Advertisement

ಕೃಷಿಯಲ್ಲಿ ಖುಷಿ ಕಾಣುವ ಮೂಲ್ಕಿಯ ಪ್ರಗತಿಪರ ಕೃಷಿಕ ಬಾಲಚಂದ್ರ ಸನಿಲ್‌

10:31 AM Dec 22, 2019 | mahesh |

ಹೆಸರು: ಬಾಲಚಂದ್ರ ಸನಿಲ್‌
ಏನೇನು ಕೃಷಿ: ಭತ್ತ, ತೆಂಗು, ಉದ್ದು, ಬಾಳೆ
ವಯಸ್ಸು: 71
ಕೃಷಿ ಪ್ರದೇಶ: 7 ಎಕ್ರೆ

Advertisement

ನಾವು ಅದೆಷ್ಟು ಆಧುನಿಕಗೊಂಡರೂ ಉಣ್ಣುವ ಅನ್ನವನ್ನು ಸೃಷ್ಟಿಸಲಾರೆವು; ಅದನ್ನು ಬಿತ್ತಿ ಬೆಳೆದೇ ಆಗಬೇಕು. ಆದ್ದರಿಂದಲೇ ಭೂಮಿಯ ಜತೆಗೆ ಒಡನಾಡುವ ಕೃಷಿಗೆ ಮಹತ್ತದ ಸ್ಥಾನವಿದೆ. ಇದೇ ಹಿನ್ನೆಲೆ ಯಲ್ಲಿ ಉದಯವಾಣಿಯು ಕಿಸಾನ್‌ ದಿನಾಚರಣೆ ಯ ಸಂದರ್ಭ ರೈತರ ಸಾಧನೆಯ ಚಿತ್ರಣ ನೀಡುವ “ಕೃಷಿ ಕಥನ’ವನ್ನು ಆರಂಭಿಸಿದೆ. ಈ ಹೊಸ ಸರಣಿಯು ಇನ್ನಷ್ಟು ಮಂದಿಗೆ ಪ್ರೇರಣೆಯಾಗಲೆಂದು ಸರಕಾರದಿಂದ ಪ್ರಶಸ್ತಿ ಪುರಸ್ಕಾರಗಳಿಂದ ಗುರುತಿಸಲ್ಪಟ್ಟ ರೈತರನ್ನು ಪರಿಚಯಿಸುವ ಪ್ರಯತ್ನ.

ಮೂಲ್ಕಿ: ವೃತ್ತಿಯಲ್ಲಿ ಕಂಪ್ಯೂಟರ್‌ ಶಿಕ್ಷಣ ತರಬೇತಿ ಸಂಸ್ಥೆಯ ಪ್ರಾಂಶುಪಾಲರಾಗಿ ಕಾರ್ಯನಿರ್ವಹಿಸುತ್ತಿರುವ ಬಾಲಚಂದ್ರ ಸನಿಲ್‌ ಅವರು ಪ್ರವೃತ್ತಿಯಲ್ಲಿ ಒಬ್ಬ ಪ್ರಗತಿಪರ ಕೃಷಿಕರಾಗಿ ಶ್ರಮದಿಂದ ಜೀವನ ಸಾಗಿಸುತ್ತಿದ್ದಾರೆ.  ಬಾಲಚಂದ್ರ ಸನಿಲ್‌ ಅವರಿಗೆ ಬಾಲ್ಯದಿಂದಲೂ ಕೃಷಿಯಲ್ಲಿ ವಿಶೇಷ ಆಸಕ್ತಿ ಮತ್ತು ಕಾಳಜಿ. ಕೃಷಿಯಲ್ಲಿ ಶ್ರಮವಹಿಸಿ ಜವಾಬ್ದಾರಿಯಿಂದ ದುಡಿದರೆ ಯಶಸ್ವಿ ರೈತನಾಗಬಹುದು ಎಂಬುದನ್ನು ತೋರಿಸಿಕೊಟ್ಟ ಮೂಲ್ಕಿ ಹೋಬಳಿ ವ್ಯಾಪ್ತಿಯ ಅಪರೂಪದ ಪ್ರಗತಿಪರ ಕೃಷಿಕ. ತಂದೆ ಚೂಡಪ್ಪ ಕೋಟ್ಯಾನ್‌- ತಾಯಿ ಶೇಸಿ ಪೂಜಾರಿ¤ ಅವರ ಪುತ್ರನಾಗಿರುವ ಬಾಲಚಂದ್ರ ಅವರು ಎಂಎ ಪದವೀಧರರು. ಜತೆಗೆ ಕೃಷಿಕರಾಗಿರುವುದಕ್ಕೆ ಹೆಮ್ಮೆಯನ್ನು ಸೂಚಿಸುತ್ತಾರೆ.

ಬಾಲಚಂದ್ರ ಸನಿಲ್‌ ಅವರು ಕೃಷಿ ಪದ್ಧತಿಯಲ್ಲಿ ಅಳವಡಿಸಿಕೊಂಡಿರುವ ಸಂಶೋಧನ ಕ್ರಮಗಳ ಬಗ್ಗೆ ಹಲವರು ಸಲಹೆ ಕೇಳಿದ್ದಾರೆ. ಅಲ್ಲದೇ ಹಲವಾರು ಕೃಷಿ ಸಂಬಂಧಿತ ವಿಚಾರ ಸಂಕಿರಣ, ಸಂವಾದಗಳಲ್ಲಿ ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದಾರೆ. ಮೂಲ್ಕಿ ಪ್ರಸಿದ್ಧ ವಿದ್ಯಾಸಂಸ್ಥೆಯಾದ ಶ್ರೀ ನಾರಾಯಣ ಗುರು ಆಂಗ್ಲ ಮಾಧ್ಯಮ ಶಾಲೆಯ ಆಡಳಿತ ಕಾರ್ಯದರ್ಶಿಯಾಗಿ ಕಳೆದ 40 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಸನಿಲ್‌ ಅವರು ಒಬ್ಬ ಉ¤ತಮ ಶಿಕ್ಷಣ ತಜ್ಞರಾಗಿಯೂ ಗುರುತಿಸಿಕೊಂಡಿದ್ದಾರೆ.

7 ಎಕ್ರೆಯಲ್ಲಿ ಬಹುಬೆಳೆ
71 ವರ್ಷ ವಯಸ್ಸಿನ ಬಾಲಚಂದ್ರ ಸನಿಲ್‌ ಅವರು ಕೃಷಿ ಕಾಯಕದಲ್ಲಿ ಹರೆಯ ದವರಂತೆ ಕಾರ್ಯ ನಿರ್ವಹಿಸುತ್ತಾರೆ. ಇವರು ತಮ್ಮ ಬಾಲ್ಯದ 10 ವರ್ಷ ಪ್ರಾಯದಿಂದಲೇ ಕೃಷಿ ಕೆಲಸದಲ್ಲಿ ತೊಡಗಿಸಿಕೊಂಡು ಮನೆಯಲ್ಲಿ ಸುಮಾರು 12 ಹಸುಗಳು, 7 ಎಕ್ರೆಯಷ್ಟು ಕೃಷಿ ಭೂಮಿಯನ್ನು ಸ್ವತಃ ತನ್ನದೇ ಆದ ಸಂಶೋಧನೆ ರೀತಿಯಲ್ಲಿ ಕೃಷಿ ಕೆಲಸ ನಡೆಸುವ ಇವರು ಭತ್ತ, ತೆಂಗು, ಉದ್ದು, ಎಳ್ಳು ಹಾಗೂ ಬಾಳೆ ಕೃಷಿಯನ್ನು ನಡೆಸುತ್ತಾರೆ.

Advertisement

ಆರಂಭ ಕಾಲದಿಂದಲೂ ಇಂದಿಗೂ ಇವರಿಗೆ ಕೃಷಿಯಿಂದ ಯಾವತ್ತೂ ನಷ್ಟವಾಗಿಲ್ಲವಂತೆ.
ಶ್ರಮಕ್ಕೆ ತಕ್ಕ ಪ್ರತಿಫಲದ ಜತೆಗೆ ಉತ್ತಮ ಆರೋಗ್ಯ ಮತ್ತು ಮನಸ್ಸಿಗೆ ನೆಮ್ಮದಿ ದೊರೆತಿದೆ ಎನ್ನುತ್ತಾರೆ ಬಾಲಚಂದ್ರ ಸನಿಲ್‌.

ಲವಲವಿಕೆಯ ವ್ಯಕ್ತಿತ್ವ
ಸರಳ ವ್ಯಕ್ತಿತ್ವದ ಸನಿಲ್‌ ಅವರು ನಿತ್ಯವೂ ತಮ್ಮ ತೋಟ ಗದ್ದೆ ಮತ್ತು ದನದ ಹಟ್ಟಿಯಲ್ಲಿ ಹಾಲು ಕರೆಯುವುದು ಅವುಗಳ ಆರೈಕೆಯಲ್ಲಿ ಖುಷಿಯನ್ನು ಕಾಣುತ್ತಿದ್ದಾರೆ. ಕೃಷಿ ಮತ್ತು ಹೈನುಗಾರಿಕೆಯನ್ನು ನಿಷ್ಠೆಯಿಂದ ನಿತ್ಯವೂ ಚಾಚೂ ತಪ್ಪದೇ ಮಾಡುವುದರಿಂದ ಸದಾ ಲವಲವಿಕೆ, ಉತ್ತಮ ಆರೋಗ್ಯ ಪಡೆಯಬಹುದು ಎನ್ನುವುದು ಅವರ ಮಾತು. ಪ್ರೀತಿಯಿಂದ ಕಾಣಿ ಪ್ರಾಣಿ ಮತ್ತು ಸಸ್ಯಗಳನ್ನು ಪ್ರೀತಿಸಿದರೆ ಅವುಗಳು ಕೂಡ ನಮ್ಮನ್ನು ಪ್ರೀತಿಯಿಂದ ಕಾಣುತ್ತವೆ. ಕೃಷಿಯಿಂದ ಒಳ್ಳೆಯ ವಾತಾವರಣ ಮತ್ತು ಆರೋಗ್ಯ ಲಭಿಸುತ್ತದೆ ಎನ್ನುತ್ತಾರೆ.

ಪ್ರಶಸ್ತಿ, ಪುರಸ್ಕಾರಗಳು
ಭತ್ತದ ಕೃಷಿಯಲ್ಲಿ ಅತೀ ಹೆಚ್ಚು ಇಳುವರಿಯನ್ನು ಪಡೆದ ಕಾರಣಕ್ಕಾಗಿ ರಾಜ್ಯ ಸರಕಾರದ ಕೃಷಿ ಇಲಾಖೆಯಿಂದ ಕೊಡಮಾಡುವ 2010ರ ಸಾಲಿನ ದ.ಕ. ಜಿಲ್ಲಾ ಮಟ್ಟದ ಉತ್ತಮ ಸಾಧಕ ಪ್ರಶಸ್ತಿಯು ಇವರಿಗೆ ದೊರಕಿದೆ. 2007ರಲ್ಲಿ ಹೋಬಳಿ ಮಟ್ಟದಲ್ಲಿ ಮೂಲ್ಕಿಯ ವಿಜಯ ರೈತರ ಸೇವಾ ಸಹಕಾರಿ ಸಂಘ ನಡೆಸಿದ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದಿರುವ ಇವರು 2009ರಲ್ಲಿ ತಾಲೂಕು ಮಟ್ಟದ ಸಾಧಕರಾಗಿ ಇಲಾಖೆಯಿಂದ ಗುರುತಿಸಿಕೊಂಡಿದ್ದಾರೆ. 2010ರಲ್ಲಿ ಇವರು ಪ್ರಶಸ್ತಿ ಪಡೆದ ಸಂದರ್ಭ ಇವರನ್ನು ಜೇಸಿಐ, ಲಯನ್ಸ್‌ ಮತ್ತು ರೋಟ ರಿಯಂತಹ ಸಮಾಜ ಸೇವಾ ಸಂಸ್ಥೆಗಳ ಲ್ಲದೆ ಕೆಲವು ಗಾಮೀಣ ಮಟ್ಟದಲ್ಲಿ ಕಾರ್ಯ ನಿರ್ವಹಿಸುವ ಸಂಘಟನೆಗಳು ಕೂಡ ಗುರುತಿಸಿ ಗೌರವಿಸಿದೆವು.
ಮೊಬೈಲ್‌ ಸಂಖ್ಯೆ: 9591464631

ಕೃಷಿಯಲ್ಲಿ ಹೊಂದಾಣಿಕೆ ಮುಖ್ಯ
ನಾನೊಬ್ಬ ಕೃಷಿಕ ಎನ್ನುವುದು ನನಗೆ ಹೆಮ್ಮೆ ಇದೆ. ಕೃಷಿ ಕೆಲಸವನ್ನು ನಿರ್ವಹಿಸುವಾಗ ಜತೆಗೆ ಪತ್ನಿ ಜಯಶ್ರೀ ಸಂಪೂರ್ಣ ಸಹಕಾರ ನೀಡುತ್ತಾರೆ. ಪತ್ನಿ ಮತ್ತು ನನ್ನ ಶ್ರಮದಿಂದ ಉತ್ತಮ ಇಳುವರಿ ಪಡೆಯುವಂತಾಗಿದೆ. ಕೃಷಿ ಮತ್ತು ಹೈನುಗಾರಿಕೆ ಎಂದರೆ ಪಂಚ ಪ್ರಾಣ. ನಾನು ಬಿಡುವಿನ ಎಲ್ಲ ಸಮಯವನ್ನು ಕೃಷಿಯಲ್ಲಿ ತೊಡಗಿಸಿಕೊಳ್ಳುತ್ತೇನೆ. ಕೃಷಿ ಮತ್ತು ಹೈನುಗಾರಿಕೆ ಒಂದಕ್ಕೊಂದು ಹೊಂದಾಣಿಕೆ ಹಾಗೂ ಕೊಡುಕೊಳ್ಳುವಿಕೆಯ ಒಂದು ವಿಷಯವಾಗಿದೆ. ಕೃಷಿಯ ತ್ಯಾಜ್ಯ ಮತ್ತು ಕೆಲವು ವಸ್ತುಗಳನ್ನು ಹೈನುಗಾರಿಕೆಗೆ ಉಪಯೋಗಿಸಿ ಯಶಸ್ವಿಯಾಗಿರುವುದರಿಂದ ಕೃಷಿ ಮತ್ತು ಹೈನುಗಾರಿಕೆಯನ್ನು ಜತೆಯಾಗಿ ನಿರ್ವಹಿಸಲಾಗುತ್ತಿದೆ. ಹೀಗಾಗಿ ಉತ್ತಮ ಪ್ರಗತಿಯ ಫಲವನ್ನು ಪಡೆಯುವುದಕ್ಕೆ ಸಾಧ್ಯವಾಗಿದೆ.
– ಬಾಲಚಂದ್ರ ಸನಿಲ್‌, ಪ್ರಗತಿಪರ ಕೃಷಿಕರು ಚಿತ್ರಾಪು ಮೂಲ್ಕಿ

ಸರ್ವೋತ್ತಮ ಅಂಚನ್‌, ಮೂಲ್ಕಿ

Advertisement

Udayavani is now on Telegram. Click here to join our channel and stay updated with the latest news.

Next