Advertisement

ಸತ್ಯಾಗ್ರಹ-ಹೋರಾಟಗಳಿಗೆ ಸ್ಪಂದಿಸದ ಸರ್ಕಾರ

03:15 PM Jul 12, 2019 | Team Udayavani |

ಕುಮಟಾ: ಅನೇಕ ವರ್ಷಗಳಿಂದ ಅಂಗನವಾಡಿ ಕಾರ್ಯಕರ್ತೆಯರಾಗಿ ಕಾರ್ಯ ನಿರ್ವಹಿಸುತ್ತಿರುವ ಮಹಿಳೆಯರ ಗೋಳಿನ ಕಥೆ ಒಂದೆರಡಲ್ಲ. ಸೇವೆ ಸಲ್ಲಿಸುತ್ತಿರುವ ಈ ಕಾರ್ಯಕರ್ತೆ ಹಾಗೂ ಸಹಾಯಕಿಯರಿಗೆ ಸರ್ಕಾರದ ಧೋರಣೆಯಿಂದ ಭವಿಷ್ಯ ಮಂಕಾಗಿ ಗೋಚರಿಸುತ್ತಿರುವ ಆತಂಕ ಎದುರಾಗಿದೆ. ಜೀವ ಸವೆದರೂ ಬಾಳು ಹಸನವಾಗುತ್ತಿಲ್ಲ ಎಂಬುದು ಇವರ ಅಳಲು.

Advertisement

ಹಲವು ವರ್ಷಗಳಿಂದ ತಮ್ಮ ಬೇಡಿಕೆಗಳಿಗೆ ಧರಣಿ, ಸತ್ಯಾಗ್ರಹ, ಹೋರಾಟಗಳು ನಿರಂತರ ನಡೆಯುತ್ತ ಬಂದರೂ, ಸರ್ಕಾರ ಮಾತ್ರ ಇವರ ಬೇಡಿಕೆಗಳ ಬಗ್ಗೆ ಒಂದಿಷ್ಟೂ ಯೋಚಿಸುತ್ತಿಲ್ಲ. ತಮ್ಮ ಬೇಡಿಕೆಗಳನ್ನು ಕಂಡಕಂಡವರಲ್ಲಿ ಹೇಳಿಕೊಳ್ಳುತ್ತಿರುವ ಅಂಗನವಾಡಿ ಕಾರ್ಯಕರ್ತೆಯರಿಗೆ ಸಿಗುವ ಗೌರವಧನ ಎಲ್ಲೂ ಸಾಲದು ಎಂಬುದು ಸರ್ಕಾರಕ್ಕೂ ತಿಳಿದಿದೆ. ಆದರೂ ಇವರ ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸದೇ ಇರುವುದು ಇವರ ಚಿಂತೆಗೆ ಕಾರಣವಾಗಿದೆ.

ಪಟ್ಟಣದ ಮಣಕಿ ಮೈದಾನದಲ್ಲಿ ಸೇರಿದ್ದ ಅಂಗನವಾಡಿ ಕಾರ್ಯಕರ್ತೆಯರು ಪತ್ರಕರ್ತರಲ್ಲಿ ತಮ್ಮ ಅಳಲು ತೋಡಿಕೊಂಡರು. ಎಲ್ಲ ಹೋರಾಟಗಳ ನಂತರ ಮಾಧ್ಯಮದ ಮೊರೆ ಹೋಗುತ್ತಿದ್ದೇವೆ. ನಿಮ್ಮಿಂದ ನಮಗೇನಾದರೂ ಕಿಂಚಿತ್‌ ಅನುಕೂಲ ಆಗಬಹುದೆಂದು ಆಸೆ ಹೊಂದಿದ್ದೇವೆ ಎಂದರು.

ಸಿಐಟಿಯು ಮೂಲಕ ನಮ್ಮ ಬೇಡಿಕೆಗಳ ಹೋರಾಟದಲ್ಲಿ ಹಗಲಿರುಳು ಪಾಲ್ಗೊಂಡಿದ್ದೇವೆ. ಆದರೆ ಒಂದೇ ಒಂದು ಬೇಡಿಕೆಯೂ ಈಡೇರಲಿಲ್ಲ. ಆದಕಾರಣ ಪ್ರತ್ಯೇಕವಾಗಿ ಸ್ವತಂತ್ರ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಕುಮಟಾ ತಾಲೂಕು ಎಂಬ ಸಂಘ ಕಟ್ಟಿಕೊಂಡು ಹೋರಾಟ ನಡೆಸುತ್ತಿದ್ದೇವೆ. ಆದರೂ ನಮ್ಮ ಬೇಡಿಕೆಗಳಿಗೆ ಬೆಲೆ ಸಿಗುತ್ತಿಲ್ಲ ಎಂದು ಬೆಸರ ವ್ಯಕ್ತಪಡಿಸಿದರು.

ಸಂಘದ ಸದಸ್ಯರಾದ ತಾರಾ ನಾಯ್ಕ ಹಾಗೂ ಸಾವಿತ್ರಿ ಶಾಸ್ತ್ರಿ ಮಾತನಾಡಿ, ಸರಕಾರ ಪ್ರಾಥಮಿಕ ಶಾಲೆಗಳಲ್ಲಿ ಎಲ್ಕೆಜಿ ಹಾಗೂ ಯುಕೆಜಿ ಪ್ರಾರಂಭಿಸಿದೆ. ಇದು ಒಳ್ಳೆಯ ನಿರ್ಧಾರ. ಆದರೆ ನಮ್ಮಲ್ಲಿರುವ ಇಂಗ್ಲಿಷ್‌ ಬಲ್ಲವರನ್ನು ಸರ್ಕಾರ ಶಿಕ್ಷಕರನ್ನಾಗಿ ನೇಮಿಸಿಕೊಳ್ಳಲಿ. ಸದ್ಯ ಅಂಗನವಾಡಿ ಕಾರ್ಯಕರ್ತೆಯರಿಗೆ ನೀಡುವ 8 ಸಾವಿರ ರೂ. ಗೌರವಧನ ಸಾಲದು. ಸಮಾನ ಕೆಲಸಕ್ಕೆ ಸಮಾನ ವೇತನ ಎಲ್ಲ ಇಲಾಖೆಗಳಿಗೂ ಅನ್ವಯಿಸುತ್ತದೆ. ಆದರೆ ನಮಗೆ ಮಾತ್ರ ಅನ್ವಯಿಸುತ್ತಿಲ್ಲ. ಸರ್ಕಾರ ತಮ್ಮೆಲ್ಲ ಕೆಲಸಗಳಿಗೆ ಉಳಿದ ಕಾಯಂ ಸರ್ಕಾರಿ ನೌಕರರಂತೆ ನಮ್ಮನ್ನು ಬಳಸಿಕೊಳ್ಳುತ್ತಾರೆ. ಆದರೆ ವೇತನದ ಪ್ರಶ್ನೆ ಬಂದಾಗ ಮಾತ್ರ ಸರ್ಕಾರ ಹಿಂದೆ ಸರಿಯುತ್ತದೆ. ಸ್ವತಂತ್ರ ಭಾರತದಲ್ಲಿ ನಾವು ಜೀತದಾಳುಗಳಂತೆ ದುಡಿಯುತ್ತಿದ್ದೇವೆ.

Advertisement

ಸರ್ಕಾರದ ಕಾರ್ಯಕ್ರಮಗಳಿಗೆ ನಾವು ಪ್ರತಿನಿತ್ಯ 40 ರಿಜೀಸ್ಟರ್‌ಗಳನ್ನು ಬರೆಯಬೇಕಾಗಿದೆ. ಆದರೆ ಸರ್ಕಾರ ನ್ಯಾಯಾಲಯದ ಆದೇಶದಂತೆ ಕನಿಷ್ಠ ಕೂಲಿಯನ್ನೂ ನೀಡುತ್ತಿಲ್ಲ. ನಮಗೂ ಸಂಸಾರವಿದೆ. ಮಕ್ಕಳ ಶಿಕ್ಷಣದ ಚಿಂತೆಯಿದೆ. ಮನೆಯ ಸದಸ್ಯರ ಜವಾಬ್ದಾರಿಯಿದೆ. 8 ಸಾವಿರ ರೂ.ನಲ್ಲಿ ಒಂದು ಸಂಸಾರ ಕಳೆಯಲು ಹೇಗೆಸಾಧ್ಯ ಎಂಬುದನ್ನು ಸರ್ಕಾರ ಯೋಚಿಸಬೇಕು. ಚುನಾವಣಾ ಸಂದರ್ಭದಲ್ಲಿ ಕರ್ತವ್ಯಕ್ಕೆ ನಿಯೋಜಿಸಿಕೊಳ್ಳುವ ಎಲ್ಲಾ ಸರ್ಕಾರಿ ನೌಕರರಿಗೆ ಸರಕಾರ ಹಣ ನೀಡುತ್ತದೆ. ನಮ್ಮ ಕೈಯಲ್ಲೂ ಸಮಾನವಾಗಿ ದುಡಿಸಿಕೊಳ್ಳುತ್ತದೆ. ಆದರೆ ನಮಗೆ ಮಾತ್ರ ಹಣ ಕೊಡುತ್ತಿಲ್ಲ. ಸಾಮಾನ್ಯ ಸರ್ಕಾರಿ ನೌಕರರೊಬ್ಬರು ನಿವೃತ್ತಿಯಾದರೆ ಅವರಿಗೆ 10 ರಿಂದ 20 ಲಕ್ಷದ ವರೆಗೆ ಭವಿಷ್ಯ ನಿಧಿ ಹಾಗೂ ಇತರ ಹಣ ಸಿಗುತ್ತದೆ. ನಮಗೆ ಮಾತ್ರ ಭವಿಷ್ಯದ ಯಾವ ಬಧ್ರತೆಯೂ ಇಲ್ಲ. ಸರ್ಕಾರಿ ಶಾಲಾ-ಕಾಲೇಜುಗಳಿಗೆ ಬೇಸಿಗೆ ರಜೆ ನೀಡುತ್ತದೆ. ಆದರೆ ನಮಗೆ ಇದರಿಂದ ವಂಚಿಸಲಾಗುತ್ತಿದೆೆ ಎಂದು ಬೇಸರಿಸಿಕೊಂಡರು.ಕುಮಟಾ ತಾಲೂಕು ಸಂಘದ ಅಧ್ಯಕ್ಷೆ ಕುಸುಮಾ ನಾಯ್ಕ, ಭಾಗೀರಥಿ ನಾಯ್ಕ, ಜಾನಕಿ ಕೂರ್ಸೆ, ಸುಶೀಲಾ ನಾಯ್ಕ, ಸುಮತಿ ನಾಯ್ಕ ಸೇರಿದಂತೆ ಹಲವರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next