Advertisement

ದೀಪಾವಳಿ ಹಣತೆಗಳಿಗೆ ಆಧುನಿಕ ಸ್ಪರ್ಶ

03:09 PM Oct 24, 2022 | Team Udayavani |

ಕುದೂರು: ದೀಪಾವಳಿ ಎಂದರೆ ಬೆಳಕಿನ ಹಬ್ಬ ಕಾರ್ತಿಕ ಮಾಸ ಆರಂಭದ ನಂತರ ಪ್ರತಿ ಮನೆ ಮನೆಗಳಲ್ಲೂ ಬೆಳಗುವ ದೀಪಗಳ ಸಾಲು ದೀಪಾವಳಿ ವೇಳೆಗೆ ವಿಶೇಷ ಮೆರಗು ಪಡೆಯುತ್ತದೆ. ಹತ್ತಿಯ ಬತ್ತಿ ಹೊಸದು ಮಣ್ಣಿನ ಹಣತೆಯಲ್ಲಿ ಎಳ್ಳೆಣ್ಣೆ ಸುರಿದು ಮನೆಯ ಮುಂದೆ 3 ಸಾಲಾಗಿ ಜೋಡಿಸಿ, ಹಣತೆ ಬೆಳಗಿಸುವುದು ಹಿಂದಿನಿಂದಲೂ ನೆಡೆದುಕೊಂಡು ಬಂದಿರುವ ಸಂಪ್ರದಾಯ. ದೀಪಾವಳಿ ಹಬ್ಬಕ್ಕೆ ಹಿಂದೆ ಪ್ರತಿ ಮನೆಯಲ್ಲೂ ಮಣ್ಣಿನ ಹಣತೆಗಳನ್ನು ಸಡಗರ, ಸಂಭ್ರಮದಿಂದ ಆಚರಿಸುತ್ತಿದ್ದರು.

Advertisement

ಇಂತಹ ಹಣತೆಗಳು ಇಂದು ಆಧುನಿಕ ಸ್ಪರ್ಶ ಪಡೆದಿದೆ. ಮಣ್ಣಿನ ಹಣತೆಗಳ ಸ್ಥಾನದಲ್ಲಿ ಪಿಂಗಾಣಿ, ಹಣತೆಗಳು, ಪ್ಲಾಸ್ಟಿಕ್‌, ಫೈಬರ್‌ ಹಣತೆಗಳು ಲಗ್ಗೆಯಿಟ್ಟಿವೆ. ದೀಪದ ಕೆಳಗೆ ಕತ್ತಲು ಎಂಬಂತೆ ಮತ್ತೂಬ್ಬರ ಮನೆಯ ದೀಪ ಬೆಳಗಲು ಮಣ್ಣಿನ ಹಣತೆ ತಯಾರಿಸುವ ಕುಂಬಾರರ ಬದುಕಿನಲ್ಲಿ ಕತ್ತಲು ಅವರಿಸಿದೆ. ದೀಪಾವಳಿ ಹಬ್ಬಕ್ಕೆ ಶ್ರೇಷ್ಟ ಮಣ್ಣಿನ ಹಣತೆಗಳನ್ನು ತಯಾರಿಸುವ ಕುಟುಂಬಗಳಿಗೆ ಇದೀಗ ವೈವಿಧ್ಯ ರೂಪದ ಪಿಂಗಾಣಿ ದೀಪಗಳು ಪೈಪೋಟಿ ನೀಡಿದ್ದು, ಒಂದೆಡೆ ಲೋಹದ ದೀಪಗಳ ಸ್ಟಾಂಡ್‌ಗಳು, ಪೈಬರ್‌ ದೀಪ, ಪ್ಲಾಸ್ಟಿಕ್‌ ದೀಪ, ವಿದ್ಯುತ್‌ ಅಲಂಕಾರಿಕ ಕೃತಕ ದೀಪಗಳು ಬಂದಿರುವುದರಿಂದ ರೇಷ್ಮೆ ಜಿಲ್ಲೆಯ ಕುಂಬಾರಿಕೆ ನೆಚ್ಚಿಕೊಂಡಿರುವ ಕುಟು ಂಬಗಳಿಗೆ ನೀರವ ಮೌನ ಅವರಿಸಿದೆ.

ಪ್ರತಿ ವರ್ಷ ದೀಪಾವಳಿ ಬಂತೆಂದರೆ ಕೈ ತುಂಬಾ ಕೆಲಸದ ಜೊತೆಗೆ ಕೆಲಸಕ್ಕೆ ತಕ್ಕಂತೆ ಹಣ ದೊರೆಯುತ್ತಿತ್ತು. ಈ ವರ್ಷ ದೀಪಾವಳಿ ಇವರ ಪಾಲಿಗೆ ಸಂಭ್ರಮಿ ಸುವುದಕ್ಕಿಂತ ಬೇಸರ ತಂದಿದೆ.

ಪಿಂಗಾಣಿ ದೀಪದ ಪೈಪೋಟಿ: ಇತ್ತೀಚಿನ ಕೆಲ ವರ್ಷಗಳಲ್ಲಿ ಹಣತೆ ಉದ್ಯಮದಲ್ಲಿ ಬದಲಾವಣೆ ಗಾಳಿ ಬೀಸಿದೆ. ಮಣ್ಣಿನ ಹಣತೆಯ ಪರ್ಯಾಯವಾಗಿ ಆಧುನಿಕ ಸ್ಪರ್ಶ ಪಡೆದ ಪಿಂಗಾಣಿ ಹಣತೆ, ಚೀನಿ ಮಣ್ಣಿನ ಹಣತೆಗಳು ಕುಂಬಾರರ ಬದುಕಿನಲ್ಲಿ ಬಿರುಗಾಳಿ ಬೀಸಿದೆ. ಮಣ್ಣು ಸಿಗುವುದೇ ಕಷ್ಟ: ಕುಂಬಾರರಿಗೆ ಮಣ್ಣೇ ಬಂಡವಾಳ. ಆದರೆ, ಈ ಬಾರಿ ಉತ್ತಮವಾಗಿ ಮಳೆಯಾಗಿರುವುದರಿಂದ ಕೆರೆಕಟ್ಟೆಗಳೆಲ್ಲ ಭರ್ತಿಯಾಗಿ ಮಣ್ಣು ಸಿಗುವುದೇ ಕಷ್ಟವಾಗುತ್ತಿದೆ. ಇದರಿಂದ ದೀಪ ತಯಾರಿಕೆಗೆ ಬೇಕಾದ ಹದವಾದ ಮಣ್ಣು ಸಿಗುತ್ತಿಲ್ಲ. ಹೀಗಾಗಿ ಶೇಖರಣೆ ದೊಡ್ಡ ಕೆಲಸ ಎನ್ನುತ್ತಾರೆ ಕುಂಬಾರರು.

ಕೈ ತುಂಬಾ ಕೆಲಸ: ಹಿಂದೆ ದೀಪಾವಳಿ ಬಂತೆಂದರೆ ಸಾಕು, ಕುಂಬಾರರಿಗೆ ಕೈತುಂಬಾ ಕೆಲಸವಿತ್ತು. ಹಬ್ಬಕ್ಕೂ ಒಂದು ತಿಂಗಳ ಮುಂಚೆ ಹಣತೆ ತಯಾರಿಸಲು ಸಿದ್ಧತೆ ಆರಂಭಿಸಿ, ತಿಂಗಳ ಪೂರ್ಣ ಮನೆಯ ಎಲ್ಲಾ ಸದಸ್ಯರು ಹಣತೆಗಳನ್ನು ತಯಾರಿಸುತ್ತಿದ್ದರು. ಹಬ್ಬಕ್ಕೆ ಒಂದು ವಾರ ಮುಂಚೆಯೇ ತಯಾರಿಸಿದ ಹಣತೆಗಳ ಮಾರಾಟ ಆರಂಭಿಸುತ್ತಿದ್ದರು. ಇದೊಂದು ಹಬ್ಬದಲ್ಲಿ ಆದ ದುಡಿಮೆ 3-4 ತಿಂಗಳ ಜೀವನ ನಿರ್ವಹಣೆಗೆ ಸಹಕಾರಿಯಾಗುತ್ತಿತ್ತು. ಅಲ್ಲದೆ, ಬೇರೆ ಮಣ್ಣಿನ ಪರಿಕರಗಳ ತಯಾರಿಕೆಗೆ ಸ್ವಲ್ಪ ಮಟ್ಟಿನ ಬಂಡವಾಳ ತಂದು ಕೊಡುತ್ತಿತ್ತು ಎನ್ನುತ್ತಾರೆ ಕುಂಬಾರರು. ನಮಗೆ ಕುಂಬಾರಕೆ ಬಿಟ್ಟರೆ ಬೇರೆ ಕಸುಬು ಗೊತ್ತಿಲ್ಲ. ಕುಂಬಾರಿಕೆ ಉಳಿಸಲು ಅಗತ್ಯ ಕ್ರಮ ಕೈಗೊಳ್ಳಬೇಕಿದೆ. ಕೆಲವು ಸಮುದಾಯದವರು ಮಾತ್ರ ಇಂದಿಗೂ ಮಂಗಳ ಕಾರ್ಯಗಳಿಗೆ ಉಪಯೋಗಿಸುತ್ತಾರೆ.

Advertisement

ಮಣ್ಣಿನ ವೈವಿಧ್ಯ ದೀಪಗಳು: ಆಧುನಿಕತೆ ತಕ್ಕಂತೆ ವೈವಿಧ್ಯಮಯ ವಿನ್ಯಾಸಗಳಿಂದ ಕುಂಬಾರಿಕೆಯ ಕೈ ಚಳಕದಿಂದ ಅರಳಿದ್ದ ದೀಪಗಳು ಹಿಂದೆ ದೀಪಾವಳಿಯಲ್ಲಿ ಸ್ಥಾನಗಿಟ್ಟಿಸಿಕೊಂಡಿದ್ದವು. ಸುಮಾರು 50 ವರ್ಷದಿಂದ ದೀಪಗಳು, ಮತ್ತಿತ್ತರ ಅಲಂಕಾರಿಕ ವಸ್ತುಗಳ ವ್ಯಾಪಾರ ಮಾಡುವವರಿಗೆ ಕಳೆದ 2 ವರ್ಷದಿಂದ ಕೊರೊನಾ ಹಿನ್ನೆಲೆ ವ್ಯಾಪಾರವಾಗದೆ ಬಹಳ ನಷ್ಟವಾಗಿ, ದೀಪಗಳು ಗೂಡು ಸೇರುವಂತಾಗಿದೆ. ಈ ಬಾರಿ ತಕ್ಕಮಟ್ಟಿಗೆ ವ್ಯಪಾರ ನಡೆಯುತ್ತಿದೆ. ಕುಂಬಾರಿಕೆ ಹೊರತು, ಬೇರೆ ಉದ್ಯೋಗ ನಮಗೆ ಬರುವುದಿಲ್ಲ. – ಸಂಜೀವಯ್ಯ ಕುಂಬಾರರು, ಕುಡಿಕೆ ಬೇಗೂರು

ರಂಜಾನ್‌ ಮಾಸದಿಂದ ಮಡಕೆ, ದೀಪಗಳ ಮಾರಾಟ ಶುರುವಾಗುತ್ತದೆ. ಕಾರ್ತಿಕ ಮಾಸ, ರಥಸಪ್ತಮಿ, ಸಂಕ್ರಾತಿ ಹಬ್ಬಗಳವರೆಗೂ ದೀಪದ ಮಾರಾಟವಿರುತ್ತದೆ. ನಮ್ಮ ಕುಟುಂಬಗಳ ಮೂಲ ಕಸುಬಾಗಿದ್ದ ಮಡಕೆ ತಯಾರಿಕೆ, ಇಂದು ಉಪಕಸುಬಾಗಿದೆ. – ರಾಜಣ್ಣ ಬಾಣವಾಡಿ, ಕುಂಬಾರರು

ಪ್ಲಾಸ್ಟಿಕ್‌ ವಸ್ತುಗಳ ಬಳಕೆ ಬಂದ ಮೇಲೆ ಕುಂಬಾರಿಕೆಗೆ ಕುತ್ತು ಬಂದಿದೆ. ಸರ್ಕಾರ ಕುಲ ಕಸುಬುದಾರರ ನೆರವಿಗೆ ಬರಬೇಕು. – ಕೆ.ಆರ್‌.ಯತಿರಾಜು, ಮಾಜಿ ಅಧ್ಯಕ್ಷರು, ತಾಪಂ

ಕೊರೊನಾ ಮಹ ಮಾರಿಯಿಂದಾಗಿ ದೀಪಗಳ ವ್ಯಾಪಾರಕ್ಕೆ ಹೊಡೆತ ಬಿದ್ದಿತ್ತು. ಈಗ ಸ್ವಲ್ಪ ಚೇತರಿಸಿಕೊಂಡಿದೆ. ಹಣತೆ ವ್ಯಾಪಾರ ಮಂದಗತಿಯಲ್ಲಿ ಸಾಗಿದೆ. – ರೂಪ ಮಂಜುನಾಥ್‌, ವ್ಯಾಪಾರಸ್ಥರು

– ಕೆ.ಎಸ್‌.ಮಂಜುನಾಥ್‌

Advertisement

Udayavani is now on Telegram. Click here to join our channel and stay updated with the latest news.

Next