Advertisement

ದ್ವಿಚಕ್ರ ವಾಹನಕ್ಕೆ ಬಸ್‌ ಢಿಕ್ಕಿ: ಬಾಲಕಿ ಸಾವು

11:57 AM Aug 13, 2018 | Team Udayavani |

ಮಂಗಳೂರು: ನಂತೂರಿನಲ್ಲಿ ರವಿವಾರ ದ್ವಿಚಕ್ರ ವಾಹನಕ್ಕೆ ಖಾಸಗಿ ಎಕ್ಸ್‌ಪ್ರೆಸ್‌ ಬಸ್‌ ಢಿಕ್ಕಿ ಹೊಡೆದು ಸವಾರೆಯ ಪುತ್ರಿ ಸಾವನ್ನಪ್ಪಿದ್ದಾಳೆ. ಮಹಿಳೆ ಮತ್ತು ಆಕೆಯ ಪುತ್ರ ಗಾಯಗೊಂಡಿದ್ದಾರೆ. 

Advertisement

ಮೂಲತಃ ಶಿವಮೊಗ್ಗದ ನಿವಾಸಿಯಾಗಿದ್ದು, ಪ್ರಸ್ತುತ ಸುರತ್ಕಲ್‌ ಸಮೀಪದ ಕಾಟಿಪಳ್ಳ ಕೃಷ್ಣಾಪುರ 4 ನೇ ಕ್ರಾಸ್‌ನಲ್ಲಿ ವಾಸವಾಗಿರುವ ರೋಶನ್‌ – ನೂರ್‌ ಜಹಾನ್‌ ದಂಪತಿಯ ಪುತ್ರಿ ಮದಿಹಾ (11) ಸಾವನ್ನಪ್ಪಿದ ಬಾಲಕಿ. ನೂರ್‌ಜಹಾನ್‌ ಮತ್ತು ಆಕೆಯ 4 ವರ್ಷದ ಪುತ್ರ ಗಾಯಗೊಂಡವರು. 

ರೋಶನ್‌ ಅವರು ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದು, ಅವರ ಹಿರಿಯ ಪುತ್ರಿ ಕೂಡ ಬೆಂಗಳೂರಿನಲ್ಲಿ ಓದುತ್ತಿದ್ದಾಳೆ. ನೂರ್‌ ಜಹಾನ್‌ ಅವರು ಓರ್ವ ಪುತ್ರಿ ಮತ್ತು ಓರ್ವ ಪುತ್ರನ ಜತೆ ಕೃಷ್ಣಾಪುರದಲ್ಲಿ ವಾಸವಾಗಿದ್ದಾರೆ.

ಸುಮಾರು ಒಂದು ತಿಂಗಳ ಹಿಂದೆಯಷ್ಟೇ ಈ ಕುಟುಂಬ ಶಿವಮೊಗ್ಗದಿಂದ ಸುರತ್ಕಲ್‌ಗೆ ಬಂದು ಬಾಡಿಗೆ ಮನೆಯಲ್ಲಿ ವಾಸ್ತವ್ಯ ಮಾಡಲು ಆರಂಭಿಸಿತ್ತು. ಟ್ರಾಫಿಕ್‌ ಪೂರ್ವ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.  

ಹಿಂದಿನಿಂದ ಢಿಕ್ಕಿ ಹೊಡೆದ ಬಸ್‌
ನೂರ್‌ ಜಹಾನ್‌ ಅವರು ಮದುವೆ ಸಮಾರಂಭವೊಂದರಲ್ಲಿ ಭಾಗವಹಿಸಲು ರವಿವಾರ ಮಧ್ಯಾಹ್ನ ತನ್ನ ಸ್ಕೂಟರ್‌ನಲ್ಲಿ ಕಿರಿಯ ಪುತ್ರಿ ಮದಿಹಾ ಮತ್ತು ಪುತ್ರ ತಯ್ಯಬ್‌ ಅನ್ಸಾರ್‌ನನ್ನು ಹಿಂಬದಿ ಕುಳ್ಳಿರಿಸಿಕೊಂಡು ಮಂಗಳೂರು ಕಡೆಗೆ ಪ್ರಯಾಣಿಸುತ್ತಿದ್ದರು. ನೂರ್‌ ಜಹಾನ್‌ ಚಲಾಯಿಸುತ್ತಿದ್ದ ಸ್ಕೂಟರ್‌ ರಾಷ್ಟ್ರೀಯ ಹೆದ್ದಾರಿ 66ರಲ್ಲಿ  ಪಾದುವಾ ಹೈಸ್ಕೂಲ್‌ ಜಂಕ್ಷನ್‌ ದಾಟಿ ನಂತೂರು ಕಡೆಗೆ ಸಾಗುತ್ತಾ ಆರ್ಟಿಕ್‌ ಫರ್ನಿಚರ್‌ ಮಳಿಗೆಯ ಎದುರು ತಲುಪಿದಾಗ ಮಧ್ಯಾಹ್ನ 12.20ರ ವೇಳೆಗೆ ಉಡುಪಿಯಿಂದ ಮಂಗಳೂರಿಗೆ ಬರುತ್ತಿದ್ದ  ಖಾಸಗಿ ಎಕ್ಸ್‌ ಪ್ರಸ್‌ ಬಸ್‌ ಬಲಬದಿಯಿಂದ ಓವರ್‌ಟೇಕ್‌ ಮಾಡಲು ಯತ್ನಿಸಿದ್ದು, ಈ ಸಂದರ್ಭ ಬಸ್ಸಿನ ಹಿಂಭಾಗ ಸ್ಕೂಟರ್‌ಗೆ ಢಿಕ್ಕಿ ಹೊಡೆಯಿತು. ಆಗ ಸ್ಕೂಟರ್‌ ರಸ್ತೆಗೆ ಮಗುಚಿ ಬಿದ್ದು, ಸ್ಕೂಟರ್‌ ಸವಾರೆ ನೂರ್‌ ಜಹಾನ್‌ ಮತ್ತು ಹಿಂಬದಿ ಕುಳಿತಿದ್ದ ಇಬ್ಬರು ಮಕ್ಕಳು ಗಾಯಗೊಂಡರು. ಮದಿಯಾ ಅವರ ತಲೆಗೆ ತೀವ್ರ ಗಾಯಗಳಾಗಿದ್ದು, ಆಕೆ ಬಳಿಕ ಖಾಸಗಿ ಆಸ್ಪತ್ರೆಯಲ್ಲಿ  ಸಾವನ್ನಪ್ಪಿದಳು. ಗಾಯಗೊಂಡ ನೂರ್‌ ಜಹಾನ್‌ ಮತ್ತು ಪುತ್ರ ತಯ್ಯಬ್‌ ಅನ್ಸಾರ್‌ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next