Advertisement

ಅಕ್ಷರ ಜಾತ್ರೆಗೆ ತಟ್ಟಿದ ರಾಜಕೀಯ ಅನಿಶ್ಚಿತೆಯ ಕಾರ್ಮೋಡ

08:54 PM Jul 21, 2019 | Team Udayavani |

ಚಿಕ್ಕಬಳ್ಳಾಪುರ: ಕಳೆದ ವರ್ಷವೇ ಮುಗಿಯಬೇಕಿದ್ದ ಜಿಲ್ಲಾ ಹಾಗೂ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನಗಳಿಗೆ ಸದ್ಯ ಕಸಾಪ ಚಾಲನೆ ನೀಡಿದ್ದರೂ ರಾಜ್ಯ ರಾಜಕೀಯ ವಲಯದಲ್ಲಿ ಉಲ್ಬಣಿಸಿರುವ ರಾಜಕೀಯ ಅನಿಶ್ಚಿತೆಯ ಕಾರ್ಮೋಡ ಜಿಲ್ಲೆಯಲ್ಲಿ ನಡೆಯಬೇಕಿದ್ದ ಅಕ್ಷರ ಜಾತ್ರೆಗಳ ಮೇಲೆ ಆವರಿಸಿ ತೀವ್ರ ಪರಿಣಾಮ ಬೀರಿದೆ.

Advertisement

ಕಳೆದ ವರ್ಷ ಜಿಲ್ಲೆಯಲ್ಲಿ ಜಿಲ್ಲಾ ಕನ್ನಡ ಸಮ್ಮೇಳನ ನಡೆಸಲಿಲ್ಲ ಎಂಬ ಸಾರ್ವಜನಿಕರ ಹಾಗೂ ಸಾಹಿತ್ಯ ಪ್ರೇಮಿಗಳ ಆರೋಪಕ್ಕೆ ತುತ್ತಾಗಿದ್ದ ಜಿಲ್ಲಾ ಕಸಾಪ, ಈ ವರ್ಷ ಎಚ್ಚೆತ್ತುಕೊಂಡು ಜಿಲ್ಲೆಯಲ್ಲಿ ಜಿಲ್ಲಾ ಹಾಗೂ ತಾಲೂಕು ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನಗಳನ್ನು ಜುಲೈ ತಿಂಗಳ ಒಳಗೆ ಮುಗಿಸಲು ಭರದ ತಯಾರಿಯಲ್ಲಿ ತೊಡಗಿದ್ದರೂ ಸ್ಥಳೀಯ ಜನಪ್ರತಿನಿಧಿಗಳಿಂದ ನಿರೀಕ್ಷಿತ ಸ್ಪಂದನೆ ಸಿಕ್ಕಿಲ್ಲ. ಇದರಿಂದಾಗಿ ಮಹತ್ವಕಾಂಕ್ಷಿ ಸಾಹಿತ್ಯ ಸಮ್ಮೇಳನಗಳನ್ನು ಅದ್ದೂರಿಯಾಗಿ ನಡೆಸಲು ಉದ್ದೇಶಿಸಿದ್ದ ಕಸಾಪ ಪದಾಧಿಕಾರಿಗಳು ಸದ್ಯ ಏನು ಮಾಡಲಾಗದೇ ಅಸಹಾಯಕ ಸ್ಥಿತಿಯಲ್ಲಿರುವುದು ಕಂಡು ಬಂದಿದೆ.

ಸಮ್ಮೇಳನಾಧ್ಯಕ್ಷರ ಆಯ್ಕೆ: ಈಗಾಗಲೇ ಜಿಲ್ಲೆಯ ವಾಣಿಜ್ಯ ನಗರಿ ಚಿಂತಾಮಣಿಯಲ್ಲಿ ಜಿಲ್ಲಾ ಮಟ್ಟದ ಎರಡು ದಿನಗಳ ಎಂಟನೇ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜನೆ ಮಾಡಲು ಇದೇ ತಿಂಗಳ 27, 28 ರಂದು ದಿನಾಂಕ ನಿಗದಿಪಡಿಸಿದೆ. ಅದೇ ರೀತಿ 29ಕ್ಕೆ ಗೌರಿಬಿದನೂರು, ಶಿಡ್ಲಘಟ್ಟ ಪಟ್ಟಣದಲ್ಲಿ 30, ಜಿಲ್ಲಾ ಕೇಂದ್ರ ಚಿಕ್ಕಬಳ್ಳಾಪುರದಲ್ಲಿ 31ಕ್ಕೆ ತಾಲೂಕು ಮಟ್ಟದ ಸಮ್ಮೇಳನಗಳು ಆಯೋಜಿಸಲು ದಿನಾಂಕ ಗೊತ್ತುಪಡಿಸಿ ಸಮ್ಮೇಳನಾಧ್ಯಕ್ಷರನ್ನು ಕೂಡ ಆಯ್ಕೆ ಮಾಡಿವೆ.

ಆದರೆೆ ಜಿಲ್ಲೆಯ ವಿವಿಧ ಕ್ಷೇತ್ರಗಳ ಶಾಸಕರ ಜೊತೆಗೆ ಸಾಹಿತ್ಯ ಸಮ್ಮೇಳನದ ರೂಪುರೇಷೆಗಳ ಬಗ್ಗೆ ಚರ್ಚೆ ನಡೆಸಲು ಸಾಧ್ಯವಾಗದೇ ಜಿಲ್ಲಾ ಹಾಗೂ ತಾಲೂಕು ಮಟ್ಟದ ಕಸಾಪ ಪದಾಧಿಕಾರಿಗಳು ಸ್ವಂತ ನಿರ್ಧಾರ ಕೈಗೊಳ್ಳದೇ ಅತ್ತ ಕ್ಷೇತ್ರದ ಶಾಸಕರನ್ನು ಬಿಡದೇ ಸಂಕಟ ಎದುರಿಸುವಂತಾಗಿದೆ. ಶಿಷ್ಟಾಚಾರದಂತೆ ಕಸಾಪ ಯಾವುದೇ ಸಮ್ಮೇಳನ ನಡೆಸಿದರೂ ಕ್ಷೇತ್ರದ ಶಾಸಕರನ್ನು ಆಹ್ವಾನಿಸುವುದು ಕಡ್ಡಾಯ. ಆದರೆ ರಾಜ್ಯದಲ್ಲಿ ಕಾಂಗ್ರೆಸ್‌, ಜೆಡಿಎಸ್‌ ಮೈತ್ರಿ ಸರ್ಕಾರ ಶಾಸಕರ ಸಂಖ್ಯಾಬಲ ಕಳೆದುಕೊಂಡು ಅಧಿಕಾರ ಕಳೆದುಕೊಳ್ಳುವ ಆತಂಕದಲ್ಲಿದೆ.

ಕಾಂಗ್ರೆಸ್‌, ಜೆಡಿಎಸ್‌ ಹಾಗೂ ಬಿಜೆಪಿ ಸೇರಿ ಮೂರು ಪಕ್ಷಗಳು ತಮ್ಮ ಶಾಸಕರನ್ನು ಹಿಡಿದಿಟ್ಟುಕೊಳ್ಳಲು ರೆಸಾರ್ಟ್‌ ಮೊರೆ ಹೋಗಿರುವ ಪರಿಣಾಮ ಜಿಲ್ಲೆಯಲ್ಲಿ ನಡೆಯಬೇಕಿರುವ ಜಿಲ್ಲಾ ಸಾಹಿತ್ಯ ಸಮ್ಮೇಳನಗಳಿಗೆ ಆಯಾ ಕ್ಷೇತ್ರಗಳಲ್ಲಿ ಶಾಸಕರಿಂದ ನಿರೀಕ್ಷಿತ ಸ್ಪಂದನೆ ಸಿಗದೇ ಇತ್ತ ಶಾಸಕರನ್ನು ಬಿಟ್ಟು ಸಮ್ಮೇಳನ ನಡೆಸಲು ಸಾಧ್ಯವಾಗದೇ ಕಸಾಪ ಪದಾಧಿಕಾರಿಗಳು ಮುಂದೆ ಏನು ಮಾಡುವುದು ಎಂಬ ಚಿಂತೆಯಲ್ಲಿ ಮುಳುಗಿದ್ದಾರೆ.

Advertisement

ಆಹ್ವಾನ ಪತ್ರಿಕೆ ಮುದ್ರಣವಿಲ್ಲ: ಸಾಹಿತ್ಯ ಸಮ್ಮೇಳನಗಳು ಕನಿಷ್ಟ ತಿಂಗಳ ಮೊದಲೇ ಸಮ್ಮೇಳನದ ಆಹ್ವಾನ ಪತ್ರಿಕೆಗಳು ಹೊರ ಬಂದು ವ್ಯಾಪಕ ಪ್ರಚಾರ ನಡೆಸಬೇಕು. ಆದರೆ ಜಿಲ್ಲೆಯ ಚಿಂತಾಮಣಿಯಲ್ಲಿ ನಡೆಯುತ್ತಿರುವ ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೆ ಕೇವಲ ನಾಲ್ಕು ದಿನ ಮಾತ್ರ ಬಾಕಿ ಇದ್ದರೂ ಇದುವರೆಗೂ ಸಮ್ಮೇಳನದ ಆಹ್ವಾನ ಪತ್ರಿಕೆ ಹೊರ ಬಂದಿಲ್ಲ. ಜೊತೆಗೆ ಸಾಹಿತ್ಯ ಸಮ್ಮೇಳನ ಎಲ್ಲಿ ನಡೆಸಬೇಕೆಂಬ ಸ್ಥಳ ಕೂಡ ಇನ್ನೂ ಗುರುತಿಸಿಲ್ಲ. ಇದೇ ಪರಿಸ್ಥಿತಿ ತಾಲೂಕು ಮಟ್ಟದ ಸಮ್ಮೇಳನ ದಿನಾಂಕ ನಿಗದಿಯಾಗಿರುವ ತಾಲೂಕುಗಳಲ್ಲಿ ಕಂಡು ಬಂದಿದೆ.

ಇದಕ್ಕೆ ಮುಖ್ಯ ಕಾರಣ ಸಮ್ಮೇಳನದ ಸಿದ್ಧತೆಗಳ ಬಗ್ಗೆ ಚರ್ಚಿಸಲು ಕ್ಷೇತ್ರಗಳ ಶಾಸಕರು ಕೈಗೆ ಸಿಗದಿರುವುದು. ಇನ್ನೂ ಸಮ್ಮೇಳನಕ್ಕೆ ಯಾರನ್ನು ಆಹ್ವಾನಿಸಬೇಕು, ಹಿರಿಯ ಸಾಹಿತಿಗಳನ್ನು ಕರೆಯಬೇಕಾ ಅಥವಾ ಸ್ಥಳೀಯವಾಗಿರುವ ಜನಪ್ರತಿನಿಧಿಗಳಿಂದಲೇ ಸಮ್ಮೇಳನ ಉದ್ಘಾಟಿಸಬೇಕಾ ಎಂಬ ಗೊಂದಲದಲ್ಲಿ ಕಸಾಪ ಪದಾಧಿಕಾರಿಗಳು ಮುಳುಗಿರುವುದು ಎದ್ದು ಕಾಣುತ್ತಿದೆ.

ಒಟ್ಟಿನಲ್ಲಿ ಆಂಧ್ರದ ಗಡಿಯಲ್ಲಿರುವ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನಗಳನ್ನು ಅರ್ಥಪೂರ್ಣವಾಗಿ ಕನ್ನಡ ನೆಲ, ಜಲ, ಸಾಹಿತ್ಯ ಸಂಸ್ಕೃತಿಯ ಪ್ರತೀಕವಾಗಿ ನಡೆಯಬೇಕಿತ್ತಾದರೂ ಸದ್ಯ ರಾಜ್ಯ ರಾಜಕೀಯ ವಲಯದಲ್ಲಿ ಮೂಡಿರುವ ರಾಜಕೀಯ ಅನಿಶ್ಚಿತೆಯ ಕಾರ್ಮೋಡದಿಂದ ಸಾಹಿತ್ಯ ಸಮ್ಮೇಳನಗಳು ಕಳೆಗುಂದುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ.

ಸಮ್ಮೇಳನ ನಡೆಸಲು ಜುಲೈ ಗಡುವು: ಕಳೆದ ವರ್ಷ ಜಿಲ್ಲಾ ಹಾಗೂ ತಾಲೂಕು ಮಟ್ಟದ ಸಮ್ಮೇಳನಗಳನ್ನು ನಡೆಸಲು ಸಾಧ್ಯವಾಗದೇ ಜಿಲ್ಲೆಯ ಸಾರ್ವಜನಿಕರ ಹಾಗೂ ಸಾಹಿತ್ಯ ಪ್ರೇಮಿಗಳಿಂದ ಸಾಕಷ್ಟು ಟೀಕೆಗೆ ಜಿಲ್ಲಾ ಕಸಾಪ ಗುರಿಯಾಗಿತ್ತು. ಅಲ್ಲದೇ ಕಳೆದ ವರ್ಷದ ಜಿಲ್ಲಾ ಹಾಗೂ ತಾಲೂಕು ಸಮ್ಮೇಳನಗಳನ್ನು ಈ ವರ್ಷದ ಜುಲೈ ಅಂತ್ಯದೊಳಗೆ ಮಾಡಿ ಮುಗಿಸದಿದ್ದರೆ ಜಿಲ್ಲಾ ಮಟ್ಟದ ಸಮ್ಮೇಳನಕ್ಕೆ ನೀಡುವ 5 ಲಕ್ಷ ರೂ.ಅನುದಾನ ಹಾಗೂ

ತಾಲೂಕು ಮಟ್ಟದ ಸಮ್ಮೇಳನಕ್ಕೆ ನೀಡುವ 1 ಲಕ್ಷ ರೂ. ಅನುದಾನ ನೀಡುವುದಿಲ್ಲ ಎಂದು ಈಗಾಗಲೇ ಕೇಂದ್ರ ಕಸಾಪ ಘಟಕ, ಜಿಲ್ಲಾ ಹಾಗೂ ತಾಲೂಕು ಘಟಕಗಳಿಗೆ ಎಚ್ಚರಿಕೆ ನೀಡಿದೆ. ಹೀಗಾಗಿ ಜುಲೈ ತಿಂಗಳ ಒಳಗೆ ಜಿಲ್ಲಾ ಹಾಗೂ ತಾಲೂಕು ಕಸಾಪ ಸಮ್ಮೇಳನಗಳನ್ನು ಮುಗಿಸಿ ಬಿಡಬೇಕೆಂಬ ಹಠ ತೊಟ್ಟು ಕಸಾಪ ಘಟಕಗಳು ಸಮ್ಮೇಳನದ ಆಯೋಜನೆಗೆ ಸಿದ್ಧತೆಗಳಲ್ಲಿ ತೊಡಗಿದ್ದರೂ ಕ್ಷೇತ್ರಗಳಲ್ಲಿ ಶಾಸಕರ ಭೇಟಿ ಸಾಧ್ಯವಾಗದೇ ಸಮ್ಮೇಳನ ನಡೆಸಲು ಪರದಾಡುವಂತಾಗಿದೆ.

ಜಿಲ್ಲೆಯ ಚಿಂತಾಮಣಿ ನಗರದಲ್ಲಿ ಇದೇ ತಿಂಗಳ 27, 28 ರಂದು ಎರಡು ದಿನಗಳ ಕಾಲ ಜಿಲ್ಲಾ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜನೆಗೆ ಸಿದ್ಧತೆ ನಡೆದಿದೆ. ಆದರೆ ರಾಜ್ಯ ಸರ್ಕಾರದ ಅನಿಶ್ಚಿತೆಯ ಪರಿಣಾಮ ಸಮ್ಮೇಳನದ ಸಿದ್ಧತೆಗಳಿಗೆ ಹಿನ್ನಡೆಯಾಗಿದೆ. ಆದರೂ ನಿಗದಿಯಂತೆ ಜಿಲ್ಲಾ ಹಾಗೂ ತಾಲೂಕು ಸಮ್ಮೇಳನ ನಡೆಸಲಾಗುವುದು.
-ಡಾ.ಕೈವಾರ ಶ್ರೀನಿವಾಸ್‌, ಕಸಾಪ ಜಿಲ್ಲಾಧ್ಯಕ್ಷರು

* ಕಾಗತಿ ನಾಗರಾಜಪ್ಪ

Advertisement

Udayavani is now on Telegram. Click here to join our channel and stay updated with the latest news.

Next