Advertisement

ರಾಜ್ಯಕ್ಕೆ 9750 ವಯಲ್ಸ್ ಕಪ್ಪು ಶಿಲೀಂಧ್ರ ಔಷಧ ಹಂಚಿಕೆ : ಕೇಂದ್ರ ಸಚಿವ ಸದಾನಂದ ಗೌಡ

08:39 PM Jun 04, 2021 | Team Udayavani |

ಬೆಂಗಳೂರು : ಕಪ್ಪುಶಿಲಿಂದ್ರ ರೋಗದ ಚಿಕಿತ್ಸೆಗಾಗಿ ಕೇಂದ್ರ ಸರ್ಕಾರವು ಬೇರೆ ಬೇರೆ ರಾಜ್ಯಗಳಿಗೆ ಇಂದು ಒಟ್ಟು 1.21 ಲಕ್ಷ ವಯಲ್ಸ್ ಎಂಫೊಟೆರಿಸಿನ್-ಬಿ ಹಂಚಿಕೆ ಮಾಡಿದ್ದು ಕರ್ನಾಟಕಕ್ಕೆ 9750 ವಯಲ್ಸ್ ಒದಗಿಸಲಾಗಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ ವಿ ಸದಾನಂದಗೌಡ ಅವರು ತಿಳಿಸಿದ್ದಾರೆ.

Advertisement

ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಸ್ವದೇಶಿಯವಾಗಿಯೂ ಈ ಚುಚ್ಚುಮದ್ದಿನ ಉತ್ಪಾದನೆ ಹೆಚ್ಚಾಗುತ್ತಿದೆ, ಅದೇ ರೀತಿ ಆಮದಿನ ಪ್ರಮಾಣವನ್ನು ಕೂಡಾ ಹೆಚ್ಚಿಸಲಾಗುತ್ತಿದೆ. ಇನ್ನು ಕೆಲವೇ ದಿನಗಳಲ್ಲಿ ಇದರ ಬೇಡಿಕೆ ಮತ್ತು ಪೂರೈಕೆ ಮಧ್ಯೆ ಸಮತೋಲನ ಉಂಟಾಗಲಿದೆ. ಸದ್ಯಕ್ಕಂತೂ ಇದರ ಹಂಚಿಕೆ ನಿರಂತರವಾಗಿ ನಡೆಯಲಿದೆ ಎಂದರು.

ಸದ್ಯ ತೀವ್ರ ಬೇಡಿಕೆಯಲ್ಲಿರುವ ಆಮ್ಲಜನಕ ಸಾಂದ್ರಕವನ್ನು (ಆಕ್ಸಿಜನ್ ಕಾನ್ಸಂಟ್ರೇಟರ್ಸ್) ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿರುವ ಬಗ್ಗೆ ವರದಿಗಳು ಬರುತ್ತಿರುವ ಹಿನ್ನಲೆಯಲ್ಲಿ ನಾವು ಮಧ್ಯಪ್ರವೇಶ ಮಾಡಿದ್ದೇವೆ. ವಿತರಕರಿಗೆ ನೀಡುವ ಬೆಲೆಯ ಟ್ರೇಡ್ ಮಾರ್ಜಿನ್’ನಲ್ಲಿ ಪ್ರತಿಶತ 198 ರವೆರೆಗೂ ಏರಿಕೆಯಾದ ಬಗ್ಗೆ ವರದಿಯಾಗಿತ್ತು. ಅದನ್ನು ಈಗ ಶೇಕಡಾ 70ಕ್ಕೆ ಮಿತಿಗೊಳಿಸಲಾಗಿದೆ. ಮೂರು ದಿನದೊಳಗೆ ಗರಿಷ್ಠ ಮಾರಾಟ ಬೆಲೆ ಸೂಚಿಯನ್ನು ನೀಡುವಂತೆ ಆಮ್ಲಜನಕ ಸಾಂದ್ರಕ ಉತ್ಪಾದಕರು ಹಾಗೂ ಆಮದುದಾರರಿಗೆ ಸೂಚಿಸಲಾಗಿದೆ. ನಮ್ಮ ಇಲಾಖಾ ಅಧೀನದ ಎನ್.ಪಿ.ಪಿ.ಎ. (National Pharmaceuticals Pricing Authority) ವಾರದೊಳಗೆ ವಿವಿಧ ಬ್ರಾಂಡಿನ ಆಮ್ಲಜನಕ ಸಾಂದ್ರಕಗಳ ಪರಿಷ್ಕೃತ ಗರಿಷ್ಠ ಮಾರಾಟ ಬೆಲೆಗಳ ಅಧಿಸೂಚನೆ ಹೊರಡಿಸಲಿದೆ. ಇದುವರೆಗೆ ಆಮ್ಲಜನಕ ಸಾಂದ್ರಕ ಅತ್ಯವಶ್ಯಕ ವಸ್ತುಗಳ ಪಟ್ಟಿಯಲ್ಲಿ ಇರಲಿಲ್ಲವಾಗಿತ್ತು. ಹಾಗಾಗಿ ಅದರ ಬೆಲೆ ನಿಯಂತ್ರಣ ಸಾಧ್ಯವಿರಲಿಲ್ಲ. ಆದರೆ ಜನರ ಅನುಕೂಲಕ್ಕಾಗಿ ಡಿಪಿಸಿಒ-2013 ಕಾಯ್ದೆ ಅನುಚ್ಛೇಧ 19ರ ಅಡಿಯಲ್ಲಿ ಪ್ರದತ್ತವಾದ ಅಧಿಕಾರವನ್ನು ಬಳಸಿ ಇದರ ಬೆಲೆ ನಿಯಂತ್ರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಸದ್ಯದ ಬೆಲೆ ನಿಯಂತ್ರಣ ಆದೇಶ 2021 ನವೆಂಬರ್ 30ರವರೆಗೆ ಜಾರಿಯಲ್ಲಿರಲಿದೆ. ಭವಿಷ್ಯದಲ್ಲಿ ಪರಿಸ್ಥಿಯನ್ನು ಪರಿಗಣಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು. ಒಂದೊಮ್ಮೆ ನಿಗದಿತ ಬೆಲೆಗಿಂತ ಯಾರಾದರು ಇದನ್ನು ಮಾರಾಟ ಮಾಡಲು ಯತ್ನಿಸಿದರೆ ಅಂತವರಿಗೆ ಶೇಕಡಾ 100ರಷ್ಟು ದಂಡ ವಿಧಿಸಲು ಅವಕಾಶವಿದೆ ಎಂದು ಅವರು ವಿವರಿಸಿದರು.

ಇದನ್ನೂ ಓದಿ :ರಾಜ್ಯಕ್ಕೆ ಮುಂಗಾರು ಪ್ರವೇಶ; ಮೊದಲ ದಿನವೇ ವಿವಿಧೆಡೆ ಭಾರೀ ಮಳೆ

ವರ್ಷದೊಳಗೆ ಎಲ್ಲರಿಗೂ ಕೋವಿಡ್ ಲಸಿಕೆ:
ಸದಾನಂದ ಗೌಡರು ಈ ಮಧ್ಯೆ ಕೆ.ಅರ್.ಪುರ ವಿಧಾನ ಸಭಾ ಕ್ಷೇತ್ರದಲ್ಲಿ ಸ್ಥಳೀಯ ಶಾಸಕರೂ ನಗರಾಭಿವೃದ್ಧಿ ಸಚಿವರೂ ಆದ ಭೈರತಿ ಬಸವರಾಜ ಅವರ ನೇತೃತ್ವದಲ್ಲಿ ಕೋವಿಡ್ ಸಂತೃಸ್ತರಿಗೆ ಆಹಾರ ಧಾನ್ಯಗಳನ್ನು ವಿತರಿಸುವ ಹಲವು ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರು. ಈ ಕ್ಷೇತ್ರದ ಎಲ್ಲ ವಾರ್ಡುಗಳಲ್ಲಿ ಒಂದೇ ದಿನ ಒಂದು ಲಕ್ಷ ಮೇಲ್ಪಟ್ಟು ಆಹಾರ ದಿನಸಿಗಳನ್ನು ಹಂಚಲಾಗಿದೆ. ಬಹುಶಃ ಇದೊಂದು ದಾಖಲೆಯಾಗಲಿದೆ.

Advertisement

ಆಹಾರ ಧಾನ್ಯ ವಿತರಣಾ ಕಾರ್ಯಕ್ರಮಗಳಲ್ಲಿ ಮಾತನಾಡಿದ ಅವರು “ಬಡವರ ಸೇವೆಯೇ ದೇವರ ಸೇವೆ” ಎಂಬ ಸದ್ಭಾವನೆಯೊಂದಿಗೆ ಸಚಿವ ಬಸವರಾಜ ಅವರು ಜನರ ಕಷ್ಟಕಾಲದಲ್ಲಿ ಅವರ ನೆರವಿಗೆ ಧಾವಿಸಿದ್ದಾರೆ. ಇದು ಪುಣ್ಯದ ಕೆಲಸ. ಅವರೊಬ್ಬ ಉತ್ತಮ ಜನನಾಯಕ ಎಂದು ಶ್ಲಾಘಿಸಿದರು.

ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಡಿಸೆಂಬರ್ ಅಂತ್ಯದೊಳಗೆ ದೇಶದ ಎಲ್ಲ 130 ಕೋಟಿ ಜನರಿಗೂ ಕೋವಿಡ್ ಲಸಿಕೆಯನ್ನು ನೀಡಲು ಉದ್ದೇಶಿಸಿದೆ ಎಂದು ಕೇಂದ್ರ ‌ಸಚಿವರು ಪ್ರಕಟಿಸಿದರು.

ಜೂನ್ ತಿಂಗಳಲ್ಲಿ ರಾಜ್ಯದಲ್ಲಿ ಸುಮಾರು 65 ಲಕ್ಷ ಜನರಿಗೆ ಕೋವಿಡ್ ಲಸಿಕೆಯನ್ನು ಹಾಕಲು ಯೋಜಸಲಾಗಿದೆ. ಇದರಲ್ಲಿ ಕೇಂದ್ರ ಸರ್ಕಾರವೇ ಸುಮಾರು 50 ಲಕ್ಷ ಲಸಿಕೆಯನ್ನು ಒದಗಿಸಲಿದೆ ಎಂದು ಸಚಿವರು ತಿಳಿಸಿದರು. ಬಿಜೆಪಿ ಜಿಲ್ಲಾಧ್ಯಕ್ಷ ಬಿ ನಾರಾಯಣ, ಮಂಡಲಾಧ್ಯಕ್ಷ ಶಿವರಾಜ್ ಮುಂತಾದವರು ಭಾಗಿಯಾದರು.

Advertisement

Udayavani is now on Telegram. Click here to join our channel and stay updated with the latest news.

Next