Advertisement

ಕೋವಿಡ್ ಹೊಡೆತದಲ್ಲೂ ಕ್ರೀಡಾ ಕ್ಷೇತ್ರಕ್ಕೆ ಪುನರ್ಜನ್ಮ ನೀಡಿದ ಜೈವಿಕ ಗುಳ್ಳೆಗಳು..!

06:18 PM Apr 28, 2021 | Team Udayavani |

ಕಳೆದ ವರ್ಷ ಕೋವಿಡ್ ನಿಂದ ಅಡಿಮೇಲಾಗಿದ್ದ ಪ್ರಪಂಚ ಇನ್ನೇನು ತುಸು ಚೇತರಿಸಿಕೊಂಡಿತು ಎನ್ನುವಷ್ಟರಲ್ಲಿಯೇ ಮತ್ತೆ ಕೋವಿಡ್ ನ ರೂಪಾಂತರಿ ಅಲೆ ಬಲವಾಘಿ ಪ್ರಹಾರ ಮಾಡಿದೆ.

Advertisement

ಹಲವು ಕ್ಷೇತ್ರಗಳು ಡಿಜಿಟಲ್‌ ನತ್ತ ಮುಖ ಮಾಡಿದರು. ವರ್ಕ್ ಫ್ರಂ ಹೋಮ್ ಪರಿಕಲ್ಪನೆ, ಆನ್ಲೈನ್ ಶಿಕ್ಷಣಕ್ಕೆ ಒತ್ತು ಇತ್ಯಾದಿ ಪರ್ಯಾಯ ಮಾರ್ಗಗಳನ್ನು ಕಂಡುಕೊಂಡರು. ಆದರೆ, ಕ್ರೀಡಾ ಕ್ಷೇತ್ರಕ್ಕೆ ಕೋವಿಡ್ ಕೊಟ್ಟ ಹೊಡೆತ ಅಂತಿತದ್ದಲ್ಲ. ಆದರೆ ಈಗ, ತಂತ್ರಜ್ಞಾನವನ್ನು ಬಳಸಿ ಕ್ರೀಡೆಗಳನ್ನೂ ನಡೆಸಲು ಅನುಕೂಲಕರ ವಾತಾವರಣ ಸೃಷ್ಟಿಸಲಾಗುತ್ತಿದೆ.

ಬಯೋ ಬಬಲ್ (ಜೈವಿಕ ಗುಳ್ಳೆಗಳು) ನನ್ನು ರಚಿಸಿ, ಅಲ್ಲಿ ಸೋಂಕು ರಹಿತ ಕ್ರೀಡಾಪಟುಗಳನ್ನು ಸೇರಿಸಿ, ಕ್ರೀಡಾ ಕ್ಷೇತ್ರಕ್ಕೆ ಪುನರ್ಜನ್ಮ ನೀಡುವ ಕಾರ್ಯಗಳು ಎಲ್ಲಾ ಕಡೆ ನಡೆಯುತ್ತಿದೆ. ಅದರಲ್ಲಿ ಪ್ರಸ್ತುತ ಭಾರತದಲ್ಲಿ ನಡೆಯುತ್ತಿರುವ ಐಪಿಎಲ್ ಸಹ ಒಂದು ೆನ್ನುವುದು ವಿಶೇಷ!

ಓದಿ : ಬೆಡ್ ಸಿಗದೆ ಕೋವಿಡ್ ರೋಗಿ ಸಾವು : ದೊಣ್ಣೆ ಹಿಡಿದು ವೈದ್ಯರ ಮೇಲೆ ಹಲ್ಲೆ : ವಿಡಿಯೋ  

ಏನಿದು ಬಯೋ ಬಬಲ್ / ಜೈವಿಕ ಗುಳ್ಳೆ ?

Advertisement

ಬಯೋ ಬಬಲ್ ಒಂದು ಅದೃಶ್ಯ ರಕ್ಷಾಫಲಕವಾಗಿದ್ದು, ವ್ಯಾಪಕವಾಗಿ ಹರಡಿರುವ ಕೋವಿಡ್-19 ಭೀತಿಯ ನಡುವೆ, ಸುರಕ್ಷತೆಯಿಂದ ಕ್ರೀಡಾ ಕೂಟಗಳನ್ನು ಆಯೋಜಿಸಲು ಬಳಸಲಾಗುತ್ತದೆ. ಇನ್ನಷ್ಟು ಸರಳವಾಗಿ ಹೇಳುವುದಾದರೆ, ಇದು ಒಂದು ಸುರಕ್ಷಿತ ವಾತಾವರಣವಾಗಿದ್ದು, ಒಂದು ಕ್ರೀಡಾಕೂಟದ ಸಮಯದಲ್ಲಿ ಒಬ್ಬ ವ್ಯಕ್ತಿಯಿಂದ ಇನ್ನೊಬ್ಬರಿಗೆ ಸೋಂಕು ಹರಡುವ ಅಪಾಯವನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ. ಕೋವಿಡ್-19 ಸೋಂಕು ಇಲ್ಲದವರು ಮಾತ್ರ ಈ ಬಯೋ ಬಬಲ್ ಪ್ರವೇಶಿಸಬಹುದು.

ಈ ಸುರಕ್ಷಿತ ವಾತಾವರಣವನ್ನು ಎಲ್ಲಿ ರಚಿಸಲಾಗುತ್ತದೆ ?

ಜೈವಿಕ ಸುರಕ್ಷಿತ ವಾತಾವರಣವನ್ನು ಕ್ರೀಡಾಪಟುಗಳು ತಂಗುವ ಹೋಟೆಲ್‌ ಗಳಲ್ಲಿ ಹಾಗೂ ಕ್ರೀಡಾಂಗಣದಲ್ಲಿ ರಚಿಸಲಾಗುತ್ತದೆ ಮತ್ತು ಹೊರಗಿನ ಪ್ರಪಂಚದೊಂದಿಗಿನ ಎಲ್ಲಾ ರೀತಿಯ ಸಂಪರ್ಕವನ್ನು ತಡೆಯಲು ಇದು ಸಹಕಾರಿಯಾಗುತ್ತದೆ. ಆಟಗಾರರಿಗೆ ಬಯೋ ಬಬಲ್ ರಚಿಸಿರುವ ಪ್ರದೇಶಗಳಿಗೆ ಮಾತ್ರ ಪ್ರವೇಶಿಸಲು ಅವಕಾಶವಿರುತ್ತದೆ. ಉದಾಹರಣೆಗೆ, ಯುಎಸ್ ಓಪನ್‌ನಲ್ಲಿ, ಆಟಗಾರರು ಹೋಟೆಲ್‌ನಿಂದ ಕ್ರೀಡಾಂಗಣಕ್ಕೆ ಮಾತ್ರ ಪ್ರಯಾಣಿಸಬಹುದಿತ್ತು. ಹತ್ತಿರದಲ್ಲಿ ಒಂದು ಪಾರ್ಕ್ ಇದ್ದರೂ ಸಹ, ಅದು ಬಯೋ ಬಬಲ್ ವ್ಯಾಪ್ತಿಯ ಒಳಗೆ ಬರದಿದ್ದರಿಂದ, ಆಟಗಾರರಿಗೆ ಅಲ್ಲಿ ಹೋಗಲು ನಿರ್ಬಂಧ ಹೇರಲಾಗಿತ್ತು.

ಆಟಗಾರರಿಗೆ, ಕ್ರೀಡಾ ಅಧಿಕಾರಿಗಳಿಗೆ, ಕ್ರೀಡಾಂಗಣ ಹಾಗೂ ಹೊಟೇಲ್ ಸಿಬ್ಬಂದಿಗಳಿಗೆ, ಭದ್ರತಾ ಸಿಬ್ಬಂದಿ ಮತ್ತು ವೈದ್ಯಕೀಯ ತಂಡಗಳಿಗಾಗಿ ಪ್ರತ್ಯೇಕ ವಲಯಗಳನ್ನು ರಚಿಸಲಾಗುತ್ತದೆ. ಅವರೆಲ್ಲರೂ ತಮಗೆ ನಿಗದಿಪಡಿಸಿದ ವಲಯಗಳಲ್ಲೇ ಉಳಿಯಬೇಕು. ಒಂದು ವೇಳೆ, ಯಾರಾದರೂ ಬಯೋ ಬಬಲ್ ನಿಯಮವನ್ನು ಉಲ್ಲಂಘಿಸಿದರೆ, ಆ ವ್ಯಕ್ತಿಯನ್ನು ಐಸೋಲೇಶನ್‌ ನಲ್ಲಿ ಇರಿಸಲಾಗುತ್ತದೆ ಮತ್ತು ಬಯೋ ಬಬಲ್‌ ನನ್ನು ಮತ್ತೊಮ್ಮೆ ಪ್ರವೇಶಿಸುವ ಮೊದಲು, ಆತ ಎರಡು ಬಾರಿ ಕೋವಿಡ್ ಪರೀಕ್ಷೆ ನಡೆಸಿ, ಎರಡೂ ಬಾರಿ ನೆಗೆಟಿವ್ ಎಂದು ಸಾಬೀತುಪಡಿಸಬೇಕು.

ಬಯೋ ಬಬಲ್ ಹೇಗೆ ಕಾರ್ಯನಿರ್ವಹಿಸುತ್ತದೆ?

ಬಯೋ ಬಬಲ್‌ ನ ಮುಖ್ಯ ಉದ್ದೇಶವೇನೆಂದರೆ, ಕ್ರೀಡಾಕೂಟ ನಡೆಯುವ ಸ್ಥಳದಲ್ಲಿ ಕೋವಿಡ್-19 ಭೀತಿಯನ್ನು ಕಡಿಮೆ ಮಾಡುವುದು ಹಾಗೂ ಕ್ರೀಡಾಪಟುಗಳನ್ನು ಹೊರಗಿನ ಪ್ರಪಂಚದಿಂದ ಪ್ರತ್ಯೇಕವಾಗಿರಿಸಿಕೊಳ್ಳುವುದಾಗಿದೆ. ಅದಲ್ಲದೆ, ಕ್ರೀಡಾಕೂಟದ ಸಂದರ್ಭ, ಯಾವುದೇ ಆಟಗಾರನು ತಮ್ಮ ಸಂಬಂಧಿಕರನ್ನಾಗಲಿ, ಸ್ನೇಹಿತರನ್ನು ಅಥವಾ ಇನ್ಯಾರನ್ನೂ ಭೇಟಿ ಮಾಡುವಂತಿಲ್ಲ. ಹಾಗೆಯೇ, ಯಾರನ್ನೂ ಭೇಟಿಯಾಗುವ ನೆಪದಲ್ಲಿ, ಕ್ರೀಡಾಪಟುಗಳು ಬಯೋ ಬಬಲ್‌ ನನ್ನು ಬಿಟ್ಟು ಹೊರಹೋಗುವ ಅವಕಾಶವೂ ಇರುವುದಿಲ್ಲ.

ಓದಿ :  ಸಾಮಾಜಿಕ ಜಾಲತಾಣದಲ್ಲಿ ಕಲ್ಲಡ್ಕ ಪ್ರಭಾಕರ ಭಟ್ ಕುರಿತು ಅವಹೇಳನಕಾರಿ ವಿಡಿಯೋ : ಕೇಸು ದಾಖಲು

ಬಯೋ-ಬಬಲ್ ಅನ್ನು ಹೇಗೆ ಪ್ರವೇಶಿಸುತ್ತಾನೆ ?

ಬಯೋ-ಬಬಲ್‌ ನನ್ನು ಪ್ರವೇಶಿಸಲು, ಆಟಗಾರನು ತನ್ನ ದೇಶದಿಂದ ಹೊರಡುವ ಮೊದಲು, ಕೋವಿಡ್‌ ಗೆ ಕಡ್ಡಾಯವಾಗಿ ಆರ್‌ ಟಿ-ಪಿಸಿಆರ್ ಪರೀಕ್ಷೆಗೆ ಒಳಪಡಬೇಕಾಗುತ್ತದೆ. ಅಲ್ಲಿ ನೆಗೆಟಿವ್ ಬಂದ ನಂತರ, ಕ್ರೀಡಾಕೂಟ ನಡೆಯುವ ನಿರ್ದಿಷ್ಟ ಸ್ಥಾನವನ್ನು ತಲುಪಿದ ನಂತರ, ಆತನನ್ನು ಮತ್ತೊಮ್ಮೆ ಆರ್‌ ಟಿ-ಪಿಸಿಆರ್ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಅದರ ಫಲಿತಾಂಶ ಹೊರಬರುವವರೆಗೆ, ಆತನನ್ನು ಐಸೋಲೇಶನ್‌ ನಲ್ಲಿ ಇರಿಸಲಾಗುತ್ತದೆ. ಅಲ್ಲೂ ನೆಗೆಟಿವ್ ಎಂದು ಸಾಬೀತಾದ ಬಳಿಕ, ಆಟಗಾರನು ಬಯೋ ಬಬಲ್‌ ನನ್ನು ಪ್ರವೇಶಿಸಬಹುದು.

ಬಯೋ-ಬಬಲ್‌ ನಲ್ಲಿ ಕ್ರೀಡಾಕೂಟ

2020 ಹಾಗೂ 2021ರಲ್ಲಿ ಬಯೋ ಬಬಲ್‌ನಲ್ಲಿ ಹಲವಾರು ಕ್ರೀಡೆಗಳನ್ನು ಯಶಸ್ವಿಯಾಗಿ ಆಯೋಜಿಸಲಾಗಿದೆ.

ಭಾರತದ ಆಸ್ಟ್ರೇಲಿಯಾ ಪ್ರವಾಸ, ಯುಎಸ್ ಓಪನ್ (ಟೆನ್ನಿಸ್), ಎನ್‌ಬಿಎ (ಬಾಸ್ಕೆಟ್ ಬಾಲ್), ಸೂಪರ್ ಬಾಸ್ಕೆಟ್‌ಬಾಲ್ ಲೀಗ್(ತೈವಾನ್), ಮೇಜರ್ ಲೀಗ್ ಸಾಕರ್, ಚೈನೀಸ್ ಸೂಪರ್ ಲೀಗ್, ನ್ಯಾಷನಲ್ ಹಾಕಿ ಲೀಗ್(ಕೆನಡಾ), ವರ್ಲ್ಡ್ ಜೂನಿಯರ್ ಐಸ್ ಹಾಕಿ ಚಾಂಪಿಯನ್‌ಶಿಪ್ ಇತ್ಯಾದಿ ಕ್ರೀಡಾಕೂಟಗಳು ಕಳೆದ ಒಂದು ವರ್ಷದಿಂದ ಬಯೋ ಬಬಲ್ ರಚನೆಯ ಒಳಗೆ ನಡೆದಿದೆ.

ಜುಲೈ 2020 ರಲ್ಲಿ, ವೆಸ್ಟ್ ಇಂಡೀಸ್ – ಇಂಗ್ಲೆಂಡ್ ಪಂದ್ಯಾವಳಿಯು ಬಯೋ ಬಬಲ್‌ ನಲ್ಲಿ (ಜೈವಿಕ ಗುಳ್ಳೆಯಲ್ಲಿ) ಆಡಿದ ಮೊದಲ ಅಂತರರಾಷ್ಟ್ರೀಯ ಕ್ರಿಕೆಟ್ ಪಂದ್ಯಾವಳಿಯಾಗಿದೆ. ಸರಣಿಯ ಅವಧಿಯಲ್ಲಿ, ಕೋವಿಡ್-19 ಗೆ ಯಾರೂ ಪಾಸಿಟಿವ್ ಪರೀಕ್ಷಿಸಲಿಲ್ಲ ಎಂಬುವುದು ಉಲ್ಲೇಖನೀಯ. ಬಯೋ ಬಬಲ್‌ನ ಭದ್ರತಾ ಪ್ರೋಟೋಕಾಲ್‌ಅನ್ನು ಉಲ್ಲಂಘನೆ ಮಾಡಿದ ಮೊದಲ ಕ್ರಿಕೆಟಿಗ ಎಂಬ ಅಪಖ್ಯಾತಿಗೆ ಇಂಗ್ಲೆಂಡ್ ಬೌಲರ್ ಜೋಫ್ರಾ ಆರ್ಚರ್ ಪಾತ್ರರಾದರು. ಬಳಿಕ ಭಾರತ-ಆಸ್ಟ್ರೇಲಿಯಾ, ಭಾರತ-ಇಂಗ್ಲೆಂಡ್ ಸರಣಿಯೂ ಬಯೋ ಬಬಲ್‌ನಲ್ಲಿ ಆಯೋಜಿಸಲಾಗಿತ್ತು. ಪ್ರಸ್ತುತ ನಡೆಯುತ್ತಿರುವ ಐಪಿಎಲ್ ಕ್ರೀಡಾಕೂಟವೂ ಬಯೋ ಬಬಲ್ ರಚನೆಯ ಒಳಗೆ ನಡೆಯುತ್ತಿದೆ.

ಋಣಾತ್ಮಕ ಅಂಶವೇನೆಂದರೆ…….

ಬಯೋ ಬಬಲ್ ಇಡೀ ಕ್ರೀಡಾ ಜಗತ್ತಿಗೆ ಪುನರ್‌ಜೀವನ ಕಲ್ಪಿಸಿದರೂ, ಕೆಲ ಆಟಗಾರರು ಮಾನಸಿಕ ಖಿನ್ನತೆಗೆ ಒಳಗಾಗುವ ಸಾಧ್ಯತೆಯನ್ನು ಕಡೆಗಣಿಸುವಂತಿಲ್ಲ. ಸಂಪೂರ್ಣವಾಗಿ ಕ್ರೀಡೆಯಲ್ಲೇ ತೊಡಗಿಸಿಕೊಂಡೇ ಇರಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಯಾವುದೇ ಮೋಜು ಮಸ್ತಿಗೆ ಅವಕಾಶ ಕಲ್ಪಿಸದ, ಹೊರ ಜಗತ್ತಿನೊಂದಿಗಿನ ಸಂಪೂರ್ಣ ಸಂಪರ್ಕವನ್ನೇ ಕಡಿತಗೊಳಿಸುವ ವ್ಯವಸ್ಥೆ ಇದಾಗಿದ್ದು, ಕಾಲಕ್ರಮೇಣ ಆಟಗಾರರೇ ಇದಕ್ಕೆ ಹೊಂದಿಕೊಂಡು ಹೋಗಬಹುದು. ಪ್ರಸ್ತುತ ನಡೆಯುತ್ತಿರುವ ಐಪಿಎಲ್ ಕ್ರೀಡಾಕೂಟದಿಂದ 4-5 ಆಟಗಾರರು ಪಂದ್ಯಾವಳಿಯ ಮಧ್ಯದಲ್ಲಿ ಹಿಂದೆ ಸರಿದಿದ್ದು, ಸ್ಪಷ್ಟ ಕಾರಣ ತಿಳಿದುಬಂದಿಲ್ಲ.

ಒಟ್ಟಿನಲ್ಲಿ, ಎಲ್ಲರನ್ನೂ ನಾಲ್ಕು ಗೋಡೆಯ ಮಧ್ಯದಲ್ಲಿ ಬಂಧಿಸಿಟ್ಟಿರುವ ಕೊರೋನಾ ಸಾಂಕ್ರಾಮಿಕವು ಕ್ರೀಡಾ ಕ್ಷೇತ್ರಕ್ಕೂ ಬಹಳ ದೊಡ್ಡ ಹೊಡೆತ ನೀಡಿದೆ. ಹೀಗಿರುವಾಗ ಬಯೋ ಬಬಲ್ ಒಂದು ಉತ್ತಮ ಪರಿಕಲ್ಪನೆ ಆಗಿದ್ದು, ಕ್ರೀಡಾ ಕ್ಷೇತ್ರಕ್ಕೆ ಮರಳಿ ಜೀವವನ್ನೊದಗಿಸುತ್ತಿದೆ ಎಂಬ ಮಾತನ್ನು ಅಲ್ಲಗೆಳೆಯುವಂತಿಲ್ಲ.

 ಇಂದುಧರ ಹಳೆಯಂಗಡಿ

ಓದಿ :  ಸಾಮಾಜಿಕ ಜಾಲತಾಣದಲ್ಲಿ ಕಲ್ಲಡ್ಕ ಪ್ರಭಾಕರ ಭಟ್ ಕುರಿತು ಅವಹೇಳನಕಾರಿ ವಿಡಿಯೋ : ಕೇಸು ದಾಖಲು

Advertisement

Udayavani is now on Telegram. Click here to join our channel and stay updated with the latest news.

Next