Advertisement

ಮೂಲ ಸೌಕರ್ಯವಿಲ್ಲದ ಕ್ರೀಡಾಂಗಣ!

12:41 PM Sep 17, 2019 | Suhan S |

ಶಿರಸಿ: ಉತ್ತರ ಕನ್ನಡ ಜಿಲ್ಲೆಯ ಜಿಲ್ಲಾ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಅಧೀನದಲ್ಲಿರುವ ಕ್ರೀಡಾಂಗಣಗಳಲ್ಲಿ ಕ್ರೀಡಾಪಟುಗಳು ಮೂಲ ಸೌಕರ್ಯಗಳಿಂದ ವಂಚಿತರಾಗಿ ನಿರ್ವಣೆಯಲ್ಲಿನ ಲೋಪದಿಂದ ಕ್ರೀಡಾಂಗಣಗಳು ಅಸ್ತಿತ್ವವನ್ನು ಕಳೆದುಕೊಳ್ಳುತ್ತಿರುವುದಕ್ಕೆ ಸ್ಪಂದನ ನ್ಪೋರ್ಟ್ಸ್ ಅಕಾಡೆಮಿ ಜಿಲ್ಲೆಯಲ್ಲಿ ಸುಸಜ್ಜಿತ ಮತ್ತು ವ್ಯವಸ್ಥಿತ ಕ್ರೀಡಾಂಗಣಕ್ಕೆ ಸರಕಾರಕ್ಕೆ ಆಗ್ರಹಿಸಿ ಉಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿ ಕಾನೂನಾತ್ಮಕ ಹೋರಾಟ ಪ್ರಕ್ರಿಯೆ ಪ್ರಾರಂಭಿಸುತ್ತಿದೆ ಎಂದು ಅಕಾಡೆಮಿ ಅಧ್ಯಕ್ಷ ಎ.ರವೀಂದ್ರ ನಾಯ್ಕ ತಿಳಿಸಿದ್ದಾರೆ.

Advertisement

ಜಿಲ್ಲೆಯ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಅಧೀನದಲ್ಲಿರುವ ಶಿರಸಿ, ಯಲ್ಲಾಪುರ, ಹಳಿಯಾಳ, ಮುಂಡಗೋಡ, ಜೋಯಿಡಾ, ಭಟ್ಕಳ, ಅಂಕೋಲಾ ಮುಂತಾದ ತಾಲೂಕಿನ ಕ್ರೀಡಾಂಗಣಗಳು ಅವ್ಯವಸ್ಥೆ, ಅಸಮರ್ಪಕ, ಅವೈಜ್ಞಾನಿಕ, ಸಮತಟ್ಟು ಇಲ್ಲದ, ಕಳಪೆ ಹಾಗೂ ಸೂಕ್ತ ಕ್ರೀಡಾ ಸಾಮಗ್ರಿಗಳ ಕೊರತೆಯಿಂದ ಬಳಲುತ್ತಿದ್ದು, ಅನೇಕ ಕ್ರೀಡಾಂಗಣಕ್ಕೆ ಶೌಚಾಲಯದ ಸೌಲಭ್ಯ ಕೂಡ ಇಲ್ಲದಿರುವುದು ದುರದೃಷ್ಟಕರ. ಇಲಾಖೆಯು ಎಲ್ಲಾ ಕ್ರೀಡಾಂಗಣಗಳ ನಿರ್ವಹಣೆಯಲ್ಲಿ ಸಂಪೂರ್ಣ ವೈಫಲ್ಯವಾಗಿದ್ದು ಒಳಚರಂಡಿ, ಕ್ರೀಡಾಂಗಣ ಸಮತಟ್ಟು ಮಾಡುವಿಕೆ, ಮೈದಾನದ ಸುತ್ತಲೂ ತಡೆಗೋಡೆ, ಪುರುಷ ಮತ್ತು ಮಹಿಳಾ ಕ್ರೀಡಾಪಟುಗಳಿಗೆ ಬಟ್ಟೆ ಬದಲಿಸಲು ಕೊಠಡಿ ಇಲ್ಲದಿರುವಿಕೆ ಖೇದಕರ ಸಂಗತಿಯಾಗಿದೆ. ಶಿರಸಿ ಹೊರತಾಗಿ ಇನ್ನುಳಿದ ಯಾವುದೇ ಕ್ರೀಡಾಂಗಣದಲ್ಲಿಯೂ ವ್ಯಾಯಾಮ ಶಾಲೆ ಇಲ್ಲದಿರುವುದು ದುರದೃಷ್ಟಕರ. ಇಂಥ ಅವ್ಯವಸ್ಥೆಗಳಿಂದ ಕೆಲವೊಂದು ಕ್ರೀಡಾಂಗಣದಲ್ಲಿ ಕ್ರೀಡಾಕೂಟ ಜರುಗಿಸಲು ಅಸಾಧ್ಯವಾಗಿರುವುದು ಕಂಡು ಬಂದಿದೆ. ಅಪಾಯಕಾರಿ ಕ್ರೀಡಾಂಗಣದಲ್ಲಿ ಅನೇಕ ಕ್ರೀಡಾಪಟುಗಳು ಗಾಯಗೊಂಡ ನಿದರ್ಶನಗಳು ಸಾಕಷ್ಟಿವೆ.

ಅಸಮರ್ಪಕ ಕ್ರೀಡಾಂಗಣ ಜಿಲ್ಲೆಯಲ್ಲಿರುವುದರಿಂದ ರಾಜ್ಯಮಟ್ಟದ ಯಾವುದೇ ಕ್ರೀಡಾಕೂಟಗಳು ಜರುಗುತ್ತಿಲ್ಲ ಕ್ರೀಡಾಪಟುಗಳಿಗೆ ಪೂರಕ ವಾತಾವರಣದ ಕೊರತೆಯಿಂದ ರಾಜ್ಯ, ರಾಷ್ಟ್ರ ಮಟ್ಟದ ಕ್ರೀಡಾಪಟುಗಳ ಬೆಳವಣಿಗೆ ಕುಂಠಿತವಾಗಿದೆ. ಕ್ರೀಡಾ ಚಟುವಟಿಕೆಗೆ ಪೂರಕವಾದ ಯೋಗ್ಯ ಕ್ರೀಡಾಂಗಣ ಹಾಗೂ ಯುಕ್ತ ತರಬೇತುದಾರರ ಕೊರತೆಯಿಂದ ಜಿಲ್ಲೆಯ ಉದಯೋನ್ಮುಖ ಕ್ರೀಡಾಪಟುಗಳು ಗುರಿ ಸಾಧಿಸುವಲ್ಲಿ ವಂಚಿತರಾಗಿದ್ದಾರೆ ಎಂದು ತಿಳಿಸಿದ್ದಾರೆ.

ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಅಧೀನದಲ್ಲಿರುವ ಕ್ರೀಡಾಂಗಣದಲ್ಲಿ ಕಾರವಾರದಲ್ಲಿ ಅಥ್ಲೆಟಿಕ್ಸ್‌ ಮತ್ತು ಮುಂಡಗೋಡದಲ್ಲಿ ವಾಲಿಬಾಲ್, ಹಳಿಯಾಳದಲ್ಲಿ ಕುಸ್ತಿ ತರಬೇತುದಾರರನ್ನು ಬಿಟ್ಟರೆ ಜಿಲ್ಲಾ ಕ್ರೀಡಾಂಗಣವೆಂದು ಗುರುತಿಸಲ್ಪಟ್ಟ ಶಿರಸಿಯನ್ನು ಸೇರಿಸಿ ಇನ್ನುಳಿದ ತಾಲೂಕುಗಳಲ್ಲಿ ಪರಿಣಿತ ಖಾಯಂ ಅಥವಾ ಹಂಗಾಮಿ ತರಬೇತುದಾರರು ಇಲ್ಲದಿರುವುದು ಶೋಚನೀಯ ಸಂಗತಿ ಎಂದು ರವೀಂದ್ರ ನಾಯ್ಕ ತಿಳಿಸಿದ್ದಾರೆ.

ವಿವಿಧ ವಿಭಾಗದ ವಯೋಮಿತಿ ಬಾಲಕ-ಬಾಲಕಿಯರ ಮತ್ತು ಪುರುಷ-ಮಹಿಳೆಯರ ಕ್ರೀಡಾ ವಿಭಾಗದ ವಿಜೇತರ ಅಂಕಿ-ಅಂಶ ರಾಜ್ಯದಲ್ಲಿನ ಉಳಿದ ಜಿಲ್ಲೆಯ ಕ್ರೀಡಾ ಪ್ರಗತಿಯನ್ನು ಉ.ಕ. ಜಿಲ್ಲೆಗೆ ತುಲನಾತ್ಮಕವಾಗಿ ನೋಡಿದಾಗ ಇದು ಕೊನೆಯ ಸ್ಥಾನದಲ್ಲಿದೆ.

Advertisement

ಜಿಲ್ಲೆಯ ಸಶಕ್ತ, ಬುಡಕಟ್ಟು ಮತ್ತು ದೈಹಿಕ ಸಾಮರ್ಥ್ಯದ ಕ್ರೀಡಾಪಟುಗಳಿದ್ದರೂ ಕ್ರೀಡೆಗೆ ಪೂರಕವಾದ ಕ್ರೀಡಾಂಗಣ, ಪ್ರೋತ್ಸಾಹ, ತಂತ್ರಜ್ಞಾನ, ಕುಶಲತೆ ತರಬೇತಿ ಇಲ್ಲದಿರುವುದು ಹಿನ್ನೆಡೆಗೆ ಕಾರಣವಾಗಿದೆ. ಇಲ್ಲಿ ರಾಜ್ಯಮಟ್ಟದ ಕ್ರೀಡಾಕೂಟ ಜರುಗಿಸದೇ ಇರಲು ಕಳಪೆ ಮಟ್ಟದ ಕ್ರೀಡಾಂಗಣವೇ ಕಾರಣವಾಗಿದೆ.

ಪ್ರತಿ ತಾಲೂಕಿನಲ್ಲಿಯೂ ಪ್ರತಿವರ್ಷ ಪ್ರಾಥಮಿಕ, ಪ್ರೌಢ, ಪಪೂ, ಮಹಾವಿದ್ಯಾಲಯ, ದಸರಾ, ಪೈಕಾ ಕ್ರೀಡಾಕೂಟಗಳಲ್ಲಿ ಪ್ರತಿ ತಾಲೂಕಿನಲ್ಲಿಯೂ ಪ್ರತಿ ಶೈಕ್ಷಣಿಕ ವರ್ಷದಲ್ಲಿ 7 ರಿಂದ 8 ಸಾವಿರ ವಿದ್ಯಾರ್ಥಿಗಳು ಕ್ರೀಡಾ ಚಟುವಟಿಕೆಯಲ್ಲಿ ನೇರವಾಗಿ ಭಾಗವಹಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರತಿ ತಾಲೂಕು ಕೇಂದ್ರದಲ್ಲಿ ಸುಸಜ್ಜಿತ 400 ಮೀ. ಓಟ ಪಥದ ಪರಿವ್ಯಾಪ್ತಿಯ ಕ್ರೀಡಾಂಗಣದ ಅವಶ್ಯಕತೆಗೆ ಕಾನೂನಾತ್ಮಕ ಹೋರಾಟ ಹಮ್ಮಿಕೊಳ್ಳುವ ಉದ್ದೇಶದಿಂದ ಹಾಗೂ ಕ್ರೀಡಾ ಪೂರಕ ಚಟುವಟಿಕೆಗೆ ಸುಸಜ್ಜಿತ ಕ್ರೀಡಾಂಗಣದ ಅವಶ್ಯಕತೆ ಇರುವುದನ್ನು ಮನಗಂಡು ಪ್ರತಿ ತಾಲೂಕಿನಲ್ಲಿಯೂ ಸುಸಜ್ಜಿತ ಕ್ರೀಡಾಂಗಣ ಹಾಗೂ ಜಿಲ್ಲೆಗೊಂದು ಸಿಂಥೆಟಿಕ್‌ ಅಥ್ಲೆಟಿಕ್‌ ಕ್ರೀಡಾಂಗಣವನ್ನು ಸರ್ಕಾರ ಒದಗಿಸಬೇಕಿದೆ. ಈ ನಿಟ್ಟಿನಲ್ಲಿ ಕಾನೂನು ಹೋರಾಟ ಆರಂಭಿಸಲಾಗುತ್ತಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next