Advertisement

ಭಾವೈಕ್ಯತೆಯ ಸಂಕೇತ ಹೊಸೂರು ಉರುಸ್

07:08 PM Mar 13, 2023 | Team Udayavani |

ರಬಕವಿ-ಬನಹಟ್ಟಿ: ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಹೊಸೂರಿನ ಸಿರಾಜಸಾಬ್ ಮತ್ತು ಮುರಾದಸಾಬ್ ದರ್ಗಾದ ಉರುಸ್ ಕಾರ್ಯಕ್ರಮ ಅತ್ಯಂತ ವಿಶೇಷವಾಗಿದ್ದು, ಇಲ್ಲಿಯ ಹಿಂದೂ ಮತ್ತು ಮುಸ್ಲಿಂ ಸಮುದಾಯದವರು ಒಂದಾಗಿ ಉರುಸ್ ಆಚರಣೆ ಮಾಡುತ್ತಿದ್ದು, ಇದು ಭಾವ್ಯಕ್ಯತೆಯ ಸಂಕೇತದ ಉರುಸ್ ಆಗಿದೆ.
ಐದು ದಿನಗಳ ಕಾಲ ನಡೆಯುವ ಉರುಸ್ ಕಾರ್ಯಕ್ರಮಕ್ಕೆ ರಬಕವಿ, ಬನಹಟ್ಟಿ, ರಾಮಪುರ ಹಾಗೂ ಹೊಸೂರಿನ ಹಿಂದೂಗಳು ಮತ್ತು ಮುಸ್ಲಿಂರು ಯಾವುದೆ ಬೇಧ ಭಾವವಿಲ್ಲದೆ ಒಂದಾಗಿ ನೂರಾರು ವರ್ಷಗಳಿಂದ ಅಚರಿಸುತ್ತ ಬಂದಿದ್ದಾರೆ. ಇದೊಂದು ಐತಿಹಾಸಿಕ ಮತ್ತು ಮಾದರಿ ಉರುಸ್ ಆಗಿದೆ.

Advertisement

ಹಿಂದೂ ಪುರುಷರು, ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಅನೇಕರು ತಮ್ಮ ಮನೆಗಳಿಂದ ದರ್ಗಾವರೆಗೆ ದೀಡ ನಮಸ್ಕಾರ ಸೇವೆ ಸಲ್ಲಿಸಿ ಹರಕೆ ತೀರಿಸುತ್ತಾರೆ. ದೀಡ ನಮಸ್ಕಾರ ಹಾಕಿದ ಮಹಿಳೆಯರು ಮತ್ತು ಮಕ್ಕಳು ದರ್ಗಾದ ಪೂಜಾರಿಗಳ ಕಾಲಿಗೆ ನಮಸ್ಕಾರ ಮಾಡುವ ಸನ್ನಿವೇಶಗಳನ್ನು ಕೂಡಾ ಇಲ್ಲಿ ಕಾಣಬಹುದಾಗಿದೆ. ಅನೇಕ ಹಿಂದೂಗಳು ಉರುಸ್ ಸಂದರ್ಭದಲ್ಲಿ ಮುಸ್ಲಿಂ ಸಮುದಾಯದ ಫಕೀರಗಳನ್ನು ತಮ್ಮ ಮನೆಗಳಿಗೆ ಊಟಕ್ಕೆ ಕರೆದುಕೊಂಡು ಹೋಗುತ್ತಾರೆ. ಅದರಂತೆ ಮುಸ್ಲಿಂ ಸಮುದಾಯದವರು ಹಿಂದೂಗಳನ್ನು ತಮ್ಮ ಮನೆಗೆ ಊಟಕ್ಕೆ ಆಹ್ವಾನಿಸುತ್ತಾರೆ. ಮುಸ್ಲಿಂ ಹೆಣ್ಣು ಮಕ್ಕಳಂತೆ ಹಿಂದೂ ಪುರುಷ, ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಉರುಸ್ ಕಾರ್ಯಕ್ರಮದಲ್ಲಿ ಹೊಸ ಬಟ್ಟೆಗಳನ್ನು ಧರಿಸಿಕೊಂಡು ಕೈಯಲ್ಲಿ ಸಕ್ಕರೆ ಮತ್ತು ಮನೆಯಲ್ಲಿ ಮಾಡಿದ ಹೋಳಿಗೆ, ಮಾದೇಲಿ ಹಾಗೂ ಇನ್ನೀತರ ಸಿಹಿ ಪದಾರ್ಥದ ನೈವೇದ್ಯವನ್ನು ತೆಗೆದುಕೊಂಡು ಹೋಗಿ ಅರ್ಪಣೆ ಮಾಡಿ ಬರುತ್ತಾರೆ. ಇನ್ನೂ ಕೆಲವರು ಹತ್ತಾರು ಕೆ.ಜಿಯಷ್ಟು ಸಕ್ಕರೆಯನ್ನು ದರ್ಗಾದ ಭಾಗವಾನರಿಗೆ ಮತ್ತು ಫಕೀರರಿಗೆ ಸಲ್ಲಿಸುತ್ತಾರೆ. ಹಿಂದೂಗಳು ಕೂಡಾ ಇಲ್ಲಿಯ ದರ್ಗಾಕ್ಕೆ ಚಾದರ್ ಗಳನ್ನು ಅರ್ಪಣೆ ಮಾಡಿ ತಮ್ಮ ಹರಕೆಗಳನ್ನು ಪೂರೈಸುತ್ತಾರೆ. ಉರುಸ್ ಆಚರಣೆ ಸಂದರ್ಭದಲ್ಲಿ ಹಿಂದೂ ಮತ್ತು ಮುಸ್ಲಿಂ ಸಮುದಾಯದ ಪ್ರಮುಖರು ಕೂಡಿಕೊಂಡು ಪಟ್ಟಿಯನ್ನು ಸಂಗ್ರಹಿಸುತ್ತಾರೆ.

ಐದು ದಿನಗಳ ಉರಸನಲ್ಲಿ ನೂರಾರು ಕ್ವಿಂಟಲ್ ಸಕ್ಕರೆ ಮಾರಾಟವಾಗುತ್ತದೆ. ಅದೇ ರೀತಿಯಾಗಿ ಅಂದಾಜು ಐದಾರು ಸಾವಿರದಷ್ಟು ಚಾದರಗಳು ಮಾರಾಟವಾಗುತ್ತವೆ. ರೂ. ೫೦೦ ರಿಂದ ೧೦೦೦ ಸಾವಿರದವರೆಗೆ ಚಾದರಗಳು ಇದ್ದು, ಭಕ್ತರು ತಮ್ಮ ಹರಕೆಯಂತೆ ಖರೀದಿ ಮಾಡುತ್ತಾರೆ ಎನ್ನುತ್ತಾರೆ ಹೊಸೂರನ ವ್ಯಾಪಾರಸ್ಥರಾದ ಫರೀದ ಅತ್ತಾರ.
ನಮ್ಮೂರಿನ ಉರುಸ್ ಕಾರ್ಯಕ್ರಮ ಐತಿಹಾಸಿಕ ಮತ್ತು ಮಾದರಿ ಉರಸ್ ಆಗಿದೆ. ತಲೆ ತಲಾಂತರದಿಂದ ಆಚರಣೆ ಮಾಡುತ್ತ ಬಂದಿರುವ ಉರಸ್ ಕಾರ್ಯಕ್ರಮದಲ್ಲಿ ಹಿಂದೂಗಳ ಕೂಡಾ ಹೆಚ್ಚಾಗಿ ಕಂಡು ಬರುತ್ತಾರೆ. ಬೇರೆ ಊರುಗಳಿಗೆ ಹೋದ ಹಿಂದೂ ಯುವಕರು ಉರಸ್ ಕಾರ್ಯಕ್ರಮಕ್ಕೆ ಬಂದು ಹೋಗುವುದು ವಿಶೇಷವಾಗಿದೆ.
-ವೆಂಕಟೇಶ ನಿಂಗಸಾನಿ, ಹೊಸೂರನ ಪ್ರಮುಖರು

ಹೊಸೂರಿನ ಉರುಸ್ ಕಾರ್ಯಕ್ರಮವನ್ನು ಹಿಂದೂ ಮುಸ್ಲಿಂ ಸಂಘಟನೆಗಳು ಒಂದಾಗಿ ಶತ ಶತಮಾನಗಳಿಂದ ಆಚರಣೆ ಮಾಡುತ್ತ ಬಂದಿದ್ದಾರೆ. ದರ್ಗಾದ ಬದಿಗಿರುವ ಬೃಹತ್ ಆಲದ ಮರದಿಂದ ಯಾವಾಗಲೂ ಸಕ್ಕರೆ ಉದುರುತ್ತದೆ ಎಂಬುದು ಜನರ ನಂಬಿಕೆಯಾಗಿದೆ. ಯಾವಾಗಲೂ ಮರದ ಸುತ್ತ ಮುತ್ತ ಇರುವೆಗಳು ಓಡಾಡಿಕೊಂಡಿರುತ್ತವೆ. ಈ ಭಾಗದಲ್ಲಿ ಇದೊಂದು ವಿಶೇಷವಾದ ಉರುಸ್ ಆಗಿದೆ. ಹಿಂದೂಗಳು ದರ್ಗಾಕ್ಕೆ ಬಂದು ನೈವೇದ್ಯ ಸಲ್ಲಿಸುವುದು ವಿಶೇವಾಗಿದೆ.
– ಸಿರಾಜಸಾಬ್ ಹೊರಟ್ಟಿ, ಹೊಸೂರನ ಪ್ರಮುಖರು

Advertisement

Udayavani is now on Telegram. Click here to join our channel and stay updated with the latest news.

Next