Advertisement

ನಂದಿಬೆಟ್ಟದ ತಪ್ಪಲಿನಲ್ಲಿ ಅಪರೂಪದ ಜೇಡ; ವಿಶ್ವದ 50 ಸಾವಿರ ಜೇಡ ಪಟ್ಟಿಗೆ ಹೊಸದೊಂದು ಸೇರ್ಪಡೆ

01:35 PM Dec 21, 2022 | Team Udayavani |

ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ತಾಲೂಕಿನ ಹೆಗ್ಗಡಿಹಳ್ಳಿ ಗ್ರಾಮದ ಅಂಚಿನಲ್ಲಿ ಹೊಸ ಜೇಡ ಪ್ರಬೇಧವೊಂದನ್ನು ಪರಿಸರಾಸಕ್ತರು ಪತ್ತೆ ಹಚ್ಚಿದ್ದು, ಇದು ಜಗತ್ತಿನ 50 ಸಾವಿರ ಜೇಡ ಪ್ರಬೇಧಗಳ ಪಟ್ಟಿಗೆ ಹೊಸದೊಂದು ಸೇರ್ಪಡೆಯಾದಂತಾಗಿದೆ.

Advertisement

ಕಂಡದ್ದು ಹೇಗೆ: ನಂದಿಬೆಟ್ಟದ ತಪ್ಪಲಿನಲ್ಲಿ ಹೊಸ ಜೇಡದ ಪ್ರಬೇಧವನ್ನು ಮೊದಲ ಬಾರಿಗೆ ಪರಿಸರಾಸಕ್ತ ಲೋಹಿತ್‌ ವೈ.ಟಿ ಕಂಡಿದ್ದು, ನಂತರ ಈ ಬಗ್ಗೆ ಸಂಶೋಧನೆ ಆರಂಭಿಸುತ್ತಾರೆ. ಜೇಡವನ್ನು ನೈಸರ್ಗಿಕ ಪರಿಸರದಲ್ಲಿ ಕಂಡಿದ್ದು, ನಂತರದ ಜೇಡ ಹುಡುಕಾಟ ಮತ್ತು ಜೇಡದ ಮಾದರಿ ಸಂಗ್ರಹಣೆಯಲ್ಲಿ ಲೋಹಿತ್‌ ವೈ.ಟಿ, ಚಿನ್ಮಯ್‌.ಸಿ ಮಳಿಯೆ, ಆಶಾ ಎಸ್‌, ಜನಾರ್ಧನ ಆರ್‌, ಚೇತನ್‌ ಜೆ, ಹರಿಚರಣ್‌, ನವೀನ್‌ ಐಯ್ಯರ್‌, ಸಾಕ್ಷಿ.ಕೆ ಮತ್ತು ಅಕ್ಷಯ್‌ ದೇಶಪಾಂಡೆ ತಂಡ ಐದು ತಿಂಗಳ ವಾರಾಂತ್ಯಗಳಲ್ಲಿ ತೊಡಗಿಸಿಕೊಂಡಿದ್ದರು.

ಸಂಶೋಧನೆ ಖಾತರಿ: ಜೇಡದ ಹೊಸ ಪ್ರಬೇಧದ ಬಗ್ಗೆ ಅನ್ವೇಷಣೆ ಮಾಡಿದ ತಂಡ ವೈಜ್ಞಾನಿಕ ಸಂಶೋಧನೆಗೆ ಸಂಬಂಧಿಸಿದ ರಷ್ಯಾ ಮೂಲದ ಅಂತಾರಾಷ್ಟ್ರೀಯ ಜರ್ನಲ್‌ ಆರ್ಥೋಪೊಡ ಸೆಲೆಕ್ಟಾ ಪತ್ರಿಕೆಯಲ್ಲಿ ಈ ಜೇಡದ ಕುರಿತಾದ ವೈಜ್ಞಾನಿಕ ಲೇಖನವನ್ನು ಪರಿಸರಾಸಕ್ತ ಲೋಹಿತ್‌ ವೈ.ಟಿ, ಸಾಲಿಗ ತಂಡದ ಡಾ. ಅಭಿಜಿತ್‌ ಎಪಿಸಿ, ಚೆನ್ನೈ ಎಂಟಮಾಲಜಿ ಇನ್ಸ್ಟಿಟ್ಯೂಟ್‌ನ ಡಾ. ಜಾನ್‌ ಕೆಲಬ್‌ ಹಾಗೂ ಮರಿಯಾ ಪ್ಯಾಕಿಯಂ ಕೂಡಿ ರಚಿಸಿದ್ದು ಪ್ರಕಟವಾಗಿದೆ. ಈ
ವೈಜ್ಞಾನಿಕ ಲೇಖನದ ಪ್ರಕಾರ ಜೇಡದ ಪಂಗಡ ಕೂಡ ಅಪರೂಪದ್ದಾಗಿದ್ದು ಭಾರತ, ಚೀನಾ, ಶ್ರೀಲಂಕಾ ಮತ್ತು ವಿಯಟ್ನಾಮ್‌ ಸೇರಿ ಜಗತ್ತಿನ 4 ದೇಶಗಳಲ್ಲಿ ಮಾತ್ರ ನೋಡಬಹುದು. ಈಗ ಸಿಕ್ಕಿರುವ ಈ ಪಂಗಡದ ಈ ಹೊಸ ಪ್ರಬೇಧವು ಇನ್ನೂ ಅಪರೂಪವೆಂದು ಈ ಮೂಲಕ ತಿಳಿದು ಬರುತ್ತದೆ.

ಜೇಡ ಜೀವಿಸುವ ವಿಧಾನ
ಸಾಲ್ಟಿಸಿಡೆ ಕುಟುಂಬಕ್ಕೆ ಈ ಜೇಡ ಸೇರಿದ್ದು, ಸಾಮಾನ್ಯ ಭಾಷೆಯಲ್ಲಿ ಹೇಳುವುದಾದರೆ ಎಗರುವ ಜೇಡಗಳ ಕುಟುಂಬಕ್ಕೆ ಸೇರಿದೆ. ಅರ್ಧ ಸೆಂಟಿ ಮೀಟರ್‌ಗೂ ಸ್ವಲ್ಪ ಕಡಿಮೆ ಅಳತೆಯ ಈ ಜೇಡ ಬಹಳ ಚುರುಕಾಗಿ ಎಗರಿ ಕ್ಷಣಾರ್ಧದಲ್ಲಿ ಮಾಯವಾಗಬಲ್ಲದು. ಗಂಡು ಜೇಡ, ಹೆಣ್ಣು ಜೇಡ ಮತ್ತು ಮರಿಜೇಡಗಳನ್ನು ತಂಡ ನೋಡಿದ್ದು, ಈ ಜೇಡವನ್ನು ಸಾಮಾನ್ಯವಾಗಿ ಬೆಟ್ಟದ ತಪ್ಪಲಿನ ಎಲ್ಲಾ ಪ್ರದೇಶದಲ್ಲೂ ನೋಡಲು ಸಾಧ್ಯವಿಲ್ಲ ಮತ್ತು ಸಂಖ್ಯೆಯೂ ಬಹಳ ವಿರಳವಾಗಿದೆ ಎಂದು ತಿಳಿದು ಬಂದಿದೆ. ತರಗೆಲೆ ಉದುರಿದ ಬಂಡೆಯಿರುವ ನೆಲ ಮತ್ತು ಸುತ್ತ ಸ್ವಲ್ಪ ಕುರುಚಲು ಮತ್ತು ಒಣ ಹುಲ್ಲು ಇರುವ ಪ್ರದೇಶದಲ್ಲಿ ಜೇಡವು ಕಂಡುಬಂದಿದ್ದು, ಜೇಡವು ಗಿಡ ಮರಗಳ ಮೇಲೆ ಕಾಣಿಸಿಲ್ಲ. ಕಾಡು ಮಲ್ಲಿಗೆ ಮತ್ತು ನೀಲಗಿರಿಯ ಸುರಳಿಸುತ್ತಿದ ಎಲೆಗಳಲ್ಲಿ ಸಣ್ಣ ಗೂಡು ನಿರ್ಮಿಸಿ ರಾತ್ರಿ ವಿಶ್ರಮಿಸುತ್ತದೆ. ಇದು ಹಗಲು ಚಟುವಟಿಕೆಯಿಂದ ಕೂಡಿರುತ್ತದೆ. ಸುರಳಿಸುತ್ತಿರುವ ಒಣ ಎಲೆಗಳಲ್ಲಿ ಹೆಣ್ಣು ಜೇಡ ಬಲೆಯ ಗೂಡು ನಿರ್ಮಿಸಿ ಮೊಟ್ಟೆಯಿಟ್ಟು ಮರಿಗಳು ಆಗುವವರೆಗೂ ಕಾಯುತ್ತದೆ.

ಹೆಸರು ಅರ್ಕಾವತಿ
ನಂದಿ ಬೆಟ್ಟದ ತಪ್ಪಲಿನ ನದಿಗಳು ಮೂಲ ಸ್ವರೂಪ ಕಳೆದುಕೊಂಡು ಹಾಳಾಗುತ್ತಿರುವ ಮತ್ತು ಜನರ ಮನಸ್ಸಿನಿಂದ ದೂರವಾಗುತ್ತಿರುವ ಈ ಸಂದರ್ಭದಲ್ಲಿ, ನಂದಿಬೆಟ್ಟದಲ್ಲಿ ಹುಟ್ಟುವ ನದಿಯ ನೆನಪಿಗಾಗಿ ಮತ್ತು ಸಂರಕ್ಷಣೆಗಾಗಿ ಈ ಹೊಸ ಜೇಡ ಪ್ರಬೇಧಕ್ಕೆ “ಅರ್ಕಾವತಿ’ ಎಂದು ನದಿಯ ಹೆಸರಿಡಲಾಗಿದೆ. ನಮ್ಮ ದೇಶದಲ್ಲಿ 2 ಸಾವಿರ ಜೇಡ ಪ್ರಬೇಧಗಳಿದ್ದು, ಕರ್ನಾಟಕದಲ್ಲಿ ಸುಮಾರು 500 ಪ್ರಬೇಧಗಳಿವೆ. ಇನ್ನೂ ಹೆಚ್ಚಿನ ಅಧ್ಯಯನಗಳಾದರೆ, ಜೇಡದ ಬಗ್ಗೆ
ವಿಜ್ಞಾನಿಗಳಲ್ಲದ ಸಾಮಾನ್ಯರು ಜೇಡಗಳನ್ನು ಗುರುತಿಸುವಂತಾದರೆ ಇನ್ನೂ ಹೆಚ್ಚು ಪ್ರಬೇಧಗಳನ್ನು ಸಂಶೋಧಿಸಬಹುದು, ಜಗತ್ತಿಗೆ ಪರಿಚಯಿಸಬಹುದು ಮತ್ತು ಅದು ವಿಜ್ಞಾನಲೋಕಕ್ಕೆ ಜನ ಸಾಮಾನ್ಯರ ಕೊಡುಗೆಯಾಗುತ್ತದೆ. ಮುಂದಿನ ದಿನಗಳಲ್ಲಿ ಈ ಹೊಸ ಜೇಡದ ಕುರಿತಾದ ಇನ್ನೂ ಹೆಚ್ಚು ಸಂಶೋಧನೆಗಳು ಮಾಡುವ ಅವಶ್ಯಕತೆ ಇದೆ ಮತ್ತು ನಮ್ಮ ತಂಡ ಇದರಲ್ಲಿ ಉತ್ಸುಕವಾಗಿದೆ ಎನ್ನುತ್ತಾರೆ ಪರಿಸರ ಪ್ರೇಮಿ ಲೋಹಿತ್‌.

Advertisement
Advertisement

Udayavani is now on Telegram. Click here to join our channel and stay updated with the latest news.

Next