ಬೆಂಗಳೂರು: ಎರಡೂವರೆ ವರ್ಷಗಳ ಬಳಿಕ ಸಚಿವ ಸಂಪುಟದಲ್ಲಿ ಬದಲಾವಣೆ ಆಗಲಿದೆ ಎಂದು ಸರಕಾರದ ಮುಖ್ಯ ಸಚೇತಕ ಪಿ.ಎಂ.ಅಶೋಕ್ ಪಟ್ಟಣ ಹೇಳುವ ಮೂಲಕ ತೆರೆಮರೆಗೆ ಸರಿದಿದ್ದ ಅಧಿಕಾರ ಹಂಚಿಕೆ ಸೂತ್ರ ಮತ್ತೆ ಮುನ್ನೆಲೆಗೆ ಬಂದಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಡುವೆ ಎರಡೂವರೆ ವರ್ಷಗಳ ಅಧಿಕಾರ ಹಂಚಿಕೆ ಒಪ್ಪಂದ ಏರ್ಪಟ್ಟಿದೆ ಎಂಬ ಸುದ್ದಿಗಳು ಸರಕಾರ ರಚನೆಯ ಆರಂಭದ ದಿನಗಳಲ್ಲಿ ದಟ್ಟವಾಗಿ ಹರಿದಾಡಿದ್ದವು. ಆದರೆ ಅದು ಕೆಲವು ದಿನಗಳ ಬಳಿಕ ಆಡಳಿತ ಪಕ್ಷ ಕಾಂಗ್ರೆಸ್ನಲ್ಲಿ ಸಾಕಷ್ಟು ವಿವಾದ ಹಾಗೂ ಗೊಂದಲಗಳನ್ನು ಸೃಷ್ಟಿಸಿದ ಬಳಿಕ ಹೈಕಮಾಂಡ್ ಮಧ್ಯಪ್ರವೇಶಿಸಿ ಅಧಿಕಾರ ಹಂಚಿಕೆ ಸೂತ್ರದ ಬಗ್ಗೆ ಯಾರೂ ಚಕಾರವೆತ್ತದಂತೆ ಬ್ರೇಕ್ ಹಾಕಿತ್ತು. ಕೆಲವು ತಿಂಗಳು ಈ ವಿಷಯ ತಣ್ಣಗಾಗಿತ್ತು.
ಈಗ ರಾಮದುರ್ಗದ ಶಾಸಕ ಹಾಗೂ ಸರಕಾರಿ ಮುಖ್ಯ ಸಚೇತಕ ಪಿ.ಎಂ.ಅಶೋಕ್ ಅವರು ಎರಡೂವರೆ ವರ್ಷಗಳ ಬಳಿಕ ಸಂಪುಟ ಬದಲಾಗಲಿದೆ ಎಂದು ರಾಜ್ಯದಲ್ಲಿ ಪಕ್ಷದ ಉಸ್ತುವಾರಿ ನೋಡಿಕೊಳ್ಳುತ್ತಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ಸಿಂಗ್ ಸುಜೇìವಾಲ ಹೇಳುವ ಮೂಲಕ ಮತ್ತೆ ಅಧಿಕಾರ ಹಂಚಿಕೆ ಸೂತ್ರ ಚರ್ಚೆಗೆ ಬಂದಿದೆ.
“ಉದಯವಾಣಿ’ ಜತೆ ಮಾತನಾಡಿದ ಅಶೋಕ್ ಪಟ್ಟಣ ಅವರು, ನಾನು ಸಹಿತ ಹಲವು ಹಿರಿಯರು ಪಕ್ಷಕ್ಕೆ ನಿಷ್ಠರಾಗಿದ್ದೇವೆ. ಸಹಜವಾಗಿಯೇ ಮಂತ್ರಿ ಸ್ಥಾನದ ನಿರೀಕ್ಷೆಯಲ್ಲಿದ್ದೇವೆ. ಕಳೆದ ಸಲವೂ ನಮಗೆ ಅವಕಾಶ ಕೈತಪ್ಪಿಹೋಗಿದೆ. ಹೀಗಾಗಿ ಎರಡೂವರೆ ವರ್ಷ ಕಾಯುವಂತೆ ಸುಜೇìವಾಲ ಹೇಳಿದ್ದಾರೆ ಎಂದರು. ಸಚಿವ ಸಂಪುಟ ಪುನಾರಚನೆಯೋ, ಕೆಲವರನ್ನು ಕೈಬಿಡುತ್ತಾರೋ ಅಥವಾ ಸಮರ್ಪಕವಾಗಿ ಕೆಲಸ ಮಾಡದವರನ್ನು ಸಂಪುಟದಿಂದ ಕೈಬಿಟ್ಟು ಹೊಸಬರಿಗೆ ಅವಕಾಶ ಕೊಡುತ್ತಾರೋ ಎಂಬುದು ಮಾತ್ರ ಗೊತ್ತಿಲ್ಲ. ಹೀಗಾಗಿ ನಾನು ಕೂಡ ಕಾಯುತ್ತಿದ್ದೇನೆ ಎಂದಷ್ಟೇ ಅಶೋಕ್ ಹೇಳಿದರು.