Advertisement

Daredevil mustafa; ʻಡೇರ್‌ಡೆವಿಲ್‌ ಮುಸ್ತಾಫಾʼನ ಸುತ್ತ ಒಂದು ಸುತ್ತು…

03:58 PM Jun 17, 2023 | Team Udayavani |

ಪೂರ್ಣಚಂದ್ರ ತೇಜಸ್ವಿಯವರ ಪುಸ್ತಕಗಳನ್ನು ಓದುವುದೇ ಒಂದು ರೀತಿಯಲ್ಲಿ ಸಿನೆಮಾ ನೋಡಿದಂತೆ. ಅದು ಸಣ್ಣ ಕಥೆಗಳೇ ಆಗಿರಬಹುದು, ಕಾದಂಬರಿ, ಅನುವಾದಗಳೇ ಇರಬಹುದು. ಎಲ್ಲವನ್ನೂ ಕಣ್ಣಿಗೆ ಕಟ್ಟುವಂತೆ ನಿರೂಪಿಸುವುದೇ ʻಪೂಚಂತೇʼ ವೈಶಿಷ್ಟ್ಯ.

Advertisement

ʻಡೇರ್‌ಡೆವಿಲ್‌ ಮುಸ್ತಾಫಾʼ ತೇಜಸ್ವಿಯವರ ಅಗ್ರಪಂಕ್ತಿಯಲ್ಲಿ ನಿಲ್ಲುವ ಸಣ್ಣ ಕಥೆಗಳ ಪೈಕಿ ಒಂದು. ಅದೇ ಕಥೆಯನ್ನು ಯಥಾವತ್ತಾಗಿ ಪರದೆ ಮೇಲೆ ತಂದ ಕೀರ್ತಿ ನಿರ್ದೇಶಕ ಶಶಾಂಕ್‌ ಸೋಗಲ್‌ ಅವರಿಗೆ ಸಲ್ಲುತ್ತದೆ. ಮೇ 19 ರಂದು ತೆರೆಕಂಡಿದ್ದ ʻಡೇರ್‌ಡೆವಿಲ್‌ ಮುಸ್ತಾಫಾʼ ಚಿತ್ರ ನಿರೀಕ್ಷೆಗೂ ಮೀರಿದ ಪ್ರಶಂಸೆ ಗಿಟ್ಟಿಸಿಕೊಂಡು ಸಿನೆಮಾ ಪ್ರಿಯರಿಗೆ, ತೇಜಸ್ವಿ ಅಭಿಮಾನಿಗಳಿಗೆ ವಿಮರ್ಶೆಯ ವಸ್ತುವಾಗಿ ಬದಲಾಯಿತು.

ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನಗಳನ್ನು ಪೂರೈಸುತ್ತಾ ಬಂದಿರುವ ಈ ಹೊಸಬರ ಚಿತ್ರಕ್ಕೆ ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತೆರಿಗೆ ವಿನಾಯ್ತಿ ನೀಡಿದ್ದು ಈ ಕಾರಣದಿಂದಾಗಿ ಚಿತ್ರ ಮತ್ತೆ ಮುನ್ನೆಲೆಗೆ  ಬಂದಿದೆ. ಚಿತ್ರತಂಡದ ಮನವಿಯನ್ನು ಸಿಎಂ ಸಿದ್ದರಾಮಯ್ಯ ಪುರಸ್ಕರಿಸಿದ್ದು ಸಿನಿಪ್ರಿಯರನ್ನು ಫುಲ್‌ ಖುಷ್‌ ಮಾಡಿದೆ.

ಈ ಕುರಿತು ಟ್ವೀಟ್‌ ಮಾಡಿದ್ದ ಸಿದ್ದರಾಮಯ್ಯ, “ತಮ್ಮ ಬರಹ ಮತ್ತು ಬದುಕಿನ ಮೂಲಕ ಒಂದಿಡೀ ತಲೆಮಾರಿನ ಜನರನ್ನು ಪ್ರಭಾವಿಸಿದ ಹಾಗೂ ಪ್ರಭಾವಿಸುತ್ತಲೇ ಇರುವ ಕನ್ನಡದ ಜನಪ್ರಿಯ ಸಾಹಿತಿ ಕೆ.ಪಿ. ಪೂರ್ಣಚಂದ್ರ ತೇಜಸ್ವಿಯವರ ಕತೆಯಾಧಾರಿತ ‘ಡೇರ್ ಡೆವಿಲ್ ಮುಸ್ತಫಾ’ ಸಿನಿಮಾಗೆ ತೆರಿಗೆ ವಿನಾಯಿತಿ ನೀಡಿ ಆದೇಶಿಸಿದ್ದೇನೆ. ಇಂದಿನ ಕಾಲ ಘಟ್ಟಕ್ಕೆ ಬೇಕಿರುವುದು ಸೌಹಾರ್ದತೆ, ಪ್ರೀತಿ, ವಿಶ್ವಾಸಗಳ ಬುನಾದಿಯ ಮೇಲೆ ಸಮಾಜ ಕಟ್ಟುವ ಮನಸುಗಳು. ಇಂಥದ್ದೊಂದು ಕಾರ್ಯಕ್ಕೆ ಕೈ ಹಾಕಿದ ಚಿತ್ರತಂಡಕ್ಕೆ ಅಭಿನಂದನೆಗಳು. ದ್ವೇಷ ಅಳಿಸಿ, ಪ್ರೀತಿ ಹಂಚುವ ಜನರಿಗೆ ನಮ್ಮ, ನಿಮ್ಮೆಲ್ಲರ ಬೆಂಬಲ ಇರಲಿ” ಎಂದು ಶುಭಹಾರೈಸಿದ್ದರು.

Advertisement

ʻಸಿನಿಮಾಮರʼ ಬ್ಯಾನರ್‌ ಅಡಿಯಲ್ಲಿ ನಿರ್ಮಾಣವಾಗಿರುವ ಈ ಚಿತ್ರವನ್ನು ಶಶಾಂಕ್‌ ಸೋಗಲ್‌ ಅವರು ನಿರ್ದೇಶಿಸಿದ್ದಾರೆ. ಡಾಲಿ ಧನಂಜಯ್‌, ಶಶಾಂಕ್‌ ಸೋಗಲ್‌, ಸಿರಿಮನೆ ಸಂಪತ್‌ ಅವರ ಸಾಹಿತ್ಯ ಈ ಚಿತ್ರಕ್ಕಿದ್ದು ನವನೀತ್‌ ಶ್ಯಾಮ್‌ ಅವರ ಸಂಗೀತವಿದೆ. ಪೂರ್ಣಚಂದ್ರ ತೇಜಸ್ವಿಯವರ ʻಅಬಚೂರಿನ ಪೋಸ್ಟಾಪೀಸುʼ ಪುಸ್ತಕದಲ್ಲಿನ ಕಥೆಯನ್ನೇ ಚಿತ್ರವನ್ನಾಗಿ ಪರಿವರ್ತಿಸಿರುವ ಕಾರಣ ಪುಸ್ತಕದಲ್ಲಿನ ಅಂಶಗಳು ಅಂತೆಯೇ ಸಿನೆಮಾವಾಗಿ ಬದಲಾದಂತಿದೆ. ಹಾಗಾಗಿ ಪುಸ್ತಕ ಓದಿದವರಿಗೆ ಕೆಲವೊಂದಷ್ಟು ದೃಶ್ಯಗಳನ್ನು ಹೊರತುಪಡಿಸಿದರೆ ಹೊಸದೇನೂ ಇಲ್ಲ ಅನ್ನಿಸಿಬಿಡಬಹುದು.

ಪೂರ್ತಿಯಾಗಿ ಹಿಂದೂ ವಿದ್ಯಾರ್ಥಿಗಳಿಂದಲೇ ತುಂಬಿದ್ದ ಕಾಲೇಜಿಗೆ ಮುಸ್ಲಿಂ ವಿದ್ಯಾರ್ಥಿಯ ಪ್ರವೇಶವಾಗುತ್ತದೆ. ಆತನೇ ʻಮುಸ್ತಾಫಾʼ. ಹಿಂದೂ ಸಮಾಜದವರೇ ಇರುವ ಊರಿನಲ್ಲಿ ಮುಸ್ಲಿಂ ಸಮಾಜದವರ ಮೇಲಿರುವ ಊಹಾಪೋಹಗಳು, ಕಲ್ಪನೆಗಳ ಬಗ್ಗೆಯೂ ಚಿತ್ರದಲ್ಲಿ ತೋರಿಸಲಾಗಿದೆ. ಹೀಗಾಗಿ ಚಿತ್ರ ಮುಸ್ತಾಫಾ, ಆತನ ತರಗತಿಯಲ್ಲಿದ್ದ ಅಯ್ಯಂಗಾರಿ ಮತ್ತು ಆತನ ಸ್ನೇಹಿತರ ಸುತ್ತವೇ ಸುತ್ತುತ್ತದೆ.

ಮುಸ್ತಾಫಾನ ಪಾತ್ರದಲ್ಲಿ ಶಿಶಿರ್‌ ಹಾಗೂ ಅಯ್ಯಂಗಾರಿ ಪಾತ್ರದಲ್ಲಿ ಆದಿತ್ಯ ಪಾತ್ರಗಳಿಗೆ ಅದ್ಭುತವಾಗಿ ಜೀವ ತುಂಬಿದ್ದಾರೆ. ಕನ್ನಡ ಪ್ರಾಧ್ಯಾಪಕರ ಪಾತ್ರದಲ್ಲಿ ನಟ ನಾಗಭೂಷಣ್‌ ಕಾಣಿಸಿಕೊಂಡಿದ್ದು ಅವರ ನಟನೆ ಸಹಜವಾಗಿಯೇ ನಗು ತರಿಸುತ್ತದೆ. ದೈಹಿಕ ಶಿಕ್ಷಣ ಶಿಕ್ಷಕರಾಗಿ ವಿಜಯ್‌ ಶೋಭರಾಜ್‌ ಉತ್ತಮವಾಗಿ ಪಾತ್ರ ನಿರ್ವಹಣೆ ಮಾಡಿದ್ದಾರೆ. ಮಂಡ್ಯ ರಮೇಶ್‌, ಉಮೇಶ್‌ ಅವರಂಥಹಾ ಹಿರಿಯರೂ ಚಿತ್ರದಲ್ಲಿದ್ದಾರೆ.

ಚಿತ್ರದ ಛಾಯಾಗ್ರಹಣವೂ ಉತ್ತಮವಾಗಿದ್ದು ಹಾಡುಗಳು ಉತ್ತಮವಾಗಿ ಮೂಡಿಬಂದಿವೆ. ಚಿತ್ರದ ಎರಡನೇ ಭಾಗದಲ್ಲಿ ಕೆಲವು ದೃಶ್ಯಗಳಿಗೆ ಕತ್ತರಿ ಹಾಕಿ ಸಿನೆಮಾದ ಅವಧಿಯನ್ನು ಕಡಿಮೆ ಮಾಡಲೂಬಹುದಿತ್ತು.

ಏನೇ ಆದರೂ ಹೊಸಬರ, ಯುವ ಮನಸ್ಸುಗಳ ಚಿತ್ರಕ್ಕೆ ಡಾಲಿ ಧನಂಜಯ್‌, ಮಂಡ್ಯ ರಮೇಶ್‌ ಅವರಂಥ ಸ್ಟಾರ್‌ ಕಲಾವಿದರ ಪ್ರೋತ್ಸಾಹ ಸಿಕ್ಕಿದ್ದು ಚಿತ್ರಕ್ಕೆ ಬಲ ತುಂಬಿದೆ. ತೇಜಸ್ವಿಯವರಂಥ ಅಪೂರ್ವ ವ್ಯಕ್ತಿಯ ಕಥೆಗೆ ತಕ್ಕಮಟ್ಟಿಗೆ ನ್ಯಾಯ ಒದಗಿಸುವ ಸಾಹಸವನ್ನು ಚಿತ್ರತಂಡ ಮಾಡಿದ್ದು, ಇದೀಗ ಚಿತ್ರಕ್ಕೆ ಸರ್ಕಾರದ ವತಿಯಿಂದ ತೆರಿಗೆ ವಿನಾಯ್ತಿ ಸಿಕ್ಕಿದ್ದು ದೊಡ್ಡ ಶಕ್ತಿಯನ್ನೇ ತಂದುಕೊಟ್ಟಿದೆ. ಇದೊಂದು ಪರಿಪೂರ್ಣ ಚಿತ್ರ ಎನ್ನುವುದಕ್ಕೂ ಮಿಗಿಲಾಗಿ ಇದೊಂದು ಅದ್ಭುತ ಪ್ರಯತ್ನ ಎಂದರೂ ತಪ್ಪಲ್ಲ.

ಅದರ ಜೊತೆಗೆ ʻಡೇರ್‌ ಡೆವಿಲ್‌ ಮುಸ್ತಾಫಾʼ ಸಿನೆಮಾ ಒಟಿಟಿ ಅಂಗಳಕ್ಕೂ ಕಾಲಿಟ್ಟಿದ್ದು ಜಗದಗಲ ತೇಜಸ್ವಿಯ ಕಥೆಯನ್ನು ತಲುಪಿಸುವುದಕ್ಕೆ ತಯಾರಾಗಿದೆ.

~ ಪ್ರಣವ್‌ ಶಂಕರ್‌

Advertisement

Udayavani is now on Telegram. Click here to join our channel and stay updated with the latest news.

Next