Advertisement

200 ಎಕ್ರೆಗೂ ಹೆಚ್ಚು ಹಡಿಲು ಭೂಮಿ ಹಸುರಾಗಿಸಿದ ಸೋಮ ಪೂಜಾರಿ

10:22 AM Dec 23, 2019 | mahesh |

ಹೆಸರು: ಸೋಮ ಪೂಜಾರಿ ಶಿರಿಯಾರ
ಏನೇನು ಕೃಷಿ: ಭತ್ತ, ಸೌತೆ, ಕುಂಬಳ, ಗೆಣಸು, ಬದನೆ, ಮೆಣಸು, ಹೈನುಗಾರಿಕೆ
ಎಷ್ಟು ವರ್ಷದ ಅನುಭವ: 46
ಕೃಷಿ ಪ್ರದೇಶ: 4ಎಕ್ರೆ ಸ್ವಂತ, 20ಎಕ್ರೆ ಗೇಣಿಗೆ ಜಮೀನು

Advertisement

ನಾವು ಅದೆಷ್ಟು ಆಧುನಿಕಗೊಂಡರೂ ಉಣ್ಣುವ ಅನ್ನವನ್ನು ಸೃಷ್ಟಿಸಲಾರೆವು; ಅದನ್ನು ಬಿತ್ತಿ ಬೆಳೆದೇ ಆಗಬೇಕು. ಇದೇ ಹಿನ್ನೆಲೆಯಲ್ಲಿ ಉದಯವಾಣಿಯು ಕಿಸಾನ್‌ ದಿನಾಚರಣೆಯ ಸಂದರ್ಭ ರೈತರ ಸಾಧನೆಯ ಚಿತ್ರಣ ನೀಡುವ “ಕೃಷಿ ಕಥನ’ವನ್ನು ಆರಂಭಿಸಿದೆ. ಈ ಹೊಸ ಸರಣಿಯು ಇನ್ನಷ್ಟು ಮಂದಿಗೆ ಪ್ರೇರಣೆಯಾಗಲೆಂದು ಸರಕಾರದಿಂದ ಪ್ರಶಸ್ತಿ ಪುರಸ್ಕಾರಗಳಿಂದ ಗುರುತಿಸಲ್ಪಟ್ಟ ರೈತರನ್ನು ಪರಿಚಯಿಸುವ ಪ್ರಯತ್ನ.

ಕೋಟ: ಶಿರಿಯಾರ ಸಮೀಪ ಕೊಳ್ಕೆಬೈಲಿನ ಸೋಮ ಪೂಜಾರಿ ಮೂಲತಃಕೃಷಿ ಕುಟುಂಬದವರು. 7ನೇ ತರಗತಿಗೆ ಶಾಲೆ ತ್ಯಜಿಸಿದ ಇವರು 16ನೇ ವಯಸ್ಸಿಗೆ ಕೃಷಿಯತ್ತ ಮುಖಮಾಡಿದ್ದರು. ಅನಂತರ ಭತ್ತ, ತರಕಾರಿ, ಹೈನು ಗಾರಿಕೆಯಲ್ಲಿ ತೊಡಗಿಕೊಂಡರು. ಕೃಷಿ ಚಟುವಟಿಕೆ ಕ್ಷೀಣಿಸುತ್ತಿರುವ ಕಾಲಘಟ್ಟದಲ್ಲಿ ಯಾಂತ್ರೀಕೃತ ಕೃಷಿಗೆ ನವ ಉದ್ಯಮದ ಸ್ಪರ್ಶ ನೀಡಿ ಕಾಪುವಿನಿಂದ ಬೈಂದೂರುವರೆಗಿನ ಸುಮಾರು 1ಸಾವಿರ ಎಕ್ರೆ ಕೃಷಿ ಭೂಮಿಯಲ್ಲಿ ಸಮಗ್ರ ಕೃಷಿಚಟುವಟಿಕೆಯಲ್ಲಿ ತೊಡಗಿಕೊಂಡು ಸುಮಾರು 200 ಎಕ್ರೆ ಹಡಿಲು ಭೂಮಿಯನ್ನು ಹಸುರಾಗಿಸಿದ್ದಾರೆ.ಇವರ ಸಾಧನೆಯನ್ನು ಗುರುತಿಸಿ ಬ್ರಹ್ಮಾವರದ ಕೃಷಿ ಮೇಳ ಹಾಗೂ ಕೋಟ ಜಾನುವಾರು ಮೇಳದಲ್ಲಿ ಜಿಲ್ಲೆಯ ಅತ್ಯುತ್ತಮ ಯಾಂತ್ರೀಕೃತ ಪ್ರಗತಿಪರ ಕೃಷಿಕ ಪ್ರಶಸ್ತಿ, ಉತ್ತಮ ಕೃಷಿಕ ಪ್ರಶಸ್ತಿ ಜತೆಗೆ ಹತ್ತಾರು ಸಂಘ-ಸಂಸ್ಥೆಗಳ ಗೌರವಗಳು ಸಂದಿವೆ.

ಒಂದು ಸಾವಿರ ಎಕ್ರೆ ಯಾಂತ್ರೀಕೃತ ಕೃಷಿ
ಕಾರ್ಮಿಕರ ಕೊರತೆ ಮುಂತಾದ ಕಾರಣಗಳಿಂದ ಕೃಷಿ ಜಮೀನುಗಳು ಹಡಿಲು ಬೀಳುತ್ತಿರುವುದನ್ನು ಕಂಡು ಮರುಗಿದ ಪೂಜಾರಿಯವರು ರೈತನಿಗೆ ಯಾವುದೇ ಶ್ರಮವಿಲ್ಲದಂತೆ ನೇಜಿ ಬೆಳೆಯುವುದರಿಂದ ಹಿಡಿದು ಉಳುಮೆ, ನಾಟಿ, ಕಟಾವು ಮುಂತಾದ ಸಮಗ್ರ ಚಟುವಟಿಕೆಯನ್ನು ರಿಯಾಯಿತಿ ದರದಲ್ಲಿ ಮಾಡಿಕೊಟ್ಟರೆ ಕೃಷಿಯಲ್ಲಿ ಆಸಕ್ತಿ ಉಳಿಸಿಕೊಳ್ಳಬಹುದು ಎನ್ನುವ ನಿರ್ಧಾರಕ್ಕೆ ಬಂದರು. ಕೃಷಿಕರನ್ನು ಭೇಟಿಯಾಗಿ ತನ್ನ ಚಟುವಟಿಕೆ ಆರಂಭಿಸಿದರು. ಇದರ ಪರಿಣಾಮ ಇದೀಗ ಜಿಲ್ಲೆಯ ಸುಮಾರು 850ರಿಂದ 1000 ಎಕ್ರೆ ಗದ್ದೆಗಳಲ್ಲಿ ಮಾಲಕನ ಯಾವುದೇ ಶ್ರಮವಿಲ್ಲದೆ ಇವರ ನೇತೃತ್ವದಲ್ಲಿ ಕೃಷಿ ಚಟುವಟಿಕೆ ನಡೆಯುತ್ತಿದೆ ಮತ್ತು ಸುಮಾರು 200 ಎಕ್ರೆ ಹಡಿಲು ಭೂಮಿ ಹಸುರಾಗಿದೆ. ಇವರಲ್ಲಿ 30 ಜನ ಕಾರ್ಮಿಕರು ಇದ್ದು, 15ಮಂದಿ ಖಾಯಂ ನೌಕರರಂತೆ ದುಡಿಯುತ್ತಿದ್ದಾರೆ. 5ಟ್ರ್ಯಾಕ್ಟರ್‌, 2 ಪವರ್‌ ಟಿಲ್ಲರ್‌ಗಳನ್ನು ಹೊಂದಿದ್ದಾರೆ.

ಹೊಸದಾಗಿ ಕೃಷಿಕಡೆಗೆ ಮುಖ ಮಾಡುವ ಯುವಕರು ಹಾಗೂ ಅನುಭವದ ಕೊರತೆ ಇರುವವರಿಗೆ ಫೋನ್‌ ಮೂಲಕ ಹಾಗೂ ನೇರವಾಗಿ ಜಮೀನಿಗೆ ಭೇಟಿ ನೀಡಿ ಕೃಷಿಯ ಪ್ರತಿಯೊಂದು ಅಂಗದ ಕುರಿತು ಇವರು ಮಾಹಿತಿ ನೀಡುತ್ತಾರೆ. ಇದೀಗ 62ರ ಹರೆಯದಲ್ಲಿರುವ ಇವರ ಕೃಷಿ ಚಟುವಟಿಕೆಯ ಚುರುಕುತನ ಎನ್ನುವುದು ಹಲವರನ್ನು ಕೃಷಿ ಕಡೆಗೆ ಸೆಳೆಯುವಂತೆ ಮಾಡಿದೆ.ಸರಕಾರದ ಸಬ್ಸಿಡಿ ದರದಲ್ಲಿ ಸಿಗುವ ಯಂತ್ರಗಳನ್ನು ಖರೀದಿಸಿ ದರೆ ವರ್ಷದ ಎರಡು-ಮೂರು ತಿಂಗಳು ಹೊರತುಪಡಿಸಿದರೆ ಮಿಕ್ಕೆಲ್ಲ ಸಮಯದಲ್ಲಿ ಕೆಲಸವಿರುತ್ತದೆ ಮತ್ತು ತಿಂಗಳಿಗೆ ಲಕ್ಷಾಂತರ ಆದಾಯ ಗಳಿಸಬಹುದು ಜತೆಗೆ ಕೃಷಿಭೂಮಿ ಹಡಿಲು ಬೀಳುವುದನ್ನು ತಪ್ಪಿಸಬಹುದು. ಯುವ ಜನಾಂಗ ಈ ನಿಟ್ಟಿನಲ್ಲಿ ಗಮನಹರಿಸಬೇಕು ಎಂಬುದು ಇವರ ಕಿವಿಮಾತಾಗಿದೆ.

Advertisement

ಕೃಷಿಯ ಜತೆ ತೋಟಗಾರಿಕೆ
ಸೋಮ ಪೂಜಾರಿಯವರು ತೋಟಗಾರಿಕೆಯಲ್ಲಿ ಹೊಸ ಹೊಸ ಪ್ರಯೋಗಗಳನ್ನು ನಡೆಸಿದ್ದಾರೆ. ಸೌತೆ, ಕುಂಬಳ, ಗೆಣಸು, ಬದನೆ, ಮೆಣಸನ್ನು ಬೆಳೆಸಿದ್ದಾರೆ. ಟೊಮೇಟೋ, ಆಲುಗಡ್ಡೆ, ಬೀನ್ಸ್‌ ಬೆಳೆಯಲು ಪ್ರಯತ್ನವನ್ನೂ ಮಾಡಿದ್ದು, ಆದರೆ ಇಲ್ಲಿನ ಹವಾಮಾನಕ್ಕೆ ಒಗ್ಗದ ಕಾರಣ ಅದನ್ನು ಕೈಬಿಟ್ಟಿದ್ದಾರೆ.

ಗೋಮೂತ್ರ ಔಷ ಧವಾಗಿ ಗಿಡಗಳಿಗೆ ಸಿಂಪಡಿಸಿ ಯಶಸ್ಸನ್ನು ಕಂಡಿದ್ದಾರೆ. ಹೆಚ್ಚಾಗಿ ಹಟ್ಟಿಗೊಬ್ಬರ, ಸಾವಯವ ಬಳಸಿ ಕೃಷಿ ಮಾಡುತ್ತಾರೆ. ಅಗತ್ಯವಿದ್ದಲ್ಲಿ ಮಾತ್ರ ರಾಸಾಯನಿಕ ಗೊಬ್ಬರಗಳನ್ನು ಬಳಸುತ್ತಾರೆ.

ಕೃಷಿ ಉದ್ಯಮಕ್ಕೆ ಉತ್ತಮ ಭವಿಷ್ಯ
ಬೇರೆ ಜಿಲ್ಲೆಗೆ ಹೋಲಿಸಿದರೆ ಉಡುಪಿ, ದ.ಕ.ದಲ್ಲಿ ಕೃಷಿಯನ್ನು ಉದ್ಯಮವಾಗಿ ಸ್ವೀಕರಿಸುವ ಸಂಖ್ಯೆ ಕಡಿಮೆ. ಹೀಗಾಗಿ ಅನ್ಯ ಜಿಲ್ಲೆಗಳ ಯಂತ್ರೋಪಕರಣಗಳು ಇಲ್ಲಿಗೆ ಬರುತ್ತವೆೆ. ಆದರೆ ಉಭಯ ಜಿಲ್ಲೆಯಲ್ಲಿ ಕೃಷಿ ಕ್ಷೇತ್ರ ಅತ್ಯಂತ ಯಶಸ್ವಿ ಉದ್ಯಮವಾಗಿ ಬೆಳೆಯಲು ಅವಕಾಶವಿದೆ.

ಲಾಭ ಖಂಡಿತಾ ಇದೆ
ಕೃಷಿಯಲ್ಲಿ ಶ್ರಮವಹಿಸಿ, ಕನಿಷ್ಠ ಮನೆಯ ಓರ್ವ ಸದಸ್ಯರಾದವರು ಸಂಪೂರ್ಣವಾಗಿ ತೊಡಗಿಸಿಕೊಂಡು ದುಡಿದರೆ ಖಂಡಿತಾ ಲಾಭವಿದೆ. ಭವಿಷ್ಯದಲ್ಲಿ ಕೃಷಿ ಉದ್ಯಮಕ್ಕೆ ಉತ್ತಮ ಭವಿಷ್ಯವಿದೆ ಹಾಗೂ ಲಕ್ಷಾಂತರ ಆದಾಯ ಗಳಿಸಲು ಸಾಧ್ಯವಿದೆ ಎನ್ನುವುದಕ್ಕೆ ನಾನೇ ಸಾಕ್ಷಿ. ನನ್ನ 24ಎಕ್ರೆ ಕೃಷಿಭೂಮಿಯಲ್ಲಿ ವರ್ಷಕ್ಕೆ 250ಕ್ಕೂ ಹೆಚ್ಚು ಕ್ವಿಂಟಾಲ್‌ ಭತ್ತ ಬೆಳೆಯ್ತುತೇನೆ. ಐದಾರು ಲೋಡ್‌ ತರಕಾರಿ ಇಳುವರಿ ಬರುತ್ತದೆ. ಕೃಷಿಯಲ್ಲಿ ಯಶಸ್ಸಿಗೆ ಅಧಿಕಾರಿಗಳೊಂದಿಗೆ ಸಂಪರ್ಕ ಅತೀ ಅಗತ್ಯ.ಶಂಕರ ಶೇರಿಗಾರ್‌ ಅಂತಹ ಉತ್ತಮ ಅಧಿಕಾರಿಗಳ ಮಾರ್ಗದರ್ಶನ ನನ್ನ ಈ ಮಟ್ಟಕ್ಕೆ ಬೆಳೆಸಿದೆ. ಯಾರೂ ಕೂಡ ಭೂಮಿಯನ್ನು ಹಡಿಲು ಹಾಕಬೇಡಿ. ಭತ್ತ ಕಷ್ಟವಾದರೆ ಪರ್ಯಾಯ ಬೆಳೆಗಳನ್ನು ಬೆಳೆಯುವ ಬಗ್ಗೆ ಲಕ್ಷವಹಿಸಿ.
ಸೋಮ ಪೂಜಾರಿ, ಪ್ರಗತಿಪರ ಕೃಷಿಕ

ರಾಜೇಶ್‌ ಗಾಣಿಗ ಅಅಚ್ಲಾಡಿ 

Advertisement

Udayavani is now on Telegram. Click here to join our channel and stay updated with the latest news.

Next