Advertisement

ಕಾರ್ಯಾಂಗದಲ್ಲಿನ ‘ಲಂಚ ಸಾಮ್ರಾಜ್ಯ’ಕ್ಕೆ ಶಾಕ್ ನೀಡಿದ ಅಚಲ ವ್ಯಕ್ತಿತ್ವ

10:05 AM Nov 01, 2019 | Team Udayavani |

ಬೆಂಗಳೂರು: ‘ವೆಂಕಟಾಚಲ’ ಎಂಬ ಹೆಸರು ಕೆಳಿದರೆ ಸಾಕು ಭ್ರಷ್ಟ ಅಧಿಕಾರಿಗಳ ಎದೆಯಲ್ಲಿ ನಡುಕ ಹುಟ್ಟುತ್ತಿದ್ದ ಕಾಲವೊಂದಿತ್ತು. ಲೋಕಾಯುಕ್ತ ಎಂಬ ಇಲಾಖೆ ಒಂದಿದೆ, ಯಾವನೇ ಸರಕಾರಿ ಅಧಿಕಾರಿ ಲಂಚ ಕೇಳಿದರೆ ಈ ಸಂಸ್ಥೆಗೆ ದೂರನ್ನು ನೀಡಬಹುದು ಎಂದು ಕರ್ನಾಟಕದ ಜನಸಾಮಾನ್ಯರಿಗೆ ಗೊತ್ತಾಗಿದ್ದೇ ಎನ್. ವೆಂಕಟಾಚಲ ಅವರು ಲೋಕಾಯುಕ್ತರಾಗಿ ಬಂದ ಮೇಲೆಯೇ.

Advertisement

2001ರಲ್ಲಿ ವೆಂಕಟಾಚಲ ಅವರು ಕರ್ನಾಟಕ ಲೋಕಾಯುಕ್ತರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಭ್ರಷ್ಟಾಚಾರ ನಿಯಂತ್ರಣಕ್ಕಾಗಿರುವ ಈ ಇಲಾಖೆಯನ್ನು ಜನಸಾಮಾನ್ಯರ ಬಳಿಗೆ ಕೊಂಡೊಯ್ಯುವ ಪ್ರಯತ್ನವನ್ನು ವೆಂಕಟಾಚಲ ಅವರು ಮಾಡಿದ್ದರು. ಮತ್ತು ಈ ಮೂಲಕ ಸರಕಾರಿ ಕಛೇರಿಗಳ ಆಯಕಟ್ಟಿನ ಜಾಗದಲ್ಲಿದ್ದ ಮಾತ್ರವಲ್ಲದೇ ಗ್ರಾಮೀಣ ಪ್ರದೇಶಗಳಲ್ಲೂ ಜನರಿಂದ ಲಂಚ ಪಡೆದುಕೊಳ್ಳುತ್ತಿದ್ದ ಸರಕಾರಿ ಅಧಿಕಾರಿಗಳ ಪಾಲಿಗೆ ವೆಂಕಟಾಚಲ ಎನ್ನುವ ಹೆಸರು ಸಿಂಹಸ್ವಪ್ನವಾಗುತ್ತಾ ಹೋಯಿತು.

ರಾಜ್ಯದಲ್ಲಿ 1984ರಲ್ಲಿ ಸ್ಥಾಪನೆಗೊಂಡ ಲೋಕಾಯುಕ್ತ ಸಂಸ್ಥೆಯು ಕಾರ್ಯಾಂಗದಲ್ಲಿ ಆಳವಾಗಿ ಬೇರುಬಿಟ್ಟಿರುವ ಲಂಚಗುಳಿತನ ವ್ಯವಸ್ಥೆಯನ್ನು ಮಟ್ಟಹಾಕುವ ಉದ್ದೇಶವನ್ನೇನೋ ಹೊಂದಿತ್ತು. ಆದರೆ ಜನಸಾಮಾನ್ಯರಿಗೆ ಈ ಇಲಾಖೆ ಮತ್ತು ಇದರ ಕಾರ್ಯವೈಖರಿಯ ಕುರಿತಾಗಿ ಅರಿವಿನ ಕೊರತೆ ಇದ್ದುದರಿಂದ ಜನಸಾಮಾನ್ಯರಿಗಾಗಿ ಸ್ಥಾಪನೆಗೊಂಡಿದ್ದ ಲೋಕಾಯುಕ್ತ ಇಲಾಖೆ ಅವರಿಂದ ದೂರವಾಗಿಯೇ ಕಾರ್ಯನಿರ್ವಹಿಸುವ ಸ್ಥಿತಿ ನಿರ್ಮಾಣಗೊಂಡಿತ್ತು.

ಆದರೆ 2001ರಲ್ಲಿ ಅಂದಿನ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಸರಕಾರದಿಂದ ಲೋಕಾಯುಕ್ತರಾಗಿ ನೇಮಕಗೊಂಡ ಬಳಿಕ ಅವರು ತಮ್ಮ ಕಾರ್ಯಶೈಲಿಗೊಂದು ಹೊಸ ರೂಪವನ್ನೇ ನೀಡಿದರು. ಲೋಕಾಯುಕ್ತವನ್ನು ಜನಸ್ನೇಹಿಯಾಗಿಸಲು ಅವರು ಮಾಡಿದ ಪ್ರಯತ್ನ ಕೆಲವೇ ದಿನಗಳಲ್ಲಿ ಫಲನೀಡಲಾರಂಭಿಸಿತು. ವೆಂಕಟಾಚಲ ಅವರು ಲೋಕಾಯುಕ್ತರಾಗಿ ನೇಮಕಗೊಳ್ಳುವುದಕ್ಕೆ ಮುನ್ನ ಲೋಕಾಯುಕ್ತ ಕಛೇರಿಗೆ 20 – 25 ದೂರುಗಳು ಬರುತ್ತಿದ್ದರೆ ಇವರು ಅಧಿಕಾರ ಸ್ವೀಕರಿಸಿದ ಬಳಿಕ ಈ ಸಂಖ್ಯೆ 200 ರಿಂದ 250ಕ್ಕೆ ಏರಿಕೆ ಕಂಡಿತ್ತು.

ಸರಕಾರಿ ಕಛೇರಿಗಳ ಮೇಲೆ ದಿಡೀರ್ ದಾಳಿ ಮತ್ತು ಅಲ್ಲಿನ ಕಾರ್ಯವೈಖರಿಯ ಪರಿಶೀಲನೆಗೆ ವೆಂಕಟಾಚಲ ಅವರು ಪ್ರಥಮ ಆದ್ಯತೆಯನ್ನು ನೀಡುತ್ತಿದ್ದರು. ಹಾಗಾಗಿ ಇವರ ನಾಲ್ಕೂವರೆ ವರ್ಷಗಳ ಕಾರ್ಯಾವಧಿಯಲ್ಲಿ ಸರಿಸುಮಾರು 50 ಸಾವಿರ ಪ್ರಕರಣಗಳನ್ನು ದಾಖಲಿಸಿಕೊಂಡಿದ್ದರು. ಸರಕಾರಿ ಅಧಿಕಾರಿಗಳ ದುರ್ವರ್ತನೆ, ಬೇಜವಾಬ್ದಾರಿತನ, ನಿರ್ಲಕ್ಷ್ಯಗಳಿಗೆ ಉರಿದುಬೀಳುತ್ತಿದ್ದ ವೆಂಕಟಾಚಲ ಅವರು ಅಂತಹ ಅಧಿಕಾರಿಗಳಿಗೆ ಎಲ್ಲರ ಮುಂದೆಯೇ ಕ್ಲಾಸ್ ತೆಗೆದುಕೊಳ್ಳುತ್ತಿದ್ದರು.

Advertisement

ಇನ್ನು ಸರಕಾರಿ ಕಛೇರಿಗಳು ಮಾತ್ರವಲ್ಲದೇ ಜನರಿಗೆ ಸೌಲಭ್ಯ ನೀಡುವ ಸರಕಾರಿ ಆಸ್ಪತ್ರೆಗಳಿಗೂ ದಿಢೀರ್ ಭೇಟಿ ನೀಡಿ ಅಲ್ಲಿನ ಅವ್ಯವಸ್ಥೆಗಳ ವಿರುದ್ಧ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದರು.

ಲೋಕಾಯುಕ್ತ ಕಾನೂನಿನ ಪ್ರಕಾರ ಲೋಕಾಯುಕ್ತರಿಗಿಂತಲೂ ಉಪಲೋಕಾಯುಕ್ತರಿಗೆ ಅಧಿಕಾರ ಹೆಚ್ಚು. ಆದರೆ ವೆಂಕಟಾಚಲ ಅವರು ಲೋಕಾಯುಕ್ತರಾಗಿ ನೇಮಕಗೊಂಡ ಅವಧಿಯಲ್ಲಿ ಸರಕಾರ ಉಪಲೋಕಾಯುಕ್ತರ ನೇಮಕವನ್ನೇ ಮಾಡಿರಲಿಲ್ಲ. ಆದರೆ ಈ ಅಂಶ ವೆಂಕಟಾಚಲ ಅವರಿಗೆ ತಮ್ಮ ಕಾರ್ಯವನ್ನು ನಡೆಸಿಕೊಂಡು ಹೋಗುವಲ್ಲಿ ಯಾವುದೇ ರೀತಿಯಲ್ಲಿ ಅಡ್ಡಿಯಾಗಲಿಲ್ಲ ಎಂಬುದೇ ವಿಶೇಷ. ಕೆಲವು ಅತ್ಯಗತ್ಯ ಸಂದರ್ಭಗಳಲ್ಲಿ ಉಪಲೋಕಾಯುಕ್ತರ ಅಧಿಕಾರವನ್ನೂ ತಾವೇ ಚಲಾಯಿಸುವ ಮೂಲಕ ವೆಂಕಟಾಚಲ ಅವರು ಜನಸಾಮಾನ್ಯರ ದೂರುಗಳಿಗೆ ಸ್ಪಂದಿಸುವ ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತಿದ್ದರು.

ಬ್ರಿಟನ್ ನಲ್ಲಿರುವ ಭ್ರಷ್ಟಾಚಾರ ತಡೆ ಕಾನೂನು ನಮ್ಮ ದೇಶದಲ್ಲೂ ಜಾರಿಗೆ ಬರಬೇಕೆಂಬ ಅಭಿಪ್ರಾಯವನ್ನು ವೆಂಕಟಾಚಲ ಅವರು ಪದೇ ಪದೇ ವ್ಯಕ್ತಪಡಿಸುತ್ತಿದ್ದರು. ಭ್ರಷ್ಟಾಚಾರ ಆರೋಪಕ್ಕೆ ಗುರಿಯಾದಲ್ಲಿ ಪ್ರಧಾನಿಯನ್ನೂ ಸಹ ಸ್ವತಂತ್ರ ತನಿಖಾ ಸಂಸ್ಥೆಗಳು ವಿಚಾರಣೆಗೊಳಪಡಿಸುವಂತಹ ಕಾನೂನು ಬ್ರಿಟನ್ ನಲ್ಲಿದೆ ಮತ್ತು ಭ್ರಷ್ಟಾಚಾರ ಪ್ರಕರಣಗಳ ತನಿಖೆಗೆ ಪ್ರತ್ಯೇಕ ನ್ಯಾಯಾಲಯದ ಅಗತ್ಯತೆಯನ್ನೂ ಸಹ ವೆಂಕಟಾಚಲ ಅವರು ಒತ್ತಿಹೇಳುತ್ತಿದ್ದರು.

24X7 ಚಾನೆಲ್ ಗಳು, ಸಾಮಾಜಿಕ ಜಾಲತಾಣಗಳು ಇಲ್ಲದಿದ್ದ 18 ವರ್ಷಗಳ ಹಿಂದೆಯೇ ಲೋಕಾಯುಕ್ತ ನ್ಯಾಯಮೂರ್ತಿಯಾಗಿ ವೆಂಕಟಾಚಲ ಅವರ ಕಾರ್ಯವೈಖರಿ ಕರ್ನಾಟಕದ ಮೂಲೆ ಮೂಲೆಗಳಲ್ಲಿ ಮನೆಮಾತಾಗಿತ್ತು ಎಂದರೆ ಅವರ ಕಾರ್ಯ ಶೈಲಿ ಹೇಗಿದ್ದಿರಬಹುದೆಂದು ನಾವಿಂದು ಊಹಿಸಿಕೊಳ್ಳಬಹುದು.
ಕರ್ನಾಟಕ ಲೋಕಾಯುಕ್ತದಲ್ಲಿ ವೆಂಕಟಾಚಲ ಅವರ ಕಾರ್ಯಶೈಲಿಯಿಂದ ಪ್ರೇರಣೆ ಹೊಂದಿ ‘ಲಂಚ ಸಾಮ್ರಾಜ್ಯ’ ಎಂಬ ಕನ್ನಡ ಚಲನಚಿತ್ರವೂ ಸಹ ತೆರೆಕಂಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next