Advertisement

ಕಮಲ ಪಡೆಗೆ ಹೊಸ ಸಾರಥಿ?- ಸಿ.ಟಿ.ರವಿಗೆ ರಾಜ್ಯ BJP ಅಧ್ಯಕ್ಷ ಸ್ಥಾನ ಸಾಧ್ಯತೆ

10:32 PM Jul 29, 2023 | Team Udayavani |

ಬೆಂಗಳೂರು: ಮಹತ್ವದ ಬೆಳವಣಿಗೆಯಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರಿಗೆ ಪಕ್ಷದ ರಾಷ್ಟ್ರೀಯ ಪದಾಧಿಕಾರಿಗಳ ಪಟ್ಟಿಯಿಂದ ಕೊಕ್‌ ನೀಡಲಾಗಿದ್ದು, ಅವರು ಬಿಜೆಪಿ ರಾಜ್ಯಾಧ್ಯಕ್ಷರಾಗಿ ನೇಮಕಗೊಳ್ಳುವ ಸಾಧ್ಯತೆ ಇದೆ ಎಂಬ ಚರ್ಚೆಗಳು ಪ್ರಾರಂಭವಾಗಿವೆ. ರಾಷ್ಟ್ರೀಯ ಪದಾಧಿಕಾರಿಗಳ ಪಟ್ಟಿಯಲ್ಲಿ ರಾಜ್ಯದ ಬಿ.ಎಲ್‌. ಸಂತೋಷ್‌ ಅವರನ್ನು ಮಾತ್ರ ಉಳಿಸಿಕೊಳ್ಳಲಾಗಿದ್ದು, ರಾಷ್ಟ್ರೀಯ ಸಂಘಟನ ಪ್ರಧಾನ ಕಾರ್ಯದರ್ಶಿಯಾಗಿ ಅವರ ಜವಾಬ್ದಾರಿ ಅಬಾಧಿತವಾಗಿದೆ.

Advertisement

ಶನಿವಾರ ಹೊಸ ಪದಾಧಿಕಾರಿಗಳ ಪಟ್ಟಿ ಪ್ರಕಟವಾಗಿದ್ದು, ಸಿ.ಟಿ. ರವಿ ಅವರಿಗೆ ಕೊಕ್‌ ನೀಡಿರುವುದು ತೀವ್ರ ಚರ್ಚೆಗೆ ಕಾರಣವಾಗಿದೆ. ಅದರ ಬೆನ್ನಲ್ಲೇ ಅವರಿಗೆ ರಾಜ್ಯಾಧ್ಯಕ್ಷ ಸ್ಥಾನ ಖಚಿತ ಎಂಬ ಮಾತುಗಳು ಬಿಜೆಪಿ ವಲಯದಲ್ಲೇ ಕೇಳಿಬಂದಿದೆ. ಆ. 2ರಂದು ಅವರು ದಿಲ್ಲಿಗೆ ಪ್ರಯಾಣ ಬೆಳೆಸಲಿದ್ದಾರೆ ಎಂಬ ಮಾಹಿತಿ ಇನ್ನಷ್ಟು ಕುತೂಹಲಕ್ಕೆ ಕಾರಣವಾಗಿದೆ. ಹೀಗಾಗಿ ವಿಪಕ್ಷ ನಾಯಕ ಸ್ಥಾನ ಲಿಂಗಾಯತ ಸಮುದಾಯಕ್ಕೆ ಒಲಿಯಬಹುದೆಂದು ತರ್ಕಿಸಲಾಗುತ್ತಿದೆ.

ಇದರ ಬೆನ್ನಲ್ಲೇ ಟ್ವೀಟ್‌ ಮಾಡಿರುವ ಸಿ.ಟಿ. ರವಿ, ವಿಶ್ವದ ಅತಿದೊಡ್ಡ ರಾಜಕೀಯ ಪಕ್ಷವಾದ ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಲು ಅವಕಾಶ ಮಾಡಿಕೊಟ್ಟ ಜೆ.ಪಿ. ನಡ್ಡಾ ಅವರಿಗೆ ತುಂಬು ಹೃದಯದ ಧನ್ಯವಾದಗಳು. ಈ ಜವಾಬ್ದಾರಿ ನನಗೆ ಬಹಳಷ್ಟು ಅನುಭವ ಮತ್ತು ಹೊಸ ಆಯಾಮವನ್ನು ನೀಡಿದೆ. ಬೂತ್‌ ಮಟ್ಟದ ಕಾರ್ಯಕರ್ತನಿಂದ ಹಿಡಿದು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸ್ಥಾನದವರೆಗಿನ ನನ್ನ ಪಯಣದಲ್ಲಿ ನಿರಂತರವಾಗಿ ಕಾರ್ಯಕರ್ತನ ಭಾವದಲ್ಲಿ ಕೆಲಸ ಮಾಡಿದ್ದೇನೆ. ಇನ್ನು ಮುಂದೆಯೂ ಅದೇ ರೀತಿ ಕೆಲಸ ಮಾಡುತ್ತೇನೆ. ಪಕ್ಷ ನೀಡಿದ ಜವಾಬ್ದಾರಿಯನ್ನು ಕಾಯಾ ವಾಚಾ ಮನಸಾ ನಡೆಸುತ್ತೇನೆ ಎಂದು ಬರೆ ದು ಕೊಂಡಿದ್ದಾರೆ.

ಸಂತೋಷ್‌ ಮಾತ್ರ
ಈ ಬಾರಿ ಪರಿಷ್ಕರಣೆಗೊಂಡ ಪದಾಧಿಕಾರಿಗಳ ಪಟ್ಟಿಯಲ್ಲಿ ರಾಜ್ಯದಿಂದ ಬಿ.ಎಲ್‌. ಸಂತೋಷ್‌ ಹೆಸರು ಮಾತ್ರ ಉಳಿದುಕೊಂಡಿದೆ. ರಾಷ್ಟ್ರೀಯ ಸಂಘಟನ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಯಾವುದೇ ಅವಧಿ ನಿಗದಿಯಾಗಿರುವುದಿಲ್ಲ. ಆರೆಸ್ಸೆಸ್‌ ವಾಪಸ್‌ ಕರೆಸಿಕೊಳ್ಳಲು ಬಯಸಿದಾಗ ಮಾತ್ರ ಆ ಹುದ್ದೆಗೆ ನೇಮಕಗೊಂಡ ವ್ಯಕ್ತಿಗಳು ಬದಲಾಗುತ್ತಾರೆ. ಹೀಗಾಗಿ ಸಂತೋಷ್‌ ಹೆಸರು ಪಟ್ಟಿಯಲ್ಲಿ ಉಳಿದುಕೊಂಡಿರುವುದಕ್ಕೆ ಪಕ್ಷದ ರಾಷ್ಟ್ರೀಯ ಲೆಕ್ಕಾಚಾರಗಳ ದೃಷ್ಟಿಯಿಂದ ಯಾವುದೇ ಮಹತ್ವವಿಲ್ಲ. ಆದರೆ ರಾಜ್ಯ ಬಿಜೆಪಿ ಬಣ ರಾಜಕಾರಣದ ಮಸೂರದಿಂದ ನೋಡಿದಾಗ ಈ ಬೆಳವಣಿಗೆ ಕುತೂಹಲಕ್ಕೆ ಕಾರಣವಾಗಿದೆ. ಟಿಕೆಟ್‌ ಹಂಚಿಕೆಯಲ್ಲಿ ಮಾಡಿದ ಪ್ರಯೋಗದಿಂದ ಪಕ್ಷಕ್ಕೆ ಸೋಲಾಯಿತು, ಇದಕ್ಕೆ ಸಂತೋಷ್‌ ನೇರ ಕಾರಣ ಎಂಬ ದೂರುಗಳು ವರಿಷ್ಠರ ನೆಲೆಯಲ್ಲಿ ಯಾವುದೇ ಪರಿಣಾಮ ಬೀರಿಲ್ಲ ಎಂದು ಇದರಿಂದ ಅರ್ಥೈಸಬಹುದಾಗಿದೆ.

ಬಿಎಸ್‌ವೈ ಸಹಕಾರ ಕೋರಿದ್ದ ರವಿ?
ಈ ಬೆಳವಣಿಗೆಗೂ ಕೆಲವು ದಿನಗಳ ಹಿಂದೆ ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಸಿ.ಟಿ. ರವಿ ಆಶೀರ್ವಾದ ಪಡೆದ ಫೋಟೋಕ್ಕೂ ಹೊಂದಾಣಿಕೆಯಾಗುತ್ತಿದ್ದು, ವರಿಷ್ಠರ ಸೂಚನೆ ಮೇರೆಗೆ ರವಿ ಅವರು ಯಡಿಯೂರಪ್ಪನವರ ಸಹಕಾರ ಕೋರಿ ಬಂದಿದ್ದರೆಂದು ವ್ಯಾಖ್ಯಾನಿಸಲಾಗಿದೆ. ಅಲ್ಲದೆ ಬಿ.ವೈ.ವಿಜಯೇಂದ್ರ ಅವರಿಗೆ ರಾಜ್ಯ ಪ್ರಧಾನ ಕಾರ್ಯದರ್ಶಿ ಪಟ್ಟ ಕಟ್ಟುವುದು ಖಚಿತ ಎಂದು ವಿಶ್ಲೇಷಿಸಲಾಗುತ್ತಿದೆ.

Advertisement

ವಿಪಕ್ಷ ನಾಯಕ ಯಾರು?
ರಾಜ್ಯಾಧ್ಯಕ್ಷ ಸ್ಥಾನ ಒಕ್ಕಲಿಗ ಸಮುದಾಯಕ್ಕೆ ಸೇರಿದ ಸಿ.ಟಿ. ರವಿಯವರಿಗೆ ದೊರೆತರೆ ಲಿಂಗಾಯತ ಸಮುದಾಯಕ್ಕೆ ಸೇರಿದ ನಾಯಕರಿಗೆ ವಿಪಕ್ಷ ನಾಯಕ ಸ್ಥಾನ ನೀಡುವ ಸಾಧ್ಯತೆ ಹೆಚ್ಚಿದೆ. ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಕೇಂದ್ರದ ಮಾಜಿ ಸಚಿವ ಬಸನಗೌಡ ಪಾಟೀಲ್‌ ಯತ್ನಾಳ್‌ ಮಧ್ಯೆ ಪೈಪೋಟಿ ಹೆಚ್ಚಿದ್ದು, ಅಂತಿಮ ಹಂತದಲ್ಲಿ ಹೊಸ ಪ್ರಯೋಗ ದೃಷ್ಟಿಯಿಂದ ಅರವಿಂದ ಬೆಲ್ಲದ್‌ ನೇಮಕಗೊಂಡರೂ ಅಚ್ಚರಿ ಇಲ್ಲ ಎಂದು ಬಿಜೆಪಿ ಮೂಲಗಳು ತರ್ಕಿಸುತ್ತಿವೆ.

Advertisement

Udayavani is now on Telegram. Click here to join our channel and stay updated with the latest news.

Next