Advertisement

ಚುಕ್ಕಿ ಕಂಡ ಒಂದು ಕನಸು

06:00 AM Jul 13, 2018 | Team Udayavani |

ಇನ್ನೇನು ಬೆಳಕು ಹರಿಯುತ್ತದೆಯೆಂಬುದನ್ನು ಸೂಚಿಸಲು ಆಗಸದಲ್ಲಿ ಬೆಳ್ಳಿಚುಕ್ಕಿ ಉದಯಿಸುವ ಕಾಲದಲ್ಲಿ ಹುಟ್ಟಿದಳು ಅವಳು. ಹಾಗಾಗಿಯೇ ಅವಳಿಗೆ ಚುಕ್ಕಿಯೆಂದು ಹೆಸರಿಟ್ಟರು. ಚುಕ್ಕಿ ಆ ಊರಿನ ಹುಡುಗಿಯರೆಲ್ಲರ ನಡುವೆ ಹೊಳೆಯುವ ನಕ್ಷತ್ರವಾಗಿ ಬೆಳೆದಳು. ಹೊಳೆಯಾಚೆಗೆ ಇರುವ ಶಾಲೆಯ ಮೆಟ್ಟಿಲನ್ನು ಮೊದಲ ಬಾರಿಗೆ ಹತ್ತಿದವಳು ಅವಳು. ಶಾಲೆಯ ಮಾಸ್ತರು ಅವಳ ಈ ಸಾಹಸಕ್ಕಾಗಿ ಅವಳನ್ನು ತರಗತಿಯಲ್ಲಿ ಎದ್ದು ನಿಲ್ಲಿಸಿ ಚಪ್ಪಾಳೆಯ ಬಹುಮಾನ ನೀಡಿದ್ದರು. ಎಲ್ಲ ಮಕ್ಕಳೂ ಶಾಲೆಯ ಹೆಸರು ಹೇಳಿದರೆ ಬೆಚ್ಚಿ ಬೀಳುತ್ತಿದ್ದ ಕಾಲದಲ್ಲಿ ಚುಕ್ಕಿ ಶಾಲೆಗೆ ಎಷ್ಟು ಹೊತ್ತಿಗೆ ತಲುಪುತ್ತೇನೆ ಎಂದು ಕಾಯುತ್ತಿದ್ದಳು. 

Advertisement

ಚುಕ್ಕಿ ಶಾಲೆಗೆ ಸೇರಿ ಇನ್ನೂ ತಿಂಗಳಾಗಿತ್ತಷ್ಟೆ. ಧೋ ಎಂದು  ಸುರಿದ ಮಳೆಗೆ ಹೊಳೆಯಲ್ಲಿ ನೆರೆಬಂದು ಶಾಲೆಗೆ ಹೋಗುವ ಎಲ್ಲ ದಾರಿಗಳೂ ಮುಚ್ಚಿಹೋಗಿದ್ದವು. ನೀರಿನಿಂದ ಆವರಿಸಿ ಇಡಿಯ ಊರೇ ದ್ವೀಪದಂತಾಗಿರುವಾಗ ಅವಳು ಶಾಲೆಗೆ ಹೋಗುವ ಮಾತು ದೂರವೇ ಉಳಿದಿತ್ತು. ಮನೆಯಲ್ಲಿ ಕುಳಿತ ಚುಕ್ಕಿ ಶಾಲೆಯ ಗೆಳೆಯ-ಗೆಳತಿಯರನ್ನು, ಮಾಸ್ತರ್ರು ಹೇಳುವ ಕಥೆಗಳನ್ನು, ಕಪ್ಪು ಹಲಗೆಯ ಮೇಲೆ ಅವರು ಬರೆಯುವ ಬೆಳ್ಳನೆಯ ಅಕ್ಷರಗಳನ್ನು ಮತ್ತು ಶಾಲೆ ಬಿಡುವಾಗ ಕೊಡುವ ಸಿಹಿಯಾದ ಉಪ್ಪಿಟ್ಟಿನ ಹುಡಿಯನ್ನು ಬಹಳ ನೆನಪಿಸಿಕೊಳ್ಳುತ್ತಿದ್ದಳು. ಹಲವಾರು ಬಾರಿ ತನ್ನ ಆಸೆಯನ್ನು ಮನೆಯವರೆಲ್ಲರಲ್ಲಿ ಹೇಳಿಯೂ ನೋಡಿದಳು. ಆದರೆ, ಅವರದೇ ಆದ ಕೆಲಸಗಳಲ್ಲಿ ಮಗ್ನರಾಗಿರುವ ಅವರಿಗೆ ಚುಕ್ಕಿಯ ಶಾಲೆಯ ಆಸೆ ಒಂದು ವಿಷಯವೆಂದೇ ಅನಿಸಲಿಲ್ಲ. ಮಳೆಗಾಲ ಮುಗಿದ ಮೇಲೆ ಹೋದರೂ ಕಳೆದುಕೊಳ್ಳುವುದೇನಿಲ್ಲ ಎಂಬುದು ಅವರ ಭಾವನೆಯಾಗಿತ್ತು. “ಮಾಸ್ತರ್ರು ನೆಟ್ಟಿ ಮಗಿಯುವರೆಗೂ ಶಾಲೆಗೆ ಬರೋದಿಲ್ಲ. ಗದ್ದೆ  ಉಳುತ್ತಾ ಇದ್ರು ಮೊನ್ನೆ. ನೀನು ರಜೆ ಮಾಡೋದರಲ್ಲಿ ತಪ್ಪೇನಿದೆ?’ ಎಂದು ತಮಾಷೆ ಮಾಡಿ ನಗುತ್ತಿದ್ದರು.

ಚುಕ್ಕಿಯ ಶಾಲೆಯಿದ್ದದ್ದು ಹೊಳೆಯಾಚಿಗಿನ ಗುಡ್ಡದ ಮೇಲೆ. ಒಂದು ದಿನ ಬೆಳಿಗ್ಗೆ ಚುಕ್ಕಿಗೆ ಉಪಾಯವೊಂದು ಹೊಳೆಯಿತು. ಅವಳು ಊರಿನವರೆಲ್ಲ ಕೊಡೆಯ ಹಾಗೆ ಉಪಯೋಗಿಸುತ್ತಿದ್ದ ಮರಸಣಿಗೆ ಗಿಡದ ಎಲೆಯನ್ನು ಕೊಡೆಯಂತೆ ಹಿಡಿದು ತನ್ನ ಮನೆಯ ಹಿಂದಿರುವ ಗುಡ್ಡವನ್ನೇರಿದಳು. ಗುಡ್ಡವೇರುತ್ತಿದ್ದಂತೆ ಹೊಳೆಯಾಚೆಗಿನ ಅವಳ ಶಾಲೆಯು ಅವಳಿಗೆ ಕಂಡಿತು. ಅವಳಿಗೆ ಅದೆಂತಹ ಖುಶಿಯಾಯಿತೆಂದರೆ, ಮಕ್ಕಳೆಲ್ಲ ಶಾಲೆಯ ಅಂಗಳದಲ್ಲಿ ನಿಂತು ಪ್ರಾರ್ಥನೆ ಹಾಡುವುದು, ಅವಳ ಮಾಸ್ತರರು ಶಾಲೆಯೊಳಗೆ ಹೋಗುವುದು, ಆಟದ ಅವಧಿಯಲ್ಲಿ ಮಕ್ಕಳೆಲ್ಲರೂ ಹೊರಗೆ ಬಂದು ಆಡುವುದು ಎಲ್ಲವನ್ನೂ ಆಕೆ ನೋಡಬಹುದಾಗಿತ್ತು. ಮಕ್ಕಳು ಬಯಲಿನಲ್ಲಿ ಆಡುತ್ತಿದ್ದರೆ ಚುಕ್ಕಿ ಇಲ್ಲಿ ನಿಂತು ಚಪ್ಪಾಳೆ ಬಡಿದು ಸಂಭ್ರಮಿಸುತ್ತಿದ್ದಳು. ಕೆಲವೊಮ್ಮೆ ಅವರೆಲ್ಲರೂ ತರಗತಿಯೊಳಗೆ ಪಾಠ ಕಲಿಯುತ್ತಿರುವುದನ್ನು ಕಂಡು ಚುಕ್ಕಿಗೆ ಇನ್ನಿಲ್ಲದ ಸಂಕಟವಾಗುತ್ತಿತ್ತು. ಆದರೆ ಹೊಳೆದಾಟಿ ಶಾಲೆಗೆ ಹೋಗಲಾರದ ಅಸಹಾಯಕತೆ ಅವಳನ್ನು ಕಾಡುತ್ತಿತ್ತು. ಯಾವಾಗಲೂ ಹೊಳೆಯನ್ನು ಪ್ರೀತಿಸುತ್ತಿದ್ದ ಆಕೆ ಅಂದು ಹೊಳೆಯ ಮೇಲೆ ಕೋಪಗೊಂಡು ಟೂ ಬಿಟ್ಟಿದ್ದಳು. ಆ ಸಂಜೆ ಅಪ್ಪ ಕೇಳಿದ, “ಕಣ್ಣಿಗೆ ಕಾಣುವುದು, ಕೈಗೆ ಸಿಗದು. ಏನದು?’ ಎಂಬ ಒಗಟಿಗೆ “ನಮ್ಮ ಶಾಲೆ’ ಎಂದು ಉತ್ತರಿಸಿದ್ದಳು!

ಇದೇ ಕನವರಿಕೆಯಲ್ಲಿ ಮಲಗಿದ ಚುಕ್ಕಿಗೆ ಒಂದು ದಿನ ಸುಂದರವಾದ ಕನಸು. ಚುಕ್ಕಿ ಗುಡ್ಡವೇರಿ ಶಾಲೆಯನ್ನು ನೋಡುತ್ತ ಕುಳಿತಿದ್ದಾಳೆ. ಶಾಲೆಗೆ ತಲುಪಲಾರದ ಅವಳ ಅಸಹಾಯಕತೆ ಅವಳ ಕಣ್ಣೀರಾಗಿ ಕೆನ್ನೆಯ ಮೇಲೆ ಹರಿಯುತ್ತಿದೆ. ಚೆಂದದ ಚಿಟ್ಟೆಯೊಂದು ಹಾರಿಬಂದು ಅವಳ ಕೆನ್ನೆಯನ್ನು ನೇವರಿಸುತ್ತಿದೆ. ಚುಕ್ಕಿ ಚಿಟ್ಟೆಯನ್ನು ಕೈಯಲ್ಲಿ ಹಿಡಿದು ಮಾತನ್ನಾಡುತ್ತಾಳೆ. ಚಿಟ್ಟೆ ಅವಳನ್ನು ಹೊತ್ತು ಹಾರುವ ಮಾತನ್ನಾಡುತ್ತಿದೆ. ಮೋಡ ತುಂಬಿದ ಬಾನಿನ ಕೆಳಗೆ, ನೆಲ ಕಾಣದಂತೆ ಹರಡಿಕೊಂಡ ಕೆನ್ನೀರಿನ ಮೇಲೆ ಬಿಳಿಯ ನಿಲುವಂಗಿ ತೊಟ್ಟ ಚುಕ್ಕಿ ಚಿಟ್ಟೆಯ ಬೆನ್ನೇರಿ ಅಮ್ಮ ಹೇಳುವ ಕಥೆಯ ಕಿನ್ನರಿಯಂತೆ ಹಾರುತ್ತಿದ್ದಳು!

ಕನಸು ಕಾಣುತ್ತಿದ್ದ ಚುಕ್ಕಿಯನ್ನು ಅಮ್ಮ ಬೇಗನೆ ಎಬ್ಬಿಸಿದಳು. ಶಾಲೆಗೆ ಹೋಗಲು ಅಣಿಯಾಗುವಂತೆ ತಿಳಿಸಿದಳು.  ಚುಕ್ಕಿಯ ಶಾಲೆಯ ಪರದಾಟವನ್ನು ನೋಡಿದ ಅವಳ ತಂದೆ ಊರ ಯುವಕರ ಸಹಾಯದಿಂದ ತುಂಬಿ ಹರಿಯುತ್ತಿದ್ದ ಹೊಳೆಯನ್ನು ದಾಟಲು ಮರದ ಸೇತುವೆ ಕಟ್ಟಿದ್ದರು. ಆದರೆ, ಚುಕ್ಕಿಗೆ ಇದ್ಯಾವುದೂ ತಿಳಿದಿರಲಿಲ್ಲ. ಅವಳು ತನ್ನ ಕನಸಲ್ಲಿ ಬಂದ ಚಿಟ್ಟೆಯೇ ಸೇತುವೆ ಕಟ್ಟಿದೆಯೆಂದು ನಂಬಿದ್ದಳು. ಖುಶಿಯಿಂದ ಕುಣಿಯುತ್ತಾ ಶಾಲೆಗೆ ತಯಾರಾಗತೊಡಗಿದಳು. ಸೇತುವೆಯನ್ನು ದಾಟುವಾಗ ತಪ್ಪಿಯೂ ಕೆಳಗೆ ಬಗ್ಗಿ ಹರಿಯುವ ಹೊಳೆಯನ್ನು ನೋಡಬಾರದು ಮತ್ತು ಸೇತುವೆಯುದ್ದಕ್ಕೂ ಕಟ್ಟಿರುವ ಬಿದಿರಿನ ಹಿಡಿಬಳ್ಳಿಯನ್ನು ಹಿಡಿದುಕೊಂಡೇ ದಾಟಬೇಕು ಎಂಬ ಅಮ್ಮನ ಸೂಚನೆಯನ್ನು ಮಾತ್ರ ಬಿಡದೇ ಪಾಲಿಸುತ್ತಿದ್ದಳು. 

Advertisement

ಶಾಲೆಯಲ್ಲಿ ಅರ್ಧವಾರ್ಷಿಕ ಪರೀಕ್ಷೆಗಳು ಹತ್ತಿರ ಬರುವ ಸಮಯ. ಚುಕ್ಕಿಗೆ ಮೊದಲ ಬಾರಿಗೆ ಪರೀಕ್ಷೆ ಬರೆಯುವ ಖುಶಿ. ಆ ದಿನ ಖುಶಿಯಲ್ಲಿ ಕುಣಿಯುತ್ತಾ ಸೇತುವೆ ದಾಟುತ್ತಿದ್ದವಳು ಶಾಲೆಯ ಪುಸ್ತಕದ ಕಟ್ಟನ್ನು ಹೊಳೆಯಲ್ಲಿ ಬೀಳಿಸಿಕೊಂಡಳು. ಪುಸ್ತಕಗಳು ಹೋದವೆಂದು ಇವಳೂ ಹೊಳೆಗೆ ಹಾರಲಿಲ್ಲವಲ್ಲ ಎಂಬ ನೆಮ್ಮದಿ ಅಮ್ಮನಿಗೆ. ಇವಳಿಗೋ ಪುಸ್ತಕಗಳಿಲ್ಲದೇ ಓದುವುದು ಹೇಗೆಂಬ ಚಿಂತೆ. ಅಮ್ಮ ಅವಳಿಗೆ ತಾನು ಹುಡುಗಿಯಾಗಿದ್ದಾಗ ಓದಿದ ಆಮೆಯ ಕಥೆಯನ್ನು ಹಿಂದಿಯಲ್ಲಿ ಹೇಳತೊಡಗಿದಳು, “ಏಕ್‌ ಸರೋವರ್‌ ಮೆ ಏಕ್‌ ಕಚುವಾ ರಹತಾ ಥಾ. ಉಸೀ ಸರೋವರ್‌ ಕೆ ಪಾಸ್‌ ಏಕ್‌ ಖರಗೋಶ್‌ ಭೀ ರಹತಾ ಥಾ’. ಚುಕ್ಕಿ ಬಾಯಿ ತೆರೆದುಕೊಂಡು ಇಡಿಯ ಕಥೆಯನ್ನು ಕೇಳಿದಳು. ಅಮ್ಮನಿಗೆ ಅಂದು ಓದಿದ ಕಥೆ ಇಂದಿಗೂ ನೆನಪಿರುವ ಬಗ್ಗೆ ವಿಸ್ಮಯಗೊಂಡಳು. ಅಮ್ಮ ತನ್ನ ಬಾಲ್ಯದಲ್ಲಿ ಪುಸ್ತಕಗಳನ್ನು ಕೊಳ್ಳಲು ಹಣವೇ ಇಲ್ಲದೆ ಬೇರೆಯವರ ಪುಸ್ತಕವನ್ನು ಎರವಲು ತಂದು ಇಡಿಯ ಪಾಠಗಳನ್ನು ಬಾಯಿಪಾಠ ಕಲಿಯುತ್ತಿದ್ದುದರ ಬಗ್ಗೆ, ಅಷ್ಟಾಗಿಯೂ ತರಗತಿಯಲ್ಲಿ ಮೊದಲಿಗಳಾಗುತ್ತಿದ್ದುದರ ಬಗ್ಗೆ, ಮನೆಯವರಿಂದಾಗಿ ವಿದ್ಯಾಭ್ಯಾಸ ಮೊಟಕಾದುದರ ಬಗೆಗೆಲ್ಲಾ ಮಗಳಿಗೆ ಹೇಳಿದಳು. 

ಅಮ್ಮನ ಕಥೆಯಲ್ಲಿನ ಆಮೆ ಮಗಳ ಮನಸ್ಸಿನಲ್ಲಿ ಮನೆಮಾಡಿತು. ತನ್ನ ವಿದ್ಯಾಭ್ಯಾಸಕ್ಕೆ ಬಂದ ತೊಡಕುಗಳನ್ನವಳು ಯಾವಾಗಲೂ ಸವಾಲಾಗಿ ತೆಗೆದುಕೊಳ್ಳುತ್ತಿದ್ದಳು. ಮಾರ್ಗಮಧ್ಯದಲ್ಲಿ ನಿದ್ರಿಸುವ ಮೊಲದ ನಿರ್ಲಕ್ಷ್ಯ ಅವಳಿಗೆ ವರದಾನವಾಗಿತ್ತು. ಓದಿದ್ದನ್ನು ಸುಲಭವಾಗಿ ನೆನಪಿಟ್ಟುಕೊಳ್ಳುವ, ಲೈಬ್ರರಿಯ ಪುಸ್ತಕಗಳಿಂದಲೇ ಓದನ್ನು ಮುಂದುವರೆಸುವ ಕೌಶಲ ಅವಳಿಗಿತ್ತು. ಹೊಳೆ ಅವಳ ಪುಸ್ತಕಗಳನ್ನಷ್ಟೇ ಸೆಳೆದೊಯ್ದಿತ್ತು; ಅವಳ ಕನಸುಗಳನ್ನಲ್ಲ. ಅವಳು ಅಮ್ಮನ ಕಥೆಯ ಆಮೆಯಂತೆ ತನ್ನ ಗುರಿ ಸೇರಿದಳು. 

ಸುಧಾ ಆಡುಕಳ

Advertisement

Udayavani is now on Telegram. Click here to join our channel and stay updated with the latest news.

Next