Advertisement

ಪಾರಂಪರಿಕ ಕಟ್ಟಡ ಉಳಿಸಲು ದೊಡ್ಡಮಟ್ಟದ ಕೂಗು

03:38 PM Aug 23, 2019 | Team Udayavani |

ಮೈಸೂರು: ನಗರದ ಹೃದಯ ಭಾಗದಲ್ಲಿರುವ ದೇವರಾಜ ಮಾರುಕಟ್ಟೆ ಮೈಸೂರು ನಗರದ ಪರಂಪರೆಯ ಹೆಗ್ಗುರುತುಗಳಲ್ಲಿ ಒಂದಾಗಿದ್ದು, ಇದನ್ನು ಉಳಿಸಿಕೊಳ್ಳಬೇಕು ಎಂಬ ದೊಡ್ಡಮಟ್ಟದ ಕೂಗು ಸಾರ್ವಜನಿಕ ವಲಯದಲ್ಲಿ ಮೂಡಿದೆ.

Advertisement

ಒಂದು ಶತಮಾನಕ್ಕಿಂತಲೂ ಹಳೆಯದಾದ ಕಟ್ಟಡವನ್ನು ಸಂರಕ್ಷಿಸುವುದು ಎಲ್ಲರ ಕರ್ತವ್ಯ. ಒಂದು ವೇಳೆ ಆ ಕಟ್ಟಡವನ್ನು ನೆಲಸಮಗೊಳಿಸಿ, ಮತ್ತೆ ಹೊಸದೊಂದು ಕಟ್ಟಡ ನಿರ್ಮಾಣ ಮಾಡಿದರೆ ಮೈಸೂರು ನಗರ ಪರಂಪರೆಯ ನೋಟವನ್ನು ಕಳೆದುಕೊಳ್ಳಲಿದೆ ಎಂಬುದು ಪಾರಂಪರಿಕ ತಜ್ಞರವಾದ.

ಈ ಹಿಂದೆ ದೇವರಾಜ ಮಾರುಕಟ್ಟೆ ಶಿಥಿಲಾಗಿರುವುದನ್ನು ಮನಗಂಡು ಮೈಸೂರು ನಗರ ಪಾಲಿಕೆ ನವೀಕರಣಕ್ಕೆ ಮುಂದಾಗಿತ್ತು. ಈ ವೇಳೆ ಕೆಲಸವನ್ನೂ ಆರಂಭಿಸಿಯೂ ಆಗಿತ್ತು. ಕೆಲ ದಿನಗಳ ನಂತರ ನವೀಕರಣ ಕೆಲಸವನ್ನು ಸ್ಥಗಿತಗೊಳಿಸಿ, ಮಾರುಕಟ್ಟೆ ಕಟ್ಟಡವನ್ನು ಧ್ವಂಸಗೊಳಿಸಿ ಹೊಸ ಕಟ್ಟಡ ನಿರ್ಮಾಣಕ್ಕೆ ಆಸಕ್ತಿ ವಹಿಸಿತು. ಪಾಲಿಕೆಯ ಈ ನಡೆ ಮಾರುಕಟ್ಟೆ ಬಾಡಿಗೆದಾರರು, ವ್ಯಾಪಾರಿಗಳು ಹಾಗೂ ಸಾರ್ವಜನಿಕರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.

ನವೀಕರಣಕ್ಕಾಗಿ ಗುತ್ತಿಗೆ: ಮಾರುಕಟ್ಟೆಯ ಕೆಲವು ಭಾಗಗಳು ಶಿಥಿಲವಾಗಿರುವದನ್ನು ಗಮನಿಸಿ ಕಟ್ಟಡದ ನವೀಕರಣಕ್ಕಾಗಿ ನಗರ ಪಾಲಿಕೆಯು 2016 ಫೆ.18ರಂದು ವೆ. ಸವಾನಿ ಕನ್‌ಸ್ಟ್ರಕ್ಷನ್‌ ಸಂಸ್ಥೆಗೆ ಗುತ್ತಿಗೆಯನ್ನು ನೀಡಿತ್ತು. 1.34 ಕೋಟಿ ರೂ. ಕಾಮಗಾರಿ ಪೂರ್ಣಗೊಂಡ ಹಿನ್ನೆಲೆ 73.38 ಲಕ್ಷ ರೂ. ಹಣವನ್ನು ಈಗಾಗಲೇ ಸಂಸ್ಥೆಗೆ ಪಾವತಿಸಲಾಗಿದ್ದು, ಇನ್ನೂ 61.18 ಲಕ್ಷ ರೂ. ಬಾಕಿ ಇದೆ. ಈ ನಡುವೆ, ಆಗಸ್ಟ್‌ 28ರಂದು ಮಾರುಕಟ್ಟೆಯ ಉತ್ತರ ಭಾಗದ ಸ್ವಾಗತ ಕಮಾನು ಕುಸಿದು ಬಿದ್ದಿತ್ತು. ನಂತರ ಪಾಲಿಕೆ ಉತ್ತರ ದಿಕ್ಕಿನಲ್ಲಿದ್ದ ಎಲ್ಲಾ ಮಳಿಗೆಗಳನ್ನು ಧ್ವಂಸಗೊಳಿಸಿ, ವಾಪಾರವನ್ನು ಸ್ಥಗಿತಗೊಳಿಸಿತು. ಜೊತೆಗೆ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕುಸಿದು ಬಿದ್ದ ಮಾರುಕಟ್ಟೆ ಕಟ್ಟಡವನ್ನು ವೀಕ್ಷಿಸಿ ನವೀಕರಣ ಕೆಲಸವನ್ನು ಸ್ಥಗಿತಗೊಳಿಸುವಂತೆ ಸೂಚಿದ ಹಿನ್ನೆಲೆ ಕಾಮಗಾರಿ ಸ್ಥಗಿತವಾಗಿತ್ತು.

ಎರಡು ಸಮಿತಿ ರಚನೆ: ಕಟ್ಟಡವನ್ನು ಉಳಿಸಿಕೊಳ್ಳಬೇಕೋ ಅಥವಾ ನೆಲಸಮಗೊಳಿಸಿ ಮತ್ತೂಂದು ಕಟ್ಟಡ ಕಟ್ಟಬೇಕೊ ಎಂಬ ಬಗ್ಗೆ ಎರಡು ಸಮಿತಿಗಳನ್ನು ರಚಿಸಲಾಯಿತು. ಈ ಪೈಕಿ ಟಾಸ್ಕ್ಫೋರ್ಸ್‌ ಸಮಿತಿ ಕಟ್ಟಡವನ್ನು ಪರಿಶೀಲಿಸಿ, ತನ್ನ ವರದಿಯಲ್ಲಿ ಕಟ್ಟಡವನ್ನು ಧ್ವಂಸಗೊಳಿಸಿ, ನೂತನ ಕಟ್ಟಡ ಮರುನಿರ್ಮಾಣಕ್ಕೆ ಶಿಫಾರಸು ಮಾಡಿತು. ಆದರೆ, ಮತ್ತೂಂದು ಸಮಿತಿಯಾದ ಪಾರಂಪರಿಕ ತಜ್ಞರ ಸಮಿತಿ ಮಾರುಕಟ್ಟೆ ಕಟ್ಟಡ ಪಾರಂಪರಿಕ ಕಟ್ಟಡವಾಗಿದ್ದು, ಅದನ್ನು ಸಂರಕ್ಷಣೆ ಮಾಡಬೇಕಾಗಿದ್ದು, ಕಟ್ಟಡದ ನವೀಕರಣ ಕಾಮಗಾರಿಯನ್ನು ಮುಂದುವರಿಸಲು ಹೇಳಿತು. ಇದರಿಂದಾಗಿ ಎರಡು ರೀತಿಯ ಅಭಿಪ್ರಾಯಗಳು ವ್ಯಕ್ತವಾದವು.

Advertisement

ಈ ಬಗ್ಗೆ ಚರ್ಚೆ ನಡೆಸಿದ ಪಾಲಿಕೆ ಈ ಕಟ್ಟಡ ತುಂಬಾ ಹಳೆಯದಾಗಿದ್ದು, ನೆಲಸಮಗೊಳಿಸಿ, ಅದೇ ಜಾಗದಲ್ಲಿ ಪಾರಂಪರಿಕ ಶೈಲಿಯಲ್ಲಿ ಹೊಸ ಕಟ್ಟಡ ನಿರ್ಮಾಣಕ್ಕೆ ನಿರ್ಣಯಿಸಿ ಪಾಲಿಕೆ ಸಾಮಾನ್ಯ ಸಭೆಯಲ್ಲಿನ ನಿರ್ಣಯವನ್ನು ಕೈಗೊಂಡು ರಾಜ್ಯ ಸರ್ಕಾರಕ್ಕೆ ಕಳುಹಿಸಿತು. ಇದರಿಂದ ಸಾರ್ವಜನಿಕ ವಲಯದಲ್ಲಿ ಭಾರಿ ಟೀಕೆಗಳು ವ್ಯಕ್ತವಾದವು. ಇದಾದ ನಂತರ ಅಂದಿನ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ದೇವರಾಜ ಮಾರುಕಟ್ಟೆಗೆ ಭೇಟಿ ನೀಡಿ ಪರಿಶೀಲಿಸಿದ್ದರು. ಆದರೂ ಸರ್ಕಾರ ಯಾವುದೇ ನಿರ್ಧಾರ ತೆಗೆದುಕೊಳ್ಳದೇ ತಟಸ್ಥವಾಯಿತು.

 

● ಸತೀಶ್‌ ದೇಪುರ

Advertisement

Udayavani is now on Telegram. Click here to join our channel and stay updated with the latest news.

Next