Advertisement

ಒಂದು ಮಾಡಿದ ಲೋಕ ಅದಾಲತ್‌! ವಿಚ್ಛೇದನ ಪ್ರಕರಣಗಳ ವಿಲೇವಾರಿಯೇ ಹೆಚ್ಚು

02:14 AM Dec 19, 2021 | Team Udayavani |

ಬೆಂಗಳೂರು: ರಾಜ್ಯಾದ್ಯಂತ ಶನಿವಾರ ಮೆಗಾ ಲೋಕ ಅದಾಲತ್‌ ನಡೆದಿದ್ದು, ಹಲವಾರು ವರ್ಷಗಳಿಂದ ಬೇರೆ ಬೇರೆಯಾಗಿದ್ದ ಸತಿ-ಪತಿಗಳನ್ನು ಒಂದು ಮಾಡುವಲ್ಲಿ ಯಶಸ್ವಿಯಾಗಿದೆ. ಅಪ್ಪ-ಅಮ್ಮನನ್ನು ಸಾಕಲು ಒಪ್ಪದೆ ಕೋರ್ಟ್‌ಗೆ ಅಲೆದಾಡುತ್ತಿದ್ದ ಮಗನೊಬ್ಬ ಇನ್ನು ಮುಂದೆ ಚೆನ್ನಾಗಿ ನೋಡಿಕೊಳ್ಳುತ್ತೇನೆ ಎಂದು ಮನೆಗೆ ಕರೆದುಕೊಂಡು ಹೋಗಿರುವ ಪ್ರಸಂಗವೂ ನಡೆದಿದೆ. ವಿಶೇಷವೆಂದರೆ ಈ ಬಾರಿ ವಿಚ್ಛೇದನ ಪ್ರಕರಣಗಳೇ ಹೆಚ್ಚಾಗಿ ವಿಲೇವಾರಿಯಾಗಿವೆ. ಇವುಗಳಲ್ಲಿ ಕೆಲವು ಆಸಕ್ತಿದಾಯಕ ಪ್ರಕರಣಗಳು ಇಲ್ಲಿವೆ.

Advertisement

ಅಪ್ಪ-ಅಮ್ಮ ಇಬ್ಬರೂ ಬೇಕು
ಗದಗದಲ್ಲಿ ನಡೆದ ಲೋಕ ಅದಾಲತ್‌ನ ಪ್ರಮುಖ ಘಟನೆ ಇದು. ಲೋಕ ಅದಾಲತ್‌ ನಡೆಸುತ್ತಿದ್ದ ನ್ಯಾಯಾಧೀಶರೊಬ್ಬರು ಅನೌಪಚಾರಿಕವಾಗಿ ಪ್ರತ್ಯೇಕವಾಗಲು ಹೊರಟಿದ್ದ ದಂಪತಿಯ ಮಗಳನ್ನು “ನೀನು ಇಲ್ಲೇಕೆ ಬಂದೆ’ ಎಂದು ಪ್ರಶ್ನಿಸಿದರು. ಆಗ ಆಕೆ “ನಾನು ಅಪ್ಪ-ಅಮ್ಮನ ಮದುವೆಗೆ ಬಂದಿದ್ದೇನೆ’ ಎಂದು ಉತ್ತರಿಸಿದಳು. ಅಪ್ಪ-ಅಮ್ಮ ಇಬ್ಬರಲ್ಲಿ ನಿನಗೆ ಯಾರು ಬೇಕು ಎಂಬ ಪ್ರಶ್ನೆಗೆ “ಇಬ್ಬರೂ ಬೇಕು’ ಎಂದಿದ್ದಾಳೆ. ಈ ಜೋಡಿಯ ಸಹಿತ ಶನಿವಾರದ ಲೋಕ ಅದಾಲತ್‌ ನಲ್ಲಿ ಇಲ್ಲಿ ಒಟ್ಟು ಎಂಟು ದಂಪತಿ ರಾಜಿ ಸಂಧಾನದ ಮೂಲಕ ಒಟ್ಟಾಗಿ ಬಾಳಲು ನಿರ್ಧರಿಸಿವೆ.

ಶೈಕ್ಷಣಿಕ ಸಾಲದ ಬಡ್ಡಿ ಮನ್ನಾ
ವಿದ್ಯಾರ್ಥಿನಿಯ ಸಾಲ ಸಂಕಷ್ಟವನ್ನು ಹುಬ್ಬಳ್ಳಿಯಲ್ಲಿ ನಡೆದ ಲೋಕ ಅದಾಲತ್‌ ಪರಿಹರಿಸಿದೆ. 2013ರಲ್ಲಿ ಈಕೆ 4 ಲಕ್ಷ ರೂ.ಗಳನ್ನು ಶೈಕ್ಷಣಿಕ ಸಾಲವಾಗಿ ಪಡೆದಿದ್ದಳು. ಆದರೆ ತಂದೆ ಸಾವನ್ನಪ್ಪಿದ್ದರಿಂದ ಈಕೆ ಆರ್ಥಿಕ ಸಂಕಷ್ಟದಲ್ಲಿದ್ದಳು. ಅತ್ತ ಬ್ಯಾಂಕಿನ ಅಧಿಕಾರಿಗಳು ವಸೂಲಿಗಾಗಿ ಬೆನ್ನುಬಿದ್ದಿದ್ದರು. ಈ ಪ್ರಕರಣ ಅದಾಲತ್‌ನಲ್ಲಿ ಬಂದು, ನ್ಯಾಯಾಧೀಶರು ಮತ್ತು ವಕೀಲರ ರಾಜಿಯಿಂದಾಗಿ ಸಾಲದ ಮೇಲಿನ ಬಡ್ಡಿ ಕೈಬಿಡಲು ಬ್ಯಾಂಕ್‌ ಒಪ್ಪಿದೆ.

ಒಂದಾದ 25 ದಂಪತಿ
ಮೈಸೂರಿನಲ್ಲಿ ನಡೆದ ಲೋಕ ಅದಾಲತ್‌ನಲ್ಲಿ 25 ದಂಪತಿಗಳು ಮತ್ತೆ ಒಂದಾಗುವುದಾಗಿ ಹೇಳಿದ್ದಾರೆ. ಇಲ್ಲಿ ಒಟ್ಟು 128 ವಿಚ್ಛೇದನ ಪ್ರಕರಣಗಳಿದ್ದವು.

ಅಪ್ಪ-ಅಮ್ಮನಿಗೆ ಆಶ್ರಯ
ಚಿಕ್ಕಬಳ್ಳಾಪುರದಲ್ಲಿ ನಡೆದ ಲೋಕ ಅದಾಲತ್‌ನಲ್ಲಿ ವೃದ್ಧ ತಂದೆ-ತಾಯಿಗೆ ಮತ್ತೆ ಆಶ್ರಯ ನೀಡಲು ಮಗ ಒಪ್ಪಿಕೊಂಡಿದ್ದಾನೆ. ಇದು ಜೀವನಾಂಶ ಪ್ರಕರಣವಾಗಿದ್ದು, ನ್ಯಾಯಾಧೀಶರ ಪ್ರಯತ್ನದಿಂದಾಗಿ ಮಗ ತನ್ನ ಹೆತ್ತವರನ್ನು ಮನೆಗೆ ಕರೆದುಕೊಂಡು ಹೋಗಿ ಅವರನ್ನು ಚೆನ್ನಾಗಿ ನೋಡಿಕೊಳ್ಳುವುದಾಗಿ ಭರವಸೆ ನೀಡಿದ್ದಾನೆ.

Advertisement

ದಕ್ಷಿಣ ಕನ್ನಡ: 3,802 ಪ್ರಕರಣಗಳು ಇತ್ಯರ್ಥ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಮತ್ತು ತಾಲೂಕು ನ್ಯಾಯಾಲಯಗಳಲ್ಲಿ ಶನಿವಾರ ನಡೆದ ಮೆಗಾ ಲೋಕ ಅದಾಲತ್‌ನಲ್ಲಿ  ಒಟ್ಟು 3,802 ಪ್ರಕರಣಗಳು ಇತ್ಯರ್ಥವಾಗಿವೆ.

ಎನ್‌ಐ (ನೆಗೋಷಿಯೆಬಲ್‌ ಇನ್‌ಸ್ಟ್ರೆಮೆಂಟ್‌) ಪ್ರಕರಣಗಳ ಪೈಕಿ 333 ಪ್ರಕರಣಗಳು ಇತ್ಯರ್ಥವಾಗಿ 8,82,00,394 ರೂ.ಗಳ ಮೊತ್ತ, 224 ವಾಹನ ಅಪಘಾತ ಪ್ರಕರಣಗಳಲ್ಲಿ 8,14,46,622 ರೂ.ಗಳ ಪರಿಹಾರವನ್ನು ಸಂಬಂಧಿಸಿದವರಿಗೆ ಪಾವತಿಸಲು ಆದೇಶಿಸಿ ಇತ್ಯರ್ಥಪಡಿಸಲಾಯಿತು.

ಕ್ರಿಮಿನಲ್‌ 2,710 ಪ್ರಕರಣಗಳಲ್ಲಿ 11,49,050 ರೂ.ಗಳ ದಂಡದ ಮೊತ್ತವನ್ನು ಪರಿಹಾರವಾಗಿ ಸರಕಾರಕ್ಕೆ ಪಾವತಿಸಲು ಕ್ರಮ ಕೈಗೊಳ್ಳಲಾಯಿತು.

ಅದಾಲತ್‌ನಲ್ಲಿ 1,60,63,527 ರೂ.ಗಳ 117 ವ್ಯಾಜ್ಯ ಪೂರ್ವ ಪ್ರಕರಣಗಳನ್ನು ಇತ್ಯರ್ಥ ಪಡಿಸಲಾಗಿದೆ. ಇವುಗಳಲ್ಲಿ ಮಂಗಳೂರು ತಾಲೂಕಿನ 95  ಹಾಗೂ ಇತರ ತಾಲೂಕಿನ 22 ಪ್ರಕರಣಗಳಿವೆ. ಸಿವಿಲ್‌ ಪ್ರಕರಣಕ್ಕೆ ಸಂಬಂಧಿಸಿದ 57 ವಿಭಾಗ ಪ್ರಕರಣಗಳನ್ನು ಇತ್ಯರ್ಥ ಪಡಿಸಲಾಗಿದೆ.

ಸಾರ್ವಜನಿಕರು ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳನ್ನು ಹಾಗೂ ವ್ಯಾಜ್ಯ ಪೂರ್ವ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಲು ಅದಾಲತ್‌ನಲ್ಲಿ ಅವಕಾಶ ಕಲ್ಪಿಸಲಾಗಿತ್ತು ಎಂದು ಹಿರಿಯ ಸಿವಿಲ್‌ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಪೃಥ್ವೀರಾಜ್‌ ವರ್ಣೇಕರ್‌ ತಿಳಿಸಿದ್ದಾರೆ.

ಉಡುಪಿ ಜಿಲ್ಲೆ : 3,074 ಪ್ರಕರಣಗಳು ಇತ್ಯರ್ಥ
ಉಡುಪಿ: ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದ ಮೇರೆಗೆ ಶನಿವಾರ ಉಡುಪಿ, ಕುಂದಾಪುರ ಹಾಗೂ ಕಾರ್ಕಳದ ವಿವಿಧ ನ್ಯಾಯಾಲಯಗಳಲ್ಲಿ ರಾಷ್ಟ್ರೀಯ ಲೋಕ ಅದಾಲತ್‌ ಆಯೋಜಿಸಲಾಯಿತು.

ಒಂದೇ ದಿನ ಒಟ್ಟು 3,074 ಪ್ರಕರಣಗಳನ್ನು (ರಾಜಿ ಆಗಬಲ್ಲ) ಅಪರಾಧ ಪ್ರಕರಣ 31, ಚೆಕ್‌ ಅಮಾನ್ಯ ಪ್ರಕರಣ 195, ಬ್ಯಾಂಕ್‌, ಹಣ ವಸೂಲಾತಿ ಪ್ರಕರಣ 17, ಎಂವಿಸಿ ಪ್ರಕರಣ 136, ವಿದ್ಯುತ್‌ ಶುಲ್ಕಕ್ಕೆ

ಸಂಬಂಧಪಟ್ಟ ಪ್ರಕರಣ 2, ಎಂಎಂಆರ್‌ಡಿ ಆ್ಯಕ್ಟ್ ಪ್ರಕರಣ 9, ವೈವಾಹಿಕ ಪ್ರಕರಣ 2, ಸಿವಿಲ್‌ ಪ್ರಕರಣ 169, ಇತರ ಕ್ರಿಮಿನಲ್‌ ಪ್ರಕರಣ

2,268 ಹಾಗೂ ವ್ಯಾಜ್ಯ ಪೂರ್ವ ದಾವೆ 245, ರಾಜೀ ಮುಖಾಂತರ ಇತ್ಯರ್ಥಪಡಿಸಿ 11,18,81,206 ರೂ. ಪರಿಹಾರ ಘೋಷಿಸಲಾಯಿತು.

ನ್ಯಾಯಾಂಗ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ ಉಡುಪಿ, ಕುಂದಾಪುರ ಹಾಗೂ ಕಾರ್ಕಳ, ಅಭಿಯೋಗ ಮತ್ತು ಸರಕಾರಿ ವ್ಯಾಜ್ಯಗಳ ಇಲಾಖೆ, ಪೊಲೀಸ್‌ ಇಲಾಖೆ, ಕಂದಾಯ ಇಲಾಖೆ, ಗಣಿ ಮತ್ತು ಭೂವಿಜ್ಞಾನ ಇಲಾಖೆ, ವಿಮಾ ಕಂಪೆನಿಗಳು, ಬ್ಯಾಂಕ್‌, ಕಕ್ಷಿಗಾರರು ಹಾಗೂ ಇತರ ಸರಕಾರಿ ಇಲಾಖೆಯ ಸಂಪೂರ್ಣ ಸಹಕಾರದೊಂದಿಗೆ ಲೋಕ ಅದಾಲತ್‌ಯಶಸ್ವಿಗೊಳಿಸಲಾಯಿತು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next