Advertisement

ಫಲ ನೀಡದ ಹೋರಾಟ-ಮನವಿ; ದಶಕದ ಹಿಂದೆ ಕೈ ತಪ್ಪಿದೆ ತೋಟಗಾರಿಕೆ ವಿವಿ

06:06 PM Feb 15, 2021 | Nagendra Trasi |

ವಿಜಯಪುರ: ಸಾವಯವ ಕೃಷಿ ವಿಶ್ವವಿದ್ಯಾಲಯಕ್ಕೆ ಸಮೃದ್ಧ ಸಂಪನ್ಮೂಲ ಹೊಂದಿರುವ ವಿಜಯಪುರ ಜಿಲ್ಲೆಗೆ ಕೃಷಿ ವಿಶ್ವ ವಿದ್ಯಾಲಯದ ಬೇಡಿಕೆ ದಶಕಕ್ಕೂ ಹಿಂದಿನದು. ಇದಕ್ಕಾಗಿ ಹಲವು ಬಾರಿ ನಡೆಸಿದ ಹೋರಾಟಗಳು, ಸರ್ಕಾರಗಳು, ಸಚಿವರಿಗೆ ನೀಡಿದ ಮನವಿಗಳಿಗೆ ಮಾತ್ರ ಫಲ ಸಿಕ್ಕಿಲ್ಲ. ರಾಜಕೀಯ ಇಚ್ಛಾಶಕ್ತಿ ಕೊರತೆಯಿಂದಾಗಿ ಜಿಲ್ಲೆಯಲ್ಲಿ ಕೃಷಿ ವಿಶ್ವವಿದ್ಯಾಲಯದ ಬೇಡಿಕೆ ಕನಸು ನನಸಾಗಿದೇ ವಿಫಲವಾಗಿದೆ.

Advertisement

ಎರಡು ದಶಕಗಳ ಹಿಂದೆ ಕೃಷ್ಣಾ ಮೇಲ್ದಂಡೆ ಯೋಜನೆ ಅನುಷ್ಠಾನದ ಹಂತದಲ್ಲಿ ವಿಜಯಪುರ ಜಿಲ್ಲೆಯಲ್ಲಿ ದ್ರಾಕ್ಷಿ, ಲಿಂಬೆ, ದಾಳಿಂಬೆ, ಈರುಳ್ಳಿ, ವಿಳ್ಯದೆಲೆ, ಬಾಳೆಯಂಥ ತೋಟಗಾರಿಕೆ ಬೆಳೆಗಳ ಪ್ರದೇಶ ವಿಸ್ತರಣೆ ಆಗತೊಡಗಿತು. ಈ ಹಂತದಲ್ಲೇ ರಾಜ್ಯ ಸರ್ಕಾರ ರಾಜ್ಯದಲ್ಲಿ ಕೃಷಿ ವಿಶ್ವವಿದ್ಯಾಲಯಗಳಿದ್ದರೂ ಪ್ರತ್ಯೇಕವಾಗಿ ತೋಟಗಾರಿಕೆ ವಿಶ್ವ ವಿದ್ಯಾಲಯ ಸ್ಥಾಪನೆ ಪ್ರಕ್ರಿಯೆ ಆರಂಭಿಸಿತ್ತು. ಪರಿಣಾಮ ಆಗಲೇ ಬಸಜನ್ಮಭೂಮಿ ವಿಜಯಪುರ ಜಿಲ್ಲೆಯಲ್ಲಿ ತೋಟಗಾರಿಕೆ ವಿಶ್ವವಿದ್ಯಾಲಯ ಆರಂಭಕ್ಕೆ ಬೇಡಿಕೆ ಹಾಗೂ ಒತ್ತಡ ಹೇರಲು ಆರಂಭಿಸಿತ್ತು.

ಆದರೆ ಮೊಟ್ಟ ಮೊದಲ ತೋಟಗಾರಿಕೆ ವಿಶ್ವವಿದ್ಯಾಲಯ ಸ್ಥಾಪನೆ ಅವಕಾಶ ಇದ್ದರೂ ಕೈ ತಪ್ಪಿತು. ವಿಜಯಪುರ ಜಿಲ್ಲೆಯಲ್ಲಿ ರಾಜಕೀಯ ಇಚ್ಛಾಶಕ್ತಿ ಪ್ರದರ್ಶನ ಮಾಡುವ ನಾಯಕರಿಲ್ಲದ ಕಾರಣ ಜಿಲ್ಲೆ ಅವಕಾಶದಿಂದ ವಂಚಿತವಾಯಿತು. ಇದಾದ ಬಳಿಕ ವಿಜಯಪುರ ಜಿಲ್ಲೆಗೆ ಕೃಷಿ ವಿಶ್ವವಿದ್ಯಾಲಯ ಸ್ಥಾಪನೆಯ ಕೂಗು ಎದ್ದಿತ್ತು.ದಶಕದ ಕನಸಾಗಿದ್ದ ವಿಜಯಪುರ ಜಿಲ್ಲೆಯಲ್ಲಿ ಪ್ರತ್ಯೇಕ ತೋಟಗಾರಿಕೆ ವಿಶ್ವವಿದ್ಯಾಲಯ ಕೈತಪ್ಪಿದ ಮಾದರಿಯಲ್ಲೇ ರಾಜ್ಯದ ಮತ್ತೂಂದು ಕೃಷಿ ವಿಶ್ವವಿದ್ಯಾಲಯ ಆರಂಭದ ಅವಕಾಶ ಕೈ ಜಾರಿತು.

ಮುಖ್ಯಮಂತ್ರಿಯಾಗಿದ್ದ ಎಚ್‌.ಡಿ. ಕುಮಾರಸ್ವಾಮಿ ಅವರು ನೆರೆಯ ರಾಯಚೂರು ಜಿಲ್ಲೆಗೆ ಕೃಷಿ ವಿಶ್ವವಿದ್ಯಾಲಯ ಮಂಜೂರು ಮಾಡಿದ್ದರಿಂದ ಜಿಲ್ಲೆಗೆ ಮತ್ತೂಂದು ಅವಕಾಶ ವಂಚಿತವಾಯ್ತು. ಆಸ್ಸಾಂ ರಾಜ್ಯದ ಇಂಪಾಲ್‌ ನಗರದಲ್ಲಿ ಕೇಂದ್ರ ಸರ್ಕಾರದ ಕೃಷಿ ವಿಶ್ವವಿದ್ಯಾಲಯ ಇದ್ದು, ಇದಕ್ಕೆ ಕೇಂದ್ರ ಸರ್ಕಾರ ವಾರ್ಷಿಕ ನೂರಾರು ಕೋಟಿ ರೂ. ನೀಡುತ್ತಿದೆ. ಇದನ್ನರಿತ ಜಿಲ್ಲೆಯ ರೈತರು ಐದು ವರ್ಷಗಳ ಹಿಂದೆ ಕೇಂದ್ರ ಕೃಷಿ ಮಂತ್ರಿ ರಾಧಾಮೋಹನಸಿಂಗ್‌ ವಿಜಯಪುರ ಜಿಲ್ಲೆಗೆ ಬಂದಾಗ ಮತ್ತೂಂದು ಮನವಿ ಸಲ್ಲಿಸಲಾಯಿತು.

ಕಲಬುರಗಿಯಲ್ಲಿ ಕೇಂದ್ರೀಯ ವಿಶ್ವವಿದ್ಯಾಲಯದ ಮಾದರಿಯಲ್ಲಿ ವಿಜಯಪುರ ಜಿಲ್ಲೆಗೆ ಕೇಂದ್ರೀಯ ಕೃಷಿ ವಿಶ್ವವಿದ್ಯಾಲಯ ಮಂಜೂರು ಮಾಡುವಂತೆ
ಕೋರಲಾಯಿತು. ರೈತರು ಕೇಂದ್ರ ಕೃಷಿ ವಿಶ್ವವಿದ್ಯಾಲಯ ಸ್ಥಾಪನೆಗೆ ಕೇಂದ್ರ ಕೃಷಿ ಸಚಿವ ರಾಧಾಮೋಹನ್‌ಸಿಂಗ್‌ ಅವರಿಗೆ ಮನವಿ ಸಲ್ಲಿಸಿದಾಗ ಪಕ್ಕದಲ್ಲೇ ಇದ್ದ ವಿಜಯಪುರ ಜಿಲ್ಲೆಯ ಸಂಸದ ರಮೇಶ ಜಿಗಣಗಿ ಪಕ್ಕದಲ್ಲೇ ಇದ್ದರು. ಅಲ್ಲದೇ ಜಿಗಜಿಣಗಿ ಅವರು ಆಗ ಕೇಂದ್ರ ಗ್ರಾಮೀಣ ನೈರ್ಮಲ್ಯ ಹಾಗೂ ಕುಡಿಯುವ ನೀರು ಸರಬರಾಜು ಮಂತ್ರಿಯಾಗಿದ್ದರು. ಆದರೂ ಅವರು ಈ ವಿಷಯವನ್ನು ಗಂಭೀರವಾಗಿ ಪರಿಗಭಣಿಸಲೇ ಇಲ್ಲ. ಅಲ್ಲಿಗೆ ಕೇಂದ್ರದಿಂದ ಸೌಲಭ್ಯ ಪಡೆಯುವ
ಅವಕಾಶ ಪಡೆಯುವ ಒಂದು ಪ್ರಯತ್ನವೂ ಕೈತಪ್ಪಿತು.

Advertisement

ಇದಾದ ಬಳಿಕ 2016 ಡಿಸೆಂಬರ್‌ 21ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಿಟ್ನಳ್ಳಿ ಕೃಷಿ ಕಾಲೇಜಿನ ಬೆಳ್ಳಿ ಹಬ್ಬದ ಅಂಗವಾಗಿ ಹಮ್ಮಿಕೊಂಡಿದ್ದ ರೈತ ಮಹೋತ್ಸವ ಕಾರ್ಯಕ್ರಮಕ್ಕೆ ಬಂದಿದ್ದರು. ಆಗ ಪ್ರಾಸ್ತಾವಿಕವಾಗಿ ಮಾತನಾಡಿದ್ದ ಧಾರವಾಡ ಕೃಷಿ ವಿಶ್ವವಿದ್ಯಾಲಯದ ಕುಲಪತಿಯಾಗಿದ್ದ ಡಿ.ಪಿ. ಬಿರಾದಾರ, ವಿಜಯಪುರ ಜಿಲ್ಲೆಗೆ ಪ್ರತ್ಯೇಕ ಕೃಷಿ ವಿಶ್ವವಿದ್ಯಾಲಯ ಮಂಜೂರು ಮಾಡಬೇಕು. ಪ್ರತ್ಯೇಕ ಕೃಷಿ ವಿಶ್ವವಿದ್ಯಾಲಯಕ್ಕೆ ಅಗತ್ಯ ಇರುವ ಎಲ್ಲ ಸಂಪನ್ಮೂಲ ವಿಜಯಪುರ ಜಿಲ್ಲೆಯಲ್ಲಿ ಲಭ್ಯವಿದೆ ಎಂದು ಅವಕಾಶಗಳು ಇರುವುದನ್ನು ಮನವರಿಕೆ ಮಾಡಿಕೊಟ್ಟಿದ್ದರು. ಇದಕ್ಕೂ ರಾಜ್ಯ ಸರ್ಕಾರದಿಂದ ಸ್ಪಂದನೆ ಸಿಗಲಿಲ್ಲ.

ಇದಾದ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಗರ ಜಿಪಂ ಸಭಾಂಗಣದಲ್ಲಿ ನಡೆಸಿದ ಜನಸ್ಪಂದನ ಕಾರ್ಯಕ್ರಮದಲ್ಲಿ ವಿಜಯಪುರ ಕೃಷಿ
ವಿಶ್ವವಿದ್ಯಾಲಯದ ಸ್ಥಾಪನೆಗೆ ಅಗತ್ಯವಾಗಿರುವ ಪೂರಕ ದಾಖಲೆಗಳ ಸಮೇತ ಬೇಡಿಕೆಯ ಮನವಿ ಸಲ್ಲಿಸಲಾಯಿತು. ಈ ಮನವಿ ಕೂಡ ಸರ್ಕಾರ
ಸ್ಪಂದಿಸದ ಕಾರಣ ಬೇಡಿಕೆ ಧ್ವನಿ ಕಸದ ಬುಟ್ಟಿಯಲ್ಲೇ ಲೀನವಾಯ್ತು.

ಇದಾದ ಕಳೆದ ಮೂರು ವರ್ಷಗಳ ಹಿಂದೆ ರಾಜ್ಯದಲ್ಲಿ ಜೆಡಿಎಸ್‌-ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದಾಗ ಜಿಲ್ಲೆಯವರೇ ಆಗಿದ್ದ ಎಂ.ಸಿ. ಮನಗೂಳಿ ಅವರು ತೋಟಗಾರಿಕೆ ಸಚಿವರಾದರು. ಇನ್ನೇನು ಎರಡು ದಶಕಗಳ ಕನಸು ನನಸಾಗಲು ಪೂರಕ ಪರಿಸ್ಥಿತಿ ಸೃಷ್ಟಿಯಾಯಿತು ಎಂದು ನಂಬಲಾಗಿತ್ತು. ಸಚಿವ ಮನಗೂಳಿ  ಅವರು ಅದೊಂದು ದಿನ ಹಿಟ್ನಳ್ಳಿ ಕೃಷಿ ಫಾರ್ಮ್ಗೆ ಭೇಟಿ ನೀಡಿದಾಗ ಜಿಲ್ಲೆಗೆ ಮಂಜೂರಾಗಿದ್ದ ಕೃಷಿ ಅಭಿಯಾಂತ್ರಿಕ ಮಹಾವಿದ್ಯಾಲಯ ರಾಯಚೂರು ಜಿಲ್ಲೆಗೆ ಹೋಗಿದ್ದನ್ನು ಮರಳಿ ತರುವಂತೆ ಮನವಿ ಮಾಡಲಾಗಿತ್ತು. ಇದೇ ವೇಳೆ ಮತ್ತೂಮ್ಮೆ ಅಗತ್ಯ ದಾಖಲೆಗಳ ಸಮೇತ ಕೃಷಿ ವಿಶ್ವವಿದ್ಯಾಲಯದ ಬೇಡಿಕೆಯ ಮನವಿ ಸಲ್ಲಿಸಲಾಯಿತು.

ಫಲಿತಾಂಶ ಮತ್ತದೇ ಶೂನ್ಯ. ಹೀಗೆ ವಿಜಯಪುರ ಜಿಲ್ಲೆಯಲ್ಲಿರುವ ಸಮೃದ್ಧ ನೀರು, ಫಲವತ್ತಾದ ಮಣ್ಣು, ಉತ್ಕೃಷ್ಟ ಗುಣಮಟ್ಟದ ಕೃಷಿ-ತೋಟಗಾರಿಕೆ ಹಾಗೂ ಕೃಷಿ ಪೂರಕ ಉಪ ಕಸಬುಗಳು ಹೆಚ್ಚಿರುವ ಈ ನೆಲದಲ್ಲಿ ಕೃಷಿ ವಿಶ್ವವಿದ್ಯಾಲಯ ಸ್ಥಾಪನೆ ಹಲಕವು ಬಗೆಯ ಹೋರಾಟಗಳು ಫಲ ನೀಡಲೇ ಇಲ್ಲ. ಇದೀಗ ರಾಜ್ಯ ಸರ್ಕಾರ ಸ್ಥಾಪನೆ ಮಾಡಲು ಹೊರಟಿರುವ ರಾಜ್ಯದ ಮೊಟ್ಟ ಮೊದಲ ಸಾವಯವ ಕೃಷಿ ವಿಶ್ವವಿದ್ಯಾಲಯವಾದರೂ ಜಿಲ್ಲೆಗೆ ಬರಲಿ. ಉತ್ತರ ಕರ್ನಾಟಕ ಭಾಗದ ಜಿಲ್ಲೆಯ ಜನಪ್ರತಿನಿಧಿಗಳು ಪಕ್ಷಾತೀತವಾಗಿ ಈ ಅವಕಾಶ ಪಡೆಯುವಲ್ಲಿ ರಾಜಕೀಯ ಬದ್ಧತೆ ಹಾಗೂ ಇಚ್ಛಾಶಕ್ತಿ ತೋರಬೇಕಿದೆ.

ರಾಜ್ಯ ಸರ್ಕಾರ ಶಿವಮೊಗ್ಗ ಜಿಲ್ಲೆಯಲ್ಲಿ ಸಾವಯವ ಕೃಷಿ ವಿಶ್ವವಿದ್ಯಾಲಯ ಸ್ಥಾಪನೆ ಮಾಡುವ ವಿಷಯ ನನಗೆ ತಿಳಿದಿಲ್ಲ. ಉದಯವಾಣಿ ಪತ್ರಿಕೆ ಮೂಲಕ ನನ್ನ
ಗಮನಕ್ಕೆ ಬಂದಿದ್ದು, ಈ ವಿಷಯ ಸಂಪುಟ ಸಭೆಯ ಮುಂದೆ ಬಂದಾಗ ವಿಜಯಪುರ ಜಿಲ್ಲೆಗೆ ತರಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಜಿಲ್ಲೆಗೆ ಈ ಅವಕಾಶ ಕೈತಪ್ಪದಂತೆ ನೋಡಿಕೊಳ್ಳುತ್ತೇನೆ.

ಗೋವಿಂದ ಕಾರಜೋಳ,
ಉಪ ಮುಖ್ಯಮಂತ್ರಿ

*ಜಿ.ಎಸ್‌. ಕಮತರ

Advertisement

Udayavani is now on Telegram. Click here to join our channel and stay updated with the latest news.

Next