Advertisement

ಯುವತಿಗೆ ಶಿಳ್ಳೆ ಹೊಡೆದ ವ್ಯಕ್ತಿ ಸೆರೆ

06:35 AM Mar 20, 2019 | Team Udayavani |

ಬೆಂಗಳೂರು: ಮುಂಜಾನೆ ವಾಕಿಂಗ್‌ ಹೊರಟಿದ್ದ ಯುವತಿಯನ್ನು ಪ್ರತಿನಿತ್ಯ ಹಿಂಬಾಲಿಸಿ ಶಿಳ್ಳೆ ಹೊಡೆದು ಲೈಂಗಿಕ ಕಿರುಕುಳ ನೀಡುತ್ತಿದ್ದ ವ್ಯಕ್ತಿಯನ್ನು ಪುಟ್ಟೇನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಯುವತಿ ನೀಡಿದ ದೂರಿನ ಅನ್ವಯ ಆರೋಪಿ ವೀರಯ್ಯ (44) ಎಂಬಾತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಬಂಧಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

ಸಾಫ್ಟ್ವೇರ್‌ ಎಂಜಿನಿಯರ್‌ ಆಗಿರುವ 21 ವರ್ಷದ ಯುವತಿ, ಜೆ.ಪಿನಗರ 6ನೇ ಹಂತ ಸಮೀಪದ ಜರಗನಹಳ್ಳಿ ರಸ್ತೆಯಲ್ಲಿ ಪ್ರತಿ ದಿನ ಬೆಳಗ್ಗೆ 6ರಿಂದ 7ಗಂಟೆಯವರೆಗೆ ತನ್ನ ನಾಯಿ ಹಿಡಿದುಕೊಂಡು ವಾಕಿಂಗ್‌ ಮಾಡುತ್ತಿದ್ದರು. ಇದೇ ಸಮಯಕ್ಕೆ ಅಲ್ಲಿಗೆ ಬರುತ್ತಿದ್ದ ಆರೋಪಿ, ಯುವತಿಯನ್ನು ಹಿಂಬಾಲಿಸಿ ಶಿಳ್ಳೆಹೊಡೆಯುವುದು, ಹಾಡು ಹೇಳುವ ಮೂಲಕ ಆಕೆಯ ಗಮನ ಸೆಳೆಯಲು ಚೇಷ್ಟೆಗಳನ್ನು ಮಾಡುತ್ತಿದ್ದ.

ಫೆ.15ರಿಂದ ಪ್ರತಿ ದಿನ ವಾಕಿಂಗ್‌ಗೆ ಬರುವ ಸಮಯವನ್ನೇ ನೋಡಿಕೊಂಡು ರಸ್ತೆಯಲ್ಲಿ ಪ್ರತ್ಯಕ್ಷನಾಗುತ್ತಿದ್ದ. ಅಸಭ್ಯ ವರ್ತನೆ ಮಾಡುತ್ತಿದ್ದ. ಇದನ್ನು ಗಮನಿಸಿದ್ದ ಯುವತಿ, ಕೆಲ ದಿನಗಳ ಹಿಂದೆ ಆತನನ್ನು ಏಕೆ ಹೀಗೆ ಮಾಡುತ್ತೀದ್ದೀರಿ ಎಂದು ಪ್ರಶ್ನಿಸಿದ್ದರು. ಈ ವೇಳೆ ರಸ್ತೆಯಲ್ಲಿ ಯಾರೂ ಇಲ್ಲದನ್ನು ಗಮನಿಸಿದ ಆರೋಪಿ ಲೈಂಗಿಕ ಕಿರುಕುಳ ನೀಡಿ ಪರಾರಿಯಾಗಿದ್ದ.

ಬಳಿಕ ಯುವತಿ ನೀಡಿದ ದೂರಿನ ಅನ್ವಯ ಪೊಲೀಸರು ಮಫ್ತಿಯಲ್ಲಿ ಆರೋಪಿ ಬಂಧನಕ್ಕೆ ಕಾರ್ಯತಂತ್ರ ರೂಪಿಸಿದ್ದರು. ಫೆ.16ರಂದು ಮುಂಜಾನೆ ಯುವತಿ ವಾಕಿಂಗ್‌ಗೆ ಹೋದಾಗ ಆರೋಪಿ ಪುನಃ ಅಸಭ್ಯ ವರ್ತನೆ ಆರಂಭಿಸಿದ್ದು, ಕೂಡಲೇ ಪೊಲೀಸರು ಆತನನ್ನು ಬಂಧಿಸಿದ್ದರು.

ಊದುಕಡ್ಡಿ ವ್ಯಾಪಾರ ಮಾಡುವ ಆರೋಪಿ ವೀರಯ್ಯನಿಗೆ ಇಬ್ಬರು ಗಂಡು ಮಕ್ಕಳಿದ್ದು, ಕುಟುಂಬದ ಜತೆ ವಾಸವಿದ್ದಾನೆ. ಸದ್ಯ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು, ತನಿಖೆ ಮುಂದುವರಿಸಲಾಗಿದೆ  ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next