Advertisement

ಪ್ರೀತಿ, ವಿಶ್ವಾಸಭರಿತ ಜೀವನ ನಿರಂತರ ಪಾವನ

11:40 PM Dec 24, 2022 | Team Udayavani |

ಕ್ರಿಸ್ಮಸ್‌ ಅಥವಾ ಕೊಂಕಣಿಯಲ್ಲಿ “ನತಲಾಂ ಫೆಸ್ತ್’ ಎಂದು ಕರೆಯಲ್ಪಡುವ ಪ್ರಭು ಯೇಸುಕ್ರಿಸ್ತರ ಜನನದ ಹಬ್ಬವನ್ನು ಕ್ರೈಸ್ತ ಬಾಂಧವರು ಜಗತ್ತಿನಾದ್ಯಂತ ಸಂತಸ, ಶ್ರದ್ಧೆ ಹಾಗೂ ಸಡಗರದಿಂದ ಆಚರಿಸುತ್ತಾರೆ.
ಕ್ರಿಸ್ಮಸ್‌ ಹಬ್ಬಕ್ಕೆ ಮೊದಲು ನಾಲ್ಕು ವಾರಗಳ ಆಧ್ಯಾತ್ಮಿಕ ಸಿದ್ಧತೆಯ ಕಾಲವನ್ನು ಪ್ರಾರ್ಥನೆ, ಪೂಜಾ ವಿಧಿಗಳಿಂದ ಆಚರಿ­ಸು­­ತ್ತಾರೆ. ಈ ಸಿದ್ಧತೆಯ ಕಾಲವನ್ನು ಆದ್ವೆಂತ್‌ ಅರ್ಥಾತ್‌ ನಿರೀ­ಕ್ಷಣೆಯ ಕಾಲ ಅಥವಾ ಕ್ರಿಸ್ತನ ಆಗಮನದ ಕಾಲವೆನ್ನುತ್ತಾರೆ.

Advertisement

ಬೆತ್ಲೆಹೆಮ್‌ನ ಗೋದಲಿಯಿಂದ ಗೊಲ್ಗೊಥಾದ ಪರ್ವತದವರೆಗೆ ದೇವಪುತ್ರ ಪ್ರಭು ಯೇಸುಕ್ರಿಸ್ತನು ಜುದೆಯಾ ಪ್ರಾಂತದ ಬೆತ್ಲೆಹೆಮ್‌ನಲ್ಲಿ ಕನ್ಯಾಮರಿಯಮ್ಮನವರ ಉದರ­ದಲ್ಲಿ ಪವಿತ್ರಾತ್ಮ ಪರಾತ್ಪರ ದೇವರ ಶಕ್ತಿಯಿಂದ ಜನಿಸಿದರು. ಪ್ರಭು ಯೇಸುವಿಗೆ ಈ ಧರೆಯಲ್ಲಿ ಜನಿಸಲು ಒಂದು ಯೋಗ್ಯ ಸ್ಥಳ ಕೂಡ ದೊರಕಲಿಲ್ಲವೆಂದು ಶುಭ ಸಂದೇಶಕಾರರು ಉಲ್ಲೇಖ ಮಾಡಿದ್ದಾರೆ.

ಜೋಸೆಫನಿಗೆ ನಿಶ್ಚಿತಾರ್ಥಳಾಗಿದ್ದ ಹಾಗೂ ತುಂಬು ಗರ್ಭವತಿಯಾಗಿದ್ದ ಮರಿಯಾಳು ಬೆತ್ಲೆಹೆಮ್‌ನಲ್ಲಿದ್ದಾಗ ಪ್ರಸವಕಾಲ ಸಮೀಪಿಸಿತು. ಆಕೆ ಚೊಚ್ಚಲ ಮಗನಿಗೆ ಜನ್ಮವಿತ್ತು, ಇದ್ದ ಬಟ್ಟೆಯಲ್ಲಿ ಸುತ್ತಿ ಅದನ್ನು ಗೋದಲಿಯಲ್ಲಿ ಮಲಗಿಸಿ­ದಳು. ಯಾಕೆಂದರೆ ಛತ್ರದಲ್ಲಿ ಅವರಿಗೆ ಸ್ಥಳ ಸಿಗಲಿಲ್ಲ(ಸಂತ ಲೂಕ 2.5-7). ಪಾಪ ವಿಮೋಚಕನಾಗಿ ಈ ಧರೆಗೆ ಬಂದ ಪ್ರಭು ಯೇಸುವಿಗೆ ಈ ಧರೆಯಲ್ಲಿ ಜನ್ಮ ತಾಳಲು ಎಲ್ಲೂ ಸ್ಥಳಾವಕಾಶ ಸಿಗಲಿಲ್ಲ-ಇದು ವಿಪರ್ಯಾಸವೇ ಸರಿ.

ಹಳೆಯ ಒಡಂಬಡಿಕೆಯಲ್ಲಿ ಯೆರೇಮಿಯಾ ಪ್ರವಾದಿ ಮಾಡಿದ ವಾಗ್ಧಾನ ಹೀಗಿದೆ. “ಇಗೋ, ನಾನು ಮುಂದಿನ ಕಾಲದಲ್ಲಿ ದಾವಿದನೆಂಬ ಮೂಲದಿಂದ ಸದ್ದಮೀಯಾ ಮೊಳಕೆ­ಯನ್ನು ಚಿಗುರಿಸುವೆನು. ಅವನು ರಾಜನಾಗಿ ಆಳುತ್ತಾ ವಿವೇಕದಿಂದ ಕಾರ್ಯವನ್ನು ಸ್ಥಾಪಿಸುತ್ತಾ ದೇಶದಲ್ಲಿ ನೀತಿ ನ್ಯಾಯಗಳನ್ನು ನಿರ್ಮಿಸುವನು’ (ಯೆರೆಮಿಯಾ 23:5-6).ಗೋದಲಿ ಯೇಸು ಸ್ವಾಮಿಯ ದೀನತೆಯ ಪ್ರತೀಕ ದೀನತೆ ಎಂದರೆ ತನ್ನನ್ನು ತಾನೇ ತಗ್ಗಿಸಿಕೊಂಡು ದೇವರಿಗೆ ವಿಧೇಯನಾಗಿ ನಡೆಯುವುದು. ಯೇಸು ಸ್ವಾಮಿ ದೇವರಿಗೆ ವಿಧೇಯನಾಗಿ ನಡೆದುಕೊಂಡು ಮರಣ ಪರ್ಯಂತ ಹೌದು ಶಿಲುಬೆಯ ಮರಣ ಪರ್ಯಂತ ವಿಧೇಯನಾದರು(ಫಿಲಿಪ್ಪಿ 218). ಯೇಸು ಸ್ವಾಮಿ ಜನಿಸಿದ ಸಣ್ಣ ಊರು ಬೆತ್ಲೆಹೆಮ್‌. ಈ ಊರಿಗೆ ದಾವಿದಾನ ನಗರವೆಂಬ ನಾಮಾಂಕಿತ ಬೈಬಲ್‌ನಲ್ಲಿದೆ. ಯಹೂದಿ ಜನಾಂಗ ದೇವರ ಪುತ್ರ ಅಭಿಷಿಕ್ತನಾದವನು ದಾವಿದನ ವಂಶಜನಿಂದ ಹುಟ್ಟುವನೆಂದು ನಂಬಿ ಅವರ ಬರುವಿಕೆಯನ್ನು ನಿರೀಕ್ಷಿಸುತ್ತಿದ್ದರು.ದೇವರಿಚ್ಛೆಯ ಪ್ರಕಾರ ಯೇಸು ಸ್ವಾಮಿ ಬೆತ್ಲೆಹೆಮ್‌ ನಗರದಲ್ಲಿ ಜನಿಸಿದರು.

ಎಚ್‌.ವಿ.ಮೋರ್ಟನ್‌ ಎಂಬ ಮೇಧಾವಿಯು ಯೇಸು ಸ್ವಾಮಿ ಜನಿಸಿದ ಬೆತ್ಲೆಹೆಮ್‌ಗೆ ಯಾತ್ರಿಕನಾಗಿ ಭೇಟಿ ನೀಡಿದ್ದರು. ಯೇಸು ಜನಿಸಿದ ಸ್ಥಳವನ್ನು ನೋಡಲು ಅವರು ಒಂದು ಉದ್ದನೆಯ ಗೋಡೆಯ ಮಗ್ಗುಲಿನಿಂದ ಮುಂದೆ ಸಾಗಿ ಒಂದು ಸಣ್ಣ ದ್ವಾರದ ಕಡೆ ಬಂದರು. ಅದು ಬಹಳ ಚಿಕ್ಕದಾದ ಹಾಗೂ ಇಕ್ಕಟ್ಟಾದ ದ್ವಾರ. ಅದರ ಮುಖಾಂತರ ಶಿರಬಾಗಿ ತುಂಬಾ ದೀನತೆಯಿಂದ ಒಳಗೆ ಹೋದರೆ, ಅಲ್ಲಿ ಯೇಸುಕ್ರಿಸ್ತ ಜನಿಸಿದ ಚರ್ಚ್‌ ಕಾಣಿಸುತ್ತದೆ. ಆ ಚರ್ಚ್‌ನಲ್ಲಿ ಇರುವ ವೇದಿಕೆಯ ಕೆಳಭಾಗದಲ್ಲಿ ನೆಲದ ಮೇಲೆ ಒಂದು ನಮೂದಿಸಿದ ಸ್ಥಳದಲ್ಲಿ ಎರಡು ದೀವಿಗೆಗಳನ್ನು ಇಡಲಾಗಿದೆ. ಈ ಚರ್ಚ್‌ಗೆ ಭೇಟಿ ನೀಡುವ ಭಕ್ತರು ಯೇಸು ಜನಿಸಿದ ಸ್ಥಳಕ್ಕೆ ಅತ್ಯಂತ ಭಕ್ತಿ ಪರವಶರಾಗಿ ನಮನ ಸಲ್ಲಿಸುತ್ತಾರೆ. ಈ ಸ್ಥಳವನ್ನು ಭೇಟಿ ಮಾಡುವ ಪ್ರತಿಯೊಬ್ಬ ಯಾತ್ರಿಕನೂ ಯೇಸುಕ್ರಿಸ್ತ ಜನಿಸಿದ ಸ್ಥಳದಲ್ಲಿ ಮಂಡಿಯೂರಿ ಪ್ರಾರ್ಥನೆ ಸಲ್ಲಿಸುವುದು ರೂಢಿ ಎಂದು ಎಚ್‌.ವಿ. ಮೋರ್ಟನ್‌ ತನ್ನ ಅನುಭವವನ್ನು ವಿವರಿಸುತ್ತಾರೆ.

Advertisement

ಪ್ರೀತಿ ವಿಶ್ವಾಸದಿಂದ ಪರರನ್ನು ಗೌರವಿಸೋಣ
ಒಂದು ದಿನ ದೊಡ್ಡ ಸಿಂಹ ಒಂದು ಸಣ್ಣ ಇಲಿಯನ್ನು ಬೇಟೆಯಾಡಿತು. ಅದನ್ನು ಒಮ್ಮೆಲೇ ತಿನ್ನಲು ಸಿಂಹ ನಿರ್ಧರಿಸಿತು. ಆದರೆ ಇಲಿ ಕಾಡಿನ ರಾಜ ಸಿಂಹವನ್ನು ಉದ್ದೇಶಿಸಿ ಹೀಗೆಂದಿತು: “ದಯಮಾಡಿ ನನ್ನ ಮೇಲೆ ಕರುಣೆ ತೋರಿ ನನ್ನನ್ನು ಬಿಟ್ಟುಬಿಡು. ನೀನು ಮಾಡಿದ ಉಪಕಾರವನ್ನು ನಾನೆಂದಿಗೂ ಮರೆಯಲಾರೆ. ನಿನ್ನ ಋಣವನ್ನು ನಾನು ಒಂದು ದಿನ ತೀರಿಸಿ ಬಿಡುತ್ತೇನೆ. ಇಲಿಯ ಮಾತನ್ನು ಕೇಳಿ ಸಿಂಹರಾಜನಿಗೆ ನಗು ಬಂತು. ಆದರೂ ಇಲಿಯ ಹೇಳಿಕೆಯನ್ನು ಪರಿಗಣಿಸಿ ಅದನ್ನು ಹೋಗಲು ಅನುವು ಮಾಡಿಕೊಟ್ಟಿತು. ಕೆಲವು ದಿನಗಳ ಬಳಿಕ ಬೇಟೆಗಾರರ ಪಂಜರಕ್ಕೆ ಕಾಡಿನ ರಾಜ ಸಿಂಹ ಸಿಲುಕಿಕೊಂಡಿತು. ಬೇಟೆಗಾರರು ಪಂಜರವನ್ನು ಹಿಡಿದೆ­ಳೆದು ಅದನ್ನು ಒಂದು ದೊಡ್ಡ ಮರಕ್ಕೆ ಕಟ್ಟಿ, ತದನಂತರ ಅದನ್ನು ಸಾಗಿಸಲು ಒಂದು ದೊಡ್ಡ ವಾಹನವನ್ನು ತರಲು ಹೋಗಿದ್ದರು. ಈ ಸಂದರ್ಭದಲ್ಲೇ ಇಲಿಯು ಆ ಪಂಜರದ ಕಡೆಗೆ ಬಂದಿತು. ಪಂಜರದಲ್ಲಿ ಸಿಕ್ಕಿಹಾಕಿಕೊಂಡಿದ್ದ ಸಿಂಹವನ್ನು ಕಂಡು ತುಂಬಾ ಕನಿಕರ ಪಟ್ಟು, ಸಮಯವನ್ನು ವ್ಯರ್ಥ ಮಾಡದೆ ತನ್ನ ಹರಿತವಾದ ಹಲ್ಲುಗಳಿಂದ ಪಂಜರದ ಒಂದು ಭಾಗವನ್ನು ಕಡಿಯತೊಡಗಿತು. ಕೆಲವು ಹೊತ್ತಿನಲ್ಲಿ ಪಂಜರದ ಬಲೆಗಳು ಸಡಿಲಗೊಂಡವು. ಸಿಂಹವು ಸಂತೋಷದಿಂದ ಇಲಿ ತನಗೆ ಮಾಡಿದ ಉಪಕಾರವನ್ನು ಸ್ಮರಿಸಿ ಕಾಡಿನತ್ತ ಹೊರಟು ಹೋಯಿತು.
ನಮ್ಮ ಜೀವನದಲ್ಲಿ ನಾವು ಪರರಿಗೆ ಸಹಾಯ ಹಸ್ತ ನೀಡುವ ಹಲವು ಸಂದರ್ಭಗಳು ಒದಗಿ ಬರುತ್ತವೆ. ಪ್ರೀತಿ, ವಿಶ್ವಾಸ ನಮ್ಮನ್ನು ಮಾನವೀಯತೆಯ ಹಾಗೂ ಸೌಹಾರ್ದಯುತ ಜೀವನದೆಡೆಗೆ ಕೊಂಡುಹೋಗುತ್ತವೆ. ಇಂತಹ ಜೀವನ ನಿರಂತರ ಪಾವನ.

ಒಬ್ಬ ಮೇಧಾವಿ ಲೇಖಕನು ಹೇಳಿದ ನುಡಿಗಳು ತುಂಬಾ ಅರ್ಥಗರ್ಭಿತ. ಅವು ಇಂತಿವೆ: “ಒಂದು ದಿನ, ಒಂದು ಗಂಟೆ ಮತ್ತು ಒಂದು ನಿಮಿಷ ನಮ್ಮ ಜೀವನದಲ್ಲಿ ಮಗದೊಮ್ಮೆ ಬರದು, ಅದಕ್ಕೋಸ್ಕರ ದ್ವೇಷ, ವೈಷಮ್ಯ, ಕೋಪ – ಇವುಗಳನ್ನು ನಮ್ಮ ಜೀವನದಿಂದ ಹೊಡೆದೋಡಿಸೋಣ. ಪರರನ್ನು ಪ್ರೀತಿ ಗೌರವದಿಂದ ಕಾಣೋಣ. ಪ್ರತಿಯೊಂದು ಒಳ್ಳೆಯ ಗಳಿಗೆಗೋಸ್ಕರ ದೇವರನ್ನು ಸ್ಮರಿಸೋಣ.

ಪ್ರಸ್ತುತ ಸಮಾಜದ ಆಗುಹೋಗುಗಳನ್ನು ನಾವು ವಿಮರ್ಶಿಸು­ವಾಗ ನಮ್ಮ ಮನಸ್ಸಿಗೆ ಮತ್ತ ಮೊದಲು ಹೊಳೆಯುವಂತಹ ವಿಷಯ ಅಶಾಂತಿಯ ವಾತಾವರಣ. ಸುಮನಸ್ಕರು ಶಾಂತಿ, ಪ್ರೀತಿ, ದೀನತೆಯನ್ನು ಪಸರಿಸುವರು. ಇಂತಹ ಮಾನವೀಯತೆಯ ಸದ್ಗುಣ ಸಂಪನ್ನರು ಸಮಾಜ­ದಲ್ಲೂ ಮಾನವೀಯತೆಯ ನೈತಿಕ ಗುಣಗಳನ್ನು ಬಿತ್ತುವರು. ಮಾನವೀಯತೆಯನ್ನು ಪ್ರತಿಯೊಬ್ಬ ನಾಗರಿಕರಲ್ಲಿ ಬಲಿಷ್ಠಗೊಳಿಸುವುದು ಇಂದಿನ ನಮ್ಮ ಅಗತ್ಯ.

ನಾವು ಸ್ವಾರ್ಥ, ಅಹಂತನವನ್ನು ಮೆಟ್ಟಿ ನಿಂತು ಧೈರ್ಯ, ಉತ್ಸಾಹದಿಂದ ಮುಂದೆ ಸಾಗಿದಲ್ಲಿ ಜೀವನದಲ್ಲಿ ಸುಖ, ಸಂತೋಷವನ್ನು ಹೊಂದಬಹುದಾಗಿದೆ. ಪ್ರೀತಿ, ಪ್ರೇಮದ ಸ್ವರೂಪಿಯಾಗಿರುವ ಯೇಸುವು ನಡೆದ ಹಾದಿ ನಮಗೆಲ್ಲರಿಗೂ ಮಾರ್ಗದರ್ಶಿಯಾದುದಾಗಿದೆ. ನಿರ್ಗತಿಕರು, ಅನಾಥರಿಗೆ ನೆರವಿನ ಹಸ್ತ ಚಾಚೋಣ. ಅಜ್ಞಾನ, ಅಮಾನವೀಯತೆ, ಅಧರ್ಮಗಳನ್ನು ಸಮಾಜದಿಂದ ದೂರವಿಡೋಣ. ಸಕಲರನ್ನೂ ಸಮಾನರಾಗಿ ಪರಿಗಣಿಸಿ ಪ್ರೀತಿ, ಕರುಣೆ, ಸೇವೆ, ಸಹಬಾಳ್ವೆ, ಕ್ಷಮೆಯ ಗುಣಗಳನ್ನು ಮೈಗೂಡಿಸಿಕೊಂಡು ಶಾಂತಿಯುತ ಬದುಕನ್ನು ಬಾಳುವ ಸಂಕಲ್ಪವನ್ನು ದೇವರ ಮಕ್ಕಳಾದ ನಾವೆಲ್ಲರೂ ಮಾಡೋಣ.

ಯೇಸು ಸ್ವಾಮಿ ಜನಿಸಿದ ಗಳಿಗೆಯೊಳು ತತ್‌ಕ್ಷಣವೇ ಆ ದೂತನ ಸಂಗಡ ಸ್ವರ್ಗದ ದೂತ ಪರಿವಾರವೊಂದು ಕಾಣಿಸಿಕೊಂಡಿತು.

“ಮಹೋನ್ನತದಲ್ಲಿ ದೇವರಿಗೆ ಮಹಿಮೆ. ಭೂಲೋಕದಲ್ಲಿ ದೇವರೊಲಿದ ಮಾನವರಿಗೆ ಶಾಂತಿ ಸಮಾಧಾನ’ ಎಂದು ಸರ್ವೆಶ್ವರನ ಸ್ತುತಿ ಮಾಡಿತು (ಲೂಕ 2:14).

ಸಹಬಾಳ್ವೆಯ ತಳಹದಿಯಲ್ಲಿ ಮುಂದಿನ ನಮ್ಮ ಸಮಾಜ ರೂಪಿತವಾಗಲೆಂದು ಹಾರೈಸೋಣ. ಎಲ್ಲರಿಗೂ ಕ್ರಿಸ್ಮಸ್‌ ಮತ್ತು ಹೊಸವರ್ಷದ ಶುಭಾಶಯಗಳು.

-ಫಾ| ಮುಕ್ತಿ ಪ್ರಕಾಶ್‌
ಜೆಪ್ಪು ಸೆಮಿನರಿ, ಮಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next