಯಕ್ಕಂತೂ ದೇಶದ ಬಹುತೇಕ ಕಡೆ ಮಲೇರಿಯಾ, ಡೆಂ à, ಎಚ್‌1ಎನ್‌1ನಂಥ ಸಾಂಕ್ರಾಮಿಕ ಕಾಯಿಲೆಗಳು ಜನರನ್ನು ಪದೇ ಪದೆ ಕಾಡುತ್ತಿವೆ. ನಮ್ಮ ನೆರೆಯ ಕೇರಳದಲ್ಲಿ ಹಕ್ಕಿಜ್ವರ ಕಾಣಿಸಿಕೊಂಡಿದೆ. ಈ ಸಾಂಕ್ರಾಮಿಕ ಕಾಯಿಲೆಗಳಿಗೆ ಸೂಕ್ತ ಚಿಕಿತ್ಸೆ ಲಭ್ಯವಿದೆಯಾದರೂ ಪರಿಸ್ಥಿತಿ ಕೈಮೀರಿದಲ್ಲಿ ಇವೆಲ್ಲವೂ ಪ್ರಾಣಕ್ಕೇ ಸಂಚಕಾರ ತಂದೊಡ್ಡುತ್ತವೆ.

ಇವೆಲ್ಲವನ್ನು ಸೂಕ್ಷ್ಮವಾಗಿ ಗಮನಿಸಿದಾಗ ಜನ ಸಮುದಾಯ ಮತ್ತು ಸರ್ಕಾರ ಆರೋಗ್ಯದ ವಿಷಯದಲ್ಲಿ ಒಂದಿಷ್ಟು ವಿವೇಚನಾಪೂರ್ವಕವಾಗಿ ನಡೆದುಕೊಳ್ಳಬೇಕಿದೆ. ಸಾಂಕ್ರಾಮಿಕ ಕಾಯಿಲೆಗಳ ಸಂದರ್ಭದಲ್ಲಿ “ಮಳೆ ಬಂದಾಗ ಕೊಡೆ’ ಹಿಡಿಯುವ ಬದಲಾಗಿ ದೂರದೃಷ್ಟಿಯುಳ್ಳ ಸಮಗ್ರ ಮತ್ತು ಸ್ಪಷ್ಟ ಆರೋಗ್ಯ ನೀತಿಯನ್ನು ದೇಶ ಹೊಂದಬೇಕಿರುವುದು ಅತ್ಯಗತ್ಯ ಮತ್ತು ಇದು ಇಂದಿನ ಅನಿವಾರ್ಯವೂ ಹೌದು.

Advertisement

Udayavani is now on Telegram. Click here to join our channel and stay updated with the latest news.

Next