Advertisement

ಸಾಲದ ಸಂತೆಯೊಳಗೆ ಒಂದು ಸುತ್ತು…

06:00 AM Sep 24, 2018 | |

ಮುಂಜಾನೆ ಯಿಂದ ಮುಸ್ಸಂಜೆಯವರೆಗೆ,  ಒಮ್ಮೊಮ್ಮೆ  ರಾತ್ರಿ ಎಂಟರವರೆಗೆ ನಿಮಗೂ  ಇಂಥ ಕರೆಗಳು ಬರುತ್ತಿರಬಹುದು.  ಕೆಲವು ಬ್ಯಾಂಕೇತರ ಹಣಕಾಸು ಸಂಸ್ಥೆಗಳಿಂದ, ಇನ್ನು ಕೆಲವು  ಹೊಸ ತಲೆಮಾರಿನ ಖಾಸಗಿ ಬ್ಯಾಂಕುಗಳಿಂದ  ಕರೆಗಳು ಬರುತ್ತವೆ.  ಹೀಗೆ ಕರೆಗಳನ್ನು ಮಾಡಲು ಅವರಿಗೆ ಸಮಯ, ಸಂದರ್ಭ ಯಾವುದೂ ಇರುವುದಿಲ್ಲ. ಕರೆ ಕೇಳಿ ನೀವು ಸಿಡಿಮಿಡಿಗೊಂಡು, ಯಾರೀ ನೀವು? ಇದ್ರೇ ಫೋನು ಎಂದು ನೀವು ರೇಗಿದರೂ  ಅವರು ಬೇಸರಿಸುವುದಿಲ್ಲ.

Advertisement

ಅದೇ ನಂಬರ್‌ ನಿಂದ ಹತ್ತು ನಿಮಿಷದ ನಂತರ ಇನ್ನೊಂದು  ಕರೆ ಬರುತ್ತದೆ. ನಿಮ್ಮ ಫೋನ್‌ ನಂಬರ್‌ ಅವರಿಗೆ ಹೇಗೆ ದೊರಕಿತು ಎನ್ನುವುದು  ಚಿದಂಬರ ರಹಸ್ಯ. ದಶಕಗಳ ಹಿಂದೆ ಬ್ಯಾಂಕುಗಳಲ್ಲಿ ಠೇವಣಿ ಸಂಗ್ರಹಿಸಲು ಈ ರೀತಿ  ಮಾರ್ಕೆಟಿಂಗ್‌ ಮಾಡುವುದು ತೀರಾ  ಸಾಮಾನ್ಯವಾಗಿತ್ತು. ಠೇವಣಿಗಾಗಿ ಗ್ರಾಹಕರನ್ನು ಭೇಟಿಮಾಡುವುದು, ಅವರಿಗೆ ಕೆಲವು ಪ್ರಭಾವಿಗಳಿಂದ  ಹೇಳಿಸುವುದು, ಅವರಿಗೆ  ಫೋನಾಯಿಸುವುದು, ಅವರೊಡನೆ ಸತತ ಸಂಪರ್ಕದಲ್ಲಿ ಇರುವುದು ಮಾಮೂಲಾಗಿತ್ತು.

ಅಂದಿನ ದಿನಗಳಲ್ಲಿ ಹೆಚ್ಚು ಠೇವಣಿ ಸಂಗ್ರಹಿಸಿದ ಮ್ಯಾನೇಜರ್‌ಗಳಿಗೆ ಹೆಚ್ಚಿನ ಮಹತ್ವಇತ್ತು ಮತ್ತು ಅವರನ್ನು  ಡೈನಾಮಿಕ್‌ ಮ್ಯಾನೇಜರ್‌ ಅಂತ ಕರೆಯುತ್ತಿದ್ದರು. ಆದರೆ,  ಈಗ ಸೀನ್‌ ಯು  ಟರ್ನ  ತೆಗೆದು ಕೊಂಡಿದೆ. ಇಂದು ಬ್ಯಾಂಕಿಂಗ್‌ ಉದ್ಯಮದಲ್ಲಿ  ಮಹತ್ತರ ಬದಲಾವಣೆಯಾಗಿದೆ. ಬ್ಯಾಂಕುಗಳ ನಿರ್ವಹಣಾ ವೆಚ್ಚ  ದಿನದಿಂದ  ದಿನಕ್ಕೆ ಏರುತ್ತಿದೆ. ಬಡ್ಡಿದರ ಇಳಿಯುತ್ತಿದೆ. ಸುಸ್ತಿ ಸಾಲ ಹೆಚ್ಚುತ್ತಿದೆ. ಬ್ಯಾಂಕುಗಳಲ್ಲಿ  ಸಾಲ ವಿತರಣೆ ನಿರೀಕ್ಷಿತಮಟ್ಟದಲ್ಲಿ ಇಲ್ಲ ಎನ್ನಲಾಗುತ್ತಿದೆ.ಬಡ್ಡಿಯೇತರ ಆದಾಯದಲ್ಲಿ  ಇಳಿಕೆ ಕಾಣುತ್ತಿದೆ.

ಬ್ಯಾಂಕುಗಳ ಬಡ್ಡಿಯೇತರ ಆದಾಯವೂ  ಸರ್ಕಾರದ ಹಲವು ನಿಯಂತ್ರಣಗಳಿಗೆ  ಒಳಪಟ್ಟಿದೆ. ಸುಸ್ತಿ ಸಾಲದ ಮೇಲೆ  ಬಡ್ಡಿ ವಿಧಿಸಿ ಅದನ್ನು ಆದಾಯದಲ್ಲಿ  ತೋರಿಸುವಂತಿಲ್ಲ. ಬ್ಯಾಂಕುಗಳಲ್ಲಿ  ಬಡ್ಡಿ ಆದಾಯವನ್ನು ಮೊದಲಿನಂತೆ  accrued basis ಮೇಲೆ  ಲೆಕ್ಕ ಹಾಕದೇ, ಈಗ eceived baisis ಮೇಲೆ  ಲೆಕ್ಕ ಹಾಕಬೇಕಾಗುತ್ತದೆ. ಗಳಿಸಿದ  ಲಾಭದ ಬಹುಪಾಲು ಅನುತ್ಪಾದಕ ಆಸ್ತಿಗೆ ವರ್ಗಾವಣೆಯಾಗುತ್ತಿದ್ದು, ಬ್ಯಾಂಕುಗಳು  ಹೆಚ್ಚಿಗೆ  ಸಾಲ ನೀಡಿ  ಬ್ಯಾಂಕುಗಳ ಆದಾಯವನ್ನು ಹೆಚ್ಚಿಸುವ ಅನಿವಾರ್ಯತೆ ಇದೆ.  

ಅಂತೆಯೇ ಬ್ಯಾಂಕುಗಳು  ಸಾಲವನ್ನು ಯುದ್ದೋಪಾದಿಯಲ್ಲಿ ಮಾರ್ಕೆಟಿಂಗ್‌ ಮಾಡುತ್ತಿವೆ ಎಂದೂ  ಹೇಳಲಾಗುತ್ತಿದೆ. ಅಂದು ಹೆಚ್ಚು ಠೇವಣಿ ಸಂಗ್ರಹ ಮಾಡಿದವನು ಡೈನಾಮಿಕ್‌ ಮ್ಯಾನೇಜರ್‌ ಎಂದು ಕರೆಯಲ್ಪಟ್ಟಿದ್ದರೆ, ಇಂದು ಹೆಚ್ಚು ಸಾಲ ನೀಡಿದವನನ್ನೇ ಡೈನಾಮಿಕ್‌ ಮ್ಯಾನೇಜರ್‌ ಎಂದು  ಕರೆಯಲಾಗುತ್ತಿದೆ.  ಮೇಲುನೋಟಕ್ಕೆ ಸಾಲದ ಮಾರ್ಕೆಟಿಂಗ್‌ನಲ್ಲಿ  ಯಾವುದೇ ಕಾನೂನಾತ್ಮಕ  ಅಥವಾ ನೈತಿಕತೆಯ  ತೊಂದರೆ  ಇರುವುದಿಲ್ಲ.  ಎಲ್ಲವೂ ಕಾನೂನಿನ ಮತ್ತು ವ್ಯವಹಾರದ  ಚೌಕಟ್ಟಿನಲ್ಲಿಯೇ ನಡೆಯುತ್ತದೆ. 

Advertisement

ಬ್ಯಾಂಕ್‌ ಸಾಲದ ವಿಚಾರದಲ್ಲಿ, ಎಂಟ್ರಿ ಇದೆ: ಆದರೆ, exit  ಇಲ್ಲ ಎನ್ನುವ ಮಾತು ಕೇಳಿ ಬರುತ್ತದೆ. ಒಮ್ಮೆ ಸಾಲವನ್ನು ಪಡೆದರೆ, ಸಾಲದ  ಜರ್ನಿ ಕೊನೆಗೊಳ್ಳುವುದಿಲ್ಲ. ಅದು ಸಾಲ ಮಾಡಿ ಸಾಲ ತೀರಿಸುವ ಮಟ್ಟಕ್ಕೆ ಇಳಿಯುತ್ತದೆ. ಅನಿವಾರ್ಯವಾದರೆ   ಮಾತ್ರ  ಸಾಲಕ್ಕೆ ಮೊರೆ ಹೋಗಬೇಕು. ಅದು  ಕೊನೆಯ  ಅಸ್ತ್ರವಾಗಬೇಕು ಎನ್ನುವುದು  ಬ್ಯಾಂಕರ್‌ಗಳಿಗೆ  ಸಾಲದ ಪೋರ್ಟ್‌ ಫೋಲಿಯೋ ಹಿಗ್ಗಿದಷ್ಟು ಒಳ್ಳೆಯದು. ಅದರೆ, ಎನ್ನ ಸಾಲಗಾರನ ಮಾಡಬೇಡಿರಯ್ನಾ ಎಂದು ಗ್ರಾಹಕರು ವ್ಯಾಕುಲಗೊಳ್ಳುವಷ್ಟು ಮಿತಿ ಮೀರಬಾರದು.  

ಆಕಳಕರು ಆಕಳನ್ನು ಹುಡುಕಿಕೊಂಡು ಬರುವಂತೆ, ಸಾಲದ ಅವಶ್ಯಕತೆ ಇದ್ದವರು ಬ್ಯಾಂಕುಗಳನ್ನು, ಹಣಕಾಸು ಸಂಸ್ಥೆಗಳನ್ನು ಹುಡುಕಿಕೊಂಡು ಬರುತ್ತಾರೆ. ವಿಧಿಸುವ ಪ್ರತಿಯೊಂದು ಶರತ್ತುಗಳನ್ನೂ ಪಾಲಿಸುತ್ತಾರೆ. ಕೇಳಿದ ಪ್ರತಿಯೊಂದು  ಕಾಗದಪತ್ರಗಳನ್ನು  ಮತ್ತು ದಾಖಲೆಗಳನ್ನು ನೀಡುತ್ತಾರೆ.  ಸಾಲವನ್ನು ಮರುಪಾವತಿ ಮಾಡುವುದರಲ್ಲಿಯೂ  ಮುಂದೆ ಇರುತ್ತಾರೆ. ಸಾಮಾನ್ಯವಾಗಿ  ಸಾಲ ವಸೂಲಾತಿ  ಅಷ್ಟು  ಕಷ್ಟಕರವಾಗುವುದಿಲ್ಲ.  ನೈತಿಕತೆಯ ಕಟ್ಟುಪಾಟು ಅವನನ್ನು ಬಂಧಿಸುತ್ತದೆ.

ಅವರಲ್ಲಿ  ಬ್ಯಾಂಕಿನವರ ಹಣಕಾಸು ಸಹಾಯ ಭಾವನಾತ್ಮಕ ಸಂಬಂಧವನ್ನು ಸೃಷ್ಟಿಸುತ್ತದೆ. ಬ್ಯಾಂಕುಗಳೇ ಕೇಳಿ, ಒತ್ತಾಯ ಮಾಡಿ ಸಾಲ ನೀಡ ಹೋದರೆ, documentation,compilation of  terms and conditions ಕಷ್ಟವಾಗುತ್ತದೆ ಎಂದು  ಬ್ಯಾಂಕರುಗಳು ಹೇಳುತ್ತಾರೆ. ಆದರೆ,  ಇದಕ್ಕೆ ಬದಲಾಗಿ ಬ್ಯಾಂಕಿನ ವೈಯಕ್ತಿಕ ಹಿತಾಸಕ್ತಿಗಾಗಿ , ಗ್ರಾಹಕ ಹೆಚ್ಚು ಕೇಳದೇ,  ಬ್ಯಾಂಕಿನವರೇ  ಮುಗಿಬಿದ್ದು, ಸಾಲ ನೀಡಿದರೆ, ಗ್ರಾಹಕನಿಗೆ ಅದು ಅರ್ಥವಾಗುವುದಿಲ್ಲ. ಅದರ ಹಿಂದಿನ ಗಂಭೀರತೆ ತಿಳಿಯುವುದಿಲ್ಲ. 

ಸಾಲದ ಅವಶ್ಯಕತೆ ಇದ್ದವನು  ತಾನಾಗಿಯೇ ಬ್ಯಾಂಕುಗಳನ್ನು ಹುಡುಕಿಕೊಂಡು ಹೋಗುತ್ತಾನೆ .  ಇಂಗ್ಲೆಂಡ್‌ನ‌ಲ್ಲಿ  ಬ್ಯಾಂಕ್‌ಗಳ ಎದುರು ಒಂದೇ ಒಂದು  ನಾಮಫ‌ಲಕ ಇರುತ್ತದೆ.  ತಾನು ನೀಡುವ ಸೇವೆ, ನೀಡುವ  ಉತ್ಪನ್ನಗಳ ಬಗೆಗೆ  ಪೋಸ್ಟರ್‌ಗಳನ್ನು ಅಂಟಿಸುವುದಿಲ್ಲ. ಕೇಳದೇ  ಸಾಲ ನೀಡುವುದು  ಕೊಳ್ಳುಬಾಕ ವ್ಯವಹಾರಕ್ಕೆ  ಉಪಯೋಗವಾಗುತ್ತದೆ  ಎನ್ನುವುದು  ಸಾಮಾನ್ಯ ಅಭಿಪ್ರಾಯ. ಈ ಪ್ರವೃತ್ತಿ  ಬ್ಯಾಂಕುಗಳಲ್ಲಿ ಅನುತ್ಪಾದಕ ಅಸ್ತಿಯ ಹೆಚ್ಚಳಕ್ಕೆ ಕಾರಣವಾಗುತ್ತಿರುವುದು ಸುಳ್ಳಲ್ಲ.

ಸಾಲವನ್ನು ಬ್ಯಾಂಕಿನವರೇ ಕೇಳಿ ನೀಡಿದರೆ, ಷರತ್ತುಗಳು ಕಡಿಮೆ ಇರಬಹುದು, ಮರುಪಾವತಿ ಸುಲಭ ಇರಬಹುದು ಮತ್ತು ಬಡ್ಡಿದರ ಕಡಿಮೆ ಇರಬಹುದು ಎನ್ನುವ  ಕೆಲವು ಕಲ್ಪನೆಗಳು ಗ್ರಾಹಕರಲ್ಲಿ  ಇರುತ್ತದೆ. ಇದು ಒಂದು ರೀತಿಯಲ್ಲಿ  ಅರ್ಥ ಶಾಸ್ತ್ರದ  ಬೇಡಿಕೆ-ಪೂರೈಕೆ ತತ್ವದಡಿಯಲ್ಲಿ ಇದ್ದು, ಗ್ರಾಹಕರಿಗೆ ಅನುಕೂಲವಾಗಬಹುದು ಎನ್ನುವ ತಪ್ಪು ಕಲ್ಪನೆ ಕೂಡ ಇದೆ. ಅದರೆ, ಸಾಲ ..ಸಾಲವೇ…. ಯಾವುದೇ  ವಿನಾಯಿತಿ ಇರುವುದಿಲ್ಲ. ಇದು ಸಾಲವನ್ನು push  ಮಾಡುವ  ಒಂದು ತಂತ್ರವಷ್ಟೆ.

* ರಮಾನಂದ ಶರ್ಮಾ

Advertisement

Udayavani is now on Telegram. Click here to join our channel and stay updated with the latest news.

Next