Advertisement

ಎ ಗ್ರಾಮರ್‌ ಆಫ್ ಕರ್ಣಾಟ ಲಾಂಗ್ವೇಜ್‌ 

07:20 AM Aug 20, 2017 | Harsha Rao |

(ಕಳೆದ ರವಿವಾರದ ವಿವರಗಳ ಮುಂದುವರಿಕೆ)

Advertisement

ಕನ್ನಡಕ್ಕೆ ಹೊಸತನವನ್ನು ತಂದಿತ್ತವರು ವಿದೇಶಿ ಮಿಶನರಿಗಳು. ಇದು ಅವರಿಗೆ ಸಾಧ್ಯವಾದುದು ಮುದ್ರಣಯಂತ್ರದ ಅಳವಡಿಕೆ, ಕನ್ನಡ ಗ್ರಂಥಗಳ ಪ್ರಕಟಣೆ, ಹೊಸ ಶಿಕ್ಷಣ ಪದ್ಧತಿಯ ಜಾರಿ, ಕನ್ನಡ ಭಾಷೆ ಹಾಗೂ ಸಾಹಿತ್ಯವನ್ನು ಹೊಸ ದೃಷ್ಟಿಕೋನದಿಂದ ಪರಿಶೀಲಿಸುವ ಪ್ರಯತ್ನದಿಂದ.

ಕೊಲ್ಕತಾದ ಹೊರವಲಯದ ಶ್ರೀರಾಂಪುರ (ಬ್ರಿಟಿಷರು ಹೇಳುವಂತೆ ಸೆರಾಂಪುರ್‌) ಡೇನಿಶ್‌ ವಸಾಹತು ಕೇಂದ್ರದಲ್ಲಿ 1780ರ ಹೊತ್ತಿಗಾಗಲೇ ಚಿಕ್ಕ ಮುದ್ರಣಾಲಯ ವೊಂದು ಕೆಲಸ ನಿರ್ವಹಿಸುತ್ತಿತ್ತು. ಮಿಶನರಿಯಾಗಿದ್ದ ವಿಲಿಯಂ ಕೇರಿ ಈ ಮುದ್ರಣಾಲಯವನ್ನು ವಿಸ್ತರಿಸಿ ಅಲ್ಲಿ ಬಂಗಾಲಿ, ಕನ್ನಡ, ಮರಾಠಿ, ತೆಲುಗು, ಒರಿಯಾ, ಪಂಜಾಬಿ, ಅರಬಿ, ಪರ್ಷಿಯನ್‌, ಚೀನಿ, ಹೀಬ್ರೂ ಭಾಷೆಯ ಅಚ್ಚಿನ ಮೊಳೆಗಳ ಬಳಕೆಗೆ ಏರ್ಪಾಟು ಮಾಡಿದರು. ಬೈಬಲ್‌ನ ವಿವಿಧ ಭಾಷಿಕ ಆವೃತ್ತಿಗಳ ನಿರ್ಮಾಣ ಹಾಗೂ ಮುದ್ರಣ ಇದರ ಹಿಂದಿನ ಉದ್ದೇಶವಾಗಿತ್ತು. ಅದಕ್ಕಾಗಿ ದೇಶೀಯ ಪಂಡಿತರ ನೆರವಿನಿಂದ ವಿಲಿಯಂ ಕೇರಿ ಹಿಂದೂಸ್ತಾನಿ, ಬಂಗಾಳಿ, ಕನ್ನಡ, ಒರಿಯಾ, ತೆಲುಗು, ಪಂಜಾಬಿ, ಪರ್ಷಿಯನ್‌ ಭಾಷೆಗಳಲ್ಲಿ ಸಲುವಳಿ ಮಾಡಿಕೊಂಡು ವಿಶೇಷವಾಗಿ ಸಂಸ್ಕೃತ ಹಾಗೂ ಬಂಗಾಲಿ ಭಾಷೆಗಳಲ್ಲಿ ಪ್ರೌಢ ಪಾಂಡಿತ್ಯವನ್ನೇ ಗಳಿಸಿಕೊಂಡು ಭಾರತದ ವಿವಿಧ ಭಾಷೆಗಳಲ್ಲಿ ಬೈಬಲ್‌ ಅವತರಣಿಕೆಗಳನ್ನು ರೂಪಿಸುವ ಹಿನ್ನೆಲೆಯಲ್ಲಿ ವ್ಯಾಕರಣ ಹಾಗೂ ನಿಘಂಟು ರಚನೆಯ (ಸಮಗ್ರವಲ್ಲವಾದರೂ) ವ್ಯಾಪಕ ಕೆಲಸದಲ್ಲಿ ತೊಡಗಿದ. ಈ ಪ್ರಕ್ರಿಯೆಯ ಅಂಗವಾಗಿ ಬಂಗಾಲಿ (1801), ಮರಾಠಿ (1805), ಪಂಜಾಬಿ (1812), ತೆಲುಗು (1814), ಕನ್ನಡ (1817) ವ್ಯಾಕರಣ ಗ್ರಂಥಗಳು “ಸೆರಾಂಪುರ’ದಿಂದ ಅಚ್ಚಾದುವು.

ಕನ್ನಡ ಭಾಷೆಯ ರಚನೆಯ ಕುರಿತಂತೆ ಆತ ಇಂಗ್ಲಿಷ್‌ನಲ್ಲಿ ಬರೆದ ಕೃತಿ ಎ ಗ್ರಾಮರ್‌ ಆಫ್ ಕರ್ನಾಟ ಲಾಂಗ್ವೇಜ್‌. ಇದು 1817, ಆಗಸ್ಟ್‌ 17ರಂದು ಅಂದರೆ 200 ವರ್ಷಗಳ ಹಿಂದೆ ಪ್ರಕಟವಾಯಿತು. ಈ ಗ್ರಂಥದೊಳಗಿನ ಉದಾಹರಣೆಗಳೆಲ್ಲ ಕನ್ನಡದಲ್ಲಿದ್ದು, ಅವುಗಳ ವಿವರಣೆಗಳೆಲ್ಲವೂ ಇಂಗ್ಲಿಷ್‌ನಲ್ಲಿ ಇವೆೆ. ಕನ್ನಡ ಭಾಷಿಕ ರಚನೆಯನ್ನು ಕುರಿತಂತೆ ಅಚ್ಚಾದ ಈ ಗ್ರಂಥ ಕನ್ನಡದ ಮೊತ್ತಮೊದಲ ಮುದ್ರಿತ ಕೃತಿ ಎನ್ನುವುದು ಇದರ ಹೆಚ್ಚುಗಾರಿಕೆ. ಈ ಗ್ರಂಥದ ರಚನೆಯಲ್ಲಿ ವಿಲಿಯಂ ಕೇರಿಗೆ ಭಾರತ (ತಿ)ರಮಣ ಹಾಗೂ ಸುಬ್ಬರಾವ್‌ ಎನ್ನುವ ಇಬ್ಬರು ದೇಶೀಯ ಪಂಡಿತರು ನೆರವಾಗಿದ್ದರೆಂದು ಡಾ. ಶ್ರೀನಿವಾಸ ಹಾವನೂರರು “ಹೊಸಗನ್ನಡ ಅರುಣೋದಯ’ ಕೃತಿಯಲ್ಲಿ ಬರೆದಿದ್ದಾರೆ.

ವಿದೇಶಿ ಪಂಡಿತರೊಬ್ಬರು ಉತ್ತರಭಾರತದ ಬಂಗಾಲದಲ್ಲಿ ನೆಲಸಿ ಭಾರತೀಯ ಭಾಷೆಗಳಲ್ಲಿ ಒಂದಾದ ಕನ್ನಡಕ್ಕೆ ಮನ್ನಣೆ ನೀಡಿ ವ್ಯಾಕರಣ ಬರೆದಿದ್ದಾರೆ ಎನ್ನುವುದನ್ನು ವಿಶೇಷವಾಗಿ ಗಮನಿಸಬೇಕು. ಕೃತಿಯ ಆರಂಭದಲ್ಲಿ ಕೇರಿ ಒಂದು ಪುಟ್ಟ ಪ್ರಸ್ತಾವನೆಯನ್ನು ಇಂಗ್ಲಿಷ್‌ನಲ್ಲಿ ಬರೆದು ಕನ್ನಡ ಭಾಷೆಯ ವ್ಯಾಕರಣ ರಚನೆಯ ಉದ್ದೇಶ ಹಾಗೂ ಕಾರ್ಯವಿಧಾನವನ್ನು ಪ್ರಾಮಾಣಿಕವಾಗಿ ಮುಂದಿಟ್ಟಿದ್ದಾರೆ. 

Advertisement

ಎ ಗ್ರಾಮರ್‌ ಆಫ್ ದ ಕರ್ಣಾಟ ಲಾಂಗ್ವೇಜ್‌ ಪುಸ್ತಕಕ್ಕೆ ಬರೆದ ಮುನ್ನುಡಿಯ ಸಾಲುಗಳಿವು:  ಫ್ರಾನ್ಸಿಸ್‌ ಎಲ್ಲಿಸನ ತೆಲುಗು ಭಾಷೆಯನ್ನು ಕುರಿತ ಲೇಖನವನ್ನು ಬಿಟ್ಟರೆ ದ್ರಾವಿಡ ಭಾಷೆಗಳನ್ನು ಕುರಿತ ಅಧ್ಯಯನ ನಡೆದಿಲ್ಲ. ನನಗಿಂತ ಹೆಚ್ಚಿನ ಪಾಂಡಿತ್ಯವನ್ನೂ, ಕರ್ಣಾಟ ಭಾಷೆಯ ಬಗೆಗಿನ ತಿಳಿವಳಿಕೆಯನ್ನು ಹೊಂದಿರುವ ಇನ್ನೊಬ್ಬ ಹೆಚ್ಚು ಪರಿಷ್ಕೃತವಾದ ವ್ಯಾಕರಣವನ್ನು ಬರೆದಲ್ಲಿ ಇದೀಗ ತಾನು ರಚಿಸಿರುವ ಕನ್ನಡ ವ್ಯಾಕರಣಕ್ಕಿಂತ ಮಿಗಿಲಾಗುವುದರಲ್ಲಿ ಸಂಶಯವಿಲ್ಲ. ಇದರಿಂದ ನನಗೆ ಖಂಡಿತ ಬೇಸರವಾಗುವುದಿಲ್ಲ. ಯುರೋಪಿಯನ್‌ ವಿದ್ವಾಂಸರ ಗಮನಕ್ಕೆ ಬಾರದೆ ಹಿಂದುಳಿದಿರುವ ಕನ್ನಡದಂತಹ ಭಾಷೆಗಳಲ್ಲಿ ಹೆಚ್ಚಿನ ಅಧ್ಯಯನ ನಡೆಯಬೇಕು ಎನ್ನುವುದೂ ನ‌ನ್ನ ಆಶಯ. ತೆಲಿಂಗ (ತೆಲುಗು) ಭಾಷೆಯಲ್ಲಿ ನಡೆದಷ್ಟು ಅಧ್ಯಯನ ಕನ್ನಡದಲ್ಲಿ ನಡೆಯದೆ ಸ್ವಲ್ಪಮಟ್ಟಿಗಿನ ಹಿನ್ನಡೆಯಲ್ಲಿರುವ ಕನ್ನಡ ಭಾಷೆಯು ಬ್ರಿಟಿಷ್‌ ಆಡಳಿತ ವಲಯದ ಒಂದು ವಿಶಾಲ ಭೂಪ್ರದೇಶದಲ್ಲಿ ಬಳಕೆಯಲ್ಲಿರುವುದರಿಂದ ಆ ಭಾಷೆಯಲ್ಲಿ ಹೆಚ್ಚಿನ ಅಧ್ಯಯನ ನಡೆಯಬೇಕಾಗಿದೆ ಎಂದು ನನಗೆ ಅನ್ನಿಸುತ್ತದೆ. 

ಈ ವ್ಯಾಕರಣ ಗ್ರಂಥದೊಳಗೆ ಹಲವು ಸಣ್ಣಪುಟ್ಟ ದೋಷಗಳಿರಬಹುದು. ಆದರೆ, 1817ರ ಹೊತ್ತಿಗೆ ಕನ್ನಡಕ್ಕೊಂದು ಆಧುನಿಕ ವ್ಯಾಕರಣ ಬೇಕು ಎನ್ನುವ ಅವನ ದೃಷ್ಟಿಕೋನವನ್ನು ಮೆಚ್ಚಲೇಬೇಕು.  ಕನ್ನಡ ಪದ ಮತ್ತು ವಾಕ್ಯಗಳನ್ನು ಅಚ್ಚಿನ ಮೊಳೆಗೆ ಅಳವಡಿಸಿದ ಮೊದಲ ಪ್ರಯತ್ನ ಇದು.

– ಎ. ವಿ. ನಾವಡ

Advertisement

Udayavani is now on Telegram. Click here to join our channel and stay updated with the latest news.

Next