ಬೆಂಗಳೂರು: ಲೋಕಸಭೆ ಚುನಾವಣಾ ಪ್ರಚಾರಕ್ಕೆ ಹೊಸ ತಂತ್ರದ ಮೊರೆ ಹೋಗಿರುವ ಬಿಜೆಪಿ, ಏ.21 ಮತ್ತು 28ರಂದು “ನಾನು ಮೋದಿ ಪರಿವಾರ, ಮೋದಿಗಾಗಿ ಮೀಸಲು ಈ ಭಾನುವಾರ’ ಎನ್ನುವ ಅಭಿಯಾನವನ್ನು ಕಾರ್ಯಕರ್ತರು ಹಾಗೂ ಮತದಾರರಿಂದಲೇ ಮಾಡಿಸಲು ಮುಂದಾಗಿದೆ.
ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ಈ ಕುರಿತ ಪೋಸ್ಟರ್ ಹಾಗೂ ವಿಡಿಯೋ ಬಿಡುಗಡೆ ಮಾಡಿ ವಿವರಣೆ ನೀಡಿದ ರಾಜ್ಯ ಬಿಜೆಪಿ ಚುನಾವಣಾ ನಿರ್ವಹಣಾ ಸಮಿತಿ ಸಂಚಾಲಕ ವಿ.ಸುನೀಲ್ ಕುಮಾರ್, ಈಗಾಗಲೇ ಪ್ರಚಾರದ ಭಾಗವಾಗಿ ರಾಜ್ಯ ಹಾಗೂ ರಾಷ್ಟ್ರೀಯ ನಾಯಕರು ಸಭೆ, ಸಮಾವೇಶ, ರ್ಯಾಲಿ, ರೋಡ್ ಶೋಗಳನ್ನು ನಡೆಸುವುದರ ಜತೆಗೆ ಮನೆ-ಮನೆ ಪ್ರಚಾರ ಕಾರ್ಯ, ಮನೆಯಂಗಳದಲ್ಲಿ ನಡೆಯುವ ಸಂವಾದ ಸಭೆಗಳು ಬಿರುಸು ಪಡೆದಿವೆ ಎಂದರು.
ಇದರ ಜತೆಗೆ ಈ ಹೊಸ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಮೋದಿ ಪರವಾದ ಪ್ರಚಾರ ಕಾರ್ಯವನ್ನು ತಮ್ಮ ಮನೆಯ ಸುತ್ತಮುತ್ತ, ವ್ಯಾಪಾರ ಚಟುವಟಿಕೆಯ ಸುತ್ತಮುತ್ತ, ವಾಯುವಿಹಾರದ ಸ್ಥಳ, ಅಪಾರ್ಟ್ಮೆಂಟ್ ಸೇರಿದಂತೆ ತಂತಮ್ಮ ಸ್ಥಳದಲ್ಲಿ ಮೋದಿ ಪರವಾದ ಚಟುವಟಿಕೆಗಾಗಿ ಒಂದು ಭಾನುವಾರ ಮೀಸಲಿಡಲು ಮನವಿ ಮಾಡುತ್ತೇವೆ ಎಂದರು.
ಮೊದಲ ಹಂತ ಚುನಾವಣೆ ನಡೆಯಲಿರುವ 14 ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ 28 ಸಾವಿರ ಬೂತ್ಗಳಿದ್ದು, ಪ್ರತಿ ಬೂತ್ನಲ್ಲಿ ತಲಾ ಕನಿಷ್ಠ 50 ಜನರು ಗುಂಪಾಗಿ ಮೋದಿಯ ಪರ ಚುನಾವಣಾ ಪ್ರಚಾರ ಮಾಡಲಿದ್ದಾರೆ. ಅದೇ ರೀತಿ ಏ.28 ರಂದು ಎರಡನೇ ಹಂತದ ಚುನಾವಣೆ ನಡೆಯುವ ಬೂತ್ಗಳಲ್ಲಿ ಪ್ರಚಾರ ನಡೆಸಲಿದ್ದಾರೆ ಎಂದು ವಿವರಣೆ ನೀಡಿದರು.