Advertisement

ಬೊಗಳಿದ ನಾಯಿಗೆ ಇರಿದ ನೆರೆಮನೆಯಾತ

12:14 PM Jun 28, 2017 | Team Udayavani |

ಮೈಸೂರು: ಬೈಕ್‌ನಲ್ಲಿ ತೆರಳುತ್ತಿದ್ದ ಸಂದರ್ಭ ತಮ್ಮನ್ನು ಕಂಡು ನಾಯಿ ಬೊಗಳಿದ್ದರಿಂದ ಕುಪಿತಗೊಂಡ ಯುವಕನೊಬ್ಬ ಚಾಕುವಿನಿಂದ ಇರಿದು ನಾಯಿಯನ್ನು ಸಾಯಿಸಲು ಯತ್ನಿಸಿದ ವಿಚಿತ್ರ ಘಟನೆ ನಡೆದಿದೆ. ಮೈಸೂರಿನ ಎನ್‌.ಆರ್‌ ಮೊಹಲ್ಲಾದ ಎ.ಜೆ. ಬ್ಲಾಕ್‌ನಲ್ಲಿ ಈ ಘಟನೆ ನಡೆದಿದ್ದು, ಸ್ಥಳೀಯ ನಿವಾಸಿ ಜುಲ್ಫಿಕರ್‌(26) ಎಂಬಾತ ಚಾಕುವಿನಿಂದ ಇರಿದು ನಾಯಿಯನ್ನು ಸಾಯಿಸಲು ಯತ್ನಿಸಿದವನು. ಘಟನೆಯಿಂದ ಗಾಯಗೊಂಡಿರುವ ಆರೋಕ್ಯ ಮೇರಿ ಅವರ ಸಾಕು ನಾಯಿಗೆ ದಟ್ಟಗಳ್ಳಿಯಲ್ಲಿ ದಿ ವೂಪ್‌ ವ್ಯಾಗನ್‌ ವೆಟರ್ನರಿ ಕ್ಲಿನಿಕ್‌ ಮತ್ತು ಪೆಟ್‌ ಕ್ಲಿನಿಕ್‌ನಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

Advertisement

ಏನಿದು ಘಟನೆ: ಎ.ಜೆ. ಬ್ಲಾಕ್‌ ನಿವಾಸಿ ಆರೋಕ್ಯ ಮೇರಿ ಅವರ ಸಾಕು ನಾಯಿ ಭಾನುವಾರ ಸಂಜೆ 5 ಗಂಟೆ ಸುಮಾರಿನಲ್ಲಿ ಮೇರಿ ಅವರ ಪುತ್ರಿ ಆಸಿಯಾ ಭಾನು ಮಕ್ಕಳೊಂದಿಗೆ ಮನೆಗೆ ಬಂದ ಸಂದರ್ಭದಲ್ಲಿ ಅವರನ್ನು ಕಂಡು ಮುತ್ತಿಕೊಂಡಿದೆ. ಈ ವೇಳೆ ಇದೇ ಮಾರ್ಗವಾಗಿ ಬೈಕಿನಲ್ಲಿ ಬಂದ ನೆರೆ ಮನೆಯ ನಿವಾಸಿ ಜುಲ್ಫಿಕರ್‌ನನ್ನು ಕಂಡ ನಾಯಿ ಸಹಜವಾಗಿ ಬೊಗಳ ತೊಡಗಿದೆ.

ಇಷ್ಟಕ್ಕೇ ಕುಪಿತಗೊಂಡ ಜುಲ್ಫಿಕರ್‌ ಬೈಕ್‌ನಿಂದ ಇಳಿದು, ನಾಯಿಯ ಮಾಲೀಕರನ್ನು ನಿಂದಿಸಿದರಲ್ಲದೇ, ಕಲ್ಲಿನಿಂದ ಹೊಡೆದಿದ್ದಾರೆ. ಅಷ್ಟರಲ್ಲೇ ಹೊರಬಂದ ಆಸಿಯಾ ಭಾನು, ನಾಯಿಯನ್ನು ಮನೆಯ ಮಹಡಿಯ ಮೇಲೆ ಕಟ್ಟಿ ಹಾಕಿದ್ದಾರೆ. ಇಷ್ಟಕ್ಕೆ ಸುಮ್ಮನಾಗದ ಜುಲ್ಫಿಕರ್‌ ಕೆಲ ಹೊತ್ತಿನ ಬಳಿಕ ತನ್ನ ಸ್ನೇಹಿತರೊಂದಿಗೆ ಮನೆಗೆ ಬಂದು, ಮಹಡಿ ಮೇಲೆ ಮಲಗಿದ್ದ ನಾಯಿಯ ತಲೆ, ಕುತ್ತಿಗೆ ಹಾಗೂ ದವಡೆ ಭಾಗಕ್ಕೆ ಚಾಕುವಿನಿಂದ ಮನಬಂದಂತೆ ಇರಿದಿದ್ದಾನೆ.

ಈ ವೇಳೆ ನಾಯಿ ಕೂಗಾಟವನ್ನು ಗಮನಿಸಿ ಮೇರಿ ಹಾಗೂ ಅವರ ಮನೆಯವರು ಹೊರಬಂದಾಗ  ಅವರಿಗೂ ಚಾಕು ತೋರಿಸಿದ ಜುಲ್ಫಿಕರ್‌ ಹತ್ತಿರ ಬಂದರೆ ಕೊಲೆ ಮಾಡುವುದಾಗಿ ಬೆದರಿಸಿ ಸ್ಥಳದಿಂದ ಪರಾರಿಯಾಗಿದ್ದಾನೆ. ಈ ಸಂಬಂಧ ನಾಯಿಯ ಮಾಲೀಕರಾದ ಆರೋಕ್ಯ ಮೇರಿ ಎನ್‌.ಆರ್‌.ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಜುಲ್ಫಿàಕರ್‌ನ ಪತ್ತೆಗೆ ಶೋಧ ಕಾರ್ಯ ನಡೆಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next