Advertisement

ಶತಮಾನ ಕಳೆದರೂ ಮಾದರಿಯಾಗದ ಶಾಸಕರ ಮಾದರಿ ಶಾಲೆ

03:36 PM Oct 17, 2022 | Team Udayavani |

ತೆಲಸಂಗ: ಈಗಿನ ಆಂಗ್ಲ ಮಾಧ್ಯಮ ಶಾಲೆಗಳ ಆಕರ್ಷಣೆಯ ನಡುವೆಯೂ ಬ್ರಿಟಿಷರ ಕಾಲದಲ್ಲಿ ಸ್ಥಾಪನೆಗೊಂಡು ಈಗಲೂ ವಿದ್ಯೆಯ ಬೆಳಕನ್ನು ಪಸರಿಸುತ್ತಿರುವ ಗ್ರಾಮದ ನಮ್ಮೂರ ಸರಕಾರಿ ಶಾಸಕರ ಮಾದರಿ ಹಿರಿಯ ಪ್ರಾಥಮಿಕ ಶಾಲೆಗೆ 151 ವರ್ಷ ತುಂಬಿದರೂ ಶತಮಾನೋತ್ಸವದ ಸಂಭ್ರಮ ಕಾಣದೇ ಅನಾಥವಾಗಿದೆ.

Advertisement

ಸರಕಾರ ಪ್ರಸಕ್ತ ಆರ್ಥಿಕ ವರ್ಷದಲ್ಲಿ ಶತಮಾನ ಕಂಡ ರಾಜ್ಯದ 143 ಸರಕಾರಿ ಶಾಲೆಗಳಿಗೆ 20 ಕೋಟಿ ಅನುದಾನ ಬಿಡುಗಡೆ ಮಾಡಿತ್ತು. ಬೆಳಗಾವಿ ಜಿಲ್ಲೆಯ 5 ಶಾಲೆಗಳನ್ನು ಅನುದಾನಕ್ಕಾಗಿ ಆಯ್ಕೆ ಮಾಡಲಾಗಿದೆ. ಆದರೆ ಚಿಕ್ಕೋಡಿ ಶೆ„ಕ್ಷಣಿಕ ಜಿಲ್ಲೆಯಲ್ಲಿನ ತೆಲಸಂಗದಲ್ಲಿನ 151 ವರ್ಷದ ಹಳೆಯ ಶಾಲೆ ಅಭಿವೃದ್ಧಿಗಾಗಿ ಬಾಯೆ¤ರೆದು ನಿಂತಿದ್ದರೂ ಪಟ್ಟಿಯಿಂದ ಹೆಸರು ಕೈ ಬಿಟ್ಟಿದ್ದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.1871ರಲ್ಲಿ ಪ್ರಾರಂಭವಾದ ಜಿಲ್ಲೆಯಲ್ಲಿಯೇ
ಅತ್ಯಂತ ಹಿರಿಯದಾದ ಸರಕಾರಿ ಶಾಲೆ ಇದು. ಇಂದು ದಯನೀಯ ಸ್ಥಿತಿ ತಲುಪಿದ್ದು, ಇಲ್ಲಗಳ ಸರಮಾಲೆಗೆ ಈ ಕನ್ನಡ ಶಾಲೆ ನಲುಗಿ ಹೋಗಿದೆ. ಹೆಸರಿಗೆ ಮಾತ್ರ ಶಾಸಕರ ಮಾದರಿ ಶಾಲೆ ಇದಾಗಿದೆ ಎಂದು ಜನ ದೂರುತ್ತಿದ್ದಾರೆ.

2 ಎಕರೆ ಜಾಗದಲ್ಲಿ ಬ್ರಿಟಿಷ ಕಾಲದ ಕೆಲ ಕಟ್ಟಡಗಳನ್ನು ಬೀಳಿಸಿ ಕಟ್ಟಲಾಗಿದ್ದು, ಕೆಲ ಕೊಠಡಿಗಳ ನವೀಕರಣದ ಅವಶ್ಯಕತೆ ಇದೆ. 20 ಸಾವಿರ ಜನಸಂಖ್ಯೆಯ ಗ್ರಾಮದಲ್ಲಿ 151 ವರ್ಷ ಹಳೆಯ ಶಾಲೆ ಇದ್ದರೂ ಹೆ„ಟೆಕ್‌ ಸ್ಪರ್ಷ ಇಲ್ಲ, ಸಾವಿರಾರು ಮಕ್ಕಳು ಓದುತ್ತಿದ್ದ ಶಾಲೆಯಲ್ಲೀಗ ಕೇವಲ 317 ಮಕ್ಕಳು ಓದುತ್ತಿದ್ದು, 11 ಜನ ಶಿಕ್ಷಕರಿದ್ದಾರೆ. ಸೌಲಭ್ಯಗಳಿಲ್ಲದೇ ಮಕ್ಕಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕುಸಿಯುತ್ತಿದೆ.

ಪ್ರೌಢಶಾಲೆಗೆ ಹಿಂದೇಟು ಏಕೆ?; ಸುಮಾರು 20 ಸಾವಿರ ಜನಸಂಖ್ಯೆ ಹೊಂದಿದ ತೆಲಸಂಗ ಹೋಬಳಿಯೂ ಹೌದು. ಆದರೆ ಇಲ್ಲಿ ಇನ್ನುವರೆಗೂ ಸರಕಾರಿ ಪ್ರೌಢಶಾಲೆ ಇಲ್ಲದಿರುವುದು ವಿಪರ್ಯಾಸದ ಸಂಗತಿ. ಒಣ ಬೇಸಾಯದ ಬಡ ಕೂಲಿ ಕಾರ್ಮಿಕರನ್ನೇ ಹೆಚ್ಚು ಹೊಂದಿದ ಈ ಗ್ರಾಮದಲ್ಲಿ 10ನೇ ತರಗತಿ ವರೆಗೆ ವರ್ಗಗಳ ವಿಸ್ತರಣೆ ಹಾಗೂ ಪಿಯು ಕಾಲೇಜು ತೆರಯುವ ಅವಶ್ಯಕತೆ ಇದೆ. ಇಷ್ಟೊಂದು ದೊಡ್ಡ ಗ್ರಾಮದಲ್ಲಿ ಸರಕಾರಿ ಹೈಸ್ಕೂಲ್‌ ತೆರೆಯುವುದಕ್ಕೆ ಶಿಕ್ಷಣ ಇಲಾಖೆ ಹಿಂದೇಟು ಹಾಕುತ್ತಿರುವುದೇಕೆ ಎನ್ನುವ ಅನುಮಾನ ಗ್ರಾಮಸ್ಥರನ್ನು ಕಾಡುತ್ತಿದೆ.

ಶಾಸಕರ ಮಾದರಿ ಶಾಲೆಗೆ ಬೇಕಿದೆ ಅನುದಾನ: ವಿದ್ಯಾರ್ಥಿಗಳು ಕೂಡ್ರಲು ಕೊಠಡಿಗಳಲ್ಲಿ ಬೆಂಚ್‌ ಗಳಿಲ್ಲ. ನೆಲದ ಮೇಲೆ ಕುಳಿತು ಪಾಠ ಕೇಳಬೇಕು. ಸ್ಮಾರ್ಟ್‌ ಕ್ಲಾಸ್‌ ಇಲ್ಲ. ಗ್ರಂಥಾಲಯ ಕೊಠಡಿ, ಕ್ರೀಡಾ ಕೊಠಡಿ, ಸಭಾ ಭವನ, ಸಿಸಿ ಕ್ಯಾಮೆರಾ, ಗಣಕಯಂತ್ರದ ಕೊಠಡಿ, ಶುದ್ಧ ಕುಡಿಯುವ ನೀರು ಘಟಕ, ಡೈನಿಂಗ್‌ ಹಾಲ್‌ ಇಲ್ಲ. ಇದು ಶಾಸಕರ ಮಾದರಿ ಶಾಲೆಯಾಗಿರುವುದರಿಂದ ಅವರೇ ಆಸಕ್ತಿ ವಹಿಸಿ ಶಾಲೆ ಅಭಿವೃದ್ಧಿಗೆ ಮುಂದಾಗಬೇಕಿದೆ. ಶಿಕ್ಷಣ ಇಲಾಖೆಯು ಮುತುವರ್ಜಿ ವಹಿಸಿ ಶತಮಾನೋತ್ಸವದ ಹೆಸರಲ್ಲಿ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್‌ ನೀಡಬೇಕಿದೆ

Advertisement

ಎಂ.ಎಲ್‌.ಎ.,ಎಂಪಿ, ಎಂಎಲ್‌ಸಿ ಗಳು ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ವಿಶೇಷ ಅನುದಾನ ನೀಡುತ್ತಾರೆ. ಬಡ ಮಕ್ಕಳು ಓದುವ ಸರಕಾರಿ ಶಾಲೆಗೇಕೆ ನೀಡುತ್ತಿಲ್ಲ?ಗ್ರಾಮ 20 ಸಾವಿರ ಜನಸಂಖ್ಯೆ ಹೊಂದಿದರೂ ಪ್ರೌಢಶಾಲೆಯನ್ನಾಗಿ ಮೇಲ್ದರ್ಜೆಗೇರಿಸಿಲ್ಲ. ಅಧಿ ಕಾರಿ ಹಾಗೂ ಜನಪ್ರತಿನಿ ಧಿಗಳ ಖಾಸಗಿ ಶಿಕ್ಷಣ ಸಂಸ್ಥೆಗಳ ಮೇಲಿನ ಪ್ರೀತಿಗೆ ಶತಮಾನ ಕಂಡ ಶಾಲೆ ಬಡವಾಗಿದೆ. ಬಡ ಮಕ್ಕಳು ಪರದೇಶಿಗಳಂತಾಗಿದ್ದಾರೆ. ಬಡವರ ಮನವಿಗೆ ಯಾರೊಬ್ಬರೂ ಕಿವಿಗೊಡುತ್ತಿಲ್ಲ.
ಅಪ್ಪು ಜಮಾದರ, ತೆಲಸಂಗ ಬ್ಲಾಕ್‌ ಕಾಂಗ್ರೆಸ್‌ ಅಲ್ಪಸಂಖ್ಯಾತರ ಘಟಕ ಅಧ್ಯಕ್ಷ

ಇಲ್ಲಿಯ ಹಳೆಯ ವಿದ್ಯಾರ್ಥಿಗಳೆಲ್ಲ ಸೇರಿ ಶತಮಾನೋತ್ಸವ ಆಚರಿಸಲು ಸಭೆ ಸೇರಿ ಸಿದ್ದತೆಯನ್ನೂ ನಡೆಸಿದ್ದರು. ಆದರೆ ಅಭಿವೃದ್ಧಿ ಹೊಂದಿರದ ಶಾಲೆಯಲ್ಲಿ ಬೃಹತ್‌ ಕಾರ್ಯಕ್ರಮ ಹಮ್ಮಿಕೊಂಡರೆ ಅಪಮಾನವಾಗುತ್ತದೆ. ಹೀಗಾಗಿ ಮೊದಲು ಅಭಿವೃದ್ಧಿ ಪಡಿಸೋಣ. ನಂತರ ಶತಮಾನೋತ್ಸವ ಆಚರಿಸೋಣ ಎಂದು ತೀರ್ಮಾನಿಸಲಾಯಿತು. ಈಗ 151 ವರ್ಷ ಕಳೆದರೂ ಮತ್ತೆ ಯಾರೊಬ್ಬರೂ ಈ ಬಗ್ಗೆ ತಲೆ ಕೆಡಿಸಿಕೊಳ್ಳಲಿಲ್ಲ.

ಬಿ.ಎಚ್‌.ಶೆಲ್ಲೆಪ್ಪಗೋಳ, ಮುಖ್ಯಶಿಕ್ಷಕ ತೆಲಸಂಗ.

*ಜೆ.ಎಮ್‌.ಖೊಬ್ರಿ

Advertisement

Udayavani is now on Telegram. Click here to join our channel and stay updated with the latest news.

Next