Advertisement

ಅಧಿಸೂಚನೆ ಹೊರಡಿಸದಿದ್ದರೆ ಉಗ್ರ ಹೋರಾಟದ ಎಚ್ಚರಿಕೆ

09:37 AM Jul 22, 2019 | Team Udayavani |

ನವಲಗುಂದ: ರಾಜ್ಯದಲ್ಲಿ ಸರಕಾರ ಅಸ್ಥಿರವಾಗಿದ್ದರಿಂದ ಜು. 21ಕ್ಕೆ ನೀಡಿದ ಗಡುವು ವ್ಯರ್ಥವಾಗಿದೆ. ಇನ್ನೊಂದು ತಿಂಗಳೊಳಗಾಗಿ ಮಹದಾಯಿ ಯೋಜನೆ ಕುರಿತು ಅಧಿಸೂಚನೆ ಹೊರಡಿಸಬೇಕು. ಇಲ್ಲವಾದರೆ ಉಗ್ರ ಹೋರಾಟ ಮಾಡಲಾಗುವುದೆಂದು ಪಕ್ಷಾತೀತ ಹೋರಾಟ ಸಮಿತಿಯ ಮುಖಂಡ ಸುಭಾಸಚಂದ್ರಗೌಡ ಪಾಟೀಲ ಹೇಳಿದರು.

Advertisement

ಪಟ್ಟಣದಲ್ಲಿ ರವಿವಾರ ನಡೆದ ರೈತ ಹುತಾತ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ 28 ಸಂಸದರಿದ್ದರೂ ಈ ಭಾಗದ ಜ್ವಲಂತ ಸಮಸ್ಯೆ ಮಹದಾಯಿ ಕೂಗಿಗೆ ಧ್ವನಿ ನೀಡುತ್ತಿಲ್ಲ. 1457 ದಿವಸಗಳಿಂದ ರೈತರು ನೀರಿಗಾಗಿ ಹೋರಾಟ ಮಾಡುತ್ತಿದ್ದಾರೆ. ಸರ್ಕಾರಗಳು ರೈತರ ಬೇಡಿಕೆಗಳ ಕುರಿತು ಚರ್ಚಿಸಿಲ್ಲ. ಸಂಸದರಾದವರು ರಾಜ್ಯದ ರೈತರ ಹಿತ ಕಾಪಾಡುವಲ್ಲಿ ಇಚ್ಛಾಶಕ್ತಿ ವಹಿಸಬೇಕೆಂದರು.

ಯುವ ರೈತ ಮುಖಂಡ ಮಲ್ಲೇಶ ಉಪ್ಪಾರ ಮಾತನಾಡಿ, ದಶಕಗಳಿಂದ ಸರಕಾರಕ್ಕೆ ಮನವಿ ಸಲ್ಲಿಸಿದರೂ ಕಿವಿಗೊಡದ ಸರಕಾರಗಳಿಗೆ ರೈತರು ಬಿಸಿ ಮುಟ್ಟಿಸಬೇಕಾಗಿದೆ. ನಮ್ಮ ಪಾಲಿನ ನೀರು ಬರುವವರೆಗೂ ಈ ಹೋರಾಟ ನಿಲ್ಲಲ್ಲ ಎಂದರು.

ಪಕ್ಷಾತೀತ ಹೋರಾಟ ಸಮಿತಿ ಅಧ್ಯಕ್ಷ ಬಸಪ್ಪ ಬೀರಣ್ಣವರ ನೇತೃತ್ವದಲ್ಲಿ ನೂರಾರು ರೈತರು ರೈತ ಭವನ ಬಳಿ ಇರುವ ರೈತ ಹುತಾತ್ಮ ವೀರಗಲ್ಲಿಗೆ ಮಾಲಾರ್ಪಣೆ ಮಾಡಿ ಶ್ರದ್ಧಾಂಜಲಿ ಸಲ್ಲಿಸಿದರು. ನಂತರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿ ಘೋಷಣೆ ಕೂಗಿದರು.

ರೈತ ಡಿ.ವಿ.ಕುರಹಟ್ಟಿ, ರವಿ ತೋಟದ, ಗುರುಶಿದ್ದಪ್ಪ ಕಾಲುಂಗುರ, ಸಂಗಪ್ಪ ನಿಡವಣೆ, ಶಿವಪ್ಪ ಸಂಗಳದ, ಅಲ್ಲಾಭಕ್ಷ ಹಂಚಿನಾಳ, ಬಸಯ್ಯ ಮಠಪತಿ, ಯಲ್ಲರಡ್ಡಿ ವನಹಳ್ಳಿ, ರಾಮಣ್ಣ ಕಿಲಾರಿ, ರವಿ ಪಾಟೀಲ, ಶಿದ್ದಪ್ಪ ಮುಪ್ಪಯ್ಯನವರ, ಅನುಸೂಯಾ ಲಕ್ಕುಂಡಿ, ರತ್ನವ್ವ ಲಕ್ಕುಂಡಿ, ಯಮನವ್ವ ರಂಗಣ್ಣವರ, ಪಾರಮ್ಮ ಬೋರಣ್ಣವರ ಸೇರಿದಂತೆ ನೂರಾರು ರೈತರು ಇದ್ದರು.

ರಾಜಕೀಯ ಒಳಜಗಳಗಳಿಂದ ರೈತರ- ಜನರ ಕೆಲಸ ಕುಂಠಿತ:

ಇಂದಿನ ರಾಜಕೀಯ ಒಳಜಗಳಾಟದಿಂದ ರೈತರ, ಸಾರ್ವಜನಿಕರ ಕೆಲಸಗಳು ಕುಂಠಿತಗೊಂಡಿವೆ ರೈತ ಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ ಹೇಳಿದರು. ರೈತ ಹುತಾತ್ಮ ದಿನಾಚರಣೆಯಂದು ನವಲಗುಂದ-ಅಳಗವಾಡಿಯಲ್ಲಿರುವ ರೈತ ಹುತಾತ್ಮ ಬಸಪ್ಪ ಲಕ್ಕುಂಡಿ ಅವರ ವೀರಗಲ್ಲಿಗೆ ಮಾಲಾರ್ಪಣೆ ಮಾಡಿ ಮಾತನಾಡಿದ ಅವರು ಜನಪ್ರತಿನಿಧಿಗಳು ರೈತರ ಸಮಸ್ಯೆ ಆಲಿಸುತ್ತಿಲ್ಲವೆಂದು ಬೇಸರ ವ್ಯಕ್ತಪಡಿಸಿದರು. ರೈತ ಹುತಾತ್ಮರ ಬಲಿದಾನದಿಂದ ಇಂದು ರೈತ ಹೋರಾಟ, ಚಳವಳಿಗೆ ಸ್ಫೂರ್ತಿಯಾಗಿದೆ ಎಂದ ಅವರು ಹುತಾತ್ಮರ ನೆನಪು ಸದಾ ನಮ್ಮಲ್ಲಿರಲಿ ಎಂದರು. ರೈತ ಸಂಘದ ಪುಟ್ಟಣ್ಣಯ್ಯ ಬಣದ ದರ್ಶನ ಪುಟ್ಟಣ್ಣಯ್ಯ ಮಾತನಾಡಿ, ಇವತ್ತು ಸಾಲದಿಂದ ರೈತ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾನೆ. ಸರಿಯಾದ ಬೆಳೆ ಬರದೆ ಇರುವುದರಿಂದ ರೈತರು ನಗರಕ್ಕೆ ಗುಳೆ ಹೊರಟಿದ್ದಾರೆ. ರೈತರು ಒಗ್ಗಟ್ಟಾಗಿ ನಮ್ಮ ಹಕ್ಕಿಗಾಗಿ ಸತತ ಹೋರಾಟ ಮಾಡಬೇಕೆಂದು ಹೇಳಿದರು. ರೈತ ಸಂಘದ ಅಧ್ಯಕ್ಷ ಬಡಗಾಲಪೂರ ನಾಗೇಂದ್ರ, ಗಂಗಾಧರ ಮೇಟಿ, ಬಸವರಾಜ ಸಾಬಳೆ, ವಿಠuಲ ಜಾಧವ, ರಾಘವೇಂದ್ರ ನಾಯಕ, ಸುಣ್ಣಪ್ಪ ಪೂಜಾರ, ಕರಿಯಪ್ಪ ಮೇಟಿ, ಕೊಡಗು ಜಿಲ್ಲೆಯ ರೈತ ಹೊತ್ತನಗೌಡ್ರ, ಬಸಮ್ಮ ಸಂಕಣ್ಣವರ, ವೀರಸಿಂಗ ರಜಪೂತ್‌, ಪಕ್ಷಾತೀತ ಹೋರಾಟ ಸಮಿತಿಯ ಸುಭಾಸಚಂದ್ರಗೌಡ ಪಾಟೀಲ, ಮಲ್ಲೇಶ ಉಪ್ಪಾರ, ಬಸಪ್ಪ ಬೀರಣ್ಣವರ, ಡಿ.ವಿ.ಕುರಹಟ್ಟಿ, ರವಿ ತೋಟದ, ಶಿವಪ್ಪ ಸಂಗಳದ, ಅಲ್ಲಾಭಕ್ಷ ಹಂಚಿನಾಳ ಇತರರು ಇದ್ದರು.
ಪಶ್ಚಾತ್ತಾಪ ಪಡಬೇಕಾದೀತು ಹುಷಾರ್‌:

ರಾಜ್ಯದಲ್ಲಿ ರೆಸಾರ್ಟ್‌ ರಾಜಕೀಯ ನಡೆದಿದ್ದು,ಯಾರೊಬ್ಬರು ಮಹದಾಯಿ ಕುರಿತು ಚರ್ಚಿಸುತ್ತಿಲ್ಲ. ರೈತರ ಕಷ್ಟ ಆಲಿಸದಿದ್ದರೆ ಮುಂದೆ ಪಶ್ಚಾತ್ತಾಪ ಪಡಬೇಕಾಗುತ್ತದೆ ಎಂದು ರೈತಸೇನಾ ರಾಜ್ಯಾಧ್ಯಕ್ಷ ವೀರೇಶ ಸೊಬರದಮಠ ಎಚ್ಚರಿಕೆ ನೀಡಿದರು. ಪಟ್ಟಣದ ರೈತಭವನದ ಬಳಿ ಇರುವ ರೈತ ಹುತಾತ್ಮ ಬಸಪ್ಪ ಲಕ್ಕುಂಡಿಯವರ ವೀರಗಲ್ಲಿಗೆ ಮಾಲಾರ್ಪಣೆ ಮಾಡಿ ಮಾತನಾಡಿದ ಅವರು, ಮಹಾದಾಯಿ ಹೋರಾಟಕ್ಕೆ ಜಾತಿ, ಮತ, ಪಂಥ ಬಿಟ್ಟು ಹೋರಾಟಕ್ಕೆ ಎಲ್ಲರೂ ಮುಂದಾಗಬೇಕು ಎಂದರು. ರೈತ ಹುತಾತ್ಮ ದಿನಾಚರಣೆಯಂದು ರಾಜಕಾರಣಿಗಳು ಮಾಲಾರ್ಪಣೆ ಮಾಡಿ ಭಾಷಣ ಮಾಡಿ ಹೋಗುತ್ತಾರೆ. ರೈತರ ಬೇಡಿಕೆಗಳನ್ನು ಸರಕಾರದ ಗಮನಕ್ಕೆ ತರುವುದರಲ್ಲಿ ವಿಫಲರಾಗಿದ್ದಾರೆಂದು ಕಿಡಿಕಾರಿದರು. ಮಹದಾಯಿ ನೀರು ಬಂದರೆ ನಾವು ಬಂಗಾರದಂಥ ಬೆಳೆ ತೆಗೆಬಹುದು. ರೈತರು ಜಾಗೃತರಾಗಿ ಹೋರಾಟಕ್ಕೆ ಶಕ್ತಿಯಾಗಿ ನಿಲ್ಲಬೇಕೆಂದರು.
Advertisement
Advertisement

Udayavani is now on Telegram. Click here to join our channel and stay updated with the latest news.

Next