Advertisement

ಕರಾವಳಿಯ ಜನರಿಗಿಲ್ಲ 94ಡಿ ಸೌಭಾಗ್ಯ

10:17 PM Jan 12, 2020 | Sriram |

ಕರ್ನಾಟಕ ಗೃಹಮಂಡಳಿ ಮೂಲಕ ಮನೆ, ನಿವೇಶನ ದೊರೆಯುತ್ತದೆ ಎಂದು ನಂಬಿ 150ಕ್ಕೂ ಅಧಿಕ ಮಂದಿ ತಲಾ 1 ಸಾವಿರ ರೂ.ಗಳಂತೆ 2009ರಲ್ಲಿ ನೊಂದಣಿ ಕಾರ್ಡ್‌ಗೆ ಬ್ಯಾಂಕ್‌ ಮೂಲಕ ಪಾವತಿಸಿದ್ದರು. ಆದರೆ ಹಣ ಕಟ್ಟಿದ್ದಷ್ಟೇ ಬಂತು ವಿನಾ ಕಾರ್ಡೂ ಇಲ್ಲ, ದುಡೂx ಇಲ್ಲ, ಸೈಟೂ ಇಲ್ಲ ಎಂದಾಗಿದೆ.

Advertisement

ಕುಂದಾಪುರ: ಸರಕಾರ ಮಹತ್ವಾಕಾಂಕ್ಷೆಯಿಂದ ಜಾರಿಮಾಡಿದ 94ಸಿ, 94ಸಿಸಿ ಕಾಯ್ದೆಗಳ ಪ್ರಯೋಜನ ಲಕ್ಷಾಂತರ ಮಂದಿಗೆ ದೊರೆತಿದೆ. ಆದರೆ ಅಷ್ಟೇ ಆಶಯದ 94 ಡಿ ಮಾತ್ರ ಕರಾವಳಿ ಜನರ ಪಾಲಿಗೆ ಊಟಕ್ಕಿಲ್ಲದ ಉಪ್ಪಿನಕಾಯಿ ಆಗಿದೆ.

94 ಡಿ ಕಾಯ್ದೆ
2017 ಡಿ.16ರಂದು ಆದೇಶವಾಗಿದ್ದು, ವಾಸಿಸುವವನೇ ಮನೆಯ ಒಡೆಯ ಉದ್ದೇಶದ 1964ರ ಕಲಂ 94 ಕರ್ನಾಟಕ ಭೂ ಕಂದಾಯ ಕಾಯ್ದೆಗೆ 94ಡಿ ತಿದ್ದುಪಡಿ ತರುವ ಮೂಲಕ ಸರಕಾರಿ ಒಡೆತನದ ಜಾಗವನ್ನೂ ಕಂದಾಯ ಗ್ರಾಮರಹಿತ ಜನವಸತಿಗಳಲ್ಲಿ ಹಾಲಿ ವಾಸವಿರುವವರಿಗೆ ಹಸ್ತಾಂತರಿಸಲು ಅವಕಾಶ ಕಲ್ಪಿಸಲಾಗಿದೆ. 94ಡಿ ಅಧಿನಿಯಮ ಅನುಸಾರ ಕಂದಾಯ ಗ್ರಾಮವಲ್ಲದ ಅನಧಿಕೃತ ಬಡಾವಣೆಗಳಾದ ಲಂಬಾಣಿ ತಾಂಡಾ, ಗೊಲ್ಲರ ಹಟ್ಟಿ, ವಡ್ಡರಹಟ್ಟಿ, ಕುರುಬರ ಹಟ್ಟಿ, ನಾಯಕರಹಟ್ಟಿ,
ಮಜಾರೆ ಗ್ರಾಮ, ಹಾಡಿ, ದೊಡ್ಡಿ, ಪಾಳ್ಯ, ಕ್ಯಾಂಪ್‌, ಕಾಲನಿಯಂತಹ ಮತ್ತಿತರ ರಾಜ್ಯದ 58 ಸಾವಿರಕ್ಕೂ ಅಧಿಕ ಜನವಸತಿ ಪ್ರದೇಶಗಳ ಮನೆಗಳು ಸರಕಾರಿ ಭೂಮಿಯಾಗಿದ್ದಲ್ಲಿ ಈಗಾಗಲೇ ವಾಸಿಸುತ್ತಿರುವವರಿಗೆ ಷರತ್ತಿಗೆ ಒಳಪಟ್ಟು ವಿತರಿಸಲು, 1979ರ ಪೂರ್ವದಲ್ಲಿ ವಾಸಿಸುತ್ತಿರುವವರ ಮನೆಗಳನ್ನು ಸಕ್ರಮಗೊಳಿಸಲು ಅವಕಾಶ
ಕಲ್ಪಿಸಲಾಗಿದೆ. ಮಂಜೂರಾತಿಯು 4 ಸಾವಿರ ಚ. ಅಡಿ ಮಿತಿಗೆ ಒಳಪಟ್ಟಿದೆ.

ಕರಾವಳಿಗಿಲ್ಲ
ನಿಯಮದಲ್ಲಿ ವಿವರಿಸಿದ ಮಾದರಿಯ ಪಂಗಡ ದ.ಕ., ಉಡುಪಿ ಜಿಲ್ಲೆಯಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ದೊರೆಯದ ಕಾರಣ ಯಾವುದೇ ಹಕ್ಕುಪತ್ರ ವಿತರಣೆಯಾಗಿಲ್ಲ. ಜನಪ್ರತಿನಿಧಿಗಳು ಖುದ್ದು ಆಸಕ್ತಿ ವಹಿಸಿ ಈ ಕಾಯ್ದೆಯಲ್ಲಿ ಸ್ವಲ್ಪ ತಿದ್ದುಪಡಿಗೆ ಸೂಚಿಸುತ್ತಿದ್ದರೂ ಸಾವಿರಾರು ಮಂದಿಗೆ ಇದು ಪ್ರಯೋಜನಕ್ಕೆ ದೊರೆಯುತ್ತಿತ್ತು. ಕೃಷಿಕೂಲಿ ಕಾರ್ಮಿಕರು, ಮೀನುಗಾರ ಕುಟುಂಬದವರು, ಆದಿವಾಸಿಗಳು ಮೊದಲಾದವರನ್ನು ಸೇರಿಸುತ್ತಿದ್ದರೆ ಇಲ್ಲಿಯೂ ಅರ್ಹರ ಸಂಖ್ಯೆ ಇತ್ತು.

ಖಾರ್ವಿಕೇರಿಯಲ್ಲಿ
ಇಲ್ಲಿನ ಪುರಸಭೆ ವ್ಯಾಪ್ತಿಯ ಖಾರ್ವಿಕೇರಿಯ 150ಕ್ಕೂ ಅಧಿಕ ಮಂದಿಗೆ ನಿವೇಶನವೇ ಇಲ್ಲ. ಈ ಕುರಿತು ಸಾಕಷ್ಟು ಹೋರಾಟಗಳಾಗಿವೆ. ಪುರಸಭೆಗೂ ಬೇಡಿಕೆ ಪಟ್ಟಿ ಮಂಡಿಸಲಾಗಿದೆ. ಆದರೆ ಬೇಡಿಕೆ ಈಡೇರಿಲ್ಲ. ಅಚ್ಚರಿ ಎಂದರೆ ಈ ಪ್ರದೇಶದ ಪುರಸಭಾ ವಾರ್ಡ್‌ ಸದಸ್ಯರಾಗಿದ್ದಾಗ ರವಿರಾಜ್‌ ಖಾರ್ವಿ ಅವರೂ ಸ್ವತಃ ನಿವೇಶನ ರಹಿತರಾಗಿದ್ದು ನಿವೇಶನರಹಿತರ ಹೋರಾಟದ ಜತೆಗೆ ಅವರೂ ನೇತೃತ್ವ ವಹಿಸಿ ನಿವೇಶನ ದೊರಕಿಸಿಕೊಡಲು ಪ್ರಯತ್ನಿಸಿದ್ದರು. ಈಗಿನ ಸದಸ್ಯ ಚಂದ್ರಶೇಖರ್‌ ಖಾರ್ವಿ ಅವರೂ ನಿವೇಶನರಹಿತರ ಹೋರಾಟದಲ್ಲಿದ್ದವರೇ.

Advertisement

ಭರವಸೆ
ಈ ಹಿಂದಿನ ಎಸಿ ಭೂಬಾಲನ್‌ ಅವರು ಖಾರ್ವಿಕೇರಿ ಜನರಿಗೆ ಹಕ್ಕುಪತ್ರ ಕೊಡಿಸ ಬೇಕೆಂದು ಪ್ರಯತ್ನಿಸಿದರು. 127 ಮಂದಿ ಅರ್ಜಿ ನೀಡಿದ್ದು ಜಿಲ್ಲಾಧಿಕಾರಿಗೆ ಮುಂದಿನ ಕ್ರಮಕ್ಕೆ ಕಳುಹಿಸಿದ್ದರು. ಅಲ್ಲಿಂದ ಕಡತ ಎಸಿ ಕಚೇರಿಗೆ ಬಂದಿದ್ದು ಈಗಿನ ಎಸಿಯವರು ತನಿಖೆ ಮಾಡಿ ವರದಿ ಸಲ್ಲಿಸುವಂತೆ ತಹಶೀಲ್ದಾರ್‌ ಅವರಿಗೆ ರವಾನಿಸಿದ್ದಾರೆ. 8-10 ಆಕ್ಷೇಪಣೆಗಳು ಬಂದಿದ್ದು ಇತರ ಅರ್ಜಿಗಳಿಗೆ ಸಮಸ್ಯೆಯಿಲ್ಲ. ಇದನ್ನು ಕಂದಾಯ ಸಚಿವರ ಗಮನಕ್ಕೆ ತರಲಾಗಿದ್ದು ವಾರದಲ್ಲಿ ಈ ಬಗ್ಗೆ ಗಮನಹರಿಸುವುದಾಗಿ ಸಚಿವರಿಂದಲೂ ಭರವಸೆ ದೊರೆತಿದೆ.

ಮೀನುಗಾರರಿಗೆ ಇಲ್ಲ
ಖಾರ್ವಿಕೇರಿಯಲ್ಲಿ ವಾಸಿಸುವವರಿಗೆ ಹಕ್ಕುಪತ್ರ ಇಲ್ಲದಿದ್ದರೂ ಅವರಿಗೆ ಈ ನಿಯಮದಡಿ ಭೂಮಿ ನೀಡಲು ಕಾನೂನಿನ ತೊಡಕಿದೆ. ಪುರಸಭೆ ವ್ಯಾಪ್ತಿಯಲ್ಲಿ 94ಸಿಸಿ ಅಸ್ತಿತ್ವದಲ್ಲಿರುವುದು. 94ಡಿಯಲ್ಲಿ ಮೀನುಗಾರ ಕುಟುಂಬಗಳಿಗೆ ನೀಡಲು ಅವಕಾಶ ಇಲ್ಲ. ತಾಂಡಾ ಪ್ರದೇಶ ಗುರುತಿಸಿ ನೋಟಿಫಿಕೇಶನ್‌ ಮಾಡಿದ ನಿವೇಶನ ಹಂಚಲು ಸಾಧ್ಯ.

ಮೂಲ ಸೌಕರ್ಯ
ಎರಡು ವರ್ಷಗಳ ಹಿಂದೆ ಜಾರಿಗೆ ತಂದ 94ಡಿಯಲ್ಲಿ ಮೀನುಗಾರರು ಹಾಗೂ ಕೃಷಿಕೂಲಿ ಕಾರ್ಮಿಕರನ್ನು ಸೇರಿಸಿದರೆ ಸಾವಿರಾರು ಜನರಿಗೆ ಪ್ರಯೋಜನ ದೊರೆಯಲಿದೆ.

ಅಧಿಕಾರಿಗಳ ನಿರ್ಲಕ್ಷ್ಯ
ಹಕ್ಕುಪತ್ರ ವಂಚಿತರಿಗೆ ಈ ಕಾಯ್ದೆ ವರದಾನ. ಆದರೆ 2 ವರ್ಷಗಳಾದರೂ, ಅರ್ಜಿ ಸಲ್ಲಿಸಿದರೂ ಇನ್ನೂ ಕ್ರಮಕೈಗೊಳ್ಳದ ಅಧಿಕಾರಿಗಳ ನಿರ್ಲಕ್ಷ್ಯದಿಂದ ಕಾಯ್ದೆ ಪ್ರಯೋಜನ ಇಲ್ಲದಂತಾಗಿದೆ. ಕರ್ನಾಟಕ ಭೂ ಕಂದಾಯ ಕಾಯ್ದೆಯಗೆ 2017ರಲ್ಲಿ ಕಲಂ 43ಕ್ಕೆ ತಿದ್ದುಪಡಿ ತಂದು ಕೃಷಿ ಕಾರ್ಮಿಕ ಮಾಲಿಕನಾಗಿ ನೊಂದಣಿಗೆ ಅರ್ಹ ಎಂದು ಹೇಳುತ್ತದೆ.
– ಶರಶ್ಚಂದ್ರ ಹೆಗ್ಡೆ ಮೂಡ್ಲಕಟ್ಟೆ,
ಆರ್‌ಟಿಐ ಕಾರ್ಯಕರ್ತ

ಚಾಲನೆಯಲ್ಲಿದೆ
ನೀಡಿದ ಅರ್ಜಿಗಳಿಗೆ ಕೆಲವು ಆಕ್ಷೇಪಗಳು ಬಂದಿದ್ದು ತಹಶೀಲ್ದಾರ್‌ ಅವರಿಗೆ ವರದಿ ಸಲ್ಲಿಸಲು ಕಳುಹಿಸಲಾಗಿದೆ. ಕಾಯ್ದೆಯಲ್ಲಿ ತಿದ್ದುಪಡಿ ತಂದರೆ ಅಥವಾ ವಿಶೇಷ ಪ್ರಕರಣ ಎಂದು ಪರಿಗಣಿಸಿದರೆ ಖಾರ್ವಿಕೇರಿಯ ನಿವೇಶನರಹಿತರಿಗೆ ಹಕ್ಕುಪತ್ರ ನೀಡಬಹುದು. ಈ ಕುರಿತಾದ ಪ್ರಕ್ರಿಯೆ ಚಾಲನೆಯಲ್ಲಿದೆ.
-ಕೆ.ರಾಜು,
ಸಹಾಯಕ ಕಮಿಷನರ್‌, ಕುಂದಾಪುರ

ಇನ್ನೂ ದೊರೆತಿಲ್ಲ
ಅದೆಷ್ಟೋ ವರ್ಷಗಳಿಂದ ನಾವು ಹಕ್ಕುಪತ್ರಕ್ಕಾಗಿ ಕಾಯುತ್ತಿದ್ದೇವೆ. ಒಮ್ಮೆ ಹಣ ಕೂಡಾ ಪಾವತಿಸಿದ್ದೇವೆ. ಇನ್ನೂ ಹಕ್ಕುಪತ್ರ ಮಾತ್ರ ದೊರೆತಿಲ್ಲ
-ಪುಂಡಲೀಕ ಖಾರ್ವಿ
ಖಾರ್ವಿಕೇರಿ ನಿವಾಸಿ

-ಲಕ್ಷ್ಮೀ ಮಚ್ಚಿನ

Advertisement

Udayavani is now on Telegram. Click here to join our channel and stay updated with the latest news.

Next