Advertisement

ಒಂದು ವಿಶಿಷ್ಟ ಸಂಗೀತ ಸಮಾರಾಧನೆ

02:06 PM Dec 22, 2017 | |

ವಸಂತಿ ರಾಮಭಟ್‌ , ವಯಲಿನ್‌ ವಸಂತಿ ಅಕ್ಕ, ಶಾಸ್ತ್ರೀಯ ಸಂಗೀತಪ್ರಿಯರ ವಲಯದಲ್ಲಿ ಸುಪರಿಚಿತವಾದ ಹೆಸರು. ಸಂಗೀತ ಷಡc, ಪಂಚಮಗಳನ್ನೇ ತನ್ನ ಉಸಿರಾಗಿ ಸ್ವೀಕರಿಸಿರುವ ವಸಂತಿ ಅಕ್ಕ 4ನೇ ವಯಸ್ಸಿನಲ್ಲಿಯೇ ಸಪ್ತಸ್ವರಗಳಿಗೆ ಶರಣಾದವರು. ಇದೀಗ 79ರ ಹರೆಯಕ್ಕೆ ಕಾಲಿಟ್ಟಿರುವ ಸಂದರ್ಭದಲ್ಲೂ ಅದೇ ಆಸಕ್ತಿ, ಭಕ್ತಿ ಮತ್ತು ಕಾಳಜಿ ಅವರದ್ದು. 

Advertisement

ವಸಂತಿ ಅಕ್ಕ ತಮ್ಮ ಹುಟ್ಟುಹಬ್ಬದಂದು (ನ.29) ಬಹುಕಾಲದ ಕನಸೊಂದನ್ನು ನಮ್ಮೊಂದಿಗೆ ಹಂಚಿಕೊಂಡರು. ಅದು ತಿಂಗಳಿಗೊಂದರಂತೆ ಮುಂಬರುವ 12 ತಿಂಗಳು ಮನೆಯಲ್ಲಿ ಕಚೇರಿಗಳನ್ನು ಪ್ರಾಯೋಜಿಸುವುದು. 

“ರಾಗಧನ’ದೊಂದಿಗೆ ವಸಂತಿ ಅಕ್ಕನದು ಅವಿನಾಭಾವ ಸಂಬಂಧ. ಹಾಗಾಗಿ “ರಾಗಧನ’ದ ಲಾಂಛನ ಪಟದ ಅಡಿಯಲ್ಲಿ ಈ ಕಾರ್ಯಕ್ರಮಗಳು ನಡೆದರೂ ಖರ್ಚುವೆಚ್ಚಗಳನ್ನು ತಾವೇ ಸಂಪೂರ್ಣವಾಗಿ ವಹಿಸಿಕೊಳ್ಳುವುದು ಅವರ ಅಪೇಕ್ಷೆಯಾಗಿದೆ. ಈ ಅಭಿಯಾನದ ಪ್ರಥಮ ಹೆಜ್ಜೆಯಾಗಿ ನ.29ರಂದು ಪುತ್ತೂರಿನ ಸುಚಿತ್ರಾ ಹೊಳ್ಳ ಅವರ ಕಚೇರಿ ನಡೆಯಿತು. “ರಾಗಧನ ಪಲ್ಲವಿ’ ಪ್ರಶಸ್ತಿ ಭಾಜನರಾದ ಸುಚಿತ್ರಾ ಓರ್ವ ಪ್ರಖ್ಯಾತ ಕಲಾವಿದೆ. ಕಚೇರಿಯ ಮೊದಲ ಪ್ರಸ್ತುತಿ ಕಮಾಚ್‌ ರಾಗದ ದರು (ಮಾತೇ) ಶೀತ ಬಾಧಿತ ಧ್ವನಿಪೆಟ್ಟಿಗೆಯ ಅಸಹಕಾರದಿಂದಾಗಿ ತುಸುವೇ ಪೇಲವವಾಯಿತು. ಆದರೆ ಎದೆಗುಂದದೆ ಕಲಾವಿದೆ ಮುಂದೆ ನಾಟ ರಾಗದ (ಶಿವತ್ರಯ) ಅಪೂರ್ವ ಕೃತಿಯನ್ನು ಹಾಡಿದರು. ಅದರಲ್ಲಿ ನೀಡಲಾದ ಪ್ರೌಢವಾದ ಸ್ವರವಿನಿಕೆಗಳೊಂದಿಗೆ ಅವರ ಕಂಠವೂ ಮುಕ್ತವಾಗಿ ತೆರೆದುಕೊಂಡದ್ದು ರಸಿಕರ ಸಂತಸಕ್ಕೆ ಕಾರಣವಾಯಿತು. 

ವಸಂತಿ ರಾಗವನ್ನು ವಿಸ್ತರಿಸಿ ದೇವರನಾಮವನ್ನು (ನಾರಾಯಣ ಎನ್ನಿರೋ) ಕಚೇರಿಯ ಚೌಕಟ್ಟಿನಲ್ಲಿ ಹಾಡಿದ ಗಾಯಕಿ ಅನಂತರ ಚಕ್ರವಾಕ (ಜನಾರ್ದನ ಸಮ) ಕೃತಿಗಾಗಿ ಒಂದು ಒಳ್ಳೆಯ ಆಹಿರ್‌ ಭೈರವ್‌ನ ಛಾಯೆಯೂ ಮೂಡದಂತಹ ಶುದ್ಧವಾದ ಆಲಾಪನೆಯನ್ನು ನೀಡಿದರು. ಚೂರು ಉದ್ಭವವಾಯಿತೇನೋ ಎನಿಸಿದ ನೆರವಲ್‌ ನಂತರ ಮೂಡಿಬಂದ ಸ್ವರ ಕಲ್ಪನೆಗಳು ಮತ್ತು ಮುಕ್ತಾಯಗಳ ಗಟ್ಟಿತನ ಕಲಾವಿದೆಯ ಪ್ರಬುದ್ಧತೆಯನ್ನು ಸಾರಿದವು. 

ಅಮೃತ ವರ್ಷಿಣಿಯ ಸುಶ್ರಾವ್ಯವಾದ ರಾಗ ವಿಸ್ತಾರ, ಅನಂತರ ವಿಶೇಷವೆನಿಸಿದ “ತಾನಂ’ ಮುಂದೆ “ಸುಧಾಮಯಿ’ ಕೃತಿಯ ಚರಣ “ಸರಸಿಜಾಕ್ಷಿ’ ಎಂಬಲ್ಲಿ ನೆರವಲ್‌ , ಮೂರು ಬೇರೆ ಬೇರೆ ಎಡುಪ್ಪುಗಳಿಗೆ ಹೊಂದಿಸಲಾದ ಸ್ವರ ಕಲ್ಪನೆಗಳು,ಕರೈಪ್ಪುಗಳು, ಮೊಹರಾಗಳು ಮುಗಿಯುತ್ತಿದ್ದಂತೆ ಮೃದಂಗದಲ್ಲಿ ಉಡುಪಿ ಶ್ರೀಧರ್‌ ಅವರಿಂದ ನಡೆ ವೈವಿಧ್ಯದ ಒಂದು ಭರ್ಜರಿಯಾದ ತನಿ ಆವರ್ತನವಾಯಿತು.ಷಣ್ಮುಖಪ್ರಿಯ,ಜಂಜೂಟ ರಾಗಗಳ ಲಘು ಪ್ರಸ್ತುತಿಗಳ ಅನಂತರ ರೇವತಿ ರಾಗದ ತಿಲ್ಲಾನದೊಂದಿಗೆ ಕಚೇರಿ ಯಶಸ್ವಿಯಾಗಿ ಕೊನೆಗೊಂಡಿತು. ಚುರುಕಾದ ಅತಿಥೇಯಳಾಗಿ ಓಡಾಡಿ, ಆ ಕೂಡಲೇ ನುರಿತ ವಿದುಷಿಯಾಗಿ ವಯಲಿನ್‌ನಲ್ಲಿ ಸಹವಾದಕಿಯಾಗಿಯೂ ಯಾವುದೇ ಲೋಪವಿಲ್ಲದೆ ಮಿಂಚಿದ ವಸಂತಿ    ರಾಮಭಟ್‌ ಅಭಿನಂದನಾರ್ಹರು. 

Advertisement

ಈ ಕಚೇರಿಯ ಒಟ್ಟಂದವನ್ನು ಸರಳವಾಗಿ ವರ್ಣಿಸಿದ ಪ್ರತಿಭಾ ಸಾಮಗ ಅವರ ನಲು°ಡಿಗಳು ಸಮಸ್ತ ರಸಿಕರ ಮನದ ಮಾತುಗಳಾಗಿದ್ದು ಕರತಾಡನವನ್ನು ಪಡೆದವು. ವಸಂತಿ ರಾಮಭಟ್‌ ಅವರ ಮನೆ ದೇವಿಕೃಪಾದಲ್ಲಿಯೇ ಕಚೇರಿ ನಡೆಯಿತು. 

ಸರೋಜಾ ಆರ್‌. ಆಚಾರ್ಯ

Advertisement

Udayavani is now on Telegram. Click here to join our channel and stay updated with the latest news.

Next