Advertisement

Bangalore: ಶಾಲೆ, ಸ್ಲಂ, ಮಕ್ಕಳು, ವೃದ್ಧರಿಗೆ ಭರವಸೆ ಬೆಳಕು

04:52 PM Dec 07, 2023 | Team Udayavani |

ಬೆಂಗಳೂರು: ತಾವಾಯಿತು ತಮ್ಮ ಕೆಲಸ ಆಯಿತು ಎಂದು ತೊಡಗಿಸಿಕೊಂಡಿರುವ ಯುವ ಸಮುದಾಯದ ನಡುವೆ, ಒಂದಿಷ್ಟು ಮಂದಿ ಸೇರಿಕೊಂಡು ಭರವಸೆ ಎಂಬ ಟೀಂ ಕಟ್ಟಿಕೊಂಡು ಭರವಸೆ ಬೆಳಕಾಗಿ ಸಮಾಜಮುಖೀಯಾಗಿ ಕಾರ್ಯನಿರ್ವಹಿಸುತ್ತಿದೆ.

Advertisement

-ಬಡ ಮಕ್ಕಳಿಗೆ ವಿದ್ಯಾಭ್ಯಾಸ, ಸರ್ಕಾರಿ ಶಾಲೆಗಳಿಗೆ ಬಣ್ಣ, ಅನಾಥಾಶ್ರಮದ ಮಕ್ಕಳಿಗೆ ಹಾಗೂ ವೃದ್ಧರಿಗೆ ಆರೋಗ್ಯ ಶಿಬಿರ, ಬೀದಿಬದಿ ವ್ಯಾಪಾರಿಗೆ ಹಾಗೂ ಹಸಿದವರಿಗೆ ಊಟ, ಪ್ಲಾಸ್ಟಿಕ್‌ ಬದಲಿಗೆ ಪೇಪರ್‌ ಅಥವಾ ಬಟ್ಟೆ ಬ್ಯಾಗ್‌ ವಿತರಣೆ… ತಾನೊಬ್ಬನೇ ಬೆಳೆಯುವ ಜತೆಗೆ ಸುತ್ತಲಿನ ವರನ್ನೂ ಬೆಳೆಸುವ ಆಲೋಚನೆಯಿಂದ 2019ರ ಡಿಸೆಂಬರ್‌ನಲ್ಲಿ ಒಬ್ಬರಿಂದ ಹುಟ್ಟಿಕೊಂಡ “ಭರ ವಸೆ’ ತಂಡವು, ಈಗ 20 ಜನರ ಕಾಯಂ ಸದಸ್ಯತ್ವ ಹೊಂದಿದೆ. ಜತೆಗೆ ವಿವಿಧ ಕಾರ್ಯಕ್ರಮಗಳ ಸಂದರ್ಭದಲ್ಲಿ ಸ್ವಯಂ ಸೇವಕರಾಗಿ 200ಕ್ಕೂ ಹೆಚ್ಚು ಯುವಕರು ಭಾಗಿಯಾಗುತ್ತಾರೆ.

“ಭರವಸೆ’ ಪ್ರಾರಂಭವಾದ ಮೊದಲ ದಿನಗಳಲ್ಲಿ ಅನಾಥಾಶ್ರಮದಲ್ಲಿನ ಮಕ್ಕಳು ಮತ್ತು ವೃದ್ಧಾಶ್ರಮ ದಲ್ಲಿನ ವೃದ್ಧರನ್ನು ಭೇಟಿ ಮಾಡಿದಂತಹ ವೇಳೆ, ಅವರಿಗೆ ಹಣದ ಅವಶ್ಯಕತೆಗಿಂತ ಅವರೊಟ್ಟಿಗೆ ಕಳೆಯುವ ಅಮೂಲ್ಯವಾದ ಸಮಯಕ್ಕೆ ಹೆಚ್ಚಿನ ಬೆಲೆ ಎಂದು ತಿಳಿಯಿತು. ತದನಂತರ, ಅತೀ ಕಡಿಮೆ ವೆಚ್ಚದಿಂದ ಹೆಚ್ಚಿನ ಸಮಾಜ ಸೇವೆ ಮಾಡುವುದನ್ನು ಆರಂಭಿಸಿದೆವು ಎಂದು “ಭರವಸೆ’ಯ ಸಂಸ್ಥಾಪಕ ಸುನೀಲ್‌ ಕುಮಾರ್‌ ತಿಳಿಸುತ್ತಾರೆ.

ಸರ್ಕಾರಿ ಶಾಲೆಗಳಿಗೆ ಪೇಂಟಿಂಗ್‌: ಭರವಸೆ ತಂಡದವರು ಸರ್ಕಾರಿ ಶಾಲೆಗಳಿಗೆ ಉಚಿತ ಬಣ್ಣ ಮತ್ತು ಗೋಡೆಗಳ ಮೇಲೆ ವಿವಿಧ ಚಿತ್ತಾರಗಳನ್ನು ಮತ್ತು ಶಿಕ್ಷಣದ ಮಾಹಿತಿಯನ್ನು ಬಣ್ಣಗಳಲ್ಲಿ ಚಿತ್ರಿಸಿ, ಶಾಲೆಯ ಗೋಡೆ ಮತ್ತು ಕಾಂಪೌಂಡ್‌ ಅನ್ನು ಸುಂದರಗೊಳಿಸುತ್ತಾರೆ. ಬೆಂಗಳೂರಿನಲ್ಲಿನ ಉತ್ತರಹಳ್ಳಿ, ಶ್ರೀರಾಮಪುರ, ಮೆಜೆಸ್ಟಿಕ್‌ ಹಾಗೂ ತುಮಕೂರಿನ ಕುಣಿಗಲ್‌, ಚಿಕ್ಕಬಳ್ಳಾಪುರ, ಶಿವಮೊಗ್ಗ ಸೇರಿದಂತೆ ಇದುವರೆಗೆ ಎಂಟರಿಂದ ಹತ್ತು ಶಾಲೆಗಳಿಗೆ ಉಚಿತವಾಗಿ ಬಣ್ಣ ಹಚ್ಚಲಾಗಿದೆ.

ಬಡ ವಿದ್ಯಾರ್ಥಿಗಳಿಗೆ ಶಿಕ್ಷಣ: ಕೋವಿಡ್‌ ಸಮಯದಲ್ಲಿ ಸರ್ಕಾರಿ ಶಾಲೆಗಳಿಗೆ ಹೋಗುತ್ತಿದ್ದ ಸ್ಲಂ ಮಕ್ಕಳಿಗೆ ಆನ್‌ಲೈನ್‌ ಕ್ಲಾಸ್‌ನಲ್ಲಿ ಭಾಗಿಯಾಗಲು ಸಾಧ್ಯವಾಗದೇ, ಶಿಕ್ಷಣದಿಂದ ದೂರ ಉಳಿದಿದ್ದರು. ಆ ವೇಳೆ, ನಗರದಲ್ಲಿನ ಕೊಳಗೇರಿ ಪ್ರದೇಶಗಳಿಗೆ “ಭರವಸೆ’ ತಂಡ ಭೇಟಿ ನೀಡುವ ಮೂಲಕ ಅಲ್ಲಿನ ಮಕ್ಕಳಿಗೆ ಶಿಕ್ಷಣ ನೀಡಿತ್ತು.

Advertisement

ಈಗ, 8ರಿಂದ 10ನೇ ತರಗತಿ ಓದುತ್ತಿರುವ 25 ಮಕ್ಕಳ ಸಂಪೂರ್ಣ ಶಿಕ್ಷಣದ ವೆಚ್ಚವನ್ನು ನೋಡಿಕೊಳ್ಳಲಾಗುತ್ತಿದ್ದು, ವಾರಾಂತ್ಯದ ವೇಳೆ 80 ಸ್ಲಂ ಮಕ್ಕಳಿಗೆ ಶಿಕ್ಷಣ ಹೇಳಿಕೊಡಲಾಗುತ್ತದೆ. ಜತೆಗೆ 3 ಶಾಲೆಯ 150ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಗಣಿತ, ವಿಜ್ಞಾನ ಹಾಗೂ ಇಂಗ್ಲಿಷ್‌ ಪಠ್ಯವನ್ನು ಕಲಿಸಲಾಗುತ್ತಿದೆ. ಜತೆಗೆ ಕಂಪ್ಯೂಟರ್‌ ಶಿಕ್ಷಣವನ್ನು ಹೇಳಿಕೊಡಲಾಗುತ್ತದೆ.

ಭರವಸೆಯ “ಬುತ್ತಿ ಸಮಾಜದಲ್ಲಿ ಒಂದೊತ್ತಿನ ಊಟವಿಲ್ಲದೇ, ಅನೇಕ ಮಂದಿ ಸಾವನ್ನಪ್ಪುತ್ತಿದ್ದಾರೆ. ಹೀಗಾಗಿ ಬೀದಿಬದಿ ವ್ಯಾಪಾರಿಗಳು, ಬುದ್ಧಿಮಾಂಧ್ಯರು, ಲಿಂಗತ್ವ ಅಲ್ಪಸಂಖ್ಯಾತರಿಗೆ ಹೀಗೆ ಹಸಿವಿನಿಂದ ಬಳಲುತ್ತಿರುವವರಿಗೆ ವಾರಕ್ಕೆ ಒಮ್ಮೆ ಸುಮಾರು 200 ಜನಕ್ಕೆ ಊಟ ವಿತರಿಸಲಾಗುತ್ತದೆ.

ವಸ್ತು ಖರೀದಿಗೆ ಬಂದವರಿಗೆ 13 ಸಾವಿರ ಬಟ್ಟೆ ಬ್ಯಾಗ್‌ ವಿತರಣೆ

ಊರಿಗೆ ಬಂದವಳು ನೀರಿಗೆ ಬರುವುದಿಲ್ಲವಾ! ಎಂಬ ಗಾದೆಮಾತಿನಂತೆ, ಬೆಂಗಳೂರಿಗೆ ಬಂದವಳು ಮಲ್ಲೇಶ್ವರ 8ನೇ ಕ್ರಾಸ್‌ಗೆ ಬರುವುದಿಲ್ಲವಾ ! ಎಂದೇ ಪ್ರಖ್ಯಾತಿ ಪಡೆದಿದೆ. ಏಕೆಂದರೆ, ಯುವತಿಯರಿಗೆ ಬೇಕಾಗುವ ಬಳೆ, ಓಲೆ, ಬಟ್ಟೆ ಸೇರಿದಂತೆ ವಿವಿಧ ಅಲಂಕಾರಿಕ ವಸ್ತುಗಳನ್ನು ಖರೀದಿಸಲು ಸಾವಿರಾರು ಜನ ಮಲ್ಲೇಶ್ವರಗೆ ಬರುತ್ತಾರೆ. ಜತೆಗೆ ನಾಗರಿಕರು ತಂದಿರುವ ಪ್ಲಾಸ್ಟಿಕ್‌ ಚೀಲಗಳನ್ನು ತೆಗೆದುಕೊಂಡು, ತಂಡದವರೇ ತಯಾರಿಸಿರುವ ಪೇಪರ್‌ ಬ್ಯಾಗ್‌ಗಳನ್ನು ಅಥವಾ ನಿರುಪಯುಕ್ತ ಬಟ್ಟೆಯಿಂದ ತಯಾರಿಸಿದ ಬಟ್ಟೆ ಬ್ಯಾಗ್‌ಗಳನ್ನು ಉಚಿತವಾಗಿ ನೀಡುವ ಮೂಲಕ ವಾರಾಂತ್ಯದಲ್ಲಿ ಶನಿವಾರ ಅಥವಾ ಭಾನುವಾರದಂದು ಪ್ಲಾಸ್ಟಿಕ್‌ ಮುಕ್ತ ಸಮಾಜವನ್ನಾಗಿಸುವ ವಿವಿಧ ಘೋಷಣಾ ಫ‌ಲಕದೊಂದಿಗೆ ಜಾಗೃತಿ ಜಾಥಾ ನಡೆಸಲಾಗುತ್ತದೆ. ಕಳೆದ ಒಂದು ವರ್ಷದಿಂದ 13 ಸಾವಿರಷ್ಟು ಪೇಪರ್‌ ಚೀಲ, 2 ಸಾವಿರದಷ್ಟು ಬಟ್ಟೆ ಚೀಲಗಳನ್ನು ಉಚಿತವಾಗಿ ವಿತರಿಸಲಾಗಿದೆ.

ನಮಗೆ ಬರುವ ವೇತನವನ್ನು ತನ್ನ ಸ್ವಾರ್ಥಕ್ಕೆ ಬಳಸುವ ಬದಲು, ಪರೋಪಕಾರಕ್ಕೆ ಬಳಸುವುದರಿಂದ ಅಸಹಾಯಕರಿಗೆ ನೆರವಾಗುವುದೇ ನಮ್ಮ ತಂಡದ ಮುಖ್ಯ ಉದ್ದೇಶ. ● ಸುನೀಲ್‌ ಕುಮಾರ್‌, ಭರವಸೆ ತಂಡದ ಸಂಸ್ಥಾಪಕ

-ಭಾರತಿ ಸಜ್ಜನ್‌

Advertisement

Udayavani is now on Telegram. Click here to join our channel and stay updated with the latest news.

Next