Advertisement

ಗ್ರಾಮೀಣ ಪ್ರದೇಶದ ಜನರಿಗೆ ಅಕ್ಷರಾಭ್ಯಾಸ ಕಲಿಸಿದ ಶಾಲೆ

09:47 AM Nov 11, 2019 | mahesh |

19ನೆಯ ಶತಮಾನದ ಉತ್ತರಾರ್ಧದಲ್ಲಿ ಬ್ರಿಟಿಷ್‌ ಆಡಳಿತದಡಿ, ಊರ ಹಿರಿಯರ ಮುತುವರ್ಜಿಯಲ್ಲಿ ಸ್ಥಾಪನೆಗೊಂಡು ಈಗಲೂ ವಿದ್ಯೆಯ ಬೆಳಕನ್ನು ಪಸರಿಸುತ್ತಿರುವ ಹಲವು ಸರಕಾರಿ ಶಾಲೆಗಳು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿವೆ. ಈಗಿನ ಆಂಗ್ಲ ಮಾಧ್ಯಮ ಶಿಕ್ಷಣದ ಆಕರ್ಷಣೆಯ ನಡುವೆ ಈ ಶಾಲೆಗಳು ಸುತ್ತಮುತ್ತಲಿನ ಊರುಗಳಿಗೆ ಅಕ್ಷರಶಃ ಜ್ಞಾನ ದೇಗುಲಗಳೇ ಆಗಿವೆ. ಇಂತಹ ಶತಮಾನದ ಹಿರಿಮೆಯ ಕನ್ನಡ ಮಾಧ್ಯಮ ಸರಕಾರಿ ಶಾಲೆಗಳನ್ನು ಗುರುತಿಸಿ ಪರಿಚಯಿಸುವ ಪ್ರಯತ್ನ ನಮ್ಮದು.

Advertisement

1900 ಶಾಲೆ ಆರಂಭ
ಸ್ವಾತಂತ್ರ್ಯ ಹೋರಾಟ ಗಾರರಿಂದ ಶಾಲೆ 

ಶಿರ್ವ: ಪಡುಬೆಳ್ಳೆ ಸರಕಾರಿ ಹಿ.ಪ್ರಾ.ಶಾಲೆ ಪಡುಬೆಳ್ಳೆಯಿಂದ ಸುಮಾರು 7-8 ಕಿ.ಮಿ.ವ್ಯಾಪ್ತಿಯ ಇನ್ನಂಜೆ, ಕುರ್ಕಾಲು, ಮೂಡುಬೆಳ್ಳೆ, ಕಟ್ಟಿಂಗೇರಿ,ಮಣಿಪುರದ ಗ್ರಾಮೀಣ ಪ್ರದೇಶದ ಜನರಿಗೆ ಅಕ್ಷರಾಭ್ಯಾಸ ಕಲಿಸಿದ 119 ವರ್ಷ ಇತಿಹಾಸವಿರುವ ಶಾಲೆ.  ಬೆಳ್ಳೆ ಶೆಣೈ ಕುಟುಂಬದ ಹಿರಿಯರಾದ ಸದಾನಂದ ಶೆಣೈ ಅವರ ಪ್ರಕಾರ ಸುಮಾರು 1900ರಲ್ಲಿ ಬೆಳ್ಳೆಯಂಗಡಿ ಶೆಣೈ ಕುಟುಂಬದ ಸ್ವಾತಂತ್ರ್ಯ ಹೋರಾಟಗಾರ  ದಿ|ನರಸಿಂಹ ಶ್ಯಾನುಭಾಗ್‌ ಅವರಿಂದ ಸ್ಥಾಪನೆಗೊಂಡಿದೆ.

ಬೈಹುಲ್ಲಿನ ಛಾವಣಿ ಮತ್ತು ಮಣ್ಣಿನ ಗೋಡೆಯೊಂದಿಗೆ   4ನೇ ತರಗತಿ ಯವರೆಗಿನ ಕಿ. ಪ್ರಾ. ಶಾಲೆಯಾಗಿ ಪ್ರಾರಂಭ ಗೊಂಡು ಆರಂಭದಲ್ಲಿ ಬೆರಳೆಣಿಕೆಯ ವಿದ್ಯಾರ್ಥಿಗಳೊಂದಿಗೆ  2 ಶಿಕ್ಷಕರುಇದ್ದರು. ಸಂಖ್ಯೆ ಹೆಚ್ಚಾದಾಗ ಊರಿನವರ ಬೇಡಿಕೆಯಂತೆ ಮುಂದೆ ಹಂತ ಹಂತವಾಗಿ  7ನೇ ತರಗತಿಯವರೆಗೆ ಮಂಜೂರಾತಿ ದೊರಕಿತು.

ಪ್ರಸ್ತುತ 47 ವಿದ್ಯಾರ್ಥಿಗಳು
ಪ್ರಸ್ತುತ ಶಾಲೆಯಲ್ಲಿ 47 ವಿದ್ಯಾರ್ಥಿಗಳಿದ್ದು 3 ಶಿಕ್ಷಕರು,ಓರ್ವ ಅತಿಥಿ ಶಿಕ್ಷಕ ಮತ್ತು ಓರ್ವ ಗೌರವ ಶಿಕ್ಷಕರಿದ್ದಾರೆ. ಹಳೆವಿದ್ಯಾರ್ಥಿಗಳ ಸಹಕಾರದಿಂದ ಮುಂದಿನ ವರ್ಷದಿಂದ ಆಂಗ್ಲ ಭಾಷೆಯ ಗೌರವ ಶಿಕ್ಷಕರನ್ನು ನೇಮಿಸಲು ನಿರ್ಧರಿಸಲಾಗಿದೆ.

Advertisement

ಊರ ದಾನಿಗಳಿಂದ ಶಾಲೆಗೆ ವ್ಯವಸ್ಥೆ 1949ರಲ್ಲಿ ಶೆಣೈ ಕುಟುಂಬದಿಂದ ಹಸ್ತಾಂತರಗೊಂಡ ಬಳಿಕ ಬೋರ್ಡ್‌ ಶಾಲೆಯಾಗಿ ಪರಿವವರ್ತನೆಗೊಂಡು ಸ್ಕೂಲ್‌ ಬೋರ್ಡ್‌, ದಿ| ಕೃಷ್ಣರಾಯ ಶ್ಯಾನುಭಾಗ್‌ ಮತ್ತು ಊರಿನ ಪಠೇಲರ ಸಹಕಾರದೊಂದಿಗೆ ಕಟ್ಟಡ ನಿರ್ಮಾಣಗೊಂಡಿತು. ದಾನಿಗಳಾದ ದಿ|ಶ್ರೀನಿವಾಸ ಭಟ್‌,ವಲೇರಿಯನ್‌ ಆಲ್ವ ಹಾಗೂ ಅಡ್ವೆ ಶಿವರಾಮ ಶೆಟ್ಟಿಯವರ ದೇಣಿಗೆಯಿಂದ ಪಿಠೊಪಕರಣಗಳ ವ್ಯವಸ್ಥೆಯಾಯಿತು.

ಸರ್ವಶಿಕ್ಷಣ ಅಭಿಯಾನ ಜಾರಿಯಾದ ಬಳಿಕ ಶೌಚಾಲಯ, ಅನ್ನಪೂರ್ಣ ಅಕ್ಷರ ದಾಸೋಹ ಅಡುಗೆ ಕೋಣೆ, ಶಾಲಾ ಕಟ್ಟಡ, ಆವರಣಗೋಡೆ ಮತ್ತು ಕಂಪ್ಯೂಟರ್‌ ಆಧಾರಿತ ಕಲಿಕಾ ಕೇಂದ್ರಗಳು ನಿರ್ಮಾಣಗೊಂಡಿವೆ.

ಹೆಮ್ಮೆಯ ಹಳೆವಿದ್ಯಾರ್ಥಿಗಳು
ಸುರತ್ಕಲ್‌ ಎನ್‌ಐಟಿಕೆಯಲ್ಲಿ ಸೇವೆ ಸಲ್ಲಿಸಿದ ಡಾ| ಬಿ.ಆರ್‌. ಸಾಮಗ, ಭಾರತೀಯ ವಾಯಪಡೆಯ ಅಧಿಕಾರಿ ಬಿ.ಜೆ.ಆಳ್ವ, ಶಿಕ್ಷಣ ತಜ್ಞ  ದಿ| ಆರ್‌ಎಸ್‌.ಬೆಳ್ಳೆ,ನೈಜೀರಿಯಾ ಉದ್ಯಮಿ ಬೆಳ್ಳೆ ದೊಡ್ಡಮನೆ ಸೀತಾರಾಮ ಶೆಟ್ಟಿ,ವಿಶಾಖಪಟ್ಟಣ ಮೈಕಾಲಾಜಿ ವಿಜ್ಞಾನಿ ಡಾ| ದಾಮೋದರ ಶೆಣೈ,ಕಲ್ಯಾಣಪುರ ಮಿಲಾಗ್ರಿಸ್‌ ಕಾಲೇಜಿನ ಪ್ರಾಂಶುಪಾಲ ಡಾ| ವಿನ್ಸೆಂಟ್‌ ಆಲ್ವ,ಕರ್ನಾಟಕ ಬ್ಯಾಂಕ್‌ಎಜಿಎಂ ಗೋಪಾಲಕೃಷ್ಣ ಸಾಮಗ ಸೇರಿದಂತೆ ವೈದ್ಯಕೀಯ, ಎಂಜಿನಿಯರಿಂಗ್‌,  ಭಾರತೀಯಸೇನೆ, ಉದ್ಯಮ ಕ್ಷೇತ್ರದಲ್ಲಿ ಸಾಧನೆ ಮಾಡಿದ ಹಳೆವಿದ್ಯಾರ್ಥಿಗಳನ್ನು ಈ ಶಿಕ್ಷಣ ಸಂಸ್ಥೆ ನೀಡಿದೆ.

ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ನಾಗಿ ಶತಮಾನ ಕಂಡ ಕನ್ನಡ ಶಾಲೆಯನ್ನು ಉಳಿಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿಸಲು ಹಳೆ ವಿದ್ಯಾರ್ಥಿಗಳ  ಸಹಕಾರದೊಂದಿಗೆ ಪ್ರಯತ್ನಿಸುತ್ತಿದ್ದೇವೆ

– ಹರೀಶ್‌ ಶೆಟ್ಟಿ,ಬೆಳ್ಳೆ ಗ್ರಾ.ಪಂ. ಉಪಾಧ್ಯಕ್ಷರು

 ದೇಶ ವಿದೇಶಗಳಲ್ಲಿ ನೆಲೆಸಿರುವ ಹಳೆ ವಿದ್ಯಾರ್ಥಿಗಳಿಂದ ಸಹಕಾರದಿಂದ ಶತಮಾನೋತ್ಸವ ಆಚರಿಸಲು ಪ್ರಯತ್ನಿಸುತ್ತಿದ್ದೇವೆ. ಕನ್ನಡ ಶಾಲೆಯನ್ನು ಉಳಿಸುವ ಸಲುವಾಗಿ 1ನೇ ತರಗತಿಯಿಂದಲೇ ಆಂಗ್ಲ ಭಾಷೆ ಕಲಿಸುತ್ತಿದ್ದು ನ್ಪೋಕನ್‌ ಇಂಗ್ಲಿಷ್‌ ಕಲಿಸಲು ಪ್ರಯತ್ನ ನಡೆಸುತ್ತಿದ್ದೇವೆ.
-ನಾಗರತ್ನ, ಮುಖ್ಯ ಶಿಕ್ಷಕಿ.

ಸತೀಶ್ಚಂದ್ರ ಶೆಟ್ಟಿ ,ಶಿರ್ವ

Advertisement

Udayavani is now on Telegram. Click here to join our channel and stay updated with the latest news.

Next