Advertisement

ವಿಜಯಪುರದಲ್ಲಿ ಕಾಲೇಜು ಲವ್ ಸ್ಟೋರಿ; ಪ್ರೇಮಿಗಳ ದುರಂತ ಅಂತ್ಯ

07:42 PM Oct 15, 2022 | Vishnudas Patil |

ವಿಜಯಪುರ : ಕಾಲೇಜು ಹಂತದ ಪ್ರೇಮ ಪ್ರಕರಣ ಹೆತ್ತವರ ವಿರೋಧದ ಕಾರಣ ದುರಂತ ಅಂತ್ಯ ಕಂಡಿದೆ. ಪ್ರಿಯಕರನೊಂದಿಗೆ ಏಕಾಂತದಲ್ಲಿ ಇದ್ದುದನ್ನು ತಂದೆ ನೋಡಿದನೆಂದು ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದು, ಮಗಳ ಸಾವಿಗೆ ಕಾರಣನೆಂದು ತಂದೆ ಯುವಕನನ್ನು ಹತ್ಯೆ ಮಾಡಿ ಬಳಿಕ ಎರಡೂ ಶವಗಳನ್ನು ಕೃಷ್ಣಾ ನದಿಗೆ ಎಸೆದಿರುವ ಘಟನೆ ವರದಿಯಾಗಿದೆ.

Advertisement

ತಿಕೋಟಾ ಪೊಲೀಸ್ ಠಾಣೆಯಲ್ಲಿ ಸೆಪ್ಟೆಂಬರ್ ಮಧ್ಯಾವಧಿಯಲ್ಲಿ ದಾಖಲಾಗಿದ್ದ ಯುವತಿ ಅಪಹರಣ ಹಾಗೂ ಯುವಕ ನಾಪತ್ತೆ ಪ್ರಕರಣ ಪೊಲೀಸ್ ತನಿಖೆಯಲ್ಲಿ ಯುವ ಪ್ರೇಮಿಗಳ ದುರಂತ ಅಂತ್ಯ ಎಂದು ಗುರುತಿಸಲಾಗಿದೆ.

ಪದವಿ ಅಂತಿಮ ವರ್ಷದಲ್ಲಿ ಓದುತ್ತಿದ್ದ ತಿಕೋಟಾ ತಾಲೂಕಿನ ಘೋಣಸಗಿ ಗ್ರಾಮದ ವಿದ್ಯಾರ್ಥಿ ಹಾಗೂ ಪ್ರಥಮ ವರ್ಷದ ಪದವಿ ಓದುತ್ತಿದ್ದ ಕಳ್ಳಕವಟಗಿ ಗ್ರಾಮದ ಅಪ್ರಾಪ್ತೆ ಪರಸ್ಪರ ಪ್ರೀತಿಸುತ್ತಿದ್ದರು. ಬಸ್‍ನಲ್ಲಿ ಕಾಲೇಜಿಗೆ ಓಡಾಡುವ ಪರಿಚಯ, ಪ್ರೇಮಕ್ಕೆ ತಿರುಗಿ, ಇಬ್ಬರೂ ಓಡಾಡಿಕೊಂಡಿದ್ದರು. ಆದರೆ ಯುವಪ್ರೇಮಿಗಳ ವಿಷಯ ಎರಡೂ ಮನೆಗಳಲ್ಲಿ ತಿಳಿಯುತ್ತಲೇ ಪಂಚಾಯ್ತಿ ನಡೆಸಿ, ಬುದ್ದಿವಾದ ಹೇಳಲಾಗಿತ್ತು. ಆದರೆ ಯವ ಪ್ರೇಮಿಗಳು ಮಾತ್ರ ಮಾನಸಿಕವಾಗಿ ಬೇರೆ ಆಗಿರಲಿಲ್ಲ. ಇದರ ಭಾಗವಾಗಿ ಸೆಪ್ಟೆಂಬರ್ ತಿಂಗಳಲ್ಲಿ ಅದೊಂದು ದಿನ ಮಧ್ಯರಾತ್ರಿ ಕಳ್ಳಕವಟಗಿ ಗ್ರಾಮದ ಅಪ್ರಾಪ್ತೆ ಮನೆಯಲ್ಲಿ ಯುವಕನೊಂದಿಗೆ ಏಕಾಂತದಲ್ಲಿ ಇರುವುದನ್ನು ಕಂಡು ತಂದೆ ಸಿಡಿದೆದ್ದಿದ್ದಾನೆ.

ಇದರಿಂದ ನೊಂದ ಯುವತಿ ವಿಷ ಸೇವಿಸಿ ಸ್ಥಳದಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮಗಳ ಸಾವಿನಿಂದ ಕಂಗಾಲಾದ ಅಪ್ರಾಪ್ತೆಯ ತಂದೆ ಯುವಕನ ಕೈಕಾಲು ಕಟ್ಟಿ, ಆತನಿಗೂ ಬಲವಂತವಾಗಿ ವಿಷ ಕುಡಿಸಿ, ಹತ್ಯೆ ಮಾಡಿದ್ದಾನೆ. ಅಲ್ಲದೇ ಇತರೆ ಕೆಲವರೊಂದಿಗೆ ಸೇರಿ ಇಬ್ಬರ ಶವಗಳನ್ನು ಜೀಪ್‍ನಲ್ಲಿ ಹಾಕಿಕೊಂಡು ಬಾಲಕೋಟೆ ಜಿಲ್ಲೆಯ ಬೀಳಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೊರ್ತಿ-ಕೊಲ್ಹಾರ ಬಳಿ ಕೃಷ್ಣಾ ನದಿಗೆ ಎಸೆದು, ಸಾಕ್ಷನಾಶ ಮಾಡಿದ್ದಾಗಿ ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಬಯಲಾಗಿದೆ.

ಇದಾದ ಬಳಿಕ ತನ್ನ ಮಗಳನ್ನು ಯುವಕ ಅಪಹರಿಸಿದ್ದಾನೆಂದು ಅಪ್ರಾಪ್ತೆಯ ತಂದೆ ಹಾಗೂ ತಮ್ಮ ಮಗ ನಾಪತ್ತೆಯಾಗಿದ್ದಾನೆ ಎಂದು ಯುವಕನ ತಂದೆ ಪ್ರತ್ಯೇಕವಾಗಿ ದೂರು ನೀಡಿದ್ದರು. ದೂರು ಆಧರಿಸಿ ತನಿಖೆಗೆ ಇಳಿದ ಪೊಲೀಸರಿಗೆ, ಬಿಳಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಾಪತ್ತೆಯಾಗಿದ್ದ ಯವಕ ಶವವಾಗಿ ಪತ್ತೆಯಾಗಿದ್ದಾನೆ. ಯುವಕನ ಪೋಷಕರು ಕೃಷ್ಣಾ ನದಿ ತೀರದಲ್ಲಿ ಪತ್ತೆಯಾದ ಶವ ತಮ್ಮ ಮಗನದೆಂದು ಗುರುತಿಸಿದ್ದಾರೆ.

Advertisement

ಇದನ್ನು ಆಧರಿಸಿ ಬೀಳಗಿ ಪೊಲೀಸರು ಅಪ್ರಾಪ್ತೆಯ ತಂದೆ ಗುರಪ್ಪ, ಸಂಬಂಧಿ ಅಜಿತ್ ಇಬ್ಬರನ್ನು ಬಂಧಿಸಿ, ವಿಚಾರಣೆ ನಡೆಸಿದ್ದಾರೆ. ಹಾಗೂ ಮಲ್ಲಪ್ಪ ಎಂಬ ವೃದ್ಧನೂ ಪ್ರಕರಣದಲ್ಲಿ ಶಾಮೀಲಾಗಿದ್ದನ್ನು ಪತ್ತೆ ಮಾಡಿದ್ದಾರೆ. ಮತ್ತೊಂದೆಡೆ ಪ್ರಕರಣ ವಿಜಯಪುರ ಜಿಲ್ಲೆಯ ವ್ಯಾಪ್ತಿಯಲ್ಲಿ ನಡೆದಿರುವುದರಿಂದ ಬೀಳಗಿ ಪೊಲೀಸರು ಸದರಿ ಪ್ರಕರಣವನ್ನು ವಿಜಯಪುರ ಜಿಲ್ಲೆಗೆ ವರ್ಗಾಯಿಸಲು ಸಿದ್ಧತೆ ನಡೆಸಿದ್ದಾರೆ. ಮತ್ತೊಂದೆಡೆ ನದಿಯಲ್ಲಿ ಎಸೆಯಲಾಗಿದೆ ಎನ್ನಲಾದ ಅಪ್ರಾಪ್ತೆಯ ಶವಕ್ಕಾಗಿ ಪೊಲೀಸರು ಶೋಧ ನಡೆಸಿದ್ದಾರೆ.

ಘಟನೆಯ ಕುರಿತು ಮಾಧ್ಯಮಗಳಿಗೆ ವಿವರ ನೀಡಿರುವ ವಿಜಯಪುರ ಎಸ್ಪಿ ಆನಂದಕುಮಾರ್ , ಕಾಲೇಜು ವಿದ್ಯಾರ್ಥಿಗಳ ಪ್ರೇಮ ಪ್ರಕರಣದಲ್ಲಿ ಹೆತ್ತವರೇ ಖಳನಾಯಕರಾಗಿದ್ದಾರೆ. ಪ್ರಾಥಮಿಕ ಮಾಹಿತಿ ಪ್ರಕಾರ ಯುವತಿಯ ತಂದೆಯೇ ಮಗಳು ಹಾಗೂ ಆಕೆಯ ಪ್ರಿಯಕರನ ಶವವನ್ನು ಕೃಷ್ಣಾ ನದಿಗೆ ಎಸದಿದ್ದಾಗಿ ತನಿಖೆಯಲ್ಲಿ ಒಪ್ಪಿಕೊಂಡಿದ್ದಾನೆ. ಈ ಕುರಿತು ಬೀಳಗಿ ಪೊಲೀಸರಿಂದ ಪ್ರಕರಣ ವರ್ಗಾಯಿಸಿಕೊಂಡು ಸೂಕ್ತ ತನಿಖೆ ನಡೆಸುವುದಾಗಿ ವಿವರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next