Advertisement

ರಾಜ್ಯ ಸರ್ಕಾರದಿಂದ ಪಿಯು ವಿದ್ಯಾರ್ಥಿಗಳಿಗೆ ಬಿಸಿಯೂಟ

11:05 PM Sep 13, 2019 | Lakshmi GovindaRaju |

ಬೆಂಗಳೂರು: ಸರ್ಕಾರಿ ಶಾಲಾ ಮಕ್ಕಳ ಜತೆ ಇನ್ನು ಮುಂದೆ ಪಿಯು ವಿದ್ಯಾರ್ಥಿಗಳಿಗೂ ಮಧ್ಯಾಹ್ನದ ಬಿಸಿಯೂಟ ಸಿಗಲಿದೆ. ಈ ಬಗ್ಗೆ ಸರ್ಕಾರ ಗಂಭೀರ ಚಿಂತನೆ ನಡೆಸಿದ್ದು, ಇದಕ್ಕಾಗಿ ಹಣಕಾಸು ಹೊಂದಿಸಿಕೊಂಡು ಪ್ರಸಕ್ತ ಸಾಲಿನಿಂದಲೇ ಜಾರಿಗೆ ತರಲು ಉದ್ದೇಶಿಸಿದೆ.

Advertisement

ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಒಂದೇ ಕ್ಯಾಂಪಸ್‌ನೊಳಗೆ ಪ್ರೌಢ ಶಾಲೆ ಮತ್ತು ಪದವಿ ಪೂರ್ವ ಕಾಲೇಜುಗಳು ಸಾಕಷ್ಟಿವೆ. ಇವುಗಳಲ್ಲಿ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟ ಸೌಲಭ್ಯ ಸರ್ಕಾರದಿಂದ ಸಿಗುತ್ತಿದೆ. ಆದರೆ, ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಯೋಜನೆ ಲಭ್ಯವಾಗು ತ್ತಿಲ್ಲ. ಹೀಗಾಗಿ ಪಿಯು ವಿದ್ಯಾರ್ಥಿಗಳಿಗೂ ಬಿಸಿ ಯೂಟ ಯೋಜನೆ ವಿಸ್ತರಿಸುವಂತೆ ಸಾಕಷ್ಟು ಸಂಘ ಟ ನೆಗಳು ಸಾರ್ವಜನಿಕ ಶಿಕ್ಷಣ ಇಲಾಖೆ, ಪಿಯು ಇಲಾಖೆ ಹಾಗೂ ಸರ್ಕಾರಕ್ಕೆ ಮನವಿ ಸಲ್ಲಿಸಿವೆ.

ಈ ಅಂಶಗಳನ್ನು ಪರಿಶೀಲಿಸಿರುವ ರಾಜ್ಯ ಸರ್ಕಾರ ಪ್ರಸಕ್ತ ಸಾಲಿನಿಂದ ಸರ್ಕಾರಿ ಮತ್ತು ಸರ್ಕಾರಿ ಅನುದಾನಿತ ಪದವಿ ಪೂರ್ವ ಕಾಲೇಜುಗಳ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿ ಯೂಟ ಯೋಜನೆ ಜಾರಿ ಮಾಡಲು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರು ಮುಖ್ಯಮಂತ್ರಿ ಗಳೊಂದಿಗೆ ಚರ್ಚೆ ನಡೆಸಿದ್ದಾರೆಂದು ಉನ್ನತ ಮೂಲಗಳು ಉದಯವಾಣಿಗೆ ಖಚಿತಪಡಿಸಿವೆ.

ರಾಜ್ಯದಲ್ಲಿ 1204 ಸರ್ಕಾರಿ, 674 ಸರ್ಕಾರಿ ಅನುದಾನಿತ ಮತ್ತು 2500ಕ್ಕೂ ಅಧಿಕ ಖಾಸಗಿ ಪಪೂ ಕಾಲೇಜುಗಳಿವೆ. ಸುಮಾರು 12.5 ಲಕ್ಷ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಈ ಪೈಕಿ ಎಂಟರಿಂದ ಒಂಭತ್ತು ಲಕ್ಷ ವಿದ್ಯಾರ್ಥಿಗಳು ಸರ್ಕಾರಿ ಮತ್ತು ಸರ್ಕಾರಿ ಅನುದಾನಿತ ಕಾಲೇಜು ಗಳಲ್ಲಿ ವ್ಯಾಸಂಗ ಮಾಡುತಿದ್ದಾರೆ. ಮಧ್ಯಾಹ್ನ ಬಿಸಿಯೂಟ ಯೋಜನೆ ಪಿಯು ವಿದ್ಯಾರ್ಥಿಗಳಿಗೂ ವಿಸ್ತರಿಸಿದ್ದಲ್ಲಿ, ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಹೆಚ್ಚು ಅನುಕೂಲ ಆಗಲಿದೆ. ಇದಕ್ಕಾಗಿ ಸರ್ಕಾರಕ್ಕೆ ವಾರ್ಷಿಕ 180ಕೋಟಿ ರೂ. ಹೊರೆಯಾಗಬಹುದು ಎಂದು ಪಿಯು ಇಲಾಖೆ ಅಧಿಕಾರಿಯೊಬ್ಬರು ಮಾಹಿತಿ ಒದಗಿಸಿದರು.

ಸರ್ಕಾರಿ, ಸರ್ಕಾರಿ ಅನುದಾನಿತ ಕಾಲೇಜುಗಳಿಗೆ ಸೇರುವ ಸಾಕಷ್ಟು ವಿದ್ಯಾರ್ಥಿಗಳು ಗ್ರಾಮೀಣ ಭಾಗಗಳಿಂದ ಬರುತ್ತಿದ್ದು, ಬಹಳಷ್ಟು ವಿದ್ಯಾರ್ಥಿಗಳು ಆರ್ಥಿಕವಾಗಿ ಸಬಲರಾಗಿರು ವುದಿಲ್ಲ. ಜತೆಗೆ ಮಧ್ಯಾಹ್ನದ ಲಂಚ್‌ ಬಾಕ್ಸ್‌ ತರಲು ಸಾಧ್ಯವಾಗುವುದಿಲ್ಲ. ಹೀಗಾಗಿ ಮಧ್ಯಾಹ್ನದ ಬಿಸಿಯೂಟ ಯೋಜನೆಯನ್ನು ಪಿಯುಸಿ ವಿದ್ಯಾರ್ಥಿಗಳಿಗೆ ವಿಸ್ತರಿಸುವ ಸರ್ಕಾರದ ಚಿಂತನೆ ಸ್ವಾಗತಾರ್ಹ ಎಂದು ಕರ್ನಾಟಕ ರಾಜ್ಯ ಪದವಿ ಪೂರ್ವ ಕಾಲೇಜು ಉಪನ್ಯಾಸಕರ ಸಂಘದ ಕಾರ್ಯದರ್ಶಿ ಎ.ಎಚ್‌.ನಿಂಗೇಗೌಡ ತಿಳಿಸಿದರು.

Advertisement

ರಾಜ್ಯದಲ್ಲಿ 2007ರಿಂದ ಮಧ್ಯಾಹ್ನದ ಬಿಸಿ ಯೂಟ ಯೋಜನೆ ಜಾರಿಯಲ್ಲಿದೆ. ಆರಂಭದಲ್ಲಿ ಕೇಂದ್ರ ಸರ್ಕಾರದ ಅನುದಾನದೊಂದಿಗೆ 1ರಿಂದ 8ನೇ ತರಗತಿಯ ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಗೆ ಬಿಸಿಯೂಟ ನೀಡಲಾಗುತಿತ್ತು. ನಂತರ ಇದನ್ನು ರಾಜ್ಯ ಸರ್ಕಾರ 9 ಮತ್ತು 10ನೇ ತರಗತಿ ವಿದ್ಯಾರ್ಥಿಗಳಿಗೂ ವಿಸ್ತರಿಸಿದೆ. ಈಗ ಪಿಯುಸಿ ವಿದ್ಯಾರ್ಥಿಗಳಿಗೂ ವಿಸ್ತರಣೆ ಮಾಡುವ ಬಗ್ಗೆ ಸರ್ಕಾರ ಒಲವು ಹೊಂದಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಬಿಸಿಯೂಟ ವಿಭಾಗದ ಹಿರಿಯ ಅಧಿಕಾರಿಯೊಬ್ಬರು ವಿವರ ನೀಡಿದರು.

ಯೋಜನಾ ವೆಚ್ಚ: ಸದ್ಯ ಜಾರಿಯಲ್ಲಿರುವ ಅಕ್ಷರ ದಾಸೋಹ ಅಡುಗೆ ಕೋಣೆಯೊಂದರ ನಿರ್ಮಾಣಕ್ಕೆ 3.31ಲಕ್ಷ ವೆಚ್ಚವಾಗಲಿದೆ. ಶೇ.75ರಷ್ಟು ಕೇಂದ್ರ ಸರ್ಕಾರ ಮತ್ತು ಶೇ.25ರಷ್ಟು ರಾಜ್ಯ ಸರ್ಕಾರ ಅನು ದಾನ ನೀಡಲಿದೆ. ಪಿಯು ಕಾಲೇಜುಗಳಿಗೆ ಕೇಂದ್ರ ಸರ್ಕಾರದಿಂದ ಬಿಸಿಯೂಟ ಯೋಜನೆ ಸೌಲಭ್ಯವಿಲ್ಲ. ಹಾಗಾಗಿ 1878 ಕಾಲೇಜುಗಳ ಅಡುಗೆ ಕೋಣೆ ನಿರ್ಮಾಣಕ್ಕೆ ಅಗತ್ಯವಿರುವ 62ಕೋಟಿ ರೂ. ಹಣ ರಾಜ್ಯ ಸರ್ಕಾರವೇ ಭರಿಸಬೇಕಿದೆ. ಅಡುಗೆ ತಯಾರಕ, ಸಹಾಯಕ ಸಿಬ್ಬಂದಿ ವೇತನ ಮತ್ತು ನಿರ್ವಹಣೆ ಕೂಡ ರಾಜ್ಯ ಸರ್ಕಾರ ಮಾಡಬೇಕಿದೆ.

ಸದ್ಯ ಜಾರಿಯಲ್ಲಿರುವ ಬಿಸಿಯೂಟ ಯೋಜನೆಯ ವೆಚ್ಚ: ರಾಜ್ಯದಲ್ಲಿ ಹಾಲಿ 1ರಿಂದ 10ನೇ ತರಗತಿ ಸರ್ಕಾರಿ ಮತ್ತು ಸರ್ಕಾರಿ ಅನುದಾನಿತ ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಯೋಜನೆ ಸೌಲಭ್ಯ ಸಿಗುತ್ತಿದೆ. 55,307 ಶಾಲೆಗಳಲ್ಲಿ 55 ಲಕ್ಷ ಕ್ಕೂ ಅಧಿಕ ವಿದ್ಯಾರ್ಥಿಗಳು ಯೋಜನೆಯ ಸೌಲಭ್ಯ ಪಡೆಯುತ್ತಿದ್ದಾರೆ.

ಸರ್ಕಾರಿ ಪಪೂ ಕಾಲೇಜುಗಳಲ್ಲಿ ಮಧ್ಯಾಹ್ನ ಬಿಸಿಯೂಟ ಯೋಜನೆ ಜಾರಿ ಮಾಡುವಂತೆ ಹಲವಾರು ಸಂಘಟನೆಗಳು ಮನವಿ ಮಾಡಿವೆ. ಯೋಜನೆ ಜಾರಿಗೆ ಬೇಕಿರುವ ಅನುದಾನ ಮತ್ತು ಯೋಜನೆಯ ಸಾಧಕ ಬಾಧಕಗಳ ಬಗ್ಗೆ ಸರ್ಕಾರ ಸೂಕ್ತ ಚರ್ಚೆ ನಡೆಸಲಿದೆ.
-ಎಸ್‌.ಸುರೇಶ್‌ ಕುಮಾರ್‌, ಪ್ರಾಥಮಿಕ ಮತ್ತು ಫ್ರೌಢ ಶಿಕ್ಷಣ ಸಚಿವ

ಸರ್ಕಾರದ ಚಿಂತನೆ ಸ್ವಾಗತಾರ್ಹ. ಪ್ರೌಢ ಶಾಲೆ, ಪಿಯು ವಿದ್ಯಾರ್ಥಿಗಳಿಗೆ ಪ್ರತ್ಯೇಕ ದಾಸೋಹ ಕೇಂದ್ರಗಳನ್ನು ನಿರ್ಮಿಸಬೇಕು. ಸರ್ಕಾರಿ, ಸರ್ಕಾರಿ ಅನುದಾನಿತ ಪಿಯು ಕಾಲೇಜು ಗಳಲ್ಲಿ ಸಾಕಷ್ಟು ಬಡ ಮಕ್ಕಳು ವ್ಯಾಸಂಗ ಮಾಡು ತ್ತಾರೆ, ಈ ಎಲ್ಲರಿಗೂ ಬಿಸಿಯೂಟದ ಸೌಲಭ್ಯಸಿಗ ಬೇಕಿದೆ. ಇದರಿಂದಾಗಿ ವಿದ್ಯಾರ್ಥಿಗಳ ಪ್ರವೇಶಾತಿ ಸಂಖ್ಯೆ, ಹಾಜರಾತಿ, ಆರೋಗ್ಯ ವೃದ್ದಿಯಾಗುತ್ತದೆ.
-ಎ.ಎಚ್‌.ನಿಂಗೇಗೌಡ, ಕರ್ನಾಟಕ ರಾಜ್ಯ ಪಪೂ ಕಾಲೇಜು ಉಪನ್ಯಾಸಕರ ಸಂಘದ ಕಾರ್ಯದರ್ಶಿ.

* ಲೋಕೇಶ್‌ ರಾಮ್‌

Advertisement

Udayavani is now on Telegram. Click here to join our channel and stay updated with the latest news.

Next